Monday, October 24, 2011

ಬೆಳಗಬೇಕಾದ ಮನಸ್ಸುಗಳೇ ಕೊಳೆತುಹೋದರೇ??

ಮೊನ್ನೆ ಟಿ.ವಿ ನೋಡ್ತಿದ್ದಾಗ ಒಂದು ಸುದ್ದಿ ಬಂತು ಅದನ್ನ ನೋಡಿದಾಗ ಒಂದು ವಿಷಯ ಹೇಳುವ ಮನಸ್ಸಾಯಿತು (ಬಹುಶ ಇದು ತುಂಬಾ ಜನರ ಜೀವನದಲ್ಲಿ ನಡೆದ ಘಟನೆಗಳೂ ಆಗಿರಬಹುದು), ಟಿ. ವಿಯಲ್ಲಿ ಬಂದ ಸುದ್ದಿ ಈ ಕಥೆಯಾದ ಮೇಲೆ.

..............
ಸುಷ್ಮಾ, ಒಂದು ಒಳ್ಳೆಯ ಕುಟುಂಬದ ಹುಡುಗಿ. ಅಪ್ಪ ಸರ್ಕಾರಿ ನೌಕರ, ಅಮ್ಮ ಗೃಹಿಣಿ. ಒಬ್ಬಳೇ ಮಗಳಾದ್ದರಿಂದ ಪೋಷಕರು ಅವಳನ್ನು ತುಂಬಾ ಪ್ರೀತಿಯಿಂದ ಚೆನ್ನಾಗಿ ಸಾಕಿದ್ದರು. ನೋಡುವುದಕ್ಕೆ ಲಕ್ಷಣವಾಗಿದ್ದಳು, ಸುಷ್ಮಾ ಓದಿನಲ್ಲಿ ಚೂಟಿ ಇದ್ದಳು, ಹೈಸ್ಕೂಲ್ ಮುಗಿಸಿ ಆ ಊರಿನ ಒಂದು ಒಳ್ಳೆಯ ಕಾಲೇಜಿಗೆ ಸೇರಿದ್ದಳು. ಕಾಲೇಜಿನಲ್ಲೂ ಓದಿನಲ್ಲಿ ಮುಂದಿದ್ದಳು.

ರಮೇಶ್, ಶ್ರೀಮಂತ ಮನೆತನದ ಹುಡುಗ, ಸುಸಂಸ್ಕೃತ ಕುಟುಂಬ. ಅಪ್ಪ ಬ್ಯುಸಿನೆಸ್ಸ್ಮೆನ್, ಅಮ್ಮ ಗೃಹಿಣಿ, ರಮೇಶನಿಗೊಬ್ಬಳು ತಂಗಿ. ರಮೇಶನು ಅತಿ ಬುದ್ದಿವಂತನಲ್ಲದಿದ್ದರೂ ಫಸ್ಟ್ ಕ್ಲಾಸ್ನಲ್ಲಿ ಎಲ್ಲ ಕ್ಲಾಸಲ್ಲೂ ಪಾಸಾಗುತ್ತಿದ್ದನು. ರಮೇಶನದು ಕಟ್ಟುಮಸ್ತಾದ ದೇಹ ಜೊತೆಗೆ ನೋಡಲೂ ಚೆಂದವಾಗಿದ್ದನು. ಅವನೂ ಕೂಡ ಸುಷ್ಮಾ ಸೇರಿದ ಕಾಲೇಜಿಗೆ ಸೇರಿದ್ದನು.

ಇಬ್ಬರೂ ಒಂದೇ ಬ್ಯಾಚಿನಲ್ಲಿದ್ದರು. ಕ್ಲಾಸಲ್ಲಿ ಲೆಕ್ಚರರ್ ಕೇಳುತ್ತಿದ್ದ ಪ್ರಶ್ನೆಗಳಿಗೆ ಹಲವೊಮ್ಮೆ ಇವಳೇ ಎದ್ದುನಿಂತು ಉತ್ತರಿಸುತ್ತಿದ್ದುದರಿಂದ ಇವನಿಗೂ ಅವಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ. ಒಂದು ದಿನ ಟೆಸ್ಟ್ ನೆಪದಲ್ಲಿ ಅವಳನ್ನು ಮಾತಾನಾಡಿಸಬೇಕು ಎಂದು ನಿರ್ಧಾರ ಮಾಡಿ ಕಾಲೇಜ್ ಬಿಟ್ಟ ತಕ್ಷಣ ಅವಳಿಗೆ ಗೊತ್ತಾಗದಂತೆ ಅವಳನ್ನು ಹಿಂಬಾಲಿಸಿದನು. ಅವಳ ಗೆಳತಿಯರೆಲ್ಲ ಬೇರೆಯಾಗಿ ಇವಳು ಒಂಟಿಯಾದ ತಕ್ಷಣ ಅವಳ ಹತ್ತಿರ ಹೋಗಿ ಯಾವುದೋ ನೋಟ್ಸ್ ಕೇಳುವ ನೆಪದಲ್ಲಿ ಮಾತನಾಡಿಸಿದನು.

ಹೀಗೆ ಶುರುವಾದ ಭೇಟಿ ಇಬ್ಬರೂ ಇಷ್ಟಪಡುವ ಹಂತದವರೆಗೆ ಹೋಯ್ತು. ಇಬ್ಬರೂ ಬುದ್ಧಿವಂತರಾದ್ದರಿಂದ ಮದುವೆಯ ಪ್ರಸ್ತಾಪವನ್ನು ಮನೆಯವರಿಗೆ ತಿಳಿಸಬೇಕು ಆದರೆ ಅದಕ್ಕೂ ಮುನ್ನ ಇಬ್ಬರ ಡಿಗ್ರಿ ಮುಗಿಯಲಿ ಎಂದು ನಿರ್ಧರಿಸಿದರು. ಡಿಗ್ರಿಯೂ ಆಯಿತು, ಇಬ್ಬರೂ ಮನೆಯಲ್ಲಿ ಕೇಳುವ ಆ ದಿನವೂ ಬಂತು. ಇಬ್ಬರ ಮನೆಯಲ್ಲೂ ಬಂದ ಒಂದೇ ಉತ್ತರ ಅಂದರೆ ಬೇರೆ ಜಾತಿಯೆಂದು.

ಇಬ್ಬರಿಗೂ ಒಬ್ಬರನ್ನೊಬ್ಬರನ್ನು ಬಿಡುವ ಮನಸ್ಸಿಲ್ಲ ಜೊತೆಗೆ ಮನೆಯವರನ್ನೂ ನೋಯಿಸುವ ಮನಸ್ಸಿರಲಿಲ್ಲ. ಮರಳಿ ಯತ್ನವ ಮಾಡು ಅನ್ನುವಂತೆ ಅವರಿಬ್ಬರೂ ಮತ್ತೆ ಮತ್ತೆ ಈ ವಿಷಯದ ಬಗ್ಗೆ ಮನೆಯಲ್ಲಿ ಪ್ರಸ್ತಾಪವನ್ನೆತ್ತುತಿದ್ದರು. ಯಾವಾಗಲೂ ಸಿಗುತ್ತಿದ್ದುದು ಒಂದೇ ಉತ್ತರ, ಈ ನಡುವೆ ಸುಷ್ಮಾಳ ಮನೆಯಲ್ಲಿ ಬೇರೊಬ್ಬ ಹುಡುಗನನ್ನು ಹುಡುಕಲು ಶುರುಮಾಡಿದರು, ತಿಳಿದ ಸುಷ್ಮಾ ಇದನ್ನ ರಮೇಶನಿಗೆ ತಿಳಿಸಿದಾಗ ಅವನಿಗೂ ಗಾಬರಿಯಾಯಿತು. ವಿಧಿಯಿಲ್ಲದೆ ಮನಸ್ಸಿಲ್ಲದ ಮನಸ್ಸಿನಿಂದ ಓಡಿಹೋಗುವ ನಿರ್ಧಾರ ಮಾಡಿದರು.

ಬೇರೊಂದು ಊರಲ್ಲಿ ಸಂಸಾರ ಶುರುಮಾಡಿದ ಇಬ್ಬರೂ ಒಂದೊಂದು ಕೆಲಸವನ್ನು ಹುಡುಕಿಕೊಂಡರು. ಈ ನಡುವೆ ವಿಷಯ ತಿಳಿದ ಸುಷ್ಮಾಳ ಅಪ್ಪ ಅಮ್ಮನಿಗೆ ಬೇಸರವಾದರೂ ಅದನ್ನು ತೋರ್ಪಡಿಸದೆ ಆದದ್ದಾಯ್ತು ಎಂದು ಮಗಳು ಮತ್ತು ಅಳಿಯನನ್ನು ಒಮ್ಮೆ ಹೋಗಿ ನೋಡಿಕೊಂಡು ಬಂದಿದ್ದರು. ಆದರೆ ರಮೇಶನ ಮನೆಯಲ್ಲಿನ ಚಿತ್ರಣ ಬೇರೆಯ ತೆರನಿತ್ತು. ವಾಸ್ತವದಲ್ಲಿ ರಮೇಶನ ಅಪ್ಪ ಒಳ್ಳೆಯವರಿದ್ದರೂ ಮಗ ಹೀಗೆ ಮಾಡಿದ ಎಂದು ಕೋಪಗೊಂಡಿದ್ದರು. ಇವನೇನೋ ಮದುವೆಯಾಗಿ ಹೋದ ಆದರೆ ಮಗಳಿಗೆ ಗಂಡು ಕೊಡುವವರು ಯಾರು ಎಂದು ಮನಸ್ಸಿನಲ್ಲಿಯೇ ಕೊರೆಯುತ್ತಿತ್ತು, ಆ ಕೋಪವೇ ಒಂದೆರಡು ಸಲ ಸುಷ್ಮಾ, ರಮೇಶನ ಮೇಲೆ ಹಲ್ಲೆಯ ರೀತಿಯಲ್ಲಿ ವ್ಯಕ್ತವಾಗಿತ್ತು. ಅದ್ಹೇಗೋ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದರು.

ಇಲ್ಲಿದ್ದರೆ ಅಪಾಯವೆಂದರಿತು ಬೆಂಗಳೂರಿಗೆ ಬಂದರು. ಕಾಲ ಸರಿಯಿತು, ದಂಪತಿಗಳಿಬ್ಬರೂ ಅನ್ಯೋನ್ಯವಾಗಿ ಸಂಸಾರ ಸಾಗಿಸಿಕೊಂಡು ಹೋಗುತ್ತಿದ್ದರು, ಆದ್ರೆ ಒಂದು ಕೊರಗು ಇಬ್ಬರಲ್ಲೂ ಕಾಡುತ್ತಿತ್ತು ಅದೇನೆಂದರೆ ಮಕ್ಕಳಾಗಲಿಲ್ಲವೆಂದು. ಆಸ್ಪತ್ರೆ, ದೇವಸ್ಥಾನ ಹೀಗೆ ಎಲ್ಲಾ ರೀತಿಯ ಪ್ರಯತ್ನಗಳೂ ಆದವು ಆದರೆ ಏನೊಂದೂ ಪ್ರಯೋಜನವಾಗಲಿಲ್ಲ. ಒಂದು ದಿನ ಸುಷ್ಮಾ ರಮೇಶನಲ್ಲಿ ನಾವೊಂದು ಮಗುವನ್ನು ದತ್ತು ತೆಗೆದುಕೊಂಡರೆ ಹೇಗೆ ಎಂದಳು, ರಮೇಶನಿಗೂ ಅದು ಸರಿಯೆಂದೆನಿಸಿ ಒಂದು ಆಶ್ರಮಕ್ಕೆ ಹೋಗಿ ಒಂದು ಮಗುವನ್ನು ದತ್ತು ತೆಗೆದುಕೊಂಡರು.

..................

ಈಗ ಟಿ. ವಿಯಲ್ಲಿ ಬಂದ ಸುದ್ದಿಯತ್ತ ಗಮನಹರಿಸೋಣ.

ಹೀಗೆ ಚಾನೆಲ್ ಚೇಂಜ್ ಮಾಡ್ತಿದ್ದೆ, ಒಂದು ಚಾನೆಲ್ನಲ್ಲಿ ಯಾವುದೋ ಒಂದು ಹಸುಳೆಯ ತಲೆ ಮತ್ತು ಕೈಯನ್ನು ನಾಯಿಗಳು ತಿಂದಿದ್ದರ ಸುದ್ದಿ ಬರುತ್ತಿತ್ತು, ಜೊತೆಗೆ ಆ ದಿನ ಬೆಳಗ್ಗೆ ಯಾರೋ ಅಲ್ಲಿ ಹಸುಳೆಯನ್ನು ಹಾಕಿಹೋಗಿದ್ದಾರೆ ಎಂಬ ಸುದ್ದಿ ಬರುತ್ತಿತ್ತು. ಹದಿಹರೆಯದ ಆಕರ್ಷಣೆಗಳನ್ನು ತಡೆಯಲಾರದೆ ಬರೀ ನೋಟವೇ ಪ್ರೇಮವೆಂದು ಭಾವಿಸಿ ಮನಸ್ಸಿನ್ನೂ ಪಕ್ವವಾಗಿರದ ಸಮಯದಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಣಯಿಸಲಾಗದೆ, ಜೀವನಸಂಗಾತಿಯೆಂಬ ಪದಕೆ ಅರ್ಥವೇ ತಿಳಿಯದ ವಯಸ್ಸಿನಲ್ಲಿ ಮೈಮರೆತು ಮಾಡಿದ ತಪ್ಪಿಗೆ ಪಾಪದ ಕೂಸು ಜಗತ್ತನ್ನೇ ನೋಡಲಾಗದೆ ಅತ್ಯಂತ ದಾರುಣವಾಗಿ ಕೊಲೆಗೀಡಾಗಿತ್ತು.

ಬೇಕೇ ಇಂಥಾ ಆಕರ್ಷಣೆ????

ಎರಡು ಪ್ರಸಂಗಗಳೂ ಪ್ರೇಮಕ್ಕೆ ಸಂಬಂಧಿಸಿದ್ದೇ, ಆದರೆ ಫಲಿತಾಂಶ ಬೇರೆ ಬೇರೆ .


ಚಿತ್ರಕೃಪೆ: ಅಂತರ್ಜಾಲ.

Monday, October 3, 2011

ಕರಿಮಲೆಯ ಕಗ್ಗತ್ತಲಿನಲಿ

ಕರಿಮಲೆಯ ಕಗ್ಗತ್ತಲಿನಲಿ

ರಾಮಾಪುರ, ಮಲೆನಾಡಿನ ಒಂದು ಹಳ್ಳಿ, ಸುಮಾರು ೨೫ ಒಕ್ಕಲುಗಳು ವಾಸವಾಗಿದ್ದವು, ಜೊತೆಗೆ ಒಂದು ಬ್ರಾಹ್ಮಣ ಕುಟುಂಬ ಮತ್ತೆ ದಲಿತರ ಕಾಲೋನಿ. ಭೀಮೇಗೌಡರೇ ಊರಿನ ಪಟೇಲರಾಗಿದ್ದರು, ಅವರ ಅಪ್ಪ ಅಜ್ಜ ಮುತ್ತಜ್ಜನ ಕಾಲದಿಂದಲೂ ಇವರ ಮನೆಯವರೇ ಅದಕ್ಕೆ ವಾರಸುದಾರರಾಗಿದ್ದರು, ವಾಡಿಕೆಯಂತೆ ಅದು ಭೀಮೇಗೌಡರಿಗೆ ಒಲಿದಿತ್ತು. ಅವರ ವ್ಯಕ್ತಿತ್ವ ಜೊತೆಗೆ ಶ್ರೀಮಂತಿಕೆಯೂ ಅದು ಸೂಕ್ತವಾಗಿತ್ತು. ರಾಮಾಪುರದ ಪಶ್ಚಿಮಕ್ಕೆ ಇತ್ತು ಕರಿಮಲೆ. ಊರಿನ ಮೇಲ್ಬದಿಯಲ್ಲಿ ಮನೆಗಳಿದ್ದರೆ ಕೆಳಗೆ ಗದ್ದೆಗಳು, ಹಾಗೆ ಇಳಿಜಾರಿನಲ್ಲಿ ಗದ್ದೆಯ ಸಾಲುಗಳು ಕೊನೆಯಾಗುತ್ತಿದ್ದಂತೆ ಹೊಳೆ, ಹೊಳೆಯಾಚೆ ಇದ್ದದ್ದೇ ಕರಿಮಲೆ. ಹೊಸಬರೇನಾದರೂ ಬಂದು ಕರಿಮಲೆ ಒಳಗೆ ಪ್ರವೇಶಿಸಿದರೆ ಇದನ್ಯಾರಪ್ಪ ಕರಿಮಲೆ ಅಂತ ಕರೀತಾರೆ ಅನ್ನಬಹುದು ಯಾಕೆಂದರೆ ಕಾಡು ಶುರುವಾಗುವಾಗ ಸಿಗುವ ಸಣ್ಣ ಸಣ್ಣ ಗಿಡ ಮರಗಳು ಅದರಾಚೆಗೂ ಅಂದರೆ ಒಂದು ೩೦ ಎಕರೆಯಷ್ಟರ ಮಟ್ಟಿಗೆ ಹಾಗೇ ಇತ್ತು ಅದರ ಮುಂದೆ ಹೋದರೆ ಕರಿಮಲೆಯ ಹೆಸರಿಗೆ ತಕ್ಕಂತಿತ್ತು. ಬೃಹತ್ ಗಾತ್ರದ ಮರಗಳು, ಒಂದಕ್ಕೊಂದು ಬೆಸೆದುಕೊಂಡಿದ್ದವು ಜೊತೆಗೆ ಅದಕ್ಕೆ ಹಬ್ಬಿಕೊಂಡ ಬಳ್ಳಿಗಳೂ. ಕಾಡುಪ್ರಾಣಿಗಳು, ವಿಷಜಂತುಗಳು, ಚಿತ್ರವಿಚಿತ್ರ ಹಾವುಗಳು ಅಲ್ಲಿ ಹೇರಳವಾಗಿದ್ದವು. ರಾಮಾಪುರದವರ್ಯಾರೂ ಅತ್ತಕಡೆ ಹೋಗುತ್ತಿರಲಿಲ್ಲ. ಅವರ ಮನೆಯ ಎತ್ತುಗಳು ಕರಿಮಲೆಗೆ ಹೋಗಿ ವಾಪಸ್ ಬರುತ್ತಿರಲಿಲ್ಲ, ಹಿಂದೊಮ್ಮೆ ತನ್ನ ಎತ್ತನ್ನು ಹುಡುಕಿಕೊಂಡು ಹೋದ ರಾಜೇಗೌಡನ ಆಳು ನಿಂಗ ವಾಪಸ್ ಬಂದಿರಲಿಲ್ಲ, ಹಾಗಾಗಿ ಆ ಊರಿನವರು ಅತ್ತ ಕಡೆ ಹೋಗುತ್ತಿರಲಿಲ್ಲ, ಜೊತೆಗೆ ಆಗಾಗ ಕೇಳಿಸುತ್ತಿದ್ದ ಹುಲಿಯ ಘರ್ಜನೆ ಕೂಡ ಅವರನ್ನು ಅತ್ತ ಕಡೆ ಹೋಗದಂತೆ ತಡೆಹಿಡಿದಿತ್ತು.

ಬಸವ, ತನ್ನ ಮೈಯನ್ನು ಗೋಡೆಗೆ ಉಜ್ಜಿ ಉಜ್ಜಿ ತನ್ನ ಕೆರೆತವನ್ನು ಶಮನ ಮಾಡಿಕೊಳ್ಳಲು ಪ್ರಯತ್ನಿಸುತ್ತಿತ್ತು. ಹಾಗೆ ಕೆರೆದುಕೊಳ್ಳುತ್ತಾ ತನ್ನ ಪಕ್ಕದಲ್ಲಿದ್ದ ತಂಗಿಯನ್ನು ನೋಡಿತು. ಸೀತೆ, ತನ್ನ ಪಕ್ಕದಲ್ಲಿ ಹಾಕಿದ್ದ ಹುಲ್ಲನ್ನು ಮೆಲ್ಲುತ್ತಿತ್ತು. ತನ್ನ ಹಿಂದೆ ಇದ್ದದ್ದು ಕರಿಯ, ಅದನ್ನು ಯಜಮಾನರು ಈ ಹಿಂದೆ ಅಂದರೆ ೩ ವರ್ಷಗಳ ಹಿಂದೆ ಪಕ್ಕದೂರಿನಿಂದ ಕೊಂಡುಕೊಂಡು ಬಂದಿದ್ದರು. ಕರಿಯ ಹೆಸರಿಗೆ ಕಪ್ಪಗಿದ್ದರೂ ಸಾಧು ಸ್ವಭಾವದ ಪ್ರಾಣಿ. ಒಟ್ಟಿನಲ್ಲಿ ಆ ಹಟ್ಟಿಯಲ್ಲಿ ಈ ಮೂವರದೇ ಸಾಮ್ರಾಜ್ಯ.

ತನ್ನ ಜನ್ಮದಿಂದಲೂ ಬಸವ ಭೀಮೇಗೌಡರ ಮನೆಯಲ್ಲೇ ಇತ್ತು, ಗೌಡರ ಮನೆಗೆ ಅದು ಅವರ ಮನೆಯ ಆಳಿಗಿಂತಲೂ ಹೆಚ್ಚಾಗಿ ಕೆಲಸ ಮಾಡುತ್ತಿತ್ತು. ಮಳೆಗಾಲದ ಬೆಳೆಗಾಗಿ ಹೊಲ ಉಳುವುದಕ್ಕಾಗಿ ನೇಗಿಲಿಗೆ ಹೆಗಲಾಗುತ್ತಿತ್ತು, ಅಲ್ಲದೆ ಬೇಸಗೆ ಕಾಲದಲ್ಲೂ ಮತ್ತೊಂದು ಬೆಳೆ ಬೆಳೆಯುತ್ತಿದ್ದುದರಿಂದ ಆಗಲೂ ಅದು ತನ್ನ ಕರ್ತವ್ಯ ಮಾಡುತ್ತಿತ್ತು.

ಬಸವ ಹೆಸರಿಗೆ ತಕ್ಕ ಹಾಗೆ ಊರ ಬಸವನಂತಿದ್ದ. ಅಂದರೆ ಕಂಡ ಕಂಡಲ್ಲಿ ತಿರುಗಾಡುವುದೆಂದರೆ ಅದಕ್ಕೆ ಪಂಚಪ್ರಾಣ, ಹಾಗೇ ಬಲಿಷ್ಟವಾಗಿಯೂ ಆಗಿತ್ತು, ಕಾರಣ, ಮನಯಲ್ಲಿ ಚೆನ್ನಾಗಿಯೇ ಸಿಕ್ಕುತ್ತಿದ್ದ ಮುಸುರೆ ಅಥವಾ ಹಿಂಡಿ ಅಲ್ಲ, ಸಮಯ ಸಿಕ್ಕಾಗ ಅಂದರೆ ಮೇಯಲು ಹೋದಾಗ, ಕಾಯುತ್ತಿದ್ದ ಸೋಮ ಸ್ವಲ್ಪ ಕಾಣಿಸದಿದ್ದರೂ ಅಥವಾ ಮೇಯುವಂತೆ ನಟಿಸಿ ಮುಂದೆ ಮುಂದೆ ಹೋಗುತ್ತಾ ಹತ್ತಿರವಿದ್ದ ಕಾಡಿಗೆ ನುಗ್ಗುತ್ತಿತ್ತು. ಹಾಗೆ ಹೋದ ಬಸವ ತಿರುಗಿ ಬರುತ್ತಿದ್ದದ್ದು ಏನಿಲ್ಲವೆಂದರೂ ಒಂದು ವಾರದ ತರುವಾಯ. ಊರಿನವರು ಅದೇನಾದರೂ ಎದುರಿಗೆ ಬಂದರೆ ಅದು ಹೋಗುವವರೆಗೆ ನಿಂತಲ್ಲಿಯೇ ಇರುತ್ತಿದ್ದರು, ಯಾರಿಗೂ ಅದು ತೊಂದರೆ ಮಾಡದಿದ್ದರೂ ಅದರ ಆಕಾರಕ್ಕೆ ಮತ್ತು ಅದರ ನೆಟ್ಟನೆ ಕೋಡುಗಳಿಗೆ ಬೆದರುತ್ತಿದ್ದರು!!!!

ಅದು ಕಾಡಿಗೆ ಹೋಯಿತು ಎಂದರೆ ಸೋಮನಿಗೆ ಕೆಟ್ಟ ಕಾಲ ಬಂದಿದೆಯೆಂದೇ ಅರ್ಥ, ಯಾಕೆಂದರೆ ಗೌಡರು ಅವನನ್ನು ಸುಮ್ಮನೆ ಬಿಡುತ್ತಿರಲಿಲ್ಲ, ಮುಖ ಮೂತಿ ಬೆವರಿಳಿಯುವಂತೆ ಬೈಗುಳಗಳು ಗೌಡರ ಬಾಯಿಯಿಂದ ಸರಾಗವಾಗಿ ಅಷ್ಟೇ ಕೊಪೋದ್ರಿಕ್ತವಾಗಿ ಬರುತ್ತಿದ್ದವು, ಒಮ್ಮೊಮ್ಮೆ ಹೊಡೆತಗಳೂ ಬೀಳುತ್ತಿದ್ದವು. ಹೊಡೆತ ಬೀಳುತ್ತಿದ್ದ ಸಮಯವೆಂದರೆ ಬೇಸಾಯದ ಕಾಲದಲ್ಲಿ. ಇದ್ದ ಎರಡು ಎತ್ತುಗಳಲ್ಲಿ ಒಂದು ಹೋದರೆ ಬೇಸಾಯ ಮಾಡುವುದಕ್ಕೆ ಬೇರೆಯವರ ಮನೆಯವರ ಎತ್ತುಗಳನ್ನು ಆಶ್ರಯಿಸಬೇಕಲ್ಲ ಎನ್ನುವುದು ಗೌಡರ ಕೋಪಕ್ಕೆ, ಹೊಡೆತಕ್ಕೆ ಕಾರಣವಾಗುತ್ತಿತ್ತು. ಸೋಮನಿಗೆ ಈ ಎಲ್ಲಾ ವಿಷಯಗಳು ತಿಳಿದಿದ್ದ ಕಾರಣ ಅವನೂ ತನ್ನ್ನ ರಕ್ಷಣೆಗೆ ತುಂಬಾ ಪ್ರಯತ್ನಪಡುತ್ತಿದ್ದನು. ಅಂದರೆ, ಬಸವನನ್ನು ತನ್ನ ಹದ್ದು ಕಣ್ಣಿಂದ ಕಾಯುತ್ತಿದ್ದನು.

ಆದರೂ ಕೆಲವೊಂದು ಕ್ಷಣದಲ್ಲಿ ನಡೆಯುತ್ತಿದ್ದ ಘಟನೆಗಳಲ್ಲಿ ಅಂದರೆ ಯಾರಾದರೂ ಗೌಡರು ಅಲ್ಲಿ ಬಂದರೆ ತಮ್ಮ ಗದ್ದೆಗೆ ಸ್ವಲ್ಪ ನೀರನ್ನು ಕಟ್ಟಲು ಹೇಳಿದಾಗ ಅಥವಾ ತನ್ನ ಕಾಲೋನಿಯವರು ತಾನಿರುವಲ್ಲಿ ಬಂದಾಗ ಅವರೊಡನೆ ಹರಟೆ ಹೊಡೆಯುತ್ತಿದ್ದಾಗ ಹೀಗೆ ಹಲವು ಕಾರಣಗಳಿದ್ದಾಗ ಬಸವ ಮಿಂಚಿನಂತೆ ಕಾಡೊಳಗೆ ನುಗ್ಗುತ್ತಿತ್ತು. ಸೋಮನ ಪಕ್ಕದಲ್ಲಿದ್ದವರು 'ಸೋಮ ಹೋಯ್ತಲ್ಲೋ ಬಸವ' ಅಂದಾಗಲೇ ಅವನಿಗೆ ಪ್ರಜ್ಞೆ ಬಂದಂತಾಗಿ ಕಾಡೊಳಗೆ ನುಗ್ಗುತ್ತಿದ್ದನು, ಬಸವನಿಂದಾಗಿ ಸೋಮನಿಗೂ ಆ ಕಾಡು ಸ್ವಲ್ಪಮಟ್ಟಿಗೆ ಚಿರಪರಿಚಿತವಾಗಿತ್ತು ಅಂದರೆ ಬೆಟ್ಟದ ಬುಡದವರೆಗೆ, ಆದರೂ ಅವನಿಗೆ ಬಸವನನ್ನು ಹುಡುಕಿ ತರಲು ಆಗುತ್ತಿರಲಿಲ್ಲ ಕಾರಣ ಬಸವ ಕರಿಮಲೆಗೆ ಹೋಗುತಿದ್ದುದರಿಂದ. ಸೋಮ ಗೌಡರ ಕೋಪವನ್ನ ನೆನಸಿಕೊಂಡು ಅಲ್ಲಿಗೂ ನುಗ್ಗುತ್ತಿದ್ದನೇನೋ ಆದರೆ ಅಲ್ಲಿ ಹುಲಿಯಿದೆಯೆಂದು ಯಾರೋ ಹೆದರಿಸಿದ್ದರಿಂದ ಅವನು ಅತ್ತ ಕಡೆ ತಲೆ ಹಾಕುತ್ತಿರಲಿಲ್ಲ. ಬಸವ ಹಲವು ಬಾರಿ ಕರಿಮಲೆಗೆ ಹೋಗುತ್ತಿದ್ದರೂ ವಾಪಸ್ ಬರುತ್ತಿದ್ದದ್ದು ಎಲ್ಲರಿಗೂ ಸೋಜಿಗವಾಗಿತ್ತು, ಗೌಡರೂ ಸಹ ಅದು ಹಿಂದಿರುಗ್ಗುತ್ತಿದ್ದುದರಿಂದ ಆ ವಿಷಯದ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಿರಲಿಲ್ಲ.

ಮೊದಮೊದಲು ಬಸವ ಕರಿಮಲೆಗೆ ಹೋದಾಗ ಆರಾಮಾಗಿ ಅಲ್ಲೇ ತಿಂದು ಇದ್ದು ಸಾಕೆನಿಸಿದಾಗ ತನ್ನ ಹಟ್ಟಿಗೆ ಹೆಜ್ಜೆಹಾಕುತ್ತಿತ್ತು. ಒಮ್ಮೆ ಹೀಗೆ ಕಾಡಲ್ಲಿ ಯಾವುದೇ ಅಂಜಿಕೆಯಿಲ್ಲದೆ ರಾಜಾರೋಷವಾಗಿ ಮೇಯುತ್ತಿತ್ತು, ಸ್ವಲ್ಪ ಸಮಯದ ಬಳಿಕ ತಾನು ನಿಂತಿದ್ದ ಮರದ ಮುಂದೆ ಸದ್ದಾಗಿ ಏನೋ ಅನಾಹುತವಾಗುವುದರ ಮುನ್ಸೂಚನೆಯನ್ನು ಗ್ರಹಿಸಿ ಮೇಯುವುದನ್ನು ನಿಲ್ಲಿಸಿ ಸುತ್ತಲೂ ನೋಡತೊಡಗಿತು. ಸದ್ದು ನಿಂತಿತು, ಆದರೂ ಬಸವ ಅಲ್ಲೇ ತನ್ನ ಕಣ್ಣನ್ನು ನೆಟ್ಟಿತ್ತು. ಸ್ವಲ್ಪ ಮೇಯುವುದು ಮತ್ತೆ ನೋಡುವುದು ಹಾಗೇ ಮಾಡುತ್ತಿತ್ತು, ಒಡನೆಯೇ ಹುಲಿಯೊಂದು ಇದರ ಮೈಮೇಲೆ ಹಾರಿತು, ಅನಿರೀಕ್ಷಿತವಾಗಿ ಬಂದ ಶತ್ರುವಿಗೆ ಸಿದ್ಧವಾಗಿಯೇ ಇದ್ದ ಬಸವ ಆಚೆ ಸರಿದು ಹೂಂಕರಿಸುತ್ತ ತನ್ನ ಕೋಡನ್ನು ಮುಂದೆ ಚಾಚಿತು, ಹುಲಿಯೇನೋ ಹಾರಿತು ಆದರೆ ಬಸವನ ದೂರಾಲೋಚನೆ ಅದಕ್ಕೆ ತಿಳಿದಿರಲಿಲ್ಲ, ಬಸವ ಅದರ ಎದೆಯ ಭಾಗಕ್ಕೆ ತನ್ನ ಕೋಡುಗಳನ್ನು ಚುಚ್ಚಿತ್ತು. ಎದೆಯ ಮಾಂಸ ಸ್ವಲ್ಪ ಹರಿದು ಹುಲಿ ನೋವಿನಿಂದ ನರಳಿ ಶಕ್ತಿಯೆಲ್ಲಾ ಉಡುಗಿದ ಪರಿಣಾಮ ಬಸವನ ಮೇಲೆ ಮತ್ತೊಮ್ಮೆ ಆಕ್ರಮಣ ಮಾಡಲಾರದೆ ಕಾಡಿನಲ್ಲಿ ಮರೆಯಾಯಿತು. ಬಸವ ಬದುಕಿದೆ!! ಎಂದು ಹಟ್ಟಿಯ ಕಡೆ ಹೊರಟಿತು.

ಬೇಸಗೆಯೆಲ್ಲ ಕಳೆದು ಮೋಡಗಳು ಮಲೆನಾಡಿನ ಕಡೆ ಬರತೊಡಗಿದ್ದವು, ಗೌಡರು ಮಳೆ ಬರುವ ಮುನ್ಸೂಚನೆಯನ್ನರಿತು ಬಸವನನ್ನು ಎಲ್ಲೂ ಹೊರಗೆ ಬಿಡದೆ ಒಂದು ವಾರದ ಮೊದಲೇ ಹಟ್ಟಿಯಲ್ಲಿ ಕಟ್ಟಿಹಾಕಿದ್ದರು, ಮನೆಯ ಮುಸುರೆ, ಕಣದಲ್ಲಿದ್ದ ಬಿಳಿಯ ಹುಲ್ಲೇ ಅದಕ್ಕೆ ಆಹಾರ.

ಹಿಂದಿನ ದಿನ ಗೌಡ್ರು ಹೋಗಿ ಚಂದ್ರನ ಬಿಡಾರದತ್ತ ಬರುತ್ತಿದ್ದಂತೆ ದೂರದಿಂದ ಗೌಡ್ರು ಬರುವುದನ್ನೇ ಗಮನಿಸಿದ ಚಂದ್ರ ಹಿತ್ತಲಲ್ಲಿಮುಖ ತೊಳೆದುಕೊಳ್ಳುತ್ತಿದ್ದವನು ಚಂಬನ್ನು ಅಲ್ಲೇ ಎಸೆದು ಸಿದ್ಧನ ಬಿಡಾರದತ್ತ ಓಡಿಹೋಗಿ ತನ್ನ ಬಿಡಾರದತ್ತ ಬಂದ ಗೌಡರನ್ನು ಗಮನಿಸುತ್ತಿದ್ದನು!!

ಗೌಡ್ರು ತಮ್ಮ ಎಂದಿನ ಶೈಲಿಯಲ್ಲಿಯೇ ಒಂದು ಕೈನಲ್ಲಿ ಕೊಡೆ ಇನ್ನೊಂದರಲ್ಲಿ ಸೀಗೆಕತ್ತಿಯನ್ನು ಹಿಡಿದುಕೊಂಡು ಕಾಲೋನಿಯತ್ತ ಹೆಜ್ಜೆ ಹಾಕಿದ್ದರು, ಟೈಗರ್ (ಅವರ ನಾಯಿ, ಕಂತ್ರಿನಾಯಿಯಾಗಿದ್ದರೂ ಹೆಸರಿಗೆ ತಕ್ಕ ಹಾಗೆ ದಪ್ಪನಾಗಿ ದಷ್ಟಪುಟ್ಟವಾಗಿತ್ತು) ಸಹ ಅವರ ಹಿಂದೆಯೇ ಬರುತ್ತಿತ್ತು. ಕಾಲೋನಿಯಲ್ಲಿದ್ದ ನಾಯಿಗಳೆಲ್ಲ ಆಜಾನುಬಾಹು ಗೌಡರನ್ನು ನೋಡಿ ಒಂದೇ ಸಮನೆ ದೂರದಿಂದಲೇ ಬೊಗಳಲಾರಂಭಿಸಿದವು, ಯಾವಾಗ ಟೈಗರ್ ಮುಖ ಕಂಡಿತೋ ಆಗ ಬೊಗಳುತ್ತಿದ್ದ ನಾಯಿಗಳೆಲ್ಲಾ ಬಾಲ ಮುದುರಿಕೊಂಡು ಸುಮ್ಮನಾದವು, ಗೌಡ್ರು ಟೈಗರ್ ನೋಡಿ ಮುಗುಳ್ನಗೆ ನಕ್ಕು ಮುಂದೆ ಹೊರಟರು, ಟೈಗರ್ ಸಹ ಏನೋ ಸಾಧನೆ ಮಾಡಿದೆ ಎಂದು ತನ್ನ ಬಾಲವನ್ನು ಎತ್ತಿಕೊಂಡು ಗೌಡರನ್ನ ಹಿಂಬಾಲಿಸಿತು.

ಚಂದ್ರ ಚಂದ್ರ ಎಲ್ಲಿ ಸತ್ತು ಹೋದ್ಯೋ, ಒಂದು ತಿಂಗ್ಲಾಯ್ತಲ್ಲೋ ನಿನ್ನ ಮಖ ಕಾಣದೆ, ಸಾಲ ಬೇಕು ಅಂದಾಗ ದಮ್ಮಯ್ಯ ಅಂತ ಬರ್ತೀರಾ, ನಮಗೆ ಬೇಕಾದಾಗ ಎಲ್ಲಿ ಸಾಯ್ತೀರೋ.....ಇನ್ನೂ ಏನೋ ಹೇಳೋದ್ರಲ್ಲಿದ್ರು ಗೌಡ್ರು ಅಷ್ಟೊತ್ತಿಗೆ ಮಂಜಿ ಬಿಡಾರದಿಂದ ಹೊರಗೆ ಬಂದಳು.

ಎಲ್ಲಿ ಸತ್ನೇ ಅವ್ನು, ಸಾಲ ನಮ್ಹತ್ರ ಮಾಡೋದು ಕೆಲ್ಸಕ್ಕೆ ಬೇರೆಯವರ ಮನೆಗೆ ಹೋಗೋದಾ?? ಬಡ್ಡಿಮಗ ಮನೆಗೆ ಬರೋಕ್ಹೇಳು ಅವನಿಗೆ ಬಡ್ಡಿ ಸಮೇತ ಅಸಲು ಕಕ್ಲಿಕ್ಕೆ ಹೇಳ್ತೀನಿ!! ಆಮೇಲೆ ಯಾವನ್ಮನೆಗಾದ್ರೂ ಹೋಗಿ ಸಾಯ್ಲಿ. ನಿಂಗೇನು ಹೊತ್ತು ಬಂದಿರೋದು?? ಗಂಡ ಹೆಂಡ್ತಿ ಬೇರೆರ್ಮನೆ ಕೆಲ್ಸಕ್ಕೆ ಹೋಗಿ, ನಾನು ನನ್ನ ಗದ್ದೆ ತೋಟನೆಲ್ಲ ಹಾಳು ಬಿಟ್ಕೊಂಡು ಸಾಯ್ತೀನಿ, ಈ ಸಂಪತ್ತಿಗೆ ಸಾಲ ಕೊಡ್ಬೇಕು ನಿಮ್ಗೆ.

ಮಂಜಿ ಗೌಡರನ್ನ ನೋಡೇ ಅರ್ಧ ಬೆವ್ತಿದ್ಲು ಅವ್ರ ಮಾತು ಕೇಳಿದ್ದ ಹಾಗೆ 'ಇಲ್ಲ ಗೌಡ್ರೆ ಹಂಗೆಲ್ಲ ಮಾಡ್ಬೇಡಿ, ಒಂದೆರಡು ದಿನ ಹೊಳ ಹೊಡೆಯೋದಿದೆ ಬನ್ನಿ ಅಂತ ರಾಯಪ್ಪಗೌಡ್ರು ಹೇಳಿದ್ರು ಹಂಗಾಗಿ ಅಲ್ಲಿಗೆ ಹೋಗಿದ್ವಿ, ನಾಳೆಯಿಂದ ಬಂದೆ ಬರ್ತೀವಿ'.

ಆ ರಾಯಪ್ಪಂಗೆ ಹೇಳ್ತೀನಿ ನನ್ನ ಸಾಲ ನೀನು ಕೊಡು ಇವರನ್ನ ಬೇಕಾದ್ರೆ ನೀನೇ ಇಟ್ಕೋ ಅಂಥಾ (ಗೌಡ್ರು ಸುಮ್ನೆ ಹಾಗೆ ಹೇಳಿದ್ರು) ಅಂದಾಗ ಮಂಜಿ ಇನ್ಮುಂದೆ ಎಲ್ಲೂ ಹೋಗಲ್ಲ ಗೌಡ್ರೆ ನಾಳೆಯಿಂದ ಬರ್ತೀವಿ ಅಂದಾಗ ಗೌಡ್ರು ನಿಮ್ದ್ಯಾವಗ್ಲೂ ಇದೆ ಕಥೆ, ಆ ಬಡ್ಡಿಮಗಂಗೆ ನಾಳೆ ಬಂದು ಬೇಸಾಯಕ್ಕೆ ಎತ್ತು ಕಟ್ಹೋಕೇಳು ಬರ್ಲಿಲ್ಲ ಅಂದ್ರೆ ಚಮ್ಡಾ ಸುಲೀತಿನಿ ಅನ್ನು ಅಂದು ಅಲ್ಲಿಂದ ಹೊರಟ್ರು.

ಮಳೆ ಒಂದೇ ಸಮನೆ ಸುರಿಯುತ್ತಿತ್ತು, ಎಲ್ಲರ ಮನೆಯಲ್ಲಿಯೂ ಗದ್ದೆಯ ಕೆಲಸ ಜೋರಾಗಿ ನಡೆಯುತ್ತಿತ್ತು. ಚಂದ್ರ ಬಸವ ಮತ್ತು ಕರಿಯನ ಸಮೇತ ಬೇಸಾಯ ಮಾಡುತ್ತಿದ್ದನು, ಸೋಮನೂ ಬೇಸಾಯ ಮುಗಿದಾಕ್ಷಣ ಅವುಗಳನ್ನು ಕಾಯುವ ಕೆಲಸವನ್ನು ನೀಟಾಗಿ ಮಾಡುತ್ತಿದ್ದನು, ಎಲ್ಲಕ್ಕಿಂತ ಮಿಗಿಲಾಗಿ ಬಸವನನ್ನು ತನ್ನ ಹದ್ದಿನ ಕಣ್ಣಿಂದ ಕಾಯುತ್ತಿದ್ದನು, ಬಸವನೂ ಓಡಿಹೋಗುವ ಪ್ರಯತ್ನ ಮಾಡುತ್ತಿರಲಿಲ್ಲ ಯಾಕೆಂದರೆ ಹೊಳೆಯು ತುಂಬಿ ಹರಿಯುತ್ತಿದ್ದುದರಿಂದ. ಮರ(ಕರಗು - ನಾಟಿಗಿಂತ ಮೊದಲು ಮಾಡುವ ಬೇಸಾಯ) ಹೊಡೆಯುವುದಕ್ಕೆ ಇನ್ನೊಂದು ವಾರ ಸಮಯವಿತ್ತು. ಗೌಡ್ರೆ ಈ ಮಳೆಲಿ ಇನ್ನೇನು ಹೊರ್ಗಡೆ ಮೇಯ್ಸೋದು ಇಲ್ಲೇ ಹಟ್ಟಿಲಿ ಇರ್ಲಿ ಅಕಸ್ಮಾತ್ ಬಸವ ತಪ್ಪಿಸಿಕೊಂಡ್ರೆ ಮರ ಹೊಡೆಯೋಕೆ ಸಿಗಲ್ಲ ಆಮೇಲೆ ಹುಡ್ಕೋದು ಕಷ್ಟ ಆಗತ್ತೆ ಎಂದು ಸೋಮ ಅಂದಾಗ ಆಯ್ತು ಹಾಗೆ ಮಾಡು ಆದ್ರೆ ಹುಲ್ಲು ಮುಸ್ರೆ ಚೆನ್ನಾಗಿ ಹಾಕು ಅಂದಿದ್ರು.

ಒಂದು ವಾರ ಆಯ್ತು, ಜೋರಾಗಿ ಬರುತ್ತಿದ್ದ ಮಳೆ ನಿಧಾನಕ್ಕೆ ಜಿಟಿಜಿಟಿಯಾಗಿ ಬರತೊಡಗಿತ್ತು. ಚಂದ್ರ ಬಂದು ಬಸವ,ಕರಿಯನನ್ನು ಕರೆದುಕೊಂಡು ಮರದ ಸಮೇತ ಹೊರಟನು, ಗೌಡ್ರು ಹೊಳೆ ಸಾಲಿನ ಗದ್ದೆ ಮೊದಲು ಮುಗೀಲಿ ಅಂದಿದ್ರಿಂದ ಅಲ್ಲಿಂದಲೇ ಶುರು ಮಾಡಿದ್ದನು. ಮಧ್ಯಾನ್ಹದ ಹೊತ್ತಿಗೆ ಹೊಳೆಯ ಎರಡು ಗದ್ದೆಗಳು ಮುಗಿದಿತ್ತು. ಚಂದ್ರ ತನ್ನ ಕೆಲಸ ಮುಗಿಸಿ ಎತ್ತುಗಳನ್ನು ಮೇಯಲು ಬಿಟ್ಟನು, ಹೆಣ್ಣಾಳುಗಳು ನಾಟಿ ಶುರುಮಾಡಿದ್ದರು. ಸೋಮ ಎತ್ತುಗಳನ್ನು ಹೊಳೆಯ ದಡದಲ್ಲಿ ಮೇಯಿಸುತ್ತಾ ನಾಟಿ ಮಾಡುತ್ತಿದ್ದವರ ಜೊತೆ ಮಾತನಾಡುತ್ತಾ ಕುಳಿತಿದ್ದನು. ಬಸವ ಕಾಡಿಗೆ ಹೋಗುವುದಿಲ್ಲ ಅಂದುಕೊಂಡು ಅವನು ಹೆಣ್ಣಾಳುಗಳ ಜತೆ ಹರಟುತ್ತಿದ್ದನು. ಚಂದ್ರ ಗದ್ದೆಯಲ್ಲಿದ್ದ ನೀರು ಬಸಿದುಹೋಗಲೆಂದು ಹಾರೆಯಿಂದ ಚರಂಡಿಯ ಮಣ್ಣನ್ನು ತೆಗೆಯುತ್ತಿದ್ದನು.

ಸೋಮ ಹೋಯ್ತಲ್ಲೋ ಬಸವಾ ಅಂತ ಚಂದ್ರ ಅಂದಾಗ್ಲೇ ಸೋಮ ಅತ್ತ ಕಡೆ ನೋಡಿದಾಗ ಬಸವ ಆಗಲೇ ಹೊಳೆಯನ್ನು (ಸ್ವಲ್ಪ ದಿನದಿಂದ ಮಳೆ ಕಡಿಮೆಯಾದ ಕಾರಣ ಹೊಳೆಯ ಅಬ್ಬರ ಇಳಿದಿತ್ತು) ದಾಟಿ ಕರಿಮಲೆಯ ಕಡೆ ಹೆಜ್ಜೆ ಹಾಕುತ್ತಿತ್ತು. ಸೋಮ ಗಾಬರಿಯಾಗಿ ಚಂದ್ರನ್ನ ಏನ್ಮಾಡೋದೋ ಈಗ ಅಂದಾಗ ನಿನ್ನ ಕಥೆ ಮುಗೀತು ಇವತ್ತು ಬಿಡು ಅಂದ!!!!!. ಸೋಮ, ಚಂದ್ರ ಹೆಣ್ಣಾಳುಗಳೆಲ್ಲಾ ಹೊಳೆಯ ಈ ಬದಿ ನಿಂತು ಆ ಕಡೆ ನೋಡುತ್ತಿದ್ದರು. ಚಂದ್ರಣ್ಣ ಕಾಡೊಳಗೆ ಹೋಗಣ ಬಾರೋ ಅಂತಿದ್ದ ಸೋಮ.

ತುಂಬಾ ದಿನ ಹಟ್ಟಿಯಲ್ಲಿದ್ದುದರಿಂದ ಬೇಸತ್ತ ಬಸವ ಮರ ಹೊಡೆದ ಮೊದಲ ದಿನ ಬೇಸಾಯ ಬಿಟ್ಟ ಮೇಲೆ ಮೇಯುತ್ತಿತ್ತು, ಅವಕಾಶ ಸಿಕ್ಕಿದ ತಕ್ಷಣ ಹೊಳೆ ದಾಟಿ ಕರಿಮಲೆಯ ಕಡೆ ಹೆಜ್ಜೆ ಹಾಕಿತ್ತು.

ಇವರ ಗದ್ದಲ ಕೇಳಿ ತಮ್ಮ ಪಾಲಿನ ಗದ್ದೆಗಳಲ್ಲಾಗಿದ್ದ ಕೆಲಸಗಳನ್ನ ನೋಡುತ್ತಾ ಹೊಳೆಕಡೆಗೆ ಬರುತ್ತಿದ್ದ ಗೌಡ್ರು ಒಂದೇ ಸಮನೆ ಓಡಿಬಂದರು. ಏನ್ರೋ ಏನಾಯ್ತ್ರೋ ಅಂದಾಗ ಮೊದಲೇ ಗಾಬರಿಯಾಗಿದ್ದ ಚಂದ್ರ ಗೌಡ್ರಿಗೆ ಕಾಣದಂತೆ ಹಿಂದೆ ಸರಿದನು. ಚಂದ್ರ ನಡುಗುತ್ತಲೇ, ಗೌಡ್ರೇ ಬಸವ ಕಾಡು ಹತ್ತಿತು. ಗೌಡ್ರು ಕೆಂಡಾಮಂಡಲವಾದರು. ಎಲ್ಲ್ಹೋದ ಅವ್ನು ಅಂತ ಕೈಲಿದ್ದ ಸೀಗೆಕತ್ತಿ ಎತ್ತಿದ್ರು. ಸೋಮ ನಡುಗುತ್ತಲೇ ಮುಂದೆ ಬಂದ :(. ಹೊಟ್ಟೆಗೆ ಏನು ತಿನ್ತೀಯೋ, ದನ ಕಾಯೋಕು ಲಾಯಕ್ಕಿಲ್ವಲ್ಲೋ ನೀನು ಥೂ ನಿನ್ ಜನ್ಮಕ್ಕೊಂದಿಷ್ಟು. ಇನ್ನೊಂದೆರಡು ದಿನ ಆಗಿದ್ರೆ ಬೇಸಾಯನೇ ಮುಗೀತಿತ್ತಲ್ಲೋ. ಚಂದ್ರ ನಡೀ ಹೋಗಿ ಹೆಂಗಾದ್ರೂ ಹುಡ್ಕೊಂಡು ಬರೋಣ ಅಂದ್ರು. ಗೌಡ್ರೆ ಕೋವಿ ಅಂತ ಚಂದ್ರ ಅಂದಾಗ ಈಗ ಮನೆಗೆ ಹೋಗಿ ತರೋಹೊತ್ತಿಗೆ ಬಸವ ಕರಿಮಲೆ ತುದೀಲಿ ಇರ್ತಾನೆ ಬೇಡ ನಡಿ ಅಂತ ಕಾಡೊಳಗೆ ನುಗ್ಗಿದ್ರು, ಚಂದ್ರ ಮತ್ತೆ ಸೋಮ ಅವರ ಹಿಂದೆ ಜೊತೆಗೆ ಟೈಗರ್ ಅವರನ್ನ ಹಿಂಬಾಲಿಸಿದ್ರು.

ಹೊಳೆ ದಾಟಿ ಕಾಡೊಳಗೆ ಬಂದವರು ಸುಮಾರು ಹೊತ್ತು ಹುಡುಕಿದರೂ ಬಸವನ ಸುಳಿವೇ ಕಾಣಲಿಲ್ಲ, ಅವರಾಗಲೇ ಸಣ್ಣ ಕಾಡನ್ನು ದಾಟಿ ಕರಿಮಲೆಯ ಹತ್ತಿರ ಬಂದಾಗಿತ್ತು. ಚಂದ್ರನೂ ಗೌಡರ ಹಾಗೆ ಗಟ್ಟಿ ಎದೆಯವನೇ, ಆದರೆ ಸೋಮನಿಗೆ ಅಷ್ಟು ಧೈರ್ಯವಿರಲಿಲ್ಲ. ಅವನು ಚಂದ್ರನ ಕಿವಿಯಲ್ಲಿ ಚಂದ್ರಣ್ಣ ಕರಿಮಲೆಗೆ ಬಂದ್ವಿ ಯಾಕೋ ತಿರ್ಗಿಹೊಗೋದು ಒಳ್ಳೇದಲ್ವ ಅಂದ ಆದ್ರೆ ಚಂದ್ರ ಅವ್ನ ಮಾತನ್ನ ಕಿವಿಗೆ ಹಾಕಿಕೊಳ್ಳಲಿಲ್ಲ. ಸಂಜೆಯಾಗತೊಡಗಿತ್ತು, ಮೊದಮೊದಲು ಸೂರ್ಯನ ಕಿರಣಗಳು ಅಲ್ಲಲ್ಲಿ ಬೀಳುತ್ತಿದ್ದವು ಮುಂದೆ ಮುಂದೆ ಹೋದಂತೆ ಬರೀ ಬೆಳಕಿತ್ತು. ಕರಿಮಲೆಯೊಳಗೆ ಕತ್ತಲು ನಿಧಾನಕ್ಕೆ ಹೆಜ್ಜೆಯಿಡುತ್ತಿತ್ತು.

ಗೌಡ್ರೆ ಇಲ್ಲಿ ನೋಡಿ ಯಾವ್ದೋ ಹೆಜ್ಜೆಗಳು ಕಾಣಿಸ್ತಿವೆ ಅಂದ ಸೋಮ, ಟೈಗರ್ ಸೋಮನ ಹಿಂದೆ ನಿಂತಿತ್ತು. ಗೌಡ್ರು ಚಂದ್ರ ಅವನಿದ್ದಲ್ಲಿಗೆ ಹಿಂದುರುಗಿ ಬಂದ್ರು. ಚಂದ್ರ ಅದ್ನ ನೋಡಿ ಸ್ವಲ್ಪ ಗಾಬರಿಯಾಗಿ ಗೌಡ್ರೆ ಇದ್ಯಾಕೋ ಹುಲಿ ಹೆಜ್ಜೆ ಹಾಗೆ ಕಾಣ್ಸತ್ತೆ ಅಲ್ಲದೆ ಎತ್ತಿನ ಹೆಜ್ಜೇನೂ ಇವೆ ನೋಡಿ ಅಂತ ತೋರ್ಸಿದ. ಗೌಡ್ರು ಸಹ ಸ್ವಲ್ಪ ಗಾಬರಿಯಾದ್ರೂ ಅದನ್ನ ತೋರಿಸದೆ ಈಗೆನ್ಮಾಡೋದು ಅಂದ್ರು. ಸೋಮ ಆ ವಿಷಯ ಕೇಳೇ ನಡುಗುತ್ತಿದ್ದ. ಗೌಡ್ರೆ ಇಲ್ಲೇ ಎಲ್ಲೋ ಸ್ವಲ್ಪ ದೂರದಲ್ಲೇ ಬಸವ ಇರ್ಬೇಕು ಆದ್ರೆ ಹುಲಿ ಬೇರೆ ಇದೆ ನಾವು ವಾಪಸ್ ಹೋಗೋದು ಒಳ್ಳೆದೇನೋ ಅಂತ ಅನುಮಾನದಲ್ಲಿ ಚಂದ್ರ ಹೇಳ್ದ. ಹಂಗೇನೂ ಆಗಿರಲ್ಲ ಬಾ ಅಂತ ಅಂದು ಗೌಡ್ರು ಮುಂದೆ ನಡೆದ್ರು (ವಾಸ್ತವದಲ್ಲಿ ಗೌಡ್ರಿಗೂ ಸ್ವಲ್ಪ ಹೆದರಿಕೆ ಆಗಿತ್ತು, ಚಂದ್ರ ಹೇಳ್ದಾಗ ಕೋವಿ ತರ್ಬೇಕಿತ್ತು :( ಆದದ್ದಾಗಲಿ ಅಂದು ಮುಂದುವರಿದ್ರು).

ಕರಿಮಲೆಯಲ್ಲಿ ಹೆಜ್ಜೆಹಾಕುತ್ತಿದ್ದ ಬಸವನಿಗೆ ಹಿಂದಿನಿದ ಬಂದ ಶಬ್ದ ಗ್ರಹಿಸಿ ಏನೋ ಅಪಾಯದ ಅರಿವಾಗಿ ತಿರುಗಿ ಅಲ್ಲಿಯೇ ನಿಂತುಬಿಟ್ಟಿತು. ಸ್ವಲ್ಪ ದೂರದಲ್ಲಿ ಗೌಡ್ರು, ಚಂದ್ರನ ಮಾತುಗಳು ಕೇಳಿಸತೊಡಗಿದವು.

(ಗೌಡ್ರು)
ಹೆಜ್ಜೆಯ ಜಾಡು ಹಿಡಿದು ನಡೆದು ಸ್ವಲ್ಪ ಹೊತ್ತಾಗಿರಬಹುದು, ಸೋಮನ ಹಿಂದೆ ಬರುತ್ತಿದ್ದ ಟೈಗರ್ ಯಾಕೋ ಅಲ್ಲೇ ನಿಂತಿತು, ಸೋಮ ಕರೆದ ಅದು ಬರಲಿಲ್ಲ, ಚಂದ್ರ, ಗೌಡ್ರು ಕರೆದ್ರು ಆದ್ರೂ ಬರ್ಲಿಲ್ಲ. ಸೋಮ ಹೋಗಿ ಮುಂದಕ್ಕೆ ಜಗ್ಗಿದ ಆದರೂ ಕದಲಲಿಲ್ಲ. ಗೌಡ್ರು ಮತ್ತು ಚಂದ್ರನಿಗೆ ಬಹುಶ ಹುಲಿಯೋ ಅಥವಾ ಯಾವುದೋ ಬಲಿಷ್ಠ ಪ್ರಾಣಿ ಇರ್ಬೇಕು ಅಂದ್ಕೊಂಡು ಇಬ್ರೂ ಪರಸ್ಪರ ಮುಖ ನೋಡ್ಕೊಂಡ್ರು. ಇಲ್ಲಿಂದ ಸ್ವಲ್ಪಹೊತ್ತು ಅಲ್ಲಾಡೋದು ಬೇಡ ಅಂತ ನಿಧಾನವಾಗಿ ಮಾತಾಡ್ಕೊಂಡ್ರು, ಸೋಮನಿಗೆ ಕೈಸನ್ನೆಯಲ್ಲೇ ಸುಮ್ನಿರೋದಕ್ಕೆ ಹೇಳಿದ್ರು.ಗೌಡ್ರು ತಮ್ಮ ಕೈಲಿದ್ದ ಸೀಗೆಕತ್ತಿ ಸಿದ್ಧವಾಗೇ ಹಿಡಿದುಕೊಂಡಿದ್ರು. ಹಾಗೆ ಸ್ವಲ್ಪಸಮಯ ಎಲ್ಲವೂ ನಿಶ್ಯಬ್ಧವಾದಂತಿತ್ತು. ಚಂದ್ರ ಸುತ್ತ ಕಣ್ಣು ಹಾಯಿಸಿದ, ಏನೊಂದೂ ಕಾಣಿಸುತ್ತಿಲ್ಲ ಬರೀ ಮರಗಳ ಸಾಲೇ, ಮರಗಳ ಸಂಧಿಯಿಂದ ಏನಾದರೂ ಕಾಣಬಹುದೇನೋ ಎಂದು ಎಲ್ಲರೂ ನೋಡಿದ್ರು, ಇಲ್ಲ ಕತ್ತಲಾಗುತ್ತಿದ್ದುದರಿಂದ ಏನೂ ಕಾಣಿಸುತ್ತಿರಲಿಲ್ಲ. ಚಂದ್ರ ಸೋಮನನ್ನು ಅಲ್ಲೇ ನಿಲ್ಲುವಂತೆ ಹೇಳಿ ಗೌಡ್ರು ಟೈಗರ್ ಹತ್ರ ಬಂದು ಅದು ನೋಡುತ್ತಿದ್ದ ಹಾದಿಯಲ್ಲೇ ಸ್ವಲ್ಪ ಮುಂದುವರೆದ್ರು, ಒಂದು ಹತ್ತು ಹೆಜ್ಜೆ ಹಾಕಿರ್ಬೇಕು ಅಷ್ಟೊತ್ತಿಗೆ ಅಲ್ಲೇ ಹೊಂಚ್ಹಾಕುತ್ತಿದ್ದ ಹುಲಿ ಒಮ್ಮೆಲೇ ಇವರ ಮೇಲೆ ಹಾರಿತು !!????.

(ಹುಲಿ)
ಬಸವನಿಂದ ಪೆಟ್ಟು ತಿಂದಿದ್ದ ಹುಲಿ ಮತ್ತೊಮ್ಮೆ ಬಸವ ಸಿಕ್ಕರೆ ಹೇಗಾದರೂ ಮಾಡಿ ಅದನ್ನು ಕೊಂದೇ ತೀರಬೇಕು ಜೊತೆಗೆ ದಷ್ಟಪುಷ್ಟವಾಗಿದ್ದ ಅದರಿಂದ ಒಳ್ಳೆಯ ಮಾಂಸ ಸಿಗುತ್ತದೆಂದು ತುಂಬಾ ದಿನದಿಂದಲೂ ಹೊಂಚಿಹಾಕಿತ್ತು. ಆಹಾರಕ್ಕಾಗಿ ಕಾಡೆಲ್ಲಾ ಅಲೆಯುತ್ತಿದ್ದ ಅದಕ್ಕೆ ಅಂದು ಕರಿಮಲೆಯತ್ತ ದೂರದಿಂದ ಬರುತ್ತಿದ್ದ ಬಸವ ಕಾಣಿಸಿದ, ಹೋಗಿ ಅದರ ಮೇಲೆ ಆಕ್ರಮಣ ಮಾಡಬೇಕು ಎಂದು ಮೆಲ್ಲಗೆ ಹೆಜ್ಜೆಯಿಡುತ್ತಿತ್ತು ಅಷ್ಟೊತ್ತಿಗೆ ಮನುಷ್ಯರ ಮಾತುಗಳನ್ನು ಕೇಳಿ ಅಲ್ಲೇ ಪೊದೆಯ ಹಿಂದೆ ಅಡಗಿ ನಿಂತಿತ್ತು.

(ಬಸವ)
ಗೌಡ್ರು ಚಕ್ಕನೆ ಬಂದ ಆಘಾತಕ್ಕೆ ಏನು ಮಾಡಬೇಕೆಂದು ತೋಚದೆ ಹಾಗೇ ನಿಂತುಬಿಟ್ಟರು. ಹುಲಿ ಇವರ ಮೈಮೇಲೆ ಇನ್ನೇನು ಬೀಳಬೇಕು ಅಷ್ಟರಲ್ಲಿ ಬಸವ ನುಗ್ಗಿಬಂದು ತನ್ನ ಚೂಪಾದ ಕೋಡುಗಳನ್ನು ಹುಲಿಯ ಕಡೆಗೆ ಚಾಚಿತು, ಹುಲಿಯ ಹೊಟ್ಟೆಯೊಳಗೆ ಕೋಡು ಹೋಯಿತು ಆದರೆ ಅಷ್ಟರಲ್ಲಾಗಲೇ ಹುಲಿ ತನ್ನ ತೆರೆದ ಬಾಯಿಯನ್ನು ಬಸವನ ಕುತ್ತಿಗೆಗೆ ಹಾಕಿಯಾಗಿತ್ತು.

ಹುಲಿಯ ಪ್ರಾಣ ಹೋಗಿತ್ತು. ಬಸವ ತನ್ನೊಡೆಯನ ಋಣವನ್ನು ಬಡ್ಡಿ ಸಮೇತ ತೀರಿಸಿ ಕರಿಮಲೆಯಲ್ಲಿ ಶಾಂತವಾಗಿ ನಿದ್ರಿಸಿತ್ತು.

ಬೆಂಗಳೂರಲ್ಲೊಂದಿನ - ಮುಕ್ತಾಯ

ಸಂಜೆ ೫ ಗಂಟೆ ಆಗ್ತಾ ಬಂತು.
ಈರಣ್ಣ ಹತ್ರ ಬಂದು ಅದೂ ಇದೂ ಮಾತಾಡ್ತಾ ಕೂತ್ರು.
'ಈರಣ್ಣ ಇವತ್ತು ಶುಕ್ರವಾರ, ಸ್ವಲ್ಪ ಜ್ಯೂಸ್ ಬೇಗ ತರ್ಸಿದ್ರೆ ಕುಡ್ಕೊಂಡು ಬೇಗ ಹೊರಡ್ತಿದ್ವಿ'.
'ನಾನು ಅದೇ ಯೋಚನೆ ಮಾಡ್ತಿದ್ದೆ ಕಣ್ರೀ, ನೀವೆಲ್ಲ ಬೇಗ ಹೊರಡ್ತೀರೆನೋ ಅಂತ, ನನಗೆ ಜ್ಯೂಸ್ ತರೋ ಕೆಲಸ ಇರ್ತಿರ್ಲಿಲ್ಲ, ಆದ್ರೆ ಯಾರೂ ಹೊರಡಂಗಿಲ್ಲ ನೋಡ್ರೀ, ನಂಗೂ ಸ್ವಲ್ಪ ಕಾಸು ಮಿಕ್ತಿತ್ತು!!!!'
'ಸರಿಹೋಯ್ತು ಬಿಡಿ, ಈಗ ಬೇಗ ಆರ್ಡರ್ ಮಾಡಿ, ಕುಡಿದು ಹೊರಡ್ತೀವಿ'
ಜ್ಯೂಸ್ ಕುಡಿದು ಸೌಜಂಗೆ ಬಾಯ್ ಹೇಳಿ ಮನೆ ಕಡೆ ಹೊರ್ಟೆ.

ಬಸ್ ಸ್ಟಾಪಲ್ಲಿ ವಯಸ್ಸಾದವರೊಬ್ರು ಸಿಕ್ಕಿದ್ರು, ಮೆಜೆಸ್ಟಿಕ್ಗೆ ಹೋಗೋ ಬಸ್ ಇಲ್ಲೇ ಬರತ್ತೇನಪ್ಪ?
ಹೌದು ಇಲ್ಲೇ ಬರತ್ತೆ ಕಣ್ರೀ.
ಒಂದು ೫ ನಿಮ್ಷ ಆಗಿರ್ಬೇಕು,ಮೆಜೆಸ್ಟಿಕ್ಗೆ ಖಾಲಿ ಬಸ್ ಸಿಕ್ತು.
ಅವ್ರೂ ಹತ್ತಿದ್ರು.
ಕಂಡಕ್ಟರ್ ಟಿಕೆಟ್ ಕೊಡ್ತಾ ಬಂದ್ರು, ಸೀನಿಯರ್ ಸಿಟಿಜನ್ ಸೀಟಲ್ಲಿ ಕೂತಿದ್ದ ವಯಸ್ಸಾದ ವ್ಯಕ್ತಿಗೆ ಟಿಕೆಟ್ ಅಂದ್ರು.
ಅವ್ರು ಮೆಜೆಸ್ಟಿಕ್ ಅಂದ್ರು, ಕಂಡಕ್ಟರ್ ಟಿಕೆಟ್ ಹರಿದುಕೊಟ್ಟ. ಆಮೇಲೆ ಅವ್ರಿದ್ದವ್ರು ಸೀನಿಯರ್ ಸಿಟಿಜನ್ ಅಂದ್ರು.
ಕಂಡಕ್ಟರ್ ಹಾಗೆ ಗುರಾಯ್ಸ್ತಿದ್ದ.
ಈ ಸಲ ನಾನು ಏನೂ ಮಾತಾಡ್ಬಾರ್ದು ಅಂತ ಸುಮ್ನೆ ಕೂತೆ.

ಮೆಜೆಸ್ಟಿಕ್ ತಲುಪಿ ಅಲ್ಲಿಂದ ನವರಂಗ್ ಬಸ್ ಹತ್ತಿ ಅಕ್ಕನ ಮನೆಗೆ ಹೋದೆ.

ಅಕ್ಕ 'ಏನೋ ಶುಕ್ರವಾರ ಭಾರೀ ಬೇಗ ಬಂದಿದೀಯಾ?'
'ಸುಮ್ನಿರಮ್ಮ ಮೊದ್ಲೇ ಕೆಲಸ ಮಾಡಿ ಮಾಡಿ ಸಾಕಾಗಿದೆ, ನೀನು ಬೇರೆ ಉರಿಯೋ ಬೆಂಕಿಗೆ ತುಪ್ಪ ಸುರಿತೀಯ'
ಅವ್ಳು ನಗಾಡಿ ಸುಮ್ನಾದ್ಲು.
ಆದ್ರೆ ಅಲ್ಲೇ ಆಟ ಆಡ್ತಿದ್ದ ಅಕ್ಕನ ಮಗ 'ಮಾಮ, ಎಲ್ಲಿಂದ ಬಂದೆ?'
'ಊರಿಂದ'
'ಏರೋಪ್ಲೇನಲ್ಲಿ ಬಂದ್ಯಾ?'
'ಹ್ಞೂ ಅದ್ರಲ್ಲೇ ಹೊರ್ಟಿದ್ದೆ ಆದ್ರೆ ದಾರೀಲಿ ಟೈರ್ ಪಂಚರ್ ಆಯ್ತು, ಗಾಡಿ ಎತ್ತಲ್ಲಿ ಬಂದೆ'
ಅಡಿಗೆ ಮನೆಲಿದ್ದ ಅಕ್ಕ 'ಏ ತಲೆಹರಟೆ, ಪಾಪ ಹುಡ್ಗ ಏನೋ ಕೇಳ್ತಾನೆ ಸರ್ಯಾಗಿ ಹೇಳೋದ್ರ ಬದ್ಲು ಏನೇನೊ ಹೇಳ್ತೀಯಲ್ಲೋ'
ಪಾಪ ಹುಡ್ಗ!!!! (ಇವತ್ತಿನ ಕಾಲದ ಮಕ್ಳಿಗೆ ಪಾಪನಾ!!!!???)
'ಹೌದಮ್ಮ, ಅವ್ನು ಕೇಳೋ ಚೆಂದ ಹಂಗಿದೆ. ನಮ್ಮೂರು ಇನ್ನ ಗೌರ್ಮೆಂಟ್ ಬಸ್ಸೇ ನೋಡಿಲ್ಲ ಆಗ್ಲೇ ನಿನ್ಮಗ ಏರೋಪ್ಲೇನ್ ಹಾರಿಸ್ತಿದ್ದಾನೆ. ಇವ್ನಿಗೆ ಬಾತ್ರ್ರೂಮಿಂದ ಬಂದ್ರೂ ಏರೋಪ್ಲೇನಲ್ಲಿ ಲ್ಯಾನ್ಡಾದೆ ಅಂದ್ರೆ ಖುಷಿಯಾಗ್ತಾನೆ ನೋಡು'
'ಏನೋ ಬಿಡು, ಇಬ್ರೂ ಅಂಥವ್ರೆ ಸರ್ಯಾಗಿದೀರಾ'.

ಸ್ವಲ್ಪ ಹೊತ್ತಾದ್ಮೇಲೆ ಅಕ್ಕಂಗೆ 'ಅಕ್ಕನ (ದೊಡ್ಡಮ್ಮನ ಮಗಳು) ಮನೆಗೆ ಹೋಗಿ ಬರ್ತೀನಿ ತುಂಬಾ ದಿನ ಆಯ್ತು. ಊಟಕ್ಕೆ ಇಲ್ಲಿಗೆ ಬರ್ತೀನಿ'
'ಊರೆಲ್ಲಾ ಹಾಳು ಮಾಡಿದ್ದು ಸಾಕಾಗ್ಲಿಲ್ಲ ಅನ್ಸತ್ತೆ ಇನ್ನು ಅದೊಂದು ಮನೆ ಬಾಕಿ ಇತ್ತು, ಸರಿ ಹೋಗಿ ಬಾ. ಮಕ್ಳು ಓದ್ತಿರ್ತವೆ ಡಿಸ್ಟರ್ಬ್ ಮಾಡ್ಬೇಡ'.
'ನೀನು ಯಾವತ್ತಾದ್ರೂ ನನ್ನ ಬಗ್ಗೆ ಒಳ್ಳೆ ಮಾತು ಹೇಳಿದೀಯಾ?, ಡಿಸ್ಟರ್ಬ್ ಮಾಡೋಕೆ ಹೋಗದು ಏನೀಗ'
'ಹೋಗಿ ಸಾಯಿ' ಅಂದು ಅಡಿಗೆ ಮನೆ ಒಳಗೆ ಹೋದ್ಲು.
'ಬರ್ತೀನಿ ಕಣೋ, ಬರ್ತೀಯಾ ನಂಜೊತೆ ಏರೋಪ್ಲೇನಲ್ಲಿ ಹೋಗಣ?'
ಏಯ್, ಸುಮ್ನೆ ಹೋಗ್ತೀಯೋ ಒದೆ ಬೇಕಾ ಅಂತ ಆವಾಜ್ಹ್ ಅಡಿಗೆ ಮನೆಯಿಂದ ಬಂತು.

ಅಕ್ಕನ ಮನೆ ತಲ್ಪಿದ ತಕ್ಷಣ ನನ್ನನ್ನ ಅಕ್ಕ ನೋಡಿ 'ಏನೋ ಮಾರಾಯ,ಆಸಾಮಿ ತುಂಬಾ ದಿನದಿಂದ ಪತ್ತೇನೆ ಇಲ್ಲ'.
'ಅಯ್ಯೋ, ತುಂಬಾ ಕೆಲಸ ಅಕ್ಕ ಹಾಗಾಗಿ ಬರೋಕಾಗ್ಲಿಲ್ಲ'
‘ಸರಿ ಕೂತ್ಕೋ, ಇವೆರಡು ಇಲ್ಲೇ ಎಲ್ಲೋ ಇರ್ಬೇಕು ಬರ್ತಾವೆ ತಡಿ’ ಅಂದು ಅಡಿಗೆ ಮನೆ ಕಡೆ ಹೋದ್ರು.
ಅವ್ರು ಹೇಳೋಕಿಂತ ಮೊದ್ಲೇ ದೊಡ್ಡವಳು (ವರ್ಷ) ಬಂದು 'ಏನ್ರೀ ತುಂಬಾ ದಿನ ಆಯ್ತು, ಅಷ್ಟು ಬ್ಯುಸಿನಾ?'
'ಹೂನಮ್ಮ ಕೆಲಸ ಜಾಸ್ತಿ'
'ನಂದಿರ್ಲಿ ಅದು ಯಾವಾಗ್ಲೂ ಇದ್ದದ್ದೇ, ಇಂಜಿನಿಯರಿಂಗ್ ಮುಗೀತಾ ಬಂತು, ಕ್ಯಾಂಪಸ್ ಸೆಲೆಕ್ಷನ್ ಆದ್ರೆ ನಮ್ಮಂಗೆ ಸಾಯ್ಬೇಕು, ನೋಡು ನಾನು ನಿಂಗೆ ಪಿ ಯು ಸಿ ಟೈಮಲ್ಲೇ ಹೇಳ್ದೆ, ಜಾಸ್ತಿ ಓದ್ಬೇಡ, ಸ್ವಲ್ಪ ಓದಿ ಯಾವ್ದೋ ಡಿಗ್ರಿ ಮಾಡಿ ಆದ್ಮೇಲೆ ಮನೆನಲ್ಲಿ ಯಾವ್ದಾದ್ರೂ ಹುಡ್ಗನ್ನ ಹುಡ್ಕಿ ಗಂಟು ಹಾಕ್ತಿದ್ರು ಆಮೇಲೆ ಆರಾಮಾಗಿ ಇರ್ಬಹುದಿತ್ತು,ಈಗ ನೋಡು' (ಅಂತ, ದೊಡ್ಡೋರ ಮಾತು ಎಲ್ಲಿ ಕೇಳ್ತೀಯಾ!!??)
'ರೀ ನಾಲ್ಕು ಉದ್ಧಾರ ಆಗಂಥ ಮಾತು ಹೇಳಿ ಅಂದ್ರೆ ಇಂಥವೇ ಪ್ಲಾನ್ ಹೇಳ್ರಿ'
'ಅದೇ ಮತ್ತೆ ಹೇಳಿದ್ದುನಿನ್ನ ಒಳ್ಳೇದಕ್ಕೆ ಹೇಳ್ದೆ, ಏನಾದ್ರೂ ಮಾಡ್ಕೋ. ಅವ್ಳೆಲ್ಲಿ (ವರ್ಷಳ ತಂಗಿ ಮೇಘ - ಫ್ಯೂಚರ್ ಡಾಕ್ಟ್ರು) ? ಇಡೀ ಏರಿಯಾದರ್ದು ಬ್ಲಡ್ ಚೆಕ್ ಮಾಡೋಕೆ ಹೋದ್ಲಾ?'.
(ದೊಡ್ಡವಳು ವರ್ಷ, ಸಣ್ಣವಳು ಮೇಘ. ಅದ್ಹೇನು ಲೆಕ್ಕ ಹಾಕಿ ಹೆಸರು ಇಟ್ರೋ ನಮ್ಮಕ್ಕ ಭಾವ. ಮೋಡ ಆದ್ಮೇಲೆ ಮಳೆ ಬರತ್ತೆ ಇಲ್ನೋಡಿದ್ರೆ ಉಲ್ಟಾ ಆಗಿದೆ, ಆದ್ರೆ ಹೆಸರು ಇಬ್ರಿಗೂ ಸರ್ಯಾಗಿದೆ, ವರ್ಷ ಸೈಲೆಂಟ್ ಆದ್ರೆ ಮೇಘ ಗುಡಿಗೂ ಸಿಡಿಲು ಬರಿಸೋ ಮೋಡ).
'ಇಲ್ರೀ ಮೇಲೆ ರೂಮಲ್ಲಿ ಇದ್ದಾಳೆ, ಬರ್ತಾಳೆ ತಡೀರಿ'
'ಇವ್ಳು ಈಗ್ಲೇ ನಮ್ಮ ರಕ್ತ ಹೀಗೆ ಹೀರಿದ್ರೆ ಇನ್ನು ಡಾಕ್ಟರ್ ಆದ್ಮೇಲೆ ನಮ್ಮ ಮೈಯಲ್ಲಿ ಒಂದು ಹನಿ ರಕ್ತನೂ ಬಿಡಲ್ವೇನೋ'

'ಏಯ್, ಏನೋ ಅದು ನನ್ನ ಮೇಲೆ ಕಂಪ್ಲೆಂಟ್'. ಅವ್ಳು ಬರೋವಾಗ ನನ್ನ ಮಾತು ಅವಳ ಕಿವಿಗೆ ಬಿದ್ದಾಗ ಅವಳಿಂದ ಬಂದ ಉತ್ತರ.
'ನೋಡು ನಿಜ ಹೇಳಿದ್ರೆ ಹೀಗೆ ಎಗ್ರಾಡ್ತೀರಾ, ಎಲ್ರೂ ಫ್ಯಾಮಿಲಿನಲ್ಲಿ ಒಬ್ರು ಡಾಕ್ಟ್ರು ಇದ್ರೆ ಒಳ್ಳೇದಪ್ಪ ಅಂದ್ಕೋತಾರೆ, ನೀವು ನೋಡಿದ್ರೆ ಶುರುವಲ್ಲೇ ನಾವು ಪೇಷೆಂಟ್ ಅಲ್ದಿದ್ರೂ ನಮ್ಮ ಪ್ರಾಣ ತಿಂತೀರಾ'
'ಏಯ್, ಏನೋ ಟೆಸ್ಟ್ ಮಾಡಣ ಅಂತ ಸ್ವಲ್ಪ ರಕ್ತ ಕೇಳಿದ್ರೆ ಸಾವಿರ ಮಾತಾಡ್ತೀಯಾ'
'ಇನ್ನೇನ್ಮತ್ತೆ ಸೂಜಿ ತಗೊಂಡು ಚುಚ್ಚಿ ಚುಚ್ಚಿ ಇಟ್ರೆ ನಮ್ಮ ಕಥೆ ಏನಾಗಬೇಡ'.
'ಕಷ್ಟ ಆಗತ್ತೆ ಸ್ವಲ್ಪ ಹೆಲ್ಪ್ ಮಾಡ್ಬೇಕಪ್ಪಾ'.
'ಸರಿ ಬಿಡು, ಮತ್ತೆ ಡಾಕ್ಟ್ರು ಆದ್ಮೇಲೆ ಇಲ್ಲೇ ಇರ್ತೀಯ ಅಥ್ವಾ ಹೊರ್ಗ್ಹೋಗಿ ಬಿಳಿ ಜಿರಳೆ ಪೇಷೆಂಟ್ಗಳ ಸೇವೆ ಮಾಡ್ತೀಯಾ?'
'ನಿಂದು ಯಾಕೋ ಜಾಸ್ತಿಯಾಯ್ತು ಕಣೋ'
'ರೆಸ್ಪೆಕ್ಟ್ ರೆಸ್ಪೆಕ್ಟ್ ಇರ್ಲಿ'

ಅಷ್ಟೊತ್ತಿಗೆ ಅಕ್ಕ ಜ್ಯೂಸ್ ತಗೊಂಡು ಬಂದ್ರು 'ನೋಡಕ್ಕ, ನಿಮ್ಮಿಬ್ರು ಮಕ್ಳಿಗೆ ಒಳ್ಳೆ ಬುದ್ಧಿ ಹೇಳಿದ್ರೆ ನನ್ನ ಮಾತೇ ಕೇಳಂಗಿಲ್ಲ'
'ಅವುಕ್ಕೆಲ್ಲಿ ಅರ್ಥ ಆಗತ್ತೆ ಹೋಗ್ಲಿ ಬಿಡು, ಒಳ್ಳೆ ಮಾತು ಕೇಳಿದ್ರೆ ತಲೆಗೆ ಹಾಕಬೇಕು'
'ಅದೇ ಮತ್ತೆ, ಸರಿ ನಾನಿನ್ನು ಬರ್ತೀನಿ'
'ಯಾಕೋ ಊಟ ಮಾಡ್ಕೊಂಡು ಹೋಗೋ'
'ಇಲ್ಲ ಇನ್ನೊಮ್ಮೆ ಆರಾಮಾಗಿ ಬರ್ತೀನಿ. ಬರ್ತೀನ್ರಮ್ಮ'
'ಕಳ್ಚ್ಕೋ'
ಮೋಡ ಮತ್ತೆ ಮಳೆ ಒಟ್ಟಿಗೆ ಘರ್ಜಿಸಿದ್ವು!!

ಬೆಂಗಳೂರಲ್ಲೊಂದಿನ - ೩

ಮತ್ತೆ ಸಿಸ್ಟಂಗೆ ಲಾಗಿನ್ ಆಗಿ ಕೂತ್ವಿ.

ಕೆಲ್ಸ ನಡೀತಿತ್ತು, ಒಂದು ಮೈಲ್ ಪಾಪ್ ಅಪ್ ಆಯ್ತು. ಓಪನ್ ಮಾಡಿದ್ರೆ, ವೆಂಕಂದು. ಡರ್ಟಿ ಪಿಕ್ಚರ್ ಅಂತ ವಿದ್ಯಾ ಬಾಲನಳ ಒಂದು ಫೋಟೋ ಕಳ್ಸಿದ.
ಕೆಲಸದಲ್ಲಿ ಬ್ಯುಸಿಯಾಗಿದ್ದ ಸೌಜಂಗೆ, ನೋಡಿದ್ಯ ವೆಂಕ ಕಳ್ಸಿದ್ದು ಅಂದೆ.
ಇಲ್ಲ ನೋಡ್ತೀನಿ ತಡಿ ಅಂದವನು ನೋಡಿದ್ಮೇಲೆ.
ತಡಿ, ಇದಕ್ಕೆ ರಿಪ್ಲೈ ಮಾಡ್ತೀನಿ.
೧ ನಿಮ್ಷ ಆದ್ಮೇಲೆ ಸೌಜನ ಮೈಲ್ ಬಂತು.
'ಲೇ, ಮನೇಲಿ ಹೆಂಡ್ತಿ ಬಿಟ್ಕಂಡು ಆಫೀಸಲ್ಲಿ ಇವೇ ಮಾಡ್ತೀಯಾ’ ಅಂತಿತ್ತು.
ನಾನೂ ಅದಕ್ಕೆ ರಿಪ್ಲೈ ಮಾಡಿದೆ 'ಡರ್ಟಿ ಮೈಂಡ್ ನಿಂದು'.
ವೆಂಕನ ರಿಪ್ಲೆಗೆ ಕಾದ್ವಿ,೧೦ ನಿಮ್ಷ ಆದ್ಮೇಲೆ ಬಂತು.
ಸರಿ ಕಣ್ರಪ್ಪ, ನಿಮ್ಗೆ ಕಳ್ಸಿದ್ದೆ ತಪ್ಪಾಯ್ತು ಇನ್ಮುಂದೆ ಆ ತಪ್ಪು ಮಾಡಲ್ಲ.

.....

ಊಟ ಮಾಡಣ್ವೇನಪ್ಪ.
ಹೂಂ ನಡಿ.
ನನ್ನ ಲಂಚ್ ಬಾಕ್ಸ್ ತೆಗ್ದೆ.
ಸೌಜ, 'ಏನಪ್ಪಾ ಚಿತ್ರಾನ್ನನ?'
ಬ್ಯಾಚಲರ್ಸ್ ಕಣಪ್ಪ, ಒಂದಿನ ಚಿತ್ರಾನ್ನ, ಒಂದಿನ ಪುಳಿಯೊಗರೆ, ಎಗ್ ರೈಸ್ ಇನ್ನೇನ್ಮಾಡಕಾಗತ್ತೆ?
ರೈಸ್ ಐಟಂ ಬಿಟ್ಟು ಅಲ್ಲಾಡಲ್ಲ ಅನ್ನು.
ಮದ್ವೇಯಾಗೊವರ್ಗೂ ಇದೆ ಕಥೆ, ಅದಿರ್ಲಿ ನಿನ್ನ ಬರೀ ತರಕಾರಿ ಊಟಕ್ಕೆ ಯಾವಾಗ ಕೊನೆ.
ಇನ್ನೊಂದು ವಾರ, ಆಮೇಲೆ ಭರ್ಜರಿ ಭೋಜನ.
೧೫ ದಿನದಲ್ಲಿ ಎಷ್ಟು ತೆಳ್ಳಗಾಗ್ತೀಯೋ, ಅಮ್ಮಮ್ಮ ಅಂದ್ರೆ ೨ ಕಿಲೋ ಡೌನ್ ಆಗ್ಬಹುದು, ಆಮೇಲೆ ಭರ್ಜರಿ ಭೋಜನ ಬೇರೆ ಅಂತೀಯ.ಅದ್ರ ಜೊತೆಗೆ ನಾಲ್ಗೆ ಚಪಲ ಅಂತ ಶೇಂಗಾ, ಚಿಪ್ಸ್ ತಂದು ತಿಂತೀಯಾ.
ಏನೋ ಮಾಡೋದಪ್ಪ.ಹೊಟ್ಟೆಪಾಡು!
ಏನೇ ಆದ್ರೂ ನೀನು ರಶ್ಮಿ ಜೊತೆ ಕಾಮ್ಪಿಟ್ (ಅವ್ನ ಧರ್ಮಪತ್ನಿ , ಸ್ವಲ್ಪ ತೆಳ್ಳಗಿದ್ದಾಳೆ) ಮಾಡೋಕಾಗಲ್ಲ.
ಹ್ಹೆ ಹ್ಹೆ ಅದೆಲ್ಲಿ ಸಾಧ್ಯ.
ಅದೇ ಮತ್ತೆ, ದೊಡ್ಡಣ್ಣ ಕಾಶೀನಾಥ್ ಆಗೋಕಾಗತ್ತಾ? (ಇವ್ನೇನು ಅಷ್ಟೊಂದು ದಪ್ಪ ಇಲ್ಲ ಆದ್ರೂ ಕಾಲೆಳೆಯೋದಕ್ಕೆ ಕಾಸು ಕೊಡ್ಬೇಕಾ!!!).
ಹೌದಪ್ಪಾ, ಹೇಳು ಹೇಳು.

...........

ಊಟ ಮಾಡಿ ಮತ್ತೆ ನನ್ನ ಡೆಸ್ಕ್ಗೆ ಬಂದು ಕೂತೆ.
ಆನ್ಲೈನ್ ಬಂದ ತಕ್ಷಣ, ಪೋಕಿ ಪಿಂಗ್ ಮಾಡಿದ.
ಏನು ಚಿಕ್ಕು, ಆರಾಮ?
ಹ್ಞೂ ಪೋಕಿ.
ನೀನು?
ನಾನು, ಸೂಪರ್ ಆರಾಮು.
ಕೆಲ್ಸ ಹೇಗೆ?
ಹಾಗೆ ನಡೀತಿದೆ.
ನಿಂದು?
ಇಷ್ಟು ದಿನ ಬೆಂಕಿ ಬಿದ್ದಿತ್ತು, ಈಗ ಸ್ವಲ್ಪ ಆರಾಮು.
ಓ ಕೆ, ಮತ್ತೆ ಮದ್ವೆ ವಿಷ್ಯ ಎಲ್ಲಿಗೆ ಬಂತು.
:) ಯಾಕೆ ಬಿಡು ಅದ್ರ ಬಗ್ಗೆ ಮಾತು, ಮನೇನಲ್ಲಿ ಆ ಮ್ಯಾಟರ್ರೆ ಎತ್ತಲ್ಲ.
ಸೊ ಸ್ಯಾಡ್.
ನಿಂದೇನು ಕಥೆ?
ಹಂಟಿಂಗ್ ನಡೀತಿದೆ ಮಗ.
ನಡೀಲಿ ನಡೀಲಿ.
ಹೀಗೆ ಅದೂ ಇದೂ ಮಾತಾಯ್ತು.

.......

ಕಾಫೀ ಬ್ರೇಕಲ್ಲಿ ತಡಿ ಉಲ್ಲಂಗೆ ಕಾಲು ಎಳೆಯೋಣ ಅಂದು ಕಾಲ್ ಮಾಡಿದ ಸೌಜ, ಸ್ಪೀಕರ್ ಆನ್ ಮಾಡಿದ್ದ.
ಏನೋ ಉಲ್ಲ, ಇಬ್ರೂ ಒಟ್ಟಿಗೆ ಕೂಗಿದ್ವಿ, ಆರಾಮೇನೋ?
ಹೌದಪ್ಪಾ, ಅದೇನು ಇಷ್ಟು ದಿನ ಆದ್ಮೇಲೆ ಅದೂ ಈ ಹೊತ್ತಲ್ಲಿ ನನ್ನ ಜ್ಞಾಪಕ ಬಂತು?
ಫ್ರೆಂಡ್ ಕಣಪ್ಪ ನೆನಪಿಸಿಕೊಳ್ತಿರ್ಬೇಕು.
ಇವಕ್ಕೇನು ಕಮ್ಮಿ ಇಲ್ಲ.
ಅದೆಲ್ಲ ಇರ್ಲಿ, ಸ್ವಲ್ಪ ಜ್ವರ ಬಂದಂಗೆ ಕಾಣ್ತಿದೆ ನಿನ್ನ ಧರ್ಮಪತ್ನಿಯವ್ರ ಹತ್ರ ಯಾವ ಟ್ಯಾಬ್ಲೆಟ್ ತಗೋಬೇಕು ಅಂತ ಕೇಳಿ ಹೇಳೋ.
ಮತ್ತೆ ಏನೋ ದೊಡ್ಡದಾಗಿ ಹೇಳ್ದೆ ನಾನು ನೆನಪಿಗೆ ಬಂದೆ ಅಂತ.
ಹಾಗೆ ಕಣಮ್ಮಾ, ಫ್ರೆಂಡ್ಸಲ್ವ ಸ್ವಲ್ಪ ಅಡ್ಜಸ್ಟ್ ಮಾಡ್ಕೋ , ಕಾಯಿಲೆ ಬಂತು ನೋಡು, ಹಾಗೆ ನೀನು ನೆನಪಿಗೆ ಬಂದೆ.
ನೀವೇ ಟ್ಯಾಬ್ಲೆಟ್ ಡೆವಲಪ್ ಮಾಡ್ತಿದೀರಲ್ಲ ಅದರಲ್ಲೇ ಒಂದು ನುಂಗು.
ಕಥೆ ಎಲ್ಲ ಬೇಡ, ಕೇಳಿ ಹೇಳು, ಅಲ್ವೋ ಕಂಪೌನ್ಡರ್ ಆಗಿ ನಿನ್ನ ಕೆಲಸ ನೀಟಾಗಿ ಮಾಡೋಕೆ ಬರಲ್ವಲ್ಲೋ.
ನನ್ಮಕ್ಳ, ಜಾಸ್ತಿ ಆಯ್ತು.
ಅರೆ ನಾವೇನು ತಪ್ಪು ಹೇಳಿದ್ವಿ, ಉಲ್ಲ ಒಂದು ಒಳ್ಳೆ ಐಡಿಯಾ ಕೊಡ್ತೀವಿ ನೋಡು.
ಏನು?
ಕೆಲಸ ಬಿಟ್ಬಿಡು.
ಆಮೇಲೆ?
ನಾವೆಲ್ಲಾ ಸೇರಿ ಒಂದು ಫೋನ್ ತೆಗ್ಸಿಕೊಡ್ತೀವಿ, ಹೆಂಗಿದ್ರೂ ನಿನ್ನ ಧರ್ಮಪತ್ನಿ, ನಿಮ್ಮಣ್ಣ, ಅತ್ತಿಗೆ ಎಲ್ರೂ ಡಾಕ್ಟ್ರೆ, ನೀನೊಬ್ಬ ಆಡ್ ಮ್ಯಾನ್ ಔಟ್. ನಮ್ಗಳಿಗೆ ಹುಶಾರಾಗಿಲ್ದೆ ಇದ್ದಾಗ ನಿಂಗೆ ಕಾಲ್ ಮಾಡ್ತೀವಿ, ನಿಂಗೆ ನಮ್ಮ ಕಾಯಿಲೆನ ಯಾರು ಕ್ಯೂರ್ ಮಾಡ್ತಾರೆ ಅಂತ ಗೊತ್ತಿರುತ್ತಲ್ಲ ಅವ್ರಿಗೆ ಕನೆಕ್ಟ್ ಮಾಡು, ನಾವು ಪ್ರಿಸ್ಕ್ರಿಪ್ಶನ್ ಕೇಳ್ತೀವಿ.
ಫ್ರೆಂಡ್ಸ್ ಆಗಿ ಇಂಥ ಮನೆಹಾಳು ಐಡಿಯಾನೆ ಕೊಡ್ರೋ.
ಅಲ್ವೇ ಮತ್ತೆ, ಫ್ರೆಂಡ್ಸ್ ಇರೋದ್ಯಾಕೆ ಹೇಳು?!!
ಹೀಗೆ ಸ್ವಲ್ಪ ಹೊತ್ತು ಕಾಲೆಳದು ಕಾಲ್ ಕಟ್ ಮಾಡಿದ್ವಿ.

Wednesday, September 14, 2011

ಬೆಂಗಳೂರಲ್ಲೊಂದಿನ - ೨

ಮೆಜೆಸ್ಟಿಕ್ನಲ್ಲಿ ಇಳಿದು ೧೩೮ ನಂ. ಬಸ್ ಹಿಡಿದು ಕುಳಿತೆ. ಜಾಸ್ತಿ ಜನ ಇರ್ಲಿಲ್ಲ. ಕಂಡಕ್ಟರ್ ಎಲ್ಲರ ಹತ್ತಿರ ಟಿಕೆಟ್/ಪಾಸ್ ಕೊಡ್ತಾ ಚೆಕ್ ಮಾಡ್ತಾ ಬರ್ತಿದ್ದ. ಸೀನಿಯರ್ ಸಿಟಿಜನ್ ಸೀಟಲ್ಲಿ ಕುಳಿತಿದ್ದ ಒಬ್ಬ ವಯಸ್ಸಾದ ವ್ಯಕ್ತಿಯೊಬ್ರು ಇಂದಿರಾನಗರಕ್ಕೆ ಒಂದು ಟಿಕೆಟ್ ಕೊಡ್ರೀ ಅಂದ್ರು.
ಕಂಡಕ್ಟರ್ ಇನ್ನೇನು ಟಿಕೆಟ್ ಕೊಡ್ಬೇಕು ಸೀನಿಯರ್ ಸಿಟಿಜನ್ ಅಂದ್ರು. ಇವ್ನಿಗೂ ಸಿಟ್ಟು ಬಂತು.
ಅಲ್ರೀ ಮೊದ್ಲು ಅದ್ನ ಹೇಳಿ ಆಮೇಲೆ ಟಿಕೆಟ್ ಕೇಳೋದಲ್ವ?
ಆ ವಯ್ಯ ಬಾಯಲಿದ್ದ ಕೆಲವೇ ಕೆಲವು ಹಲ್ಲುಗಳನ್ನು ತೋರಿಸ್ತಿದ್ರು.
ಹಿಂಗೆ ನಗಾಡಿದ್ರೆ ಏನ್ರೀ ಉತ್ರ?

ಆಗ ನಾನು 'ಕಂಡಕ್ಟರ್ರೆ, ವಯಸ್ಸಾದವರನ್ನ ನೀವು ನೋಡಿದ ತಕ್ಷಣವೇ ಗುರುತಿಸೋ ಹಾಗೆ ಒಂದು ಐಡೆನ್ಟಿಟಿ ಇರ್ಬೇಕು, ಅಲ್ವ?'
'ಹೂಂ ಸಾರ್, ಹಾಗಿದ್ದಿದ್ರೆ ಬಾರೀ ಅನುಕೂಲ ಆಗ್ತಿತ್ತು, ನಮ್ಗ್ಯಾವಾಗ್ಲೂ ಇದ್ಹೇ ಪ್ರಾಬ್ಲಂ, ಅರ್ಧಕ್ಕರ್ಧ ಜನಕ್ಕೆ ಮರೆವು ಜಾಸ್ತಿ'
'ಅದೇ ಮತ್ತೆ ಅದ್ಕೆ ನಾನು ಹೇಳಿದ್ದು, ಹೇಗಿರ್ಬೇಕು ಅಂದ್ರೆ ಬಿಳೇ ಕೂದ್ಲು ನೋಡಿದ ತಕ್ಷಣ ಇವ್ರು ಸೀನಿಯರ್ ಸಿಟಿಜನ್ ಅಂತ ಗೊತ್ತಾಗ್ಬೇಕು'
'ಹೌದು ಸಾರ್, ಒಳ್ಳೆ ಐಡಿಯಾ, ನಮ್ಮ ಮೇಲಧಿಕಾರಿಗಳಿಗೆ ಹೇಳ್ಬೇಕು'
'ಆದ್ರೆ ಒಂದು ತೊಂದ್ರೆ ಇದೆ'
'ಅದೇನ್ಸಾರ್'
'ಈಗ ವಯಸ್ಸು ೭೦ ಆದ್ರೂ ಕೂದ್ಲು ಬೆಳ್ಳಗೆ ಆಗಲ್ಲ, ಮಾರ್ಕೆಟ್ನಲ್ಲಿ ಏನೇನೋ ಇದೆ ನೋಡಿ ಕರ್ರಗೆ ಮಾಡ್ಕೊಳ್ಳೋಕೆ'
'ಓ ಹೌದಲ ಸಾರ್'
ನಮ್ಮ ಮಾತು ಕೇಳಿಸ್ಕೊಳ್ತಿದ್ದ ಸೀನಿಯರ್ ಸಿಟಿಜನ್ ನನ್ನ ಕೊನೆ ಮಾತು ಕೇಳಿ, ನನ್ನನ್ನ ದೂರ್ವಾಸ ಮುನಿ ನೋಡಿದ ಹಾಗೆ ನೋಡ್ತಿದ್ರು. ಯಾಕೋ ಎಡವಟ್ಟಾಗ್ತಿದೆ ಅಂತ ಬ್ಯಾಗಲಿದ್ದ ಇಯರ್ ಫೋನ್ ತೆಗ್ದು ಮೊಬೈಲಿಗೆ ಸಿಕ್ಕಿಸಿ ಆಮೇಲೆ ನನ್ನ ಕಿವಿಗೆ ಚುಚ್ಕೊಂಡೆ.

ಬಸ್ ಇಂದಿರಾನಗರದ ಸಿಗ್ನಲ್ ಹತ್ರ ಬಂದಾಗ, ರೇಡಿಯೋ ಜಾಕಿ ತನ್ನ ಮಾತು ಮುಗಿಸ್ತಿದ್ಲು.
ಒಂದು ಸುಂದರವಾದ ಹುಡ್ಗಿ ಅಡ್ಡರಸ್ತೆಯಿಂದ ನಡ್ಕೊಂಡು ಬರ್ತಿದ್ಲು, ತುಂಬಾನೇ ಚೆನ್ನಾಗಿದ್ಳು, ನಾನೂ ಅವಳನ್ನೇ ನೋಡ್ತಿದ್ದೆ, ನನ್ನನ್ನೂ ನೋಡಲಿ ಅಂತ ದೂರದ ಆಸೆ.
ಕಣ್ಣು ಕಣ್ಣು ಬೆರೆತಾ.......(ಮೊಬೈಲ್ನಲ್ಲಿದ್ದ ಚಾರ್ಜ್ ಕುಸಿದು ಮೊಬೈಲ್ ನಿದ್ರೆಗೆ ಶರಣಾಗಿತ್ತು) ಅವ್ಳು ಇನ್ನೇನು ನನ್ನನ್ನ ಕತ್ತೆತ್ತಿ ನೋಡ್ಬೇಕು................ಥತ್ತೆರಿಕೆ :( :( ಅಷ್ಟೊತ್ತಿಗೆ ಸಿಗ್ನಲ್ ಫ್ರೀ ಆಯ್ತು, ಬಸ್ ಹೊರಡ್ತು.

ಜೀವನ್ ಭೀಮಾ ನಗರ್ ತಲುಪಿ ಆಫೀಸಿಗೆ ೩ ಫ್ಲೋರ್ ಹತ್ತಿ ನನ್ನ ಜಾಗಕ್ಕೆ ಹೋಗಿ ಕೂತೆ.

ಸಿಸ್ಟಂಗೆ ಲಾಗಿನ್ ಆಗಿ ಕೆಲಸ ಶುರು ಮಾಡಿದೆ. ಹಾಗೆ ಹೆಡ್ ಫೋನ್ ಕಿವಿಗೆ ಸಿಕ್ಕಿಸಿಕೊಂಡು ಹಳೆ ಹಾಡುಗಳನ್ನ ಕೇಳ್ತಾ ಕೆಲ್ಸ ಮಾಡ್ತಿದ್ದೆ.
ಸ್ವಲ್ಪ ಹೊತ್ತಾದ್ಮೇಲೆ ಸೌಜ ಬಂದ.
ಕೆಲ್ಸ ನಡೀತಿತ್ತು, ಸೌಜ ಎಲ್ಲೋ ಎದ್ದು ಹೋದ.

'ಏನೋ ಸಂತೋಷ, ಏನೋ ಉಲ್ಲಾಸ, ಏನೋ ವಿಶೇಷ ಈ ದಿನ..... ಹಾಡು ಬರ್ತಿತ್ತು.
ಯಾರೋ ಹಿಂದಿಂದ ಬಂದು ಬೆನ್ನು ತಟ್ಟಿದ್ರು, ತಿರುಗಿ ನೋಡಿದ್ರೆ ಸೌಜ. ಹೆಡ್ ಫೋನ್ ತೆಗೆದು 'ಏನಪ್ಪಾ?'
ಡ್ಯಾಮೇಜರ್ (ಮ್ಯಾನೇಜರ್) ಕರೀತವ್ನೆ ಹೋಗು, ಒಳ್ಳೆ ಗಿಫ್ಟ್ ಕಾದಿದೆ ನೋಡು.
ಇರ್ಬೇಕು, ಆ ಟೈಮಿಗೆ ಕರೆಕ್ಟ್ ಹಾಡು ಬೇರೆ ಬರ್ತಿದೆ!!

ಸರಿ ಅಂತ ಮ್ಯಾನೇಜರ್ ರೂಮಿಗೆ ಹೋದೆ.
ನಗಾಡ್ತಾ ವೆಲ್ಕಂ ಅಂದ.
ಸಂತೋಷದಿಂದಲೇ ಹೋಗಿ ಕೂತೆ. ಕರುಣೆ ಬಂದಿದೆ ಮಗ್ನಿಗೆ ಅನ್ಸತ್ತೆ, ಈ ಸೈಕಲ್ಲಾದ್ರೂ ಒಳ್ಳೆ ಹೈಕ್ ಕೊಡ್ತಾನೆ ಅನ್ಸತ್ತೆ ಅಂದ್ಕೊಂಡು ಖುಷಿಯಿಂದಿದ್ದೆ.
ಒಂಧರ್ಧ ಘಂಟೆ ಅದೂ ಇದೂ ಅಂತ ಕಥೆ ಕುಯ್ದ, ಕಂಪನಿ ಗ್ರೋತ್ ಚೆನ್ನಾಗಿದೆ, ಕೆಲ್ಸ ಚೆನ್ನಾಗಿ ಮಾಡ್ಬೇಕು (ಇಷ್ಟು ದಿನ ಏನು ಬೇಕಾಬಿಟ್ಟಿ ಮಾಡ್ತಿದ್ವ).....

ಅದೆಲ್ಲ ಸರಿ ತಂದೆ, ಮೈನ್ ಮ್ಯಾಟರ್ಗೆ ಬಾರಪ್ಪ ಅಂತ ಮನಸಲ್ಲೇ ಅಂದ್ಕೊಂಡೆ.

ಅಂತೂ ಬಂದ ಪುಣ್ಯಾತ್ಮ.
ಇದೊಂದೆರಡು ಕ್ವಾರ್ಟರ್ ಕಂಪನಿನಲ್ಲಿ ಅಷ್ಟೊಂದು ಗ್ರೋತ್ ಇಲ್ಲ, ಹಾಗಾಗಿ ಸ್ಯಾಲರಿ ಹೈಕ್ ಕೆಲವರಿಗೆ ಮಾತ್ರ ಕೊಡ್ತಿರೋದು, ಅದ್ರಲ್ಲಿ ನೀನೂ ಒಬ್ಬ.
ಅದ್ಹೆಂಗೆ ಇಷ್ಟು ಒಳ್ಳೆ ಬುದ್ಧಿ ಬಂತಪ್ಪ ಇವನಿಗೆ, ಹಿಂಗೆಲ್ಲ ಹೇಳಿದ್ರೆ ಬಹುಶ ಒಂದು ೧೨-೧೫% ಇರತ್ತೆ ಅಂದ್ಕೊಂಡು ಓ ಕೆ ಅಂದೆ.
ಯಾರಿಗೂ ಅಷ್ಟು ಕೊಟ್ಟಿಲ್ಲ ನಿಂಗೆ ಜಾಸ್ತಿ
(ಹೌದಪ್ಪ, ಇದು ಕಾಮನ್ ಡೈಲಾಗ್ ಎಲ್ರಿಗೂ).
೩% ಹ್ಯಾಪಿ (ಈ ನನ್ಮಗ ಇವ್ನ ಪ್ಯಾಕೆಟಿಂದ ಕೊಡೋದಾಗಿದ್ರೆ ಏನು ಕಥೆ ಇರ್ತಿತ್ತೋ), ಯು ಶುಡ್ ಬಿ ಹ್ಯಾಪಿ, ಎನಿವೇ, ಆಲ್ ದ ಬೆಸ್ಟ್ ಮ್ಯಾನ್, ಕೀಪ್ ಅಪ್ ದ ಗುಡ್ ವರ್ಕ್.
ಥ್ಯಾಂಕ್ಸ್ ಅಂತ್ಹೇಳಿ ಎದ್ದು ಬಂದೆ.

ಬಾಗ್ಲು ತೆಗ್ದು ಹೊರ್ಗೆ ಬರ್ತಿದ್ದ ಹಾಗೆ ಸೌಜ ನನ್ನನ್ನೇ ನೋಡಿ ನಗ್ತಿದ್ದ.
ಲೇ, ಒಳ್ಳೆ ಹಾಡು ಕೇಳ್ತಿದ್ದೆ ಈಗ ನೋಡು 'ಇದು ಯಾರು ಬರೆದ ಕಥೆಯೋ ನನಗಾಗಿ ಬಂದ ವ್ಯಥೆಯೋ' ಹಾಡು ಕೇಳೋ ಹಾಗಾಗಿದೆ, ನೀನು ಅವ್ನು ಸೇರಿ ಮೂಡೇ ಹಾಳು ಮಾಡಿದ್ರಿ.
ಅಯ್ಯೋ, ನಾನು ಏನಂದೆ, ಅವ್ನು ಕರ್ದ ಹೋಗಪ್ಪ ಅಂದೆ.
ಹೋಗ್ಲಿ ಬಿಡು, ಬಾ ಹೊರ್ಗೋಗಿ ಕಾಫಿ ಕುಡ್ಕೊಂಡು ಬರೋಣ.
ಇಬ್ರೂ ಕೆಳಗೆ ಹೋಗಿ ಕಾಫಿ ಕುಡ್ಕೊಂಡು ನಮ್ಗೆ ಖುಷಿಯಾಗೊವರ್ಗೂ ಡ್ಯಾಮೇಜರ್ಗೆ ಬಯ್ದು ವಾಪಸ್ ಬಂದ್ವಿ.

Friday, September 9, 2011

ಬೆಂಗಳೂರಲ್ಲೊಂದಿನ - ೧

ಭೂಕಂಪ ಏನಾದ್ರೂ ಆಯ್ತಾ?? ಇಲ್ಲ, ನಾನು ಚೆನ್ನಾಗೆ ಇದೀನಲ್ಲ. ಮತ್ತೆ, ಏನದು ಸೌಂಡ್. ಡೈನಮೈಟ್ ಇರ್ಬಹುದಾ, ಛೆ ಚ್ಯಾನ್ಸೆ ಇಲ್ಲ. ನವರಂಗ್ ಹತ್ರ ಯಾವ ಕಲ್ಲು ಇದೆ ಸಿಡಿಸೋಕೆ. ಮಹಾಲಕ್ಷ್ಮಿ ಲೇ ಔಟ್ನಲ್ಲಿರೋ ಆಂಜನೇಯನಿಗೆ ಯಾರಾದ್ರೂ ಇಟ್ರಾ, ಇಲ್ಲ ಅಂತ ಕೆಲಸ ಯಾರೂ ಮಾಡಲ್ಲ. ಮತ್ತೇನದು?? ಮೆಟ್ರೋ ವರ್ಕಾ?? ಅಲ್ಲ, ಅದೂ ಇನ್ನೇನು ಮುಗೀತಾ ಬಂತು. ಇನ್ನೇನಪ್ಪ ಈ ತರ, ಅರ್ಧ ಗಂಟೆಯಿಂದ ನಿದ್ರೆ ಮಾಡೋಕೆ ಬಿಡ್ತಿಲ್ವಲ್ಲ ಈ ಸೌಂಡ್ ಅಂತ ಹಾಸಿಗೆಯಿಂದ ಎದ್ದು ಚಾವಡಿಗೆ ಬಂದೆ.

ಆಗ ಗೊತ್ತಾಯ್ತು ಇದು ಮೆಟ್ರೋ ವರ್ಕಲ್ಲ, ಮೀಟರ್ ವರ್ಕ್ ಅಂತ (ಪುಣ್ಯಾತ್ಮನ ಗೊರಕೆಯ ಸದ್ದು). ಲೇ ಅಂದೆ, ಸ್ವಲ್ಪ ಮಗ್ಗುಲು ಬದಲಿಸಿ ಮಲ್ಕೊಂಡ, ಸೌಂಡ್ ನಿಲ್ತು, ಎಷ್ಟೊತ್ತು ೨ ನಿಮ್ಷ ಮತ್ತೆ ಶುರು. ದೇವ್ರೇ ಕಾಪಾಡಪ್ಪ, ಸೌಂಡ್ ನಿಲ್ಸಪ್ಪ ಅಂತ ಬೇಡ್ಕೊಂಡೆ, ಇಲ್ಲ ಅವನಿಗೂ ಕರುಣೆ ಬರ್ಲಿಲ್ಲ. ಏನಪ್ಪಾ ಮಾಡೋದು ಅಂತ ಯೋಚನೆ ಮಾಡ್ತಿದ್ದಾಗ, ಅಕ್ಕ ಕೊಟ್ಟ ಹತ್ತಿ ನೆನಪಿಗೆ ಬಂತು. ತೆಗೆದು ಎರಡೂ ಕಿವಿಗೆ ಹಾಕಿಕೊಂಡೆ.

ಊಹ್ಮ್ಹ್, ಏನೂ ಉಪಯೋಗ ಇಲ್ಲ.
ಇನ್ನೇನು ಮಾಡೋಕಾಗಲ್ಲ ಅಂತ ಹಾಗೆ ಬಿದ್ಕೊಂಡೆ, ಅರ್ಧ ಗಂಟೆ ಆದ್ಮೇಲೆ ಸೌಂಡ್ ನಿಲ್ತು. ಸದ್ಯ ಬಚಾವಾದೆ ಅಂದ್ಕೊಂಡು ನಿದ್ರೆಗೆ ಶರಣಾದೆ. ಅವ್ನ ಗೊರಕೆ ವಿಚಾರದ ಬಗ್ಗೆ ಯಾರಾದ್ರೂ ಕೇಳಿದ್ರೆ, ಹೌದಾ?? ಗೊರಕೆ ಹೊಡಿತೀನಾ, ನಂಗೆ ಗೊತ್ತೇ ಆಗಲ್ಲ ಅಂತ ಕೇಳ್ತಾನೆ.
ಪಾಪ ಅವ್ನಿಗೆ ಗೊರಕೆ ಹೊಡೆಯೋವಾಗ ತಾನು ನಿದ್ರೆ ಹೋಗಿರ್ತೇನೆ ಅನ್ನೋದು ಗೊತ್ತಿರಲ್ಲ ಅನ್ಸತ್ತೆ.
…..........................................
ಕೌಸಲ್ಯ ಸುಪ್ರಜಾ ರಾಮ ಪೂರ್ವ ಸಂಧ್ಯಾ ಪ್ರವರ್ಥಥೆ ಉತ್ಹಿಷ್ಟ ನರಸರ್ದೂಲ ಕರ್ಥವ್ಯಂ.....
ಕರ್ಥವ್ಯಂ ಕರ್ಥವ್ಯಂ, ಧಿಡೀರನೆ ಎದ್ದೆ. ಕೆಲಸಕ್ಕೆ ಹೋಗಪ್ಪ ಅಂತ ಮೊಬೈಲ್ನಲ್ಲಿಟ್ಟಿದ್ದ ಅಲಾರಾಂ ಕೂಗ್ತಿತ್ತು, ಥತ್ತೆರಿಕೆ, ಆರಾಮಾಗಿ ನಿದ್ರೆ ಮಾಡೋಕೂ ಬಿಡಲ್ಲ, ಕರೆಕ್ಟ್ ಟೈಮಿಗೆ ಹೊಡ್ಕೊಳ್ಳತ್ತೆ.
ಪಾಪ! ಅದು ಏನು ಮಾಡತ್ತೆ, ಆ ಸಾಫ್ಟ್ವೇರ್ ಕರೆಕ್ಟಾಗೆ ಕೆಲಸ ಮಾಡತ್ತೆ, ಲೇಟಾಗಿ ಅನ್ನೋದಕ್ಕೆ ನಮ್ಮ ಸರ್ಕಾರ ಕೆಟ್ಹೋಯ್ತಾ!

ಅಲಾರಾಂ ಆಫ್ ಮಾಡಿ ೧೦ ನಿಮ್ಷ ಮಲ್ಕೊಳ್ಳೋಣ ಅಂತ ಹಾಗೆ ಬಿದ್ಕೊಂಡೆ.
ಲೇ ಚಿಕ್ಕು, ಆಫೀಸಿಗೆ ಹೋಗಲ್ವೇನೋ?, ಮೀಟರ್ ಬಂದು ಕೂಗಿದಾಗಲೇ ಎಚ್ಚರ ಆಗಿದ್ದು, ೧೦ ನಿಮ್ಷ ಹೋಗಿ ಅರ್ಧ ಗಂಟೆ ಆಗಿತ್ತು.
ಯಾಕೋ, ರಜೆನೇನಪ್ಪ?
ಹ್ಮ್ಮ್!!!!!!, ರಜೆ ಹಾಗಂದ್ರೇನು?, ಎಲ್ಲೋ ಕೇಳಿದ ಹಾಗಿದ್ಯಲ್ಲ, ವೀಕೆಂಡ್ನಲ್ಲೇ ರಜೆ ಕೊಡಲ್ಲ ಇನ್ನ ವೀಕ್ ಡೇಸ್ನಲ್ಲಿ ಕೊಡ್ತಾರಾ??
ಸರಿನಪ್ಪ ನಾನು ಹೊರಟೆ ಅಂತ ಹೋದ.

ನಾನು ಎದ್ದು ರೇಡಿಯೋ ಆನ್ ಮಾಡಿ, ನೀರಿಗೆ ಕಾಯ್ಲ್ ಇಟ್ಟು ಹಲ್ಲುಜ್ಜಕ್ಕೆ ಹೋದೆ.

ನೀರು ಕಾದ ಮೇಲೆ ಸ್ನಾನಕ್ಕೆ ಸಿದ್ಧವಾಗಿ ಕಾಯ್ಲ್ ಆಫ್ ಮಾಡಿ ಸೈಡಿಗಿಟ್ಟು ಮಗ್ ತೆಗೆದು ಮೈ ಮೇಲೆ ನೀರು ಹಾಕೊಂಡೆ.
ಅಬ್ಬಬ್ಬ ಬಿಸಿ ಬಿಸಿ, ನೀರು ಕುದೀತಿತ್ತು.
ಹೊರಗೆ ರೇಡಿಯೋದಲ್ಲಿ ಸಕತ್ ಹಾಟ್ ಮಗಾ ಅಂತ ಕೇಳಿಸ್ತಿತ್ತು.

ಸುಮ್ನೆ, ಎಫ್ ಎಂ ರೈನ್ಬೋಗೆ ಹಾಕಿದ್ರೆ ಈ ಗತಿ ಬರ್ತಿರ್ಲಿಲ್ವೇನೋ ಅಂದ್ಕೊಂಡು ತಣ್ಣೀರು ಮಿಕ್ಸ್ ಮಾಡ್ಕೊಂಡು ಸ್ನಾನ ಮಾಡಿ ಹೊರಗೆ ಬಂದೆ.
ತಿಂಡಿ ಮಾಡ್ಕೊಂಡು, ಮಧ್ಯಾಹ್ನದ ಊಟ ಪ್ಯಾಕ್ ಮಾಡ್ಕೊಂಡು ಬ್ಯಾಗ್ ಎತ್ಕೊಂಡು ಹೊರಟೆ.

ನವರಂಗ್ ಹತ್ತಿರ ತುಂಬಿ ತುಳುಕುತ್ತಿದ್ದ ೯೬ ಡಿ ಬಸ್ ಹತ್ತಿ ಕುಳಿತೆ!!!!
ನಿಲ್ಲೋಕೆ ಜಾಗ ಇರಲ್ಲ ಇನ್ನೆಲ್ಲಿ ಕೂತ್ಕೊಳ್ಳೋದು, ಕಷ್ಟಪಟ್ಟು ಬ್ಯಾಗ್ ಹೆಗಲಿಗೆ ನೇತುಹಾಕೊಂಡು ನಿಂತೆ. ಮುಂದಿನ ಸ್ಟಾಪ್ನಲ್ಲಿ ಇಳಿಯೋನು ಒಬ್ಬ ನನ್ನನ್ನ ದಾಟಿ ಹೋಗೋವಾಗ ಬ್ಯಾಗ್ ಅಡ್ಡಬಂದಿದ್ರಿಂದ 'ಏನು ಹುಡುಗ್ರಯ್ಯ, ಕಾಲೇಜಿಗೆ ಹೋಗೋ ಇವಕ್ಕೆ ಸ್ವಲ್ಪನೂ ಗೊತ್ತಾಗಲ್ಲ, ತೆಗ್ದು ಕೈಲಾದ್ರೂ ಇಟ್ಕೊಳ್ಳಯ್ಯ'.

'ಸರಿ' ಅಂತಂದು ಕೈನಲ್ಲಿ ಇಟ್ಕೊಂಡೆ.

ಮಲ್ಲೇಶ್ವರಂ ಹತ್ರ ಬಸ್ ಬಂದಾಗ ಬಸ್ ಅರ್ಧ ಖಾಲಿಯಾಯ್ತು. ಬಸ್ಸಲ್ಲಿ ಹಾಕಿದ್ದ ಎಫ್ ಎಂನಲ್ಲಿ 'ಇದೇನಾ ಸಭ್ಯತೆ, ಇದೇನಾ ಸಂಸ್ಕೃತಿ' ಹಾಡು ಬರ್ತಿತ್ತು, ಒಂದು ಹುಡ್ಗಿ, ಸುಮಾರು ೧೯-೨೦ ವಯಸ್ಸಿರಬಹುದು. ಸಣ್ಣ ಚಡ್ಡಿ, ಶರ್ಟ್ ಡ್ರೆಸ್ ಹಾಕಿದ್ಲು, ಬಸ್ ಮುಂದಿನ ಬಾಗ್ಲಿಂದ ಹತ್ತಿದ್ಳು. ಹತ್ತಿದ ತಕ್ಷಣ ಆ ಹಾಡು ಕೇಳಿ ಅವ್ಳಿಗೆ ಏನನ್ಸಿತೋ ಅಥ್ವ ಅಲ್ಲಿದ್ದವರೆಲ್ಲ ಅವ್ಳನ್ನೇ ನೋಡಿದ್ದಕ್ಕೋ ಅವ್ಳಿಗೆ ಮುಜುಗರ ಆಗಿ ತನ್ನ ಚಡ್ಡಿಯನ್ನ ಕೈನಿಂದ ಎಳೆದುಕೊಳ್ತಿದ್ಲು!!

ಜೀನ್ಸ್ ಚಡ್ಡಿ, ಎಳೆದ್ರೆ ಉದ್ದ ಆಗತ್ತಾ??

ಬಹುಶ, ಈ ಹುಡ್ಗಿ ೮ನೇ ಕ್ರಾಸಲ್ಲೋ, ಮಂತ್ರಿ ಮಾಲಲ್ಲೋ ಯಾವ್ದೋ ಹರಿದ ಜೀನ್ಸ್ ತಗೊಂಡಿರ್ಬೇಕು (ಬಹುತೇಕ ಹುಡುಗರ ಜೀನ್ಸ್ ಪ್ಯಾಂಟ್ ಹಾಗೇ), ಮಲ್ಲೇಶ್ವರಂನಲ್ಲಿ ಈ ಹುಡ್ಗಿ ಆ ಪ್ಯಾಂಟ್ ತಗೊಂಡಿದ್ದು ನೋಡಿ ಶಿವ ತನ್ನ ೩ನೇ ಕಣ್ಣನ್ನೋ ಅಥ್ವಾ ತ್ರಿಶೂಲವನ್ನೋ ಸಿಟ್ಟಿನಿಂದ ಬಿಟ್ಟಿರಬೇಕು, ಆಗ ಅದು ತುಂಡಾಗಿ ಚಡ್ಡಿ ಆಗಿರ್ಬೇಕು, ಇವ್ಳು ವಿಧಿಯಿಲ್ಲದೇ ಅದ್ನ ಹಾಕೊಂಡಿದ್ದಾಳೆ!!

ಮುಂದುವರೆಯುವುದು

Friday, July 8, 2011

ನನ್ನ ಸಾಲುಗಳು

1) ಗಗನವು ಗಮ್ಯದ ಗುರಿಯಾದರೆ ಮೊದಲು
ಭುವಿಯ ಬಿಡುವ ಪ್ರಯತ್ನವಾಗಬೇಕು

2)
ಕಹಿಘಟನೆಗಳ ಮರೆತು ಮುನ್ನಡೆದರೆ
ಸಿಹಿಘಟನೆಗಳ ಸಾಲಿಗೆ ಮುನ್ನುಡಿಯಾಗುತ್ತದೆ

3)
ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ.


ಸ್ಪರ್ಶ - ನೋಟ

ಆ ಮಂಜಿನ ಹನಿಯೂ ಕೂಡ ನಾಚಿ ನಕ್ಕಿತ್ತು ನಿನ್ನ ನೋಡಿ
ಅದಕ್ಕೇನು ಮಾಡಿದ್ದೆ ನೀ ಮೋಡಿ

ಆ ಇಬ್ಬನಿಯು ತಾಕಿತ್ತು ನಿನ್ನ ಮೈಯನ್ನ
ಅದು ತೀರಿಸಿತ್ತು ನಿನ್ನ ಸ್ಪರ್ಶಿಸುವ ಹಂಬಲವನ್ನ

ಆ ದಿನ ನಾ ನೋಡಿದ್ದೇ ನಿನ್ನನು
ನೋಡಬೇಕೆಂದೆನಿಸಲಿಲ್ಲ
ನಿನ್ನ ಬಿಟ್ಟು ಇನ್ಯಾರನು

April 20, 2010

ಚುರ್ಮುರಿ -೧೨

೩೮) ತನ್ನನ್ನು ಸಾಕುತ್ತಿರುವನು ಕಟುಕ ಎಂದು ತಿಳಿದ ಕುರಿ, ಅಲ್ಲಿಂದ ಬೇರೆ ಕಡೆಗೆ ಓಡಿಹೋಯಿತು. ಆದರೆ ಪ್ರಪಂಚದಲ್ಲಿರುವವರೆಲ್ಲರೂ ಕಟುಕರು ಎಂದು ತಿಳಿಯುವಷ್ಟರಲ್ಲಿ ಅದು ತನ್ನ ಪ್ರಾಣವನ್ನೇ ಕಳೆದುಕೊಂಡಿತ್ತು.


೩೯) ಅವನು ಮದುವೆಗೆ ಮುಂಚೆ ನವರಂಗ್ ಚಿತ್ರಮಂದಿರದಲ್ಲಿ ೫೦ ರೂ ಕೊಟ್ಟು ಸಿನೆಮಾ ನೋಡುತ್ತಿದ್ದನು, ಮದುವೆಯಾದ ಮೇಲೆ ಮಂತ್ರಿ ಮಾಲ್ನಲ್ಲಿರುವ ಐನಾಕ್ಸನಲ್ಲಿ ೫೦೦ ರೂ ಕೊಟ್ಟು ಸಿನೆಮಾ ನೋಡುತ್ತಿದ್ದಾನೆ.


೪೦) ಅವನು ಕಾರಿನಲ್ಲಿದ್ದರೂ ತಲೆಗೆ ಕ್ಯಾಪ್ ಹಾಕಿಕೊಂಡು ಚಾಲನೆ ಮಾಡುತ್ತಿದ್ದನು.


೪೧) ತನ್ನ ಎದುರಿಗೆ ಎಷ್ಟೋ ಜನ ಭಿಕ್ಷುಕರು (ಕೈ ಇಲ್ಲದಿದ್ದವರು, ಕಾಲು ಇಲ್ಲದಿದ್ದವರು) ಭಿಕ್ಷೆ ಬೇಡಿಕೊಂಡು ಹೋದರೂ ಕಾಸು ಬಿಚ್ಚದಿದ್ದ ಅವನು, ಮಂಗಳಮುಖಿ ಬಂದಾಗ ಕೇಳುವುದಕ್ಕಿಂತ ಮೊದಲೇ ಕಾಸನ್ನು ತೆಗೆದು ಕೊಟ್ಟನು.


೪೨) ಅಲ್ಲೊಂದು ಕನ್ನಡದ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿತ್ತು. ಗುಂಡಿ ತೆಗೆಯುತ್ತಿದ್ದವರು, ಚಪ್ಪರ, ಶಾಮಿಯಾನ ಹಾಕುತ್ತಿದ್ದವರು ತಮಿಳು ತೆಲುಗಿನವರಾಗಿದ್ದರು.

ಸಂಕ್ರಾಂತಿಗೊಂದು ಮುನ್ನುಡಿ

ಮೋಡವೊಂದು ಹನಿಯಾಗಿ
ಹನಿಯಿಂದ ನೀರಾಗಿ
ಆ ನೀರು ಧರೆಗುರುಳಿ

ಧರೆಯಿಂದ ಸಸಿಯೊಂದು
ಚಿಗುರೊಡೆದು
ಆ ಚಿಗುರು ತೆನೆಯಾಗಿ

ತೆನೆಯೆಲ್ಲ ಅಂಗಳದಿ ಹರಡಿ
ಸಂಕ್ರಾಂತಿಯ ಸಂಭ್ರಮಕೆ ಸಾಕ್ಷಿಯಾಗಲಿ


January 13, 2011 - 10:53am

ನೆನಪುಗಳ ಮೆರವಣಿಗೆಯಲ್ಲಿ

ಅಂತೂ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಬಂದು ಹುಡುಗರೆಲ್ಲ ಸೇರಿ ಬಾಡಿಗೆ ಮನೆ ಮಾಡಿ ಆಮೇಲೆ ಒಂದು ಕೆಲಸ ಹುಡ್ಕಿದ್ದಾಯ್ತು. ಇನ್ನೇನು ಆರಾಮು ಅಂದ್ಕೊಂಡ್ರೆ ಸಮಸ್ಯೆ ಶುರುವಾಗಿದ್ದೆ ಆಗ. ಬೆಳಗ್ಗೆ ಎದ್ರೆ ಏನು ತಿಂಡಿ ಮಾಡೋದು ಅನ್ನೋ ಯೋಚನೆ, ಏನೋ ಮಾಡೋಣ ಅಂದ್ಕೊಂಡು ಶುರು ಮಾಡಿದ್ರೆ, ಇಲ್ಲ ಈರುಳ್ಳಿ ಅಥವಾ ಟೊಮೇಟೊ ಅಥವಾ ಮೆಣಸಿನಕಾಯಿ ಅಥವಾ ಹೆಸರುಬೇಳೆ ಹೀಗೆ ಏನಾದರೂ ಒಂದು ಮಿಸ್. ಅಂತೂ ತಿಂಡಿ ಮಾಡಿ ಆಫೀಸಿಗೆ ರೆಡಿ ಆಗಿ ಬಸ್ ಹಿಡಿಯೋಕೆ ಹೋದ್ರೆ, ನಮ್ಮ ಹಳ್ಳಿ ಬಸ್ಸಾದ್ರೂ ಆಗಬಹುದು ಉಹುಂ ಬಿ.ಎಂ.ಟಿ.ಸಿ ಬಸ್ ಸಹವಾಸ ಅಲ್ಲ. ಮಕ್ಕಳನ್ನು ಕಂಡ್ರೆ ಬೆಂಗ್ಳೂರಿನ ಬೀದಿ ನಾಯಿಗಳು ಅಟ್ಟಿಸಿಕೊಂಡು ಹೋಗಿ ಕಚ್ಹೋ ಹಾಗೆ ಜನಗಳು ಸೀಟ್ ಹಿಡ್ಕೊಳ್ಳೋಕೆ ನುಗ್ತಿರ್ತಾರೆ. ಆ ಟ್ರಾಫಿಕ್ನಲ್ಲಿ ಆ ರಶ್ನಲ್ಲಿ ಆಫೀಸ್ ತಲ್ಪೋಹೊತ್ತಿಗೆ ಹೈರಾಣಾಗಿ ಹೋಗಿರ್ತೇವೆ.

ಆಫೀಸಲ್ಲಿ ಆ ಡೆಡ್ ಲೈನ್ಗಳು, ಮೀಟಿಂಗ್ಗಳು, ಟ್ಯೂಬ್ ಲೈಟ್ಗಳು, ಕಣ್ಣು ಕುಕ್ಕುವ ಮಾನಿಟರ್ಗಳು, ಟೇಸ್ಟ್ ಇಲ್ಲದ ಟೀ, ಕಾಫೀಗಳು, ಬೇಡದೆ ಇರೋ ಗಾಸಿಪ್ಗಳು. ಅಬ್ಬ ಸಾಕಪ್ಪಾ ಇದೇನು ಜೀವನ ಅನ್ಸಿಬಿಡತ್ತೆ ಆದ್ರೆ ಏನು ಮಾಡೋ ಹಾಗಿಲ್ಲ, ಹೊಟ್ಟೆಪಾಡು.

ಕೆಲಸ ಮುಗಿಸಿ ಮತ್ತೆ ಮನೆ ಕಡೆ ಹೊರಟ್ರೆ ಮತ್ತೆ ಅದೇ ಬಿ.ಎಂ.ಟಿ.ಸಿ ಬಸ್, ಸಂತೆಯಂತೆ ಜನ, ಟ್ರಾಫಿಕ್ ಜಾಮ್. ಮನೆ ತಲುಪೋ ಹೊತ್ತಿಗೆ ನಮ್ಮ ಪಾಡು ಹೇಗಾಗಿರತ್ತೆ ಅಂದ್ರೆ ನೀರಿನಲ್ಲಿ ಅದ್ದಿಟ್ಟ ಬಟ್ಟೆಯನ್ನು ತೆಗೆದು ಹಿಂಡಿಹಾಕ್ತಾರಲ್ಲ ಹಾಗೆ ಆಗಿರ್ತೀವಿ. ರಾತ್ರಿ ಮತ್ತದೇ ಕಥೆ, ಬೆಳಗ್ಗೆ ನಡೆದ ಘಟನೆಗಳ ಪುನರಾವರ್ತನೆ.

.......................................................

ಆಗ

ಮಲೆನಾಡು, ಬೆಳಗ್ಗೆ ೭ ಗಂಟೆ ಭಯಂಕರ ಚಳಿ, ಮೈ ಮೇಲೆ ಹೊದ್ದುಕೊಂಡ ೨ ರಗ್ಗನ್ನು ಮತ್ತೆ ಮತ್ತೆ ಎಳೆದುಕೊಂಡು ಮೈ ಮುದುಡಿಕೊಂಡು ಮಲಗಿಬಿಟ್ರೆ ಸ್ವರ್ಗ ಸುಖ. ಆದರೆ ಅದೇ ಹೊತ್ತಿಗೆ ಅಪ್ಪ ಎದ್ದು ಬಾಗಿಲಿನ ಚಿಲಕ ತೆಗೆದ ತಕ್ಷಣ ರೊಟ್ಟಿ ತಟ್ಟುತ್ತಿದ್ದ ಅಮ್ಮ ನನ್ನ ಹತ್ತಿರ ಬಂದು 'ಎದ್ದೇಳೋ, ಅಪ್ಪ ಎದ್ರು' (ಇಲ್ಲಾಂದ್ರೆ ಮಕ್ಕಳಿಗೆ ಒಂದೋ ಬೈಗುಳ ಅಥವಾ ಒದೆ ಬೀಳತ್ತಲ್ಲ ಅಂತ) ಅಂದ ತಕ್ಷಣ ಆ ಚಳಿಯನ್ನೂ ಲೆಕ್ಕಿಸದೆ ಹಾಕಿದ್ದ ಎರಡು ರಗ್ಗನ್ನು ಕಿತ್ತೆಸೆದು ಪಕ್ಕದಲ್ಲಿರುವ ಟೇಬಲ್ಲಿಂದ ಯಾವುದೋ ಒಂದು ಪುಸ್ತಕ ತೆಗೆದುಕೊಂಡು ಕೈನಲ್ಲಿ ಹಿಡಿದುಕೊಂಡು ಕೂತು, ಅಪ್ಪ ನಾನು ಮಲಗುವ ನಡುಮನೆ ಪ್ರವೇಶಿಸಿ ಬಾತ್ರೂಮಿಗೆ ಹೋಗುವಷ್ಟರಲ್ಲಿ ಪುಸ್ತಕವನ್ನು ಆಚೆ ಇಟ್ಟು ಎಸೆದ ರಗ್ಗನ್ನು ಮತ್ತೆ ಮೈ ಮೇಲೆ ಎಳೆದುಕೊಂಡು ಮತ್ತೆ ಅದೇ ಪೊಸಿಷನ್ನಲ್ಲಿ ನಿದ್ರಾದೇವಿಗೆ ಶರಣಾಗುತ್ತಿದ್ದೆ. ಅವರು ಸ್ನಾನ ಮುಗಿಸಿ ವಾಪಸ್ ಬರೋ ಹೊತ್ತಿಗೆ ಊಟದ ಹಾಲ್ನಲ್ಲಿದ್ದ ರೇಡಿಯೋದಲ್ಲಿ ಬರುತ್ತಿದ್ದ ನ್ಯೂಸ್ (ಧಾರವಾಡ ಕೇಂದ್ರ) ಮುಗಿದು ಚಿತ್ರಗೀತೆ ಶುರುವಾಗುವ ಹೊತ್ತಿಗೆ ಮತ್ತೆ ಎಚ್ಚರವಾಗುತ್ತಿತ್ತು (ಈ ಬಾರೀ ಅಮ್ಮನ ಸಹಾಯ ಬೇಕಾಗುತ್ತಿರಲಿಲ್ಲ). ಇದು ನಿತ್ಯದ ದಿನಚರಿ.

ಆಮೇಲೆ ಎದ್ದು ಸ್ನ್ನಾನ ಮಾಡೋದು ಅಂದ್ರೆ ಅದರಂಥ ನರಕ ಹಿಂಸೆ ಯಾವುದೂ ಇರುತ್ತಿರಲಿಲ್ಲ. ಸ್ಕೂಲಿಗೆ ಬೇಗ ಹೋಗಿ ಗೋಲಿಯೋ ಬುಗುರಿಯೋ ಆಡುವಾಸೆ ಆದರೆ ಅಮ್ಮ ಸ್ನಾನ ಮಾಡಿ ಕಳಿಸದೇ ಬಿಡುತ್ತಿರಲಿಲ್ಲ. ಅಂತೂ ಹಂಡೆಯ ನೀರು ನಮ್ಮನ್ನು ಅಣಕಿಸದೆ ಇರುತ್ತಿರಲಿಲ್ಲ.

ರೊಟ್ಟಿ ತಿಂದು, ಸ್ಕೂಲ್ ಯುನಿಫಾರ್ಮ್ ಹಾಕಿಕೊಂಡು ಚಾವಡಿಯಿಂದ ೪ ಮೆಟ್ಟಿಲು ಹಾರಿ ಕಣಕ್ಕೆ ಜಿಗಿದರೆ ನನ್ನನ್ನು ಹಿಡಿಯುವವರಾರಿರಲಿಲ್ಲ, ಅಕಸ್ಮಾತ್ ಮಳೆ ಬಂದು ಕಣದಲ್ಲಿ ಪಾಚಿ ಕಟ್ಟಿದ್ದರೆ ಅಲ್ಲೇ ಜಾರಿ ಬಿದ್ದು ಹಸಿರಾಗಿದ್ದ ಶರ್ಟ್ ಮತ್ತು ಚಡ್ಡಿಯನ್ನು ಅಮ್ಮನಿಗೆ ತೋರಿಸಿ ಇವತ್ತು ಸ್ಕೂಲಿಗೆ ಹೋಗುವುದಿಲ್ಲ ಅಂದರೆ ಕಣದಲ್ಲೇ ನಿಲ್ಲಿಸಿ ಪಕ್ಕದಲ್ಲಿದ್ದ ಬ್ಯಾರಲ್ಲಿಂದ ನೀರು ತೆಗೆದುಕೊಂಡು ಅಲ್ಲೇ ಕೊಳೆಯನ್ನು ತೆಗೆದು ಈಗ ನಡಿ ಅಂದಾಗ ವಿಧಿಯಿಲ್ಲದೇ ಸ್ಕೂಲಿಗೆ ಹೆಜ್ಜೆ ಹಾಕಬೇಕಿತ್ತು.

ಮನೆಯಿಂದ ಸ್ಕೂಲಿಗೆ ೧೦ ನಿಮಿಷ ದಾರಿ ಆದರೂ ಬೆಲ್ ಹೊಡೆದ ಮೇಲೆ ಓಡುತ್ತಿದ್ದ ನಾನು, ಸ್ಕೂಲ್ ಹತ್ತಿರ ಬಂದಾಗ ಬಗ್ಗಿಕೊಂಡು ಹೋಗಿ ನಾನು ನಿಲ್ಲಬೇಕಾದ ಸಾಲಿನಲ್ಲಿ ನಿಲ್ಲುತ್ತಿದ್ದೆ. ಸ್ವಾಮಿ ದೇವನೇ, ಜೈ ಭಾರತ ಜನನಿಯ ತನುಜಾತೆ ಮುಗಿದ ತಕ್ಷಣ, ಪೇಪರ್ ಓದಿ, ಅಂದಿನ ಸುಭಾಷಿತ ಬರೆದು ಶಾಲೆ ಒಳಗೆ ಓಡಿ ಮಣೆಯ ಮೇಲೆ ಕೂತುಬಿಡುತ್ತಿದ್ದೆವು.

ಮಾಮೂಲಿಯಂತೆ ಪಾಠಗಳು ನಡೆಯುತ್ತಿರುತ್ತಿದ್ದವು, ಅಕಸ್ಮಾತ್ ಹೋಂ ವರ್ಕ್ ಮಾಡಿರಲಿಲ್ಲವೆಂದರೆ ಕೆಳಗೆ ಕುಳಿತು ಕಾಲುಸಂಧಿಯಲ್ಲಿ ಬಲ ಕೈಯನ್ನು ಎಡ ಕಿವಿಗೂ ಎಡ ಕೈಯನ್ನು ಬಲ ಕಿವಿಗೂ ಹಿಡಿದು ಕೂರಬೇಕಾಗುತ್ತಿತ್ತು, ಅಕಸ್ಮಾತ್ ಹಾಗೆ ಕೂತವನನ್ನು ಬೇರೆ ಯಾರಾದರೂ ನೋಡಿ ಕಿಸಕ್ಕನೆ ನಕ್ಕರ ಅವರಿಗೂ ಅದೇ ಗತಿಯಾಗುತ್ತಿತ್ತು.

ಇನ್ನೊಂದು ತರದ ಶಿಕ್ಷೆಯೆಂದರೆ ಸೀಮೆಸುಣ್ಣವನ್ನು ಎರಡು ಬೆರಳಿಗೆ ಸಿಕ್ಕಿಸಿ ಬೆರಳನ್ನು ಹಿಂದೆ ಮುಂದೆ ಮಾಡುತ್ತಿದ್ದರು. ಇದೆಲ್ಲದರ ಜೊತೆಗೆ ಮಾಮೂಲಿಯಂತೆ ಬೆಟ್ಟದ ರುಚಿ ಇದ್ದೆ ಇರುತ್ತಿತ್ತು.

ಆಗೆಲ್ಲ ವಿಮಾನದ ಶಬ್ದ ಬಂದರೆ ಸ್ಕೂಲ್ ಒಳಗಿದ್ದರೂ ಎಲ್ಲ ಹುಡುಗರೂ ಹೊರಗಡೆ ಓಡಿ ಬಂದು ಅದನ್ನು ನೋಡುತ್ತಿದರು, ನಮ್ಮ ಜೊತೆಗೆ ಶಿಕ್ಷಕರು ಸಹ ನೋಡುವುದಕ್ಕೆ ಬರುತ್ತಿದ್ದರು. ಮಧ್ಯಾಹ್ನ ಊಟಕ್ಕೆ ಬೆಲ್ ಹೊಡೆದ ತಕ್ಷಣ ಬ್ಯಾಗ್ ಎತ್ತಿಕೊಂಡು ಓಡಲು ಶುರು ಮಾಡಿದೆವೆಂದರೆ ಮನೆಗೆ ಹೋಗಿಯೇ ನಿಲ್ಲುತ್ತಿದ್ದದ್ದು. ಅಮ್ಮನ ಕೈ ತುತ್ತು ತಿಂದು ೧ ಗಂಟೆ ಮನೆಯಲ್ಲಿದ್ದು ಮತ್ತೆ ಬೆಲ್ ಹೊಡೆದ ತಕ್ಷಣ ಓಟ

೩ ಗಂಟೆಯವರೆಗೆ ಪಾಠ, ಆಮೇಲೆ ೧.೩೦ ಗಂಟೆ ಆಟ. ಲಗೋರಿ, ಗೋಲಿ, ಕೋ ಕೋ, ವಾಲಿಬಾಲ್ ಆಡಿ ೪.೩೦ಕ್ಕೆ ಸ್ಕೂಲ್ ಬಿಟ್ರೆ ಮತ್ತೆ ಯಾರದೋ ತೋಟದಲ್ಲಿ (ಕೆಲವೊಂದು ನಮ್ಮ ತೋಟದಲ್ಲಿದ್ದರೂ) ಹಲಸಿನಹಣ್ಣು , ಕಿತ್ತಲೆಹಣ್ಣು, ಸೀಬೆಹಣ್ಣು, ನೇರಳೆ ಹಣ್ಣು, ಮೂಸಂಬಿ ಹೋಗಿ ಕದ್ದು ತಿಂದು ಮನೆಗೆ ಬರೋ ಹೊತ್ತಿಗೆ ಸಂಜೆ ೭ ಗಂಟೆ. ಮುಂದುಗಡೆಯಿಂದ ಮನೆಗೆ ಹೋದರೆ ಅಪ್ಪ ಅಲ್ಲೇ ಪೇಪರ್ ಓದುತ್ತ ಕೂರುವುದರಿಂದ ನನ್ನನ್ನು ನೋಡಿದ ತಕ್ಷಣ ಒದೆ ಎಂಬುದು ಕಟ್ಟಿಟ್ಟ ಬುತ್ತಿ. ಅಪ್ಪನ ಕಣ್ತಪ್ಪಿಸಿ ಮನೆ ಹಿಂದುಗಡೆ ಹೋಗಿ ಒಳಗೆ ಸೇರಿ ಬಟ್ಟೆ ಎಲ್ಲ ಬದಲಾಯಿಸಿ ಪುಸ್ತಕ ಹಿಡಿದುಕೊಂಡರೆ ಆಗಲೇ ಸಮಾಧಾನ.

………………………………………………

ಬರ್ತಿರೋ ಮಳೆ ನೋಡ್ತಾ (ಹೋಗಿ ನೆನೆಯೋಣ ಅಂದ್ರೂ ಅದಕ್ಕೆ ಆಸ್ಪದವಿಲ್ಲ) ,ಆಫೀಸಿನ ಗಾಜಿನ ಬಾಗಿಲ ಪಕ್ಕದಲ್ಲಿರೋ ಕುರ್ಚಿಯಲ್ಲಿ ಕಾಫಿ ಕುಡೀತಾ, ಎದುರುಗಡೆ ಕಾಣೋ ಮೈದಾನದಲ್ಲಿ ಆ ಮಳೆಯಲ್ಲೂ ಸಣ್ಣ ಮಕ್ಕಳ ಆಟ ನೋಡ್ತಿದ್ರೆ ನಮ್ಮ ಚೆಲ್ಲಾಟಗಳು, ಬಾಲ್ಯದ ನೆನಪುಗಳು ಹಾಗೆಯೇ ಬಿಸಿ ಕಾಫಿಯ ಹಬೆ ತೇಲಿ ಹೋದ ಹಾಗೆ ಅನುಭವ.

ನೆನಪುಗಳ ಮಳೆಯಲ್ಲಿ

ತೋಯ್ದು ಹೋಗಿದ್ದೇನೆ ನಾನಿಲ್ಲಿ

ಬಾಲ್ಯದ ಹೂದೋಟದಲ್ಲಿ

ಕಳೆದುಹೋಗಿದ್ದೇನೆ ಇಂದಿಲ್ಲಿ

ಚುರ್ಮುರಿ - ೧೧

೩೩) ಅವಳು ಲಂಗ ದಾವಣಿ ಹಾಕಿಕೊಂಡು ಹೈ ಹೀಲ್ಡ್ ಸ್ಲಿಪ್ಪರ್ ಹಾಕಿಕೊಂಡಿದ್ದಳು.


೩೪) ಅವರಿಬ್ಬರೂ ಕನ್ನಡ ಚಿತ್ರ ನೋಡುವುದಕ್ಕೆ ಹೋಗಿದ್ದರು, ಇಬ್ಬರೂ ಕನ್ನಡಿಗರೇ, ಆದರೆ ಇಂಗ್ಲಿಷ್ನಲ್ಲಿ ಮಾತನಾಡುತ್ತಿದ್ದರು.


೩೫) ಮದುವೆಯಾಗುವುದಕ್ಕೆ ಮೊದಲು ಅವನು ನವರಂಗ್ ಚಿತ್ರಮಂದಿರದಲ್ಲಿ ೫೦ ರೂ ಕೊಟ್ಟು ಸಿನೆಮಾ ನೋಡುತ್ತಿದ್ದ, ಮದುವೆಯಾದ ಮೇಲೆ ಮಂತ್ರಿ ಮಾಲ್ನಲ್ಲಿರುವ ಐನಾಕ್ಸ್ ಚಿತ್ರಮಂದಿರದಲ್ಲಿ ೫೦೦ ರೂ ಕೊಟ್ಟು ನೋಡುತ್ತಿದ್ದಾನೆ.


೩೬) ಅವನು ಕಾರಿನಲ್ಲಿ ತಲೆಗೆ ಕ್ಯಾಪ್ (ತಲೆಯಲ್ಲಿ ಕೂದಲಿದ್ದರೂ) ಹಾಕಿಕೊಂಡಿದ್ದನು.


೩೭) ಪಲ್ಲವಿ ಚಿತ್ರಮಂದಿರದ ಹತ್ತಿರ ಇರುವ ಬಸ್ ನಿಲ್ದಾಣದ ಬೋರ್ಡ್ ಕನ್ನಡದಲ್ಲಿ ಪಲ್ಲವಿ ಚಿತ್ರಮಂದಿರ ತೋರಿಸುತ್ತಿದ್ದರೆ, ಚಿತ್ರಮಂದಿರದ ಒಳಗೆ ಕನ್ನಡದ ಸದ್ದೇ ಇರಲಿಲ್ಲ.

ಮಲೆಗಳಲ್ಲಿ ಮದುಮಗಳು

೨೦೦೬ನೇ ಇಸವಿ, ಅರಮನೆ ಮೈದಾನದಲ್ಲಿ ಪುಸ್ತಕ ಪ್ರದರ್ಶನ ಇತ್ತು. ನೋಡೋಣ ಅಂತ ನಾನು, ಉಲ್ಲ, ಧೋಪ, ಬಾಬು ಹೋಗಿದ್ವಿ. ಹಾಗೆ ಎಲ್ಲ ನೋಡ್ಕೊಂಡು ಹೋಗ್ತಿದ್ವಿ, ನನಗೆ ಅಲ್ಲಿವರೆಗೂ ಯಾವುದೇ ಕಾದಂಬರಿ ಓದಿದ ಅನುಭವ ಇರ್ಲಿಲ್ಲ, ಹಾಗೆ ಪುಸ್ತಕದ ಮಳಿಗೆಯಲ್ಲಿ ಹಾದುಹೋಗುವಾಗ ಕುವೆಂಪುರವರ ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ ಕಣ್ಣಿಗೆ ಬಿತ್ತು. ಬೇರೆ ಲೇಖಕರದ್ದೂ ಇತ್ತು ಆದರೆ ನಮಗೆ ಚಿರಪರಿಚಿತವಾದ ಹೆಸರು ಕುವೆಂಪು.

ನೋಡಿದ ಕೂಡಲೇ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನ ಕೊಂಡುಕೊಳ್ಳುವ ಮನಸ್ಸಾಯಿತು. ಯಾಕೆ?. ಹೆಸರಿನ ಮಹತ್ವವಿರಬೇಕು. ಮಲೆ ಹೆಸರಿಂದು, ಆಮೇಲೆ ಮದುಮಗಳನ್ನ ನೋಡಿ ಕೊಂಡುಕೊಂಡಿದ್ದು ಅನ್ನಬೇಡಿ :).

ನನ್ನೂರು ಮಲೆನಾಡು, ಸಹಜವಾಗಿ ಕುತೂಹಲ ಏನು ಬರೆದಿರಬಹುದು ಅಂತ. ಅಂತೂ ಕೊಂಡುಕೊಂಡು ಬಂದೆ.

ಒಂದು ವೀಕೆಂಡ್ ಓದೋಣ ಅಂತ ತೆಗದ್ರೆ ೭೧೨ ಪುಟಗಳು!!!!!!!. ಕಾದಂಬರಿಯನ್ನ ಓದಲಿಕ್ಕೆ ಶುರುಮಾಡಿರದ ನಾನು ಮೊದಲ ಕಾದಂಬರಿಯ ಅಷ್ಟು ಪುಟಗಳನ್ನ ನೋಡಿ ಸುಸ್ತಾಗಿ ಹೋಗಿದ್ದೆ. ೩೦-೪೦ ಪುಟಗಳನ್ನ ಓದೋಹೊತ್ತಿಗೆ ಸುಸ್ತಾಗಿ ಹೋಗಿದ್ದೆ, ಹಲವು ಪಾತ್ರಗಳು, ಅಬ್ಬ ಆ ಕನ್ನಡ, ಅವುಗಳನ್ನು ಉಚ್ಚಾರಣೆ ಮಾಡುವುದೇ ಭಾರೀ ಕಷ್ಟ. ಇದನ್ನ ನನ್ನ ಕೈಲಿ ಓದುವದಕ್ಕೆ ಆಗುವುದಿಲ್ಲವೆಂದು ಊರಿಗೆ ಹೋಗಿ ಇಟ್ಟಿದ್ದೆ.

ಆಮೇಲೂ ಕೂಡ ಆಗಾಗ ಊರಿಗೆ ಹೋದಾಗ ೫೦-೫೦ ಪುಟಗಳನ್ನ ಓದಿ ಮತ್ತೆ ಇದೆ ಕಥೆ ಅಂದ್ಕೊಂಡು ೫೦-೬೦ ನೆಯ ವಯಸ್ಸಿನಲ್ಲಿ ಓದಿದರಾಯಿತು ಎಂದುಕೊಂಡೆ :).

ಅದಾದ ಮೇಲೆ ತೇಜಸ್ವಿ, ಭೈರಪ್ಪ, ಕಾರಂತ, ಲಂಕೇಶ್ ಇವರ ಕಾದಂಬರಿಗಳನ್ನ ಓದುತ್ತಿದ್ದೆ. ಈ ನಡುವೆ ತುಂಬಾ ಕಾದಂಬರಿಗಳನ್ನ ಓದಿದ ನಾನು ಈ ಸಲ ದೀಪಾವಳಿಗೆ ೯ ದಿನ ರಜೆ ಇದ್ದುದ್ದರಿಂದ ಏನಾದರಾಗಲಿ ಮಲೆಗಳಲ್ಲಿ ಮದುಮಗಳು ಕಾದಂಬರಿ ಓದೇಬಿಡುವ ಎಂದು ತೀರ್ಮಾನಿಸಿ ಊರಲ್ಲಿ ಪುಸ್ತಕ ಹಿಡಿದು ಕುಳಿತೆ. ಕಾದಂಬರಿ ಓದಿಸಿಕೊಂಡು ಹೋಯ್ತು. ಅವರು ಉಪಯೋಗಿಸಿರುವ ಕನ್ನಡ ಪದಗಳು, ವಾಕ್ಯಗಳ ರಚನೆ ಅಬ್ಬಬ್ಬ ಅದನ್ನ ಮೀರಿಸುವುದಕ್ಕೆ ಇನ್ನೊಬ್ಬ ಕುವೆಂಪು ಹುಟ್ಟಿ ಬರಬೇಕೇನೋ, ಬಂದರೂ ಕನ್ನಡ ಅನ್ನುವುದು ಕಂಗ್ಲೀಶಾಗಿರುವುದರಿಂದ ಅದು ಅಸಾಧ್ಯ. ನೀವು ಮಲೆನಾಡಿಗರಾಗಿದ್ದರೆ ನಿಮಗೆ ಕಾದಂಬರಿ ಆಪ್ತವಾಗುತ್ತ ಹೋಗುತ್ತದೆ, ಅದರಲ್ಲೂ ನೀವೇನಾದರೂ ಹಳ್ಳಿಯಲ್ಲಿದ್ದು, ತೋಟ, ಗದ್ದೆಯಿದ್ದು ಕೆಲಸ ಮಾಡಿಸಿ ಅನುಭವವಿದ್ದಲ್ಲಿ ನೀವು ಕಾದಂಬರಿಯ ಒಂದು ಅಂಗವಾಗಿದ್ದೀರೆನೋ ಎಂದೆನಿಸಬಹುದು :)

ಎಲ್ಲ ಜಾತಿಯವರೂ ಬಂದು ಹೋಗುತ್ತಾರೆ, ಗೌಡ, ಹೆಗ್ಗಡೆ, ಬ್ರಾಮ್ಹಣ, ದಲಿತ, ಮುಸ್ಲಿಂ.

ಪಾತ್ರದಲ್ಲಿ ಮುಖ್ಯವಾಗಿ ಸೆಳೆಯುವುದೆಂದರೆ ಗುತ್ತಿ ಮತ್ತು ಅವನ ನಾಯಿ. ಗುತ್ತಿಯ ಸಾಹಸಗಳು, ಒಡೆಯನ ಸಾಹಸಕ್ಕೆ ನೆರವಾಗುವ ಅವನ ನಾಯಿ ಹುಲಿಯ, ರೋಚಕ ಅನುಭವಗಳನ್ನು ನೀಡುತ್ತದೆ.

ಎಲ್ಲ ತರಹದ ಮನುಷ್ಯನ ಸ್ವಭಾವಗಳು ವಿಭಿನ್ನ ಪಾತ್ರಗಳಲ್ಲಿ ಬಂದು ಹೋಗುತ್ತವೆ.

ಮಲೆನಾಡಿನ ಚಿತ್ರಣ. ದಲಿತರ ಕೇರಿಗಳಲ್ಲಿ ನಡೆಯುವ ಘಟನೆಗಳು, ಮುಕುಂದಯ್ಯನ ಮೃದು ಸ್ವಭಾವ, ಅವನ ಪ್ರೀತಿ, ತಿಮ್ಮಪ್ಪ ಹೆಗ್ಗಡೆಯ ಧೂರ್ತ ವ್ಯಕ್ತಿತ್ವ, ತನ್ನಪ್ಪನನ್ನು ಕಳೆದುಕೊಂಡು ತನ್ನಮ್ಮನ ರೋಧನೆಯನ್ನು ಸಹಿಸಲಾರದ ಹುಡುಗ ಧರ್ಮುವಿನ ತೊಳಲಾಟ. ಹೇಗಾದರೂ ಚಿನ್ನಮ್ಮನನ್ನ ಪಡೆಯಬೇಕೆಂಬ ಭರಮೈ ಹೆಗ್ಗಡೆಯ ಹಂಬಲ. ಯುವ ದಂಪತಿಗಳಾದ ಐತ ಪೀಂಚಲು ಇವರ ಮುಗ್ದ ಸ್ವಭಾವಗಳು. ನಾಗತ್ತೆಯ ಸಂಚುಗಳನ್ನರಿಯದ ನಾಗಕ್ಕ, ಹೂವಳ್ಳಿ ವೆಂಕಣ್ಣನ ಪ್ರತಾಪಗಳು....

ಯಾವ ಅಧ್ಯಾಯವೂ ಎಲ್ಲೂ ಬೇಸರ ಬರಿಸದೆ ಮುಂದೆ ಏನಾಗಬಹುದು ಎಂದು ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ನನ್ನೂರಿನಲ್ಲಿ ಈ ಕಾದಂಬರಿಯನ್ನ ಓದುತ್ತಿದ್ದರೆ ಅಲ್ಲೇ ಎಲ್ಲೋ ಇವುಗಳು ನಡೆಯುತ್ತಿದೆಯೇನೋ ಎಂದೆನಿಸುತ್ತಿತ್ತು. ೧ ವಾರದಲ್ಲಿ ೫೦೦ ಪುಟಗಳನ್ನು ಮುಗಿಸಿ ಆಗಿದೆ ಇನ್ನೂ ೨೧೨ ಪುಟಗಳು ಬಾಕಿ ಇವೆ. ಬಹುಷ ಮುಂದಿನ ಪೀಳಿಗೆಯವರಿಗೆ ಇದನ್ನು ಓದಲು ಕಷ್ಟವಾಗಬಹುದೇನೋ (ಹಳೆಗನ್ನಡ, ಹೊಸಗನ್ನಡ, ಕ್ಲಿಷ್ಟಕರವಾದ ಪದಗಳು), ನಮ್ಮ ಪೀಳಿಗೆಯವರು ಓದಬಹುದು, ಓದದಿದ್ದವರು ಖಂಡಿತ ಓದಲೇಬೇಕಾದಂತಹ ಕಾದಂಬರಿ.

ಇಲ್ಲಿಯವರೆಗೆ ನನ್ನ ಮೆಚ್ಚಿನ ಕಾದಂಬರಿ ಕರ್ವಾಲೋ ಆಗಿತ್ತು ಈಗ ಮಲೆಗಳಲ್ಲಿ ಮದುಮಗಳು. ಮಗನ ಸ್ಥಾನವನ್ನು ಅಪ್ಪ ಆಕ್ರಮಿಸಿಕೊಂಡಿದ್ದಾರೆ :)

ಆ ಒಂದು ವಾರ

ಒಂದು ವಾರ ಟ್ರಾಫಿಕ್ಕಿಲ್ಲ, ಸಿಗ್ನಲ್ಲಿಲ್ಲ
ಬಸ್ಸು ಬೈಕು ಕಾರುಗಳ ಆರ್ಭಟವಿಲ್ಲ
ಪಾಂ ಪಾಂ, ಕೀಂ ಕೀಂಗಳ ಕರ್ಕಶ ಶಬ್ಧವಿರಲಿಲ್ಲ
ವಿಧವಿಧವಾದ ಹಕ್ಕಿಗಳ ನಿನಾದವಿತ್ತಲ್ಲ
ನೆಟ್ ಇಲ್ಲ ಇ-ಮೈಲ್ ಇಲ್ಲ
ಕಂಪ್ಯೂಟರ್ ಮುಖವೇ ಇಲ್ಲ
ತರಕಾರಿ ತರುವ ತೊಂದರೆ ಇಲ್ಲ
ಈರುಳ್ಳಿ ಟೊಮೇಟೊ ಹಚ್ಚುವ ಗೋಜಿಲ್ಲ
ಹಾಲು ತರುವ ಪ್ರಮೇಯವಿರಲಿಲ್ಲ
ಆದರೂ ಕಾಫಿ ಬಂದು ಕೈಗೆ ಕುಳಿತಿರುತ್ತಿತ್ತಲ್ಲ
ಮೊಬೈಲ್ ಮಲಗಿತ್ತು
ಲ್ಯಾಂಡ್ಲೈನಿಗೆ ಗತ್ತು ಬಂದಿತ್ತು
ಪ್ಯಾಂಟ್ ಹೋಗಿ
ಪಂಚೆ ಬಂದಿತ್ತು
ಊರಲ್ಲಿ ವಾರ ಕಳೆದದ್ದೇ ಗೊತ್ತಾಗಲಿಲ್ಲ
ಇಲ್ಲಿ ದಿನವೇ ಹೋಗುತ್ತಿಲ್ಲ

ಸೃಷ್ಟಿಯ ಸಂಭ್ರಮ


ನೋಟವೊಂದು ನಗೆಯಾಗಿ

ನಗೆಯಿಂದ ನುಡಿಯಾಗಿ

ನುಡಿಯಿಂದ ನಲಿವಾಗಿ

ನಲಿವಿಂದ ಒಲವಾಗಿ

ಒಲವಿಂದ ಬಂಧನವಾಗಿ

ಬಂಧನದಿಂದ ಸಂಗಮವಾಗಿ

ಸಂಗಮದಿಂದ ಸೃಷ್ಟಿಯಾಗಿ

ಸೃಷ್ಟಿಯಿಂದ ಸಂಭ್ರಮವಾಗಿ

ಸಂಭ್ರಮಳ ಸಾಂಗತ್ಯ

ಸವಿನೆನಪನ್ನೀಯುತ್ತಿದೆ

ಚುರ್ಮುರಿ - ೧೦

೨೮) ನಮ್ಮ ದೇಶದಲ್ಲಿ ಮಹಾತ್ಮರಾಗುವುದರಿಂದ ಆಗುವ ಲಾಭಕ್ಕಿಂತ ನಷ್ಟಗಳೇ ಹೆಚ್ಚು.

೨೯) ಅವರಿಬ್ಬರೂ ಸಹೋದ್ಯೋಗಿಗಳು, ಒಬ್ಬ ಬ್ರಾಹ್ಮಣ, ಇನ್ನೊಬ್ಬ ದಲಿತ. ಬ್ರಾಹ್ಮಣ ಮೊದಲ ದರ್ಜೆಯ ಕ್ಲರ್ಕ್ ಆಗಿದ್ದ, ಆಮೇಲೆ ಸೇರಿದ ದಲಿತ ಎರಡನೇ ದರ್ಜೆಯ ಕ್ಲರ್ಕ್ ಆಗಿ ಬ್ರಾಹ್ಮಣನ ಕೈಕೆಳಗೆ ಕೆಲಸ ಮಾಡುತ್ತಿದ್ದ. ಸ್ವಲ್ಪ ವರ್ಷಗಳ ನಂತರ ದಲಿತ ಸುಪರಿಟೆನ್ಡೆಂಟ್ ಆದ. ಬ್ರಾಹ್ಮಣ ಇನ್ನೂ ಅದೇ ಹುದ್ದೆಯಲ್ಲಿದ್ದಾನೆ ಆದರೆ ದಲಿತನ ಕೈಕೆಳಗೆ.

೩೦) ಮಲ್ಲಿಕಾ ಶೆರಾವತಳನ್ನು ದೇವಸ್ಥಾನಕ್ಕೆ ಸೀರೆ ಯಾಕೆ ಹಾಕಿಕೊಂಡು ಹೋದಳೆಂದು ಯಾರೋ ಕೇಳಿದ್ದಾರೆ. ಆ ಪುಣ್ಯಾತ್ಗಿತ್ತಿ ಅಲ್ಲಾದರೂ ಬಟ್ಟೆಯಲ್ಲಿರಲು ಬಿಡಿ.

೩೧) ಆಗೆಲ್ಲ ಬೆಳಗ್ಗೆ ಬಹುತೇಕ ಮನೆಗಳಲ್ಲಿ ಬೆಳಗ್ಗೆ ಕೌಸಲ್ಯ ಸುಪ್ರಜಾ ರಾಮ. ಈಗ ಬೆಳಗ್ಗೆ ಸಕತ್ ಹಾಟ್ ಮಗಾ, ಮಸ್ತ್ ಮಜಾ ಮಾಡಿ, ಕೇಳಿ ಕೇಳಿಸಿ.

೩೨) ಅವಳು ೫.೫ ಅಡಿ ಎತ್ತರ ಇದ್ದರೂ ಹೈ ಹೀಲ್ಡ್ ಚಪ್ಪಲಿ ಹಾಕಿಕೊಂಡಿದ್ದಳು.

ಹೇಳಿಹೋಗುವೆಯಾ ನೀ?

ಓ ರವಿಯೇ

ನಿನಗಾರು ಹೇಳಿದರು

ಕತ್ತಲನ್ನು ಹೊಡೆದೋಡಿಸಲು

ಓ ಹಕ್ಕಿಗಳೇ

ನಿಮಗಾರು ಹೇಳಿದರು

ಆಗಸದಲ್ಲಿ ರೆಕ್ಕೆಯನ್ನು ಬಿಚ್ಚಿ ಹಾರಲು

ಓ ದುಂಬಿಗಳೇ

ನಿಮಗಾರು ಹೇಳಿದರು

ಹೂವುಗಳ ಮಕರಂದವನ್ನು ಹೀರಲು

ಓ ಮೇಘಗಳೇ

ನಿಮಗಾರು ಹೇಳಿದರು

ವರ್ಷಧಾರೆಯನ್ನು ಹರಿಸಲು

ಓ ಕಾಮನಬಿಲ್ಲೇ

ನಿನಗಾರು ಹೇಳಿದರು

ಸಪ್ತವರ್ಣಗಳ ಸುರಿಸಲು

ಓ ಕೋಗಿಲೆಯೇ

ನಿನಗಾರು ಹೇಳಿದರು

ಗಾನಸುಧೆಯನ್ನು ಹರಿಸಲು

ಓ ನಕ್ಷತ್ರಗಳೇ

ನಿಮಗಾರು ಹೇಳಿದರು

ಬಾನಿನಲ್ಲಿ ರಂಗೋಲಿಯನ್ನು ಬಿಡಿಸಲು

ಓ ಶಶಿಯೇ

ನಿನಗಾರು ಹೇಳಿದರು

ಬೆಳದಿಂಗಳನ್ನು ಭುವಿಗೆ ಹರಡಲು

ಓ ಧರೆಯೇ

ನಿನಗಾರು ಹೇಳಿದರು

ಈ ಎಲ್ಲ ಸೃಷ್ಟಿಯ ವೈಚಿತ್ರ್ಯಗಳಿಗೆ ಸಾಕ್ಷಿಯಾಗಲು

ಸ್ವಲ್ಪ ಹೆಚ್ಚು ಕಡಿಮೆಯಾಗಿದ್ರೆ

ನಿನ್ನೆ ರಾತ್ರಿ ಅಕ್ಕನ ಮನೆಯಲ್ಲಿ ಊಟ ಮಾಡ್ಕೊಂಡು ವಾಪಸ್ ನಮ್ಮ ಮನೆಗೆ ಹೋಗ್ತಿದ್ದೆ. ವೆಸ್ಟ್ ಆಫ್ ಕಾರ್ಡ್ ರೋಡ್ ಹತ್ತಿರ ಇರೋ ಪಾರ್ಕ್ ಹತ್ತಿರ ಇರೋ ರೋಡಲ್ಲಿ ಹೋಗ್ತಿದ್ದೆ. ಸುಮಾರು ರಾತ್ರಿ ೧೦ ಘಂಟೆ.ರೋಡ್ ಹತ್ತಿರ ಒಬ್ಬ ಬೈಕ್ ನಿಲ್ಲಿಸ್ಕೊಂಡು ಅವ್ನ ಹುಡುಗಿ ಜೊತೆ ಮಾತಾಡ್ತಿದ್ದ. ಅವರ ನಿಂತ ಜಾಗದಿಂದ ಸ್ವಲ್ಪ ಮುಂದೆ ಒಂದು ಮನೆಯಿಂದ ಬೆಕ್ಕು ರೋಡ್ ದಾಟಿ ಹೋಯ್ತು. ನನ್ನ ಪಾಡಿಗೆ ನಾನು ಮುಂದೆ ಹೋಗ್ತಿದ್ದೆ, ಸಡನ್ನಾಗಿ ಹಿಂದ್ಗಡೆ ಬಂದ ಒಂದು ಸ್ಕೂಟಿ ನಿಲ್ತು, ತಿರುಗಿ ನೋಡಿ ಯಾರು ಅಂತ ನೋಡದೆ ಹಾಗೆ ಮುಗುಳ್ನಕ್ಕೆ (ಬೆಕ್ಕು ನೋಡಿ ಗಾಡಿ ನಿಲ್ಸಿದಕ್ಕೆ) ಮುಂದೆ ಹೊರಟೆ.

ಸ್ವಲ್ಪ ಮುಂದೆ ಹೋದವನು ಮತ್ತೆ ಹಿಂದೆ ತಿರುಗಿ ನೋಡಿದೆ. ಆಗ ಗೊತ್ತಾಯ್ತು ಆ ಸ್ಕೂಟಿಯಲ್ಲಿ ಲೇಡಿ ಪೋಲಿಸ್ ಇದ್ರು :(

ಅವ್ರು ಹೋಗಿ ಆ ಜೋಡಿಗಳ ಹತ್ರ ಹೋಗಿ 'ಏನಮ್ಮ, ಎಲ್ಲಿ ನಿಮ್ಮ ಮನೆ?'. ಅವರಿಬ್ಬರಿಗೂ ಆಗ್ಲೇ ಹೆದರಿಕೆ ಶುರುವಾಗಿತ್ತು, ಆ ಹುಡುಗಿ ಅಲ್ಲೇ ಎಲ್ಲೋ ಮುಂದೆ ಮೇಡಂ ಅಂತಿದ್ಲು. 'ಮತ್ತೆ ನಡಿ ಮನೆಗೆ ಟೈಮ್ ಸೆನ್ಸ್ ಇಲ್ವಾ?' ಅಂದ್ರು. ಆಯ್ತು ಮೇಡಂ ಅಂದ ಇಬ್ಬರು ಅಲ್ಲಿಂದ ಕಾಲ್ಕಿತ್ತ್ರು.

ನಾನು ಮೊದಲು ಮುಗುಳ್ನಕ್ಕಿದ್ದವನು, ಗಂಭೀರನಾಗಿ ಮನೆ ಕಡೆ ಹೆಜ್ಜೆ ಹಾಕಿದೆ.
October 6, 2010

ಚುರ್ಮುರಿ - ೯

೨೫) ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳಿಗೆ ಪ್ರಸ್ತುತ ಸರ್ಕಾರದಿಂದ ಸಿಕ್ಕಿರುವ ರಜೆಗಳ ಕೊಡುಗೆ ಬೇರ್ಯಾವುದೇ ಸರ್ಕಾರದಿಂದ ದಕ್ಕಿಲ್ಲ.


೨೬) ಅಪ್ಪ ಕೃಷಿಕ, ಮಗ ಸಾಫ್ಟ್ವೇರ್ ಇಂಜಿನಿಯರ್. ಅಪ್ಪ ಕಷ್ಟಪಟ್ಟು ದುಡಿದು ಹೊಲ-ಗದ್ದೆ, ತೋಟಗಳನ್ನು ಮಾಡಿದ. ಮಗ ೪೫ ವರ್ಷವಾದರೂ ತೆಗೆದುಕೊಂಡ ಒಂದು ಅಪಾರ್ಟ್ಮೆಂಟಿಗೆ ಸಾಲವನ್ನು ಕಟ್ಟುತ್ತಲೇ ಇದ್ದಾನೆ.


೨೭) ಅವಳಿಗೆ ವಯಸ್ಸು ೨೬, ಒಳ್ಳೆಯ ವರ ಬಂದರೂ ಇನ್ನೂ ೨ ವರ್ಷವಾದರೂ ಮದುವೆಯಾಗಲಿಲ್ಲವೆಂದಳು. ೨ ವರ್ಷದ ಖುಷಿಗಾಗಿ ಮುಂದಿನ ಜೀವನವನ್ನು ತನಗಿಷ್ಟವಿಲ್ಲದವನ ಜೊತೆ ಕಳೆಯಬೇಕಾಯಿತು.

ಗೌರಿ ಗಣೇಶ ರಮ್ಜಾನ್ ಹಬ್ಬಗಳು....

ಭಟ್ರ ಪಂಚರಂಗಿಯ ಸ್ಪೂರ್ತಿಯಿಂದ ....

ಗೌರಿ ಗಣೇಶ ರಮ್ಜಾನ್ ಹಬ್ಬಗಳು, ಸಾಲು ಸಾಲು ರಜೆಗಳು, ಖಾಲಿ ಹೊಡೆಯಲಿರುವ ಆಫೀಸುಗಳು, ಅಲ್ಲಿನ ಕ್ಯಾನ್ಟೀನಗಳು, ಕೆಫಿಟೆರಿಯಾಗಳು.
ಟ್ರಾಫಿಕ್ ಜ್ಯಾಮ್ಗಳು, ತುಂಬಿ ಹೋಗಿರುವ ಕಾರುಗಳು, ರೈಲುಗಳು, ಬಿ.ಎಂ.ಟಿ.ಸಿ, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು.

ವೇಗದೂತಗಳಲ್ಲಿ ತುಂಬಿರುವ ೪೦ ಕೆ.ಜಿಯ ಸರ್ಕಾರಿ ನೌಕರರು, ಪಕ್ಕದಲ್ಲಿ ಕುಳಿತಿರುವ ೭೦ ಕೆ.ಜಿಯ ಹೆಂಡತಿಯರುಗಳು, ಮಧ್ಯದಲ್ಲಿ ಗೊಣ್ಣೆ ಸುರಿಸುತ್ತಿರುವ ಮಕ್ಕಳುಗಳು.
ನಿಧಾನ ಸಾಗುತ್ತಿರುವ ಊರಿನ ದಾರಿಗಳು.

ರಾಜಹಂಸಗಳು, ಐರಾವತಗಳು. ತುಂಬಿ ತುಳುಕುತ್ತಿರುವ ಸಾಫ್ಟ್ವೇರ್ ಇಂಜಿನ್ಯರಗಳು, ಬೇಡ ಅಂದರೂ ಜ್ಞಾಪಕ ಬರುತ್ತಿರುವ ಕೀಬೋರ್ಡ್ ಮೌಸ್ಗಳು. ತೊಡೆಯ ಮೇಲಿರುವ ಲ್ಯಾಪ್ಟಾಪ್ಗಳು.
ಕಿವಿಗೆ ತೂರಿಸಿಕೊಂಡಿರುವ ಇಯರ್ಫೋನ್ಗಳು.

ಮದುವೆಯಾದ ಮೇಲೆ ಮೊದಲ ಹಬ್ಬಕ್ಕೆ ಹೆಂಡತಿಯ ಊರಿಗೆ ಹೋಗುತ್ತಿರುವ ಹುಡುಗನೂ, ಪಕ್ಕದಲ್ಲಿ ಹೆಂಡತಿ ಮತ್ತು ಅವಳ ತುಂಬಿದ ಬ್ಯಾಗುಗಳು, ಹುಡುಗನ ಖಾಲಿ ಜೇಬುಗಳು.

ಸ್ವಲ್ಪ ದಿನ ಖಾಲಿ ಹೊಡೆಯಲಿರುವ ನವರಂಗ್ಗಳು, ನಂದಿನಿಗಳು. ದರ್ಶಿನಿ ನಂದಿನಿ ಹೋಟೆಲ್ಲುಗಳು. ಶಾಪಿಂಗ್ ಮಾಲ್ಗಳು.

ಊರುಗಳು, ಅಪ್ಪ ಅಮ್ಮ ಚಿಕ್ಕಪ್ಪ ಚಿಕ್ಕಮ್ಮ, ದೊಡ್ಡಪ್ಪ ದೊಡ್ದಮ್ಮಗಳು. ಅಣ್ಣ ಅತ್ತಿಗೆಗಳು.
ಗೌರಿ ಹೂವುಗಳು, ಗೌರಿ ಪೂಜೆಗಳು, ಗೌರಿ ದಾರಗಳು, ಬಳೆಗಳು, ಗಣೇಶ ಮೂರ್ತಿಗಳು, ಕೋಡುಬಳೆಗಳು,ಕರ್ಜಿಕಾಯಿಗಳು, ಹೋಳಿಗೆಗಳು, ಕಡುಬುಗಳು, ಸಂಕ್ರಪಾಳಗಳು. ತಿಂದು ಉಬ್ಬಿಹೋಗಿರುವ ಹೊಟ್ಟೆಗಳು.

ಬೇಡ ಅಂದರೂ ಕರೆಯುತ್ತಿರುವ ಆಫೀಸುಗಳು.ಅದೇ ವೇಗದೂತಗಳು, ರಾಜಹಂಸಗಳು, ಐರಾವತಗಳು. ಬೆಂಗಳೂರಿನ ದಾರಿಗಳು

ಚುರ್ಮುರಿ - ೮

೨೨) ತಾನು ಹಾಕಿಕೊಂಡಿರುವ ಟೀ-ಶರ್ಟ್ ಸಣ್ಣದೆಂದು ಗೊತ್ತಿದ್ದರೂ ಅವಳು ಅದನ್ನು ಕೆಳಗೆಳೆದುಕೊಳ್ಳುತ್ತಿದ್ದಳು.

೨೩) ಅವನು ಬೆಳ್ಳಗಿದ್ದರೂ ಪೌಡರನ್ನು ಲಪ್ಪ ಬಳಿದ ಹಾಗೆ ಬಳಿದುಕೊಂಡಿದ್ದ.

೨೪) ತನ್ನ ಮಗಳನ್ನು ವೈದ್ಯೆ ಮಾಡಬೇಕೆಂದು ಅವನು ಅವಳನ್ನು ಕೂಲಿ ನಾಲಿ ಮಾಡಿ ಓದಿಸುತ್ತಿದ್ದ. ಒಂದು ದಿನ ಅವನಿಗೆ ಅಪಘಾತವಾಗಿ ಕಾಲು ಮುರಿದುಹೋಯ್ತು, ಅವನ ಮಗಳು ಈಗ ತನ್ನ ಅಪ್ಪನ ಕಾಲನ್ನು ಸರಿ ಮಾಡಿಸಲು
ಆಸ್ಪತ್ರೆಯಲ್ಲಿ ಗೋಗರೆಯುತ್ತಿದ್ದಾಳೆ.

ಮರೀಚಿಕೆ

ನೀ ಎಲ್ಲಿ ಹೋದೆ ಹೇಳದೆ
ನಿನ್ನ ನೋಡದೆ
ನಿನ್ನ ಮಾತು ಕೇಳದೆ
ಹೋಗುತ್ತಿಲ್ಲ ಈ ಗಳಿಗೆ

ಮರೆತೆಯಾ ಆ ಮೊದಲ ಭೇಟಿ
ಆ ತುಂತುರು ಹನಿಗಳ ದಾಟಿ
ಆ ಮೋಹಕ ನಗುವಿಗೆ
ಆ ಚೆಲುವಿಗೆ
ಮನಸೋತ ನಾನು
ಹಿಂಬಾಲಿಸಿದೆ ನಿನ್ನನು

ನಮ್ಮ ಪ್ರೀತಿಗೆ ನಾಚಿ
ಆ ರವಿಯು ಬೆವರಿದ್ದ
ಆ ಶಶಿಯು ನಡುಗಿದ್ದ

ಮುಂಜಾನೆಯ ಮಂಜನ್ನು ಮಬ್ಬಾಗಿಸಿ
ಸುಂದರ ಸಂಜೆಗಳನ್ನು ಸಾಯಿಸಿ
ಕಾರಣವಿಲ್ಲದೆ ಕಣ್ಮರೆಯಾದೆಯಲ್ಲ ಪ್ರೇಯಸಿ

ಚೌ ಚೌ - ೧

೧)
ನಲ್ಲೆ
ನಿನ್ನ ನೋಡಿ ನಾ ಕೆಟ್ಟೆ


ಸ್ವಲ್ಪ ದಿನಗಳಾದ ಮೇಲೆ
ನೀ ನನಗೆ ಕೈ ಕೊಟ್ಟೆ

೨)
ರೀ, ಮನೇಲಿ ದಿನಸಿ ಖಾಲಿ
ಎಂದಳಾಕೆ


ನೀನಿದ್ದರೆ ಎಲ್ಲವೂ ಖಾಲಿ
ಎಂದುಕೊಂಡನಾತ

೩)
ನಾಳೆ ವೀಕೆಂಡ್, ಹೋಗೋಣ ಫೋರಮ್?
ಅವಳೆಂದಳು


ಗೆಳೆಯನ ಜೊತೆ ಹೊಡೆಯಬೇಕು ರಮ್
ಅಂದುಕೊಂಡನವನು

ಚುರ್ಮುರಿ ೭

೧೯) ಅವಳು ಚಳಿಗಾಲದಲ್ಲಿ ಮಿನಿಸ್ಕರ್ಟ್ ಹಾಕಿಕೊಂಡು ಮನೆಯಿಂದ ಹೊರಟಳು. ಅಪ್ಪ ಅಮ್ಮ ಅದನ್ನು ನೋಡಿದರೂ ನೋಡದವರ ಹಾಗೆ ಇದ್ದರು.


೨೦) ಮನುಷ್ಯ ಬಾಗಬೇಕು ನಿಜ ಆದರೆ ಸೊಂಟ ಮುರಿಯುವಷ್ಟಲ್ಲ.


೨೧) ಅವನು ಮೊದಲೆಲ್ಲ ಹೋಟೆಲಿನಲ್ಲಿ ಕಾಫೀ ಕುಡಿಯುವ ನೆಪದಲ್ಲೋ ಅಥವಾ ಆಫೀಸಿನ ಹೊರಗಡೆ ಬಂದೋ ಲಂಚವನ್ನು ತೆಗೆದುಕೊಳ್ಳುತ್ತಿದ್ದ ಆದರೆ ಈ ನಡುವೆ ಕಛೇರಿಯ ಕುರ್ಚಿಯಲ್ಲೇ ಕುಳಿತು ನೇರವಾಗಿ ಲಂಚ ಕೇಳುತ್ತಾನೆ.

ಸಣ್ಣ ಕಥೆ - ಎರಡು ಕಾಫೀ

ಇದು ನನ್ನ ಮೊದಲ ಕಥೆ (ಮೊದಲು ಕೆಲವು ಬರೆದಿದ್ದೆ ಆದರೆ ಅವೆಲ್ಲ ಹಾಸ್ಯ ಲೇಖನಗಳಾಗಿದ್ದವು), ತಮ್ಮ ಸಲಹೆ ಮತ್ತು ಅಭಿಪ್ರಾಯಗಳ ನಿರೀಕ್ಷೆಯಲ್ಲಿ.


ಐ ಲವ್ ಯು ನಂದಿನಿ.
ಇದು ಕಥೆಯ ಮಧ್ಯಭಾಗದ ಮುಂಚೆ ಬರೋ ಕೊನೇ ಸೀನ್.

ವೀಕೆಂಡ್, ಶನಿವಾರ ಸಂಜೆ ೫ ಗಂಟೆ, ತನ್ನ ರೂಮ್ಮೇಟ್ ರೂಪಾಳಿಗೆ ತಾನು ಮಲ್ಲೇಶ್ವರಂಗೆ ಹೋಗುವುದಾಗಿ ಹೇಳಿ ಜೀನ್ಸ್ ಟಾಪ್ ಏರಿಸ್ಕೊಂಡು ತನ್ನ ಸ್ಕೂಟಿ ತಗೊಂಡು ವುಮೆನ್ಸ್ ಹಾಸ್ಟೆಲ್ಲಿಂದ ಹೊರಟಳು. ನವರಂಗ್ ಸಿಗ್ನಲ್ ಬಂತು, ಗಾಡಿ ನಿಲ್ಸಿದ್ಲು. ಪಕ್ಕದಲ್ಲಿ ಒಂದು ಆಟೋ ಬಂದು ನಿಲ್ತು, ಅದರೊಳಗಿದ್ದ ವ್ಯಕ್ತಿ 'ಮೇಡಂ, ಈ ಅಡ್ರೆಸ್ ಎಲ್ಲಿ ಬರತ್ತೆ ಸ್ವಲ್ಪ ಹೇಳ್ತೀರಾ?'.

ರೈಟ್ ಟರ್ನ್ ತಗೊಂಡು ನವರಂಗ್ ಥಿಯೇಟರ್ ಸ್ಟ್ರೈಟ್ ಹೋಗಿ ಮುಂದೆ ಒಂದು ಸಿಗ್ನಲ್ ಸಿಗತ್ತೆ, ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ಅಲ್ಲಿ ಯಾರನ್ನಾದ್ರೂ ಕೇಳಿ ಹೇಳ್ತಾರೆ.

ಧನ್ಯವಾದ ಮೇಡಂ.

'ಆಂ' ಎಂದಳು ನಂದಿನಿ, ಬೆಂಗ್ಳೂರಲ್ಲಿ ಥ್ಯಾಂಕ್ ಯು ಅಂತ ಹೇಳಿರೋರನ್ನ ಕೇಳಿದೀನಿ, ಇದೇನಪ್ಪ ಡಿಫ್ರೆಂಟ್ ಅನ್ನೊಷ್ಟೊತ್ತಿಗೆ ಸಿಗ್ನಲ್ ಬಿತ್ತು, ಸ್ಕೂಟಿ ಸ್ಟಾರ್ಟ್ ಮಾಡ್ಕೊಂಡು ಹೊರಟ್ಲು.

ಸಂಪಿಗೆ ರೋಡ್ ಸುತ್ತು ಹಾಕಿಕೊಂಡು ಬಂದು ೮ನೇ ಕ್ರಾಸ್ಗೆ ಎಂಟ್ರಿ ಆಗ್ಬೇಕು...
.....................................

ಊರಿಂದ ಬಂದ ಗೆಳೆಯ ಗೌಡ ಮತ್ತೆ ರೂಮ್ಮೇಟ್ ಸಂದೇಶನ ಜೊತೆ ಮಧ್ಯಾಹ್ನ ನಳಪಾಕಕ್ಕೆ ಊಟಕ್ಕೆ ಹೋಗಿ ಗಡದ್ದಾಗಿ ಊಟ ಮಾಡಿ ರೂಮಿಗೆ ಬಂದು ಹಾಸಿಗೆ ಮೇಲೆ ಬಿದ್ದ ಶ್ಯಾಮ್ ಏಳುವಾಗ ಸಂಜೆ ೪.೩೦ ಆಗಿತ್ತು.


ಎದ್ದು ನೋಡ್ತಾನೆ , ಇಬ್ರೂ ಇರ್ಲಿಲ್ಲ.


ಫ್ರೆಶ್ ಆದ್ಮೇಲೆ ಸಂದೇಶಂಗೆ ಕಾಲ್ ಮಾಡಿ 'ಮಗಾ, ಎಲ್ಲಿ ಹೋಗಿದೀಯೋ ಮಲ್ಲೇಶ್ವರಂ ಕಡೆ ಹೋಗ್ತಿದೀನಿ, ಬರ್ತೀಯಾ?'
ಆ ಕಡೆಯಿಂದ 'ಇಲ್ಲ ಮಗ ಬರಲ್ಲ, ಅಕ್ಕನ ಮನೇಲಿ ಇದ್ದೀನಿ. ನೀನು ಮಲ್ಕೊಂಡಿದ್ಯಲ್ಲ ಹಾಗಾಗಿ ಹೇಳ್ದೆ ಹೋದೆ'

'ಸರಿ ಬಿಡು ನಾನೊಬ್ನೇ ಹೋಗಿ ಬರ್ತೀನಿ' ಅಂದು ಕಾಲ್ ಕಟ್ ಮಾಡಿ ಪಲ್ಸರ್ ಸ್ಟಾರ್ಟ್ ಮಾಡ್ಕೊಂಡು ಹೊರಟ.

ಸಂಪಿಗೆ ರೋಡ್ ಹತ್ರ ಹೋದ, ೮ನೇ ಕ್ರಾಸ್ ಹತ್ತಿರ ಬರ್ತಿದ್ದ ಹಾಗೇ ಜೇಬಲ್ಲಿ ದುಡ್ಡಿಲ್ಲ ಅನ್ನೋದು ಜ್ಞಾಪಕಕ್ಕೆ ಬಂತು. ಏನಪ್ಪಾ ಮಾಡೋದು ಅಂತ ಯೋಚಿಸುತ್ತಿದ್ದವನಿಗೆ ೮ನೇ ಕ್ರಾಸ್ ಪಕ್ಕದಲ್ಲಿ ಎಸ್.ಬಿ.ಐ ಏ.ಟಿ.ಎಂ ಇರೋದು ಜ್ಞಾಪಕಕ್ಕೆ ಬಂತು, ೮ನೇ ಕ್ರಾಸಿಗೆ ಗಾಡಿ ನುಗ್ಸಿದ, ಅರ್ಧ ದಾರಿಗೆ ಬರೋವಷ್ಟರಲ್ಲಿ ಗೊತ್ತಾಯ್ತು ಅದು ಒನ್ ವೇ, ತಾನು ಬರ್ತಿರೋದು ರಾಂಗ್ ಸೈಡ್ನಲ್ಲಿ ಅಂತ.
ಅರ್ಧ ಬಂದಾಗಿದೆ, ಬೇಗ ಹೋಗ್ಬಿಡೋಣ ಅಂತ ಗಾಡಿ ನುಗ್ಗಿಸ್ದ.


………………………………………………………………


ಅದೇ ಸಮಯಕ್ಕೆ ನಂದಿನಿ ಎದರುಗಡೆಯಿಂದ ೮ನೇ ಕ್ರಾಸ್ಗೆ ಬರೋಕೆ ಲೆಫ್ಟ್ ಟರ್ನ್ ತಗೊಳ್ತಿದ್ಲು. ಧಿಡೀರ್ ಬಂದ ಸ್ಕೂಟಿ, ತನ್ನ ವೇಗ ಬೇರೆ. ಗಾಡಿ ಕಂಟ್ರೋಲ್ ಮಾಡೋಕಾಗದೆ ಶ್ಯಾಮ್ ಹೋಗಿ ಸ್ಕೂಟಿಗೆ ಗುದ್ದಿದ. ನಂದಿನಿ ಬಿದ್ಲು.
ಸಾವರಿಸಿಕೊಂಡು ಶ್ಯಾಮ್ ಎದ್ದು ಅವಳನ್ನ ಹಿಡಿದು ಎಬ್ಬಿಸಿದ.
ಸ್ವಲ್ಪ ಕೈ ಗಾಯ ಆಗಿತ್ತು ಅವ್ಳಿಗೆ 'ಏಯ್, ಕಣ್ಣು ಕಾಣಲ್ವ, ಒನ್ ವೇ ಬೇರೆ ಅದ್ರ ಜೊತೆಗೆ ಫಾಸ್ಟಾಗಿ ಬರ್ತಾನೆ. ೮ನೇ ಕ್ರಾಸಲ್ಲಿ ಎಲ್ಲ ನೋಡಲಿ ಅಂತ ಬಿಲ್ಡಪ್ಪ'


ಲಕ್ಷಣವಾಗಿದ್ದ ಅವಳನ್ನೇ ನೋಡುತ್ತಿದ್ದ ಶ್ಯಾಮ್ಗೆ ಅವಳು ಹೇಳಿದ ಮಾತುಗಳು ಕೇಳಿಸಲಿಲ್ಲ.


ಹೆಲೋ ಮಿಸ್ಟರ್, ಕನಸು ಕಾಣ್ತಿದೀರಾ?


'ಸಾರಿ ಮೇಡಂ, ತಪ್ಪಾಯ್ತು'


'ಅದೆಲ್ಲ ಗೊತ್ತಿಲ್ಲ, ಮೊದ್ಲು ನಡೀರಿ ಪೋಲಿಸ್ ಸ್ಟೇಶನ್ಗೆ'.
'ಇಷ್ಟಕ್ಕೆಲ್ಲ ಪೋಲಿಸ್ ಸ್ಟೇಶನ್ಗೆ ಏನಕ್ಕೆ ಮೇಡಂ?'
'ಯಾಕೆ, ಸಾಯ್ಸಾದ್ಮೇಲೆ ಹೋಗಣ ಅಂದ್ಕೊಂಡ್ರ?, ನಡೀರಿ ಸುಮ್ನೆ'.
'ಮೇಡಂ, ಹೊರಗಡೆನೆ ಡೀಲ್ ಮಾಡ್ಕೊಳ್ಳೋಣ' ಈ ಸಲ ಧ್ವನಿ ಸ್ವಲ್ಪ ಸಣ್ಣಗಿತ್ತು.

ಇವಳಿಗೆ ಏನನ್ಸ್ತೋ ಏನೋ 'ಸರಿ' ಅಂದ್ಲು.
'ಪಕ್ಕದಲ್ಲೇ ಇರೋ ಕಾಫಿ ಶಾಪಿಗೆ ಹೋಗೋಣ ಬನ್ನಿ, ನಿಮಗೆ ಬೇರೆ ಪೆಟ್ಟು ಬಿದ್ದಿದೆ, ಸ್ವಲ್ಪ ಸುಧಾರಿಸಿಕೊಂಡ ಹಾಗೆ ಆಗತ್ತೆ'
ದುರುಗುಟ್ಟಿಕೊಂಡು ನೋಡಿದ್ಲು. ಇವಳಿಗೂ ಕೈ ಬೇರೆ ನೋಯ್ತಿತ್ತು. ಆಮೇಲೆ ಅದೇ ಸರಿ ಅನ್ಸಿ 'ನಡೀರಿ' ಅಂದ್ಲು.


ವೇಟರ್ ಬಂದು ಏನು ಬೇಕು ಅಂದ.


ಎರಡು ಕಾಫಿ, ಶ್ಯಾಮ್ ಹೇಳಿದ
ಕಾಫಿ ಆರ್ಡರ್ ಮಾಡಿದ್ಮೇಲೆ ಶ್ಯಾಮ್ ಎದ್ರಿಗೆ ಕೂತು ಕರ್ಚಿಫ್ನಲ್ಲಿ ಕೈ ಒರೆಸುಕೊಳ್ಳುತ್ತಿದ್ದವಳನ್ನ 'ನಿಮ್ಮ ಹೆಸರೇನು?' ಅಂದ.
ನಂದಿನಿ.
ಒಂದೆರಡು ನಿಮಿಷ ಅಲ್ಲಿ ಮೌನ.
ಅಷ್ಟೊತ್ತಿಗೆ ೨ ಕಾಫಿ ಅಂದು ಸರ್ವರ್ ೨ ಲೋಟ ಇಟ್ಟು ಹೋದ.
ನಿಮ್ಮ ಹೆಸರೇನು?
ಶ್ಯಾಮ್ ಅಂತ, ಸಾಫ್ಟ್ವೇರ್ ಇಂಜಿನ್ಯರ್.
ನಾನು ಹೆಸರು ಮಾತ್ರ ಕೇಳಿದ್ದು.
ಮುಂದಿನದು ಕೇಳ್ತೀರಾ ಅಂತ ಮೊದ್ಲೇ ಹೇಳ್ದೆ.
ಸಣ್ಣಗೆ ನಕ್ಕಳು ನಂದಿನಿ.
ನೀವು ಏನು ಮಾಡ್ತಿದೀರ ಅಂತ ಹೇಳ್ಲಿಲ್ಲ.
ನಾನೂ ಸಾಫ್ಟ್ವೇರ್ ಇಂಜಿನ್ಯರ್ರೆ.
ಕಾಫಿ ಕುಡಿದು ಸ್ವಲ್ಪ ಹೊತ್ತಾದ ಮೇಲೆ ವೇಟರ್ ಬಂದು ಬಿಲ್ ಅಂದು ಇಟ್ಟು ಹೋದ.


ಶ್ಯಾಮ್ ಪರ್ಸ್ ತೆಗೆದ, ನೋಡಿದ್ರೆ ಖಾಲಿ.
ನಂದಿನಿ, ನೀವು ತಪ್ಪು ತಿಳಿದುಕೊಳ್ಳಲಿಲ್ಲ ಅಂದ್ರೆ ಒಂದು ಮಾತು.
ಅದೇನು ಹೇಳಿ .
ನಾನು ಒನ್ ವೇನಲ್ಲಿ ಗಾಡಿ ಓಡ್ಸಿದ್ದು ೮ನೇ ಕ್ರಾಸ್ ಹತ್ತಿರ ಇರೋ ಎಸ್.ಬಿ.ಐ ಏ.ಟಿ.ಎಂ ಹತ್ರ ದುಡ್ಡು ತರೋಕೆ ಅಂತ. ಆಮೇಲೆ ಆಕ್ಸಿಡೆಂಟ್, ಹಾಗಾಗಿ ಜೇಬಲ್ಲಿ ದುಡ್ಡು ಇಲ್ಲ.
ಸರಿ ಬಿಡಿ ನಾನೇ ಕೊಡ್ತೀನಿ.
ಜೊತೆಗೆ ನಿಮ್ಮ ಗಾಡಿ ಡ್ಯಾಮೇಜ್ದು ಕೊಡ್ಬೇಕು, ಏ.ಟಿ.ಎಂನಿಂದ ತೆಗೆದುಕೊಡ್ತೀನಿ.
ಏನು ಬೇಡ ಬಿಡಿ, ಸ್ವಲ್ಪ ಸ್ಕ್ರಾಚ್ ಆಗಿದೆ ಅಷ್ಟೆ.
ಇಲ್ಲ ಇಲ್ಲ ಬನ್ನಿ ಅಂತ ಏ.ಟಿ.ಎಂ ಹತ್ರ ಹೋಗಿ ೫೦೦ ರೂ ದುಡ್ಡು ತೆಗೆದುಕೊಟ್ಟ.


ಇಷ್ಟೆಲ್ಲಾ ಆಗೋ ಹೊತ್ತಿಗೆ ಇವಳಿಗೆ ಊರಿಂದ ಅಪ್ಪ ಕಾಲ್ ಮಾಡಿದ್ರು ಆದ್ರೆ ಈ ಗಜಿಬಿಜಿಲಿ ಎತ್ತೋದಕ್ಕೆ ಆಗಲಿಲ್ಲ.
ಸರಿ ನಾನಿನ್ನು ಹೊರಡ್ತೀನಿ ಅಂದು ನಂದಿನಿ ವಾಪಸ್ ಹಾಸ್ಟೆಲ್ ಕಡೆ ಸ್ಕೂಟಿ ತೆಗೆದುಕೊಂಡು ಹೊರಟಳು.


ಹಾಸ್ಟೆಲ್ಲಿಗೆ ಹೋಗಿ ಅಪ್ಪನಿಗೆ ಕಾಲ್ ಮಾಡಿದಾಗ 'ಇವತ್ತು ರಾತ್ರಿ ಊರಿಗೆ ಹೊರಟು ಬಾ, ನಾಳೆ ಒಬ್ಬ ಹುಡುಗ ಮತ್ತೆ ಅವ್ನ ಕುಟುಂಬದವರು ಬರ್ತಿದ್ದಾರೆ' ಅಂದ್ರು.


ಸರಿ ಅಂದು ಊರಿಗೆ ಹೊರಟಳು ಆ ರಾತ್ರಿ.


ಹೋಗಿ ಹುಡುಗನನ್ನು ನೋಡಿದಳು, ಮಾತನಾಡಿದಳು. ಯಾಕೋ ಇಷ್ಟವಾಗಲಿಲ್ಲ, ಅಪ್ಪನಿಗೆ ತನ್ನ ತೀರ್ಮಾನ ಹೇಳಿ ವಾಪಸ್ ಬೆಂಗಳೂರಿಗೆ ಅವತ್ತು ರಾತ್ರಿ ಹೊರಟ್ಲು.


..................................


ಸ್ವಲ್ಪ ದಿನಗಳಾದ್ಮೇಲೆ, ಒಂದಿನ ಆಫೀಸಿಗೆ ಬಸ್ಸಲ್ಲಿ ಹೋಗಬೇಕಾದ್ರೆ ಪಕ್ಕದ ಸೀಟಲ್ಲಿ ಒಬ್ಬ ಬಂದು ಕೂತ.


ಏನ್ರೀ ನಂದಿನಿ ಹೇಗಿದ್ದೀರ?


ಬಸ್ಸಲ್ಲಿ ಯಾರಪ್ಪ ಇದು ಅಂತ ತಿರುಗಿ ನೋಡಿದ್ರೆ ಆಕ್ಸಿಡೆಂಟ್ ಮಾಡಿದ ಆಸಾಮಿ.


ಚೆನ್ನಾಗಿದೀನಿ ಕಣ್ರೀ ಶ್ಯಾಮ್. ಮತ್ತೆ ಒನ್ ವೇಲಿ ಬಂದು ಆಕ್ಸಿಡೆಂಟ್ ಮಾಡ್ಬೇಡ್ರಿ ಅಂತ ನಕ್ಕಳು.


ಅವನೂ ಸಹ,


ನೋಡ್ರೀ ಅವತ್ತು ಆಕ್ಸಿಡೆಂಟ್ ಆಗಿದ್ದಕ್ಕೆ ತಾನೇ ನೀವು ನಂಗೆ ಪರಿಚಯ ಆಗಿದ್ದು.


ಹೌದು ಹಾಗಂತ ಯಾವಾಗ್ಲೂ ಹಾಗೆ ಹೋಗ್ಬೇಡಿ, ನನ್ನಂತ ಒಳ್ಳೆಯವ್ರೇ ಯಾವಾಗ್ಲೂ ಸಿಗಲ್ಲ.


ಇಲ್ಲ ಬಿಡಿ ಇನ್ನು ಹೋಗಲ್ಲ.


ನಾನು ಯಾವಾಗ್ಲೂ ಇದೆ ಬಸ್ಸಲ್ಲಿ ಹೋಗೋದು ನಿಮ್ಮನ್ನ ಇದೆ ಮೊದ್ಲು ನೋಡ್ತಿರೋದು ಇಲ್ಲಿ.


ನಮ್ಮ ಆಫೀಸ್ ಇಲ್ಲಿಗೆ ಶಿಫ್ಟ್ ಆಯ್ತು, ಹಾಗಾಗಿ ಇನ್ಮೇಲೆ ಈ ಬಸ್ಸೇ, ನೀವು ಬೇರೆ ಇದೀರಾ, ಬಸ್ಸಲ್ಲಿ ಒಳ್ಳೆ ಕಂಪನಿ ಬಿಡಿ.



ದಿನಾ ಬಸ್ಸಿನಲ್ಲಿ ಭೇಟಿಯಾಗುತ್ತಿದ್ದರು, ಮೊಬೈಲ್ ನಂಬರ್ ಎಕ್ಸ್ಚೆಂಜ್ ಆಯ್ತು.


ಅಂದು ಶುಕ್ರವಾರ.


ಹೀಗೆ ಮಾತಾಡ್ತಾ ಶ್ಯಾಮ್ 'ನಂದಿನಿ, ವೀಕೆಂಡ್ ಏನು ಪ್ಲಾನ್'


ಏನಿಲ್ಲ.


ನಾಳೆ ಮಲ್ಲೇಶ್ವರಂ ಐನಾಕ್ಸಲ್ಲಿ ಯಾವ್ದಾದ್ರೂ ಫಿಲಂ ನೋಡೋಣ?


ಸಂಜೆ ನನ್ನ ಫ್ರೆಂಡ್ ಕೇಳ್ತೀನಿ, ಆಮೇಲೆ ಕಾಲ್ ಮಾಡ್ತೀನಿ.


ಅವ್ರು ಬರ್ಲೆಬೇಕಾ?


ಅವ್ಳು ಎಲ್ಲಿಗಾದ್ರೂ ಬರೋದೆ ಕಡಿಮೆ. ಅಕಸ್ಮಾತ್ ಬರಲ್ಲ ಅಂದ್ರು ನಾನು ಬಹುಷಃ ಬರ್ತೀನಿ.


ಆಯ್ತು ನಾಳೆ ನಿಮ್ಮ ಹಾಸ್ಟೆಲ್ ಹತ್ರ ಬಂದು ನಿಮ್ಮನ್ನ ಪಿಕ್ ಮಾಡ್ತೀನಿ.


ಅದೇನು ಬೇಡ ನಾನೇ ಮಂತ್ರಿ ಮಾಲ್ ಹತ್ರ ಬರ್ತೀನಿ, ಅದ್ಕೂ ಮುಂಚೆ ಯಾವ್ದಕ್ಕೂ ಒಂದ್ಸಲ ಕಾಲ್ ಮಾಡ್ತೀನಿ.


ಸರಿ ಹಾಗೆ ಆಗ್ಲಿ ಅಂದ ಶ್ಯಾಮ್.


ಶನಿವಾರ ನಂದಿನಿಗೆ ಏನೂ ಕೆಲಸ ಇಲ್ದಿದ್ರಿಂದ ಫಿಲಂ ನೋಡೋದಕ್ಕೆ ಹೋದ್ಲು.


ಶ್ಯಾಮ್ ಜೊತೆ ಸ್ವಲ್ಪ ಮಂತ್ರಿ ಮಾಲ್ನಲ್ಲಿ ತಿರುಗಾಡಿ ಒಟ್ಟಿಗೆ ಫಿಲಂ ನೋಡಿದ್ರು.



ಹೀಗೆ ಕೆಲವು ವೀಕೆಂಡ್ ಸಿನೆಮಾ, ಮಾಲ್, ಹೋಟೆಲ್ ಅಂತ ಸಾಗಿತು


ಒಂದು ವೀಕೆಂಡ್ ಶ್ಯಾಮ್ ಸ್ಯಾಂಕಿ ಟ್ಯಾಂಕ್ಗೆ ಹೋಗೋಣ ಅಂದ.


ಸರಿ ಅಂದಿದ್ಲು ನಂದಿನಿ.


ಅವತ್ತು ಭಾನುವಾರ ಇಬ್ಬರೂ ಸ್ಯಾಂಕಿ ಟ್ಯಾಂಕ್ ಒಂದು ರೌಂಡ್ ಹೊಡೆದು ಅಲ್ಲೇ ಒಂದು ಕಡೆ ಕೂತ್ಕೊಂಡರು.


ಸ್ವಲ್ಪ ಹೊತ್ತು ಹಾಗೆ ಮೌನವಾಗಿದ್ದರು.


ಮೌನ ಮುರಿದ ಶ್ಯಾಮ್ 'ನಂದಿನಿ, ನಿನ್ನ್ಹತ್ರ ಒಂದು ವಿಷ್ಯ ಹೇಳ್ಬೇಕಿತ್ತು'


ಹೇಳೋ....


ಅದೂ ಅದೂ


ಅದೇನು ಹಾಗೆ ತಡವರಿಸ್ತಿದೀಯ, ನೀಟಾಗಿ ಹೇಳು.


'ಐ ಲವ್ ಯು ನಂದಿನಿ'


ಅವನ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಸ್ಯಾಂಕಿ ಟ್ಯಾಂಕನ್ನು ವೀಕ್ಷಿಸುತ್ತಿದ್ದ ಅವಳು ಸಡನ್ನಾಗಿ ಇವನತ್ತ ತಿರುಗಿದಳು.


..............................


ಆಕ್ಸಿಡೆಂಟ್ ಆಗಿ ೨ ದಿನ ಆಗಿತ್ತು. ಅಂದು ಸೋಮವಾರ ಕೆಲಸ ಮುಗಿಸಿ ಮೋದಿ ಆಸ್ಪತ್ರೆ ಹತ್ತಿರ ಬಸ್ಸಿನಿಂದ ಇಳಿದಳು.
ಮಾಮೂಲಿಯಂತೆ ಕದಂಬ ಹೋಟೆಲ್ಲಿಗೆ ಹೋಗಿ ಕಾಫಿ ಕುಡಿಯುತ್ತಾ ಕೂತಳು. ಹಾಗೆ ಸುಮ್ಮನೆ ಕಣ್ಣು ಹಾಯಿಸುತ್ತಿದ್ದಾಗ ಪಕ್ಕದ ಬೆಂಚಿನಲ್ಲಿ ಕುಳಿತ ವ್ಯಕ್ತಿಯನ್ನೊಮ್ಮೆ ನೋಡಿದಳು. ಎಲ್ಲೋ ನೋಡಿದ ನೆನಪು, ಹಾ, ಮೊನ್ನೆ ಅಡ್ರಸ್ ಕೇಳಿದ ಹುಡುಗ.


ಅಲ್ಲೇ ಹೋಗಿ 'ನೆನ್ನೆ ಅಡ್ರಸ್ ಕೇಳಿದ್ರಲ್ಲ, ಸಿಕ್ತೇನ್ರಿ?


ಓ ನೀವಾ ಮೇಡಂ ಬನ್ನಿ ಕೂತ್ಕೊಳ್ಳಿ.


ಹೂ ಸಿಕ್ತು ಕಣ್ರೀ.


ನಾನು ಸಾಗರ್, ನಿಮ್ಮ್ಹೆಸ್ರು?


ನಂದಿನಿ.


ಕಾಫಿ ಕೊಡ್ಸೋಣ ಅಂದ್ರೆ ಆಗ್ಲೇ ಕುಡೀತಿದೀರ ಎಂದ ಸಾಗರ್.


ಓ ಪರವಾಗಿಲ್ಲ ಬಿಡಿ,


ನಾನು ಸಂಜೆ ಯಾವಾಗಲೂ ಕೆಲಸ ಮುಗಿಸಿಬಂದ್ಮೇಲೆ ಇಲ್ಲಿಗೆ ಕಾಫಿ ಕುಡಿಯೋಕೆ ಬರೋದು, ನೀವು ಇದೆ ಟೈಮಿಗೆ ಬಂದ್ರೆ ನಾಳೆ ಕೊಡಿಸ್ಬಹುದು.


ನಾನು ಸಂಜೆ ಇದೇ ಟೈಮಿಗೆ ಬರ್ತೀನಿ, ಆಸ್ಪತ್ರಯಿಂದ ಹೊರಗಡೆ ಬರೋದೆ ಇಷ್ಟೊತ್ತಿಗೆ.


ಆದ್ರೆ ನೆನ್ನೆ ಮೊನ್ನೆನೂ ಬಂದಿದ್ದೆ, ನೀವು ಕಾಣಲಿಲ್ಲ.


ಮೊನ್ನೆ ಸ್ವಲ್ಪ ಸಣ್ಣ ಆಕ್ಸಿಡೆಂಟ್ ಆಗಿತ್ತು ಹಾಗಾಗಿ ಬರ್ಲಿಲ್ಲ.


ಎಲ್ಲಿ, ಏನಾಯ್ತು?
ಏನಿಲ್ಲ, ಮೊನ್ನೆ, ಅದೇ ನೀವು ಅಡ್ರಸ್ ಕೇಳಿದ ದಿನ, ಮಲ್ಲೇಶ್ವರಂ ಹತ್ರ ಹೋಗೋವಾಗ ಯಾರೋ ಒಬ್ಬ ರಾಂಗ್ ಸೈಡಲ್ಲಿ ಬಂದು ಗುದ್ದಿದ, ಸ್ವಲ್ಪ ಕೈಗೆ ಪೆಟ್ಟಾಗಿತ್ತು ಈಗ ಪರ್ವಾಗಿಲ್ಲ.


ಅದಿರ್ಲಿ, ಆಸ್ಪತ್ರೆ ಅಂದ್ರಲ್ಲ, ಹುಷಾರಿಲ್ವ ನಿಮ್ಗೆ.


ಇಲ್ಲ ನಾನು ಚೆನ್ನಾಗಿದೀನಿ, ನಮ್ಮಮ್ಮನ್ನ ಆಸ್ಪತ್ರೆಗೆ ಅಡ್ಮಿಟ್ ಮಾಡಿದೀನಿ, ಕಣ್ಣು ಆಪರೇಷನ್ ಇದೆ ಹಾಗಾಗಿ.


ಮತ್ತೆ ಯಾವಾಗ ಆಪರೇಷನ್?


ಇನ್ನೊಂದೆರಡು ದಿನದಲ್ಲಿ ಅಂದಿದ್ದಾರೆ, ಅದಾದ್ಮೇಲೆ ೧೫-೨೦ ದಿನ ಇರ್ಬೇಕಂತೆ.


ಮತ್ತೆ ಅವ್ರಿಗೆ ತಿಂಡಿ ಊಟ ಎಲ್ಲ ಹೇಗೆ?


ಎಲ್ಲ ಆಸ್ಪತ್ರೆಯಲ್ಲೇ ಕೊಡ್ತಾರೆ. ನಾನು ಹೀಗೆ ಹೋಟೆಲ್ನಲ್ಲಿ.


ಓ ಕೆ. ಮತ್ತೆ ನೀವೇನು ಮಾಡ್ಕೊಂಡಿರೋದು.


ನಾನು ಊರಲ್ಲಿ ತೋಟ ಗದ್ದೆ ನೋಡ್ಕೊಂಡು ಇದ್ದೀನಿ.


ನೀವು?


ನಾನು ಸಾಫ್ಟ್ವೇರ್ ಇಂಜಿನ್ಯರ್. ಇಲ್ಲೇ ವುಮೆನ್ಸ್ ಹಾಸ್ಟೆಲ್ಲಲ್ಲಿ ಇದ್ದೀನಿ.


ನಿಮ್ಮ ಕೆಲ್ಸನೇ ವಿಚಿತ್ರ ಅಲ್ವೇನ್ರಿ, ಯಾವಾಗ್ಲೂ ಕಂಪ್ಯೂಟರ್ನಲ್ಲೇ ಮುಳ್ಗಿರ್ತೀರ, ಹೊರಗಡೆ ಏನು ಆಗಿರತ್ತೆ ಅಂತ ಗೊತ್ತಾಗಲ್ಲ. ನಮ್ಮ ಕೆಲಸಕ್ಕೂ ನಿಮ್ಮ ಕೆಲಸಕ್ಕೂ ಭಾರೀ ಅಜಗಜಾಂತರ.


ನಿಜ ಕಣ್ರೀ, ನಾನೂ ಕೆಲಸ ಸಿಗೊಕಿಂತ ಮೊದ್ಲು ಆರಮಾಗಿದ್ದೆ ಅನ್ಸ್ತಿತ್ತು, ಸೇರಾದ್ಮೇಲೆ ನೀವು ಹೇಳಿದ ಹಾಗೆ ಅದರಲ್ಲೇ ಮುಳುಗಿಹೋಗಿದೀನಿ.


ಸರಿ ಸಾಗರ್ ನಾನಿನ್ನು ಬರ್ತೀನಿ, ಸಿಗುವ ನಾಳೆ.


ಆಯ್ತು ಹೋಗ್ಬನ್ನಿ.
ಒಂದೆರಡು ದಿನ ಹೀಗೆ ಭೇಟಿ ಆದ್ರು.


ಒಂದಿನ ಇಬ್ರೂ (ಸಾಗರ್ ಮತ್ತೆ ನಂದಿನಿ) ಭೇಟಿಯಾದಾಗ ಆಪರೇಷನ್ ಸಕ್ಸಸ್ ಆಗಿದ್ದು ಹೇಳ್ದ. ಇನ್ನೊಂದು ೨೦ ದಿನ ಆದ್ಮೇಲೆ ಡಿಸ್ಚಾರ್ಜ್ ಅಂತೆ.


ತುಂಬಾ ಖುಷಿಯಾಯ್ತು ಕೇಳಿ ಅಂದ್ಲು ನಂದಿನಿ.


ಕಾಫಿ ಕುಡಿತೀರಲ್ಲ?


ಅಫ್ಕೋರ್ಸ್ ಅದ್ಕೆ ಬಂದಿರೋದಿಲ್ಲಿಗೆ.


ಸರಿ ಹಾಗಿದ್ರೆ ಅಂದು ಸಾಗರ್ ವೇಟರ್ ಹತ್ತಿರ ಬಂದಾಗ ಎರಡು ಕಾಫಿ ಆರ್ಡರ್ ಮಾಡಿದ.


ಸಾಗರ್ ನಂದಿನ ಕಡೆ ತಿರುಗಿ, ಆಮೇಲೆ ನಂದಿನಿಯವ್ರೆ ಮಲ್ಲೇಶ್ವರಂ ಸೇವಾ ಸದನದಲ್ಲಿ ಭರತನಾಟ್ಯ ಇದೆ ಅಂತ ಪೇಪರ್ನಲ್ಲಿ ನೋಡಿದೆ, ನಿಮಗೆನಾದ್ರೂ ಇಂಟರೆಸ್ಟ್ ಇದ್ದು ನೀವು ನಾಳೆ ಸಂಜೆ ಫ್ರೀ ಇದ್ರೆ ಬನ್ನಿ ಹೋಗೋಣ, ನಾನಂತೂ ಹೋಗ್ತೀನಿ.


ಖಂಡಿತ ಬರ್ತೀನಿ ಸಾಗರ್, ನಾನು ಈ ತರದ ಯಾವದೇ ಕಾರ್ಯಕ್ರಮಕ್ಕೆ ಹೋಗಿಲ್ಲ, ನಾಳೆ ಬಂದೆ ಬರ್ತೀನಿ ಅಂದ್ಲು.


ಯಾವ್ದಕ್ಕೂ ನಿಮ್ಮ ನಂಬರ್ ಕೊಡಿ ಅಂತ ನಂದಿನಿ ಸಾಗರ್ ನಂಬರ್ ತೆಗೆದುಕೊಂಡಿದ್ದಳು.


ಸರಿ ಹಾಗಿದ್ರೆ ಹೋಟೆಲ್ ಹತ್ರಾನೆ ಕಾಯ್ತಿರ್ತೀನಿ ನಿಮಗೆ.


ಆಯ್ತು ಹಾಗಿದ್ರೆ ನಾಳೆ ಸಿಗೋಣ ಎಂದ ನಂದಿನಿ ಹಾಸ್ಟೆಲ್ ಕಡೆ ಹೊರಟ್ಲು.


ಮಾರನೇ ದಿನ ಸಂಜೆ ಸೇವಾ ಸದನಕ್ಕೆ ಭರತನಾಟ್ಯ ನೋಡೋದಕ್ಕೆ ಇಬ್ಬರೂ ಹೋದ್ರು. ಕಾರ್ಯಕ್ರಮ ಮುಗಿದಾಗ ನಂದಿನಿಗೆ ತಾನು ಬೆಂಗಳೂರಿನಲ್ಲಿದ್ದು ಇವೆಲ್ಲವನ್ನೂ ಮಿಸ್ ಮಾಡ್ಕೊತಿದೀನಲ್ಲ ಅಂತ ಬೇಜಾರಾಯ್ತು ಜೊತೆಗೆ ಸಾಗರ್ಗೆ ಥ್ಯಾಂಕ್ಸ್ ಹೇಳಿದ್ಲು.


ಹೀಗೆ ಸಾಗರ್ ತಾನಿದ್ದ ಸ್ವಲ್ಪ ದಿನಗಳಲ್ಲಿಯೇ ಸಂಗೀತ, ನಾಟಕ, ನೃತ್ಯ ಅಂತ ನಂದಿನಿಯನ್ನು ಕರೆದುಕೊಂಡು ಹೋದ.


ಕೊನೆಗೆ ಒಂದಿನ ಸಾಗರ್ ಹೊರಡುವ ದಿನ ಬಂತು, ನಂದಿನಿ ಬೇಜಾರು ಆಗಿದ್ಲು.


ಬೆಂಗಳೂರಿಗೆ ಮತ್ತೆ ಯಾವಾಗಲಾದರೂ ಬಾ ಎಂದು ಅವನನ್ನು ಬೀಳ್ಕೊಟ್ಟಳು


...........................


ಸ್ವಲ್ಪ ತಿಂಗಳುಗಳಾದ ಮೇಲೆ ಶ್ಯಾಮ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾಗ ಅವನ ಮೊಬೈಲಿಗೆ ಒಂದು ಕರೆ ಬಂತು. ಗೌಡನ ಕಾಲ್.


'ಏನು ಮಗಾ, ಆರಮಾಗಿದೀಯ?, ಕೆಲಸ ಎಲ್ಲಾ ಹೆಂಗಿದೆ? ಆಕಡೆಯಿಂದ ಗೌಡನ ಪ್ರಶ್ನೆ.


ಚೆನ್ನಾಗಿದೀನಿ ಗೌಡ, ಕೆಲಸ ಎಲ್ಲ ಆರಾಮಾಗಿದೆ, ಇದೇನು ಧಿಡೀರ್ ಅಂತ ಕಾಲ್ ಮಾಡಿದೀಯ?


ಹ್ಞೂ ಮಗಾ, ಮುಂದಿನ ಭಾನುವಾರ ನನ್ನ ಮದುವೆ ಖಂಡಿತ ಬರ್ಬೇಕು, ಕಾಗದ ನಾಳೆ ಕಳ್ಸ್ತೀನಿ,ನಮ್ಮೂರಲ್ಲಿ ಪೋಸ್ಟ್ಗಳ ಕಥೆ ನಿಂಗೆ ಗೊತ್ತಲ್ಲ ಅದ್ಕೆ ಯಾವ್ದಕ್ಕೂ ಅಡ್ರಸ್ ಒಂದ್ಸಲ ಬರ್ಕೋ ಮಗಾ.


ಸರಿ ಹೇಳು ಗೌಡ ಎಂದು ಅಡ್ರಸ್ ಬರ್ಕೊಂಡು, ಮದ್ವೆಗೆ ಬರ್ಲೆಬೇಕಲ್ಲಪ್ಪ ಅಂದ.


ಅದೇ ಮತ್ತೆ ಎಂದು ಹೇಳಿ ಗೌಡ ಫೋನ್ ಇಟ್ಟ.


ಭಾನುವಾರ ಬೆಳ್ಗೆ ಬೇಗ ಹೊರಟ ಶ್ಯಾಮ್, ಗೌಡ ಮದುವೆ ಆಗ್ತಿರೋ ಕಲ್ಯಾಣ ಮಂಟಪಕ್ಕೆ ಹೋದ.


ಹುಡುಗ ಹುಡುಗಿ ಹೆಸರು ನೋಡಿದ ಶ್ಯಾಮ್ಗೆ ಯಾವುದೇ ಅನುಮಾನವೂ ಬರಲಿಲ್ಲ, ಆದರೆ ಮುಹೂರ್ತ ಆಗ್ತಿರೋ ಮದುವೆ ಮಂಟಪದ ಹತ್ತಿರ ಹೋಗಿ ನೋಡ್ತಾನೆ ಈಕಡೆ ಗೌಡ (ಸಾಗರ್ ಗೌಡ) ಆಕಡೆ ನಂದಿನಿ.


(ನಂದಿನಿಗೆ ಸಾಗರ್ ತುಂಬಾ ಇಷ್ಟವಾಗಿದ್ದ, ಅವಳೇ ಅವನಿಗೆ ಒಂದಿನ ಕರೆ ಮಾಡಿ ತನ್ನ ಪ್ರೇಮವನ್ನು ತಿಳಿಸಿದ್ದಳು, ಅವನೂ ಒಪ್ಪಿದ. ಶ್ಯಾಮ್ನನ್ನು ಸ್ನೇಹಿತನನ್ನಾಗಿ ಸ್ವೀಕರಿಸಿದ್ದಳು, ಹಾಗೆಯೇ ಅವನ ಪ್ರೇಮವನ್ನು ನಯವಾಗಿ ತಿರಸ್ಕರಿಸಿದ್ದಳು)