Monday, November 25, 2013

ನಿಮ್ ಲೈಫ್: ಜಾಸ್ತಿ ಫಸ್ಟ್ ಹಾಫ್, ಚೂರೇ ಸೆಕಂಡ್ ಹಾಫ್! (ಹೀಗೊಂದು Flashback)


ಸಿ ಇ ಟಿ ಸೆಲ್ ನಿಂದ ಹೊರಗೆ ಬಂದು, ಕಾಲೇಜಿನ ಒಳ ಸೇರಿದರೆ ಹೊರಗೆ ಬರಲು ಬರೋಬ್ಬರಿ 4 ವರ್ಷ. ಹೆಚ್ಚು ಕಡಿಮೆಯಾದರೆ ಒಂದೆರಡು ವರ್ಷ ಜಾಸ್ತಿ ! ಅದೆಷ್ಟೇ ಚೆನ್ನಾಗಿದ್ದರೂ ಹಾಸ್ಟೆಲ್ ಊಟ ಚೆನ್ನಾಗಿಲ್ಲವೆಂದು (ಅಲ್ಲಿಯವರೆಗೂ ಅಮ್ಮ ರುಚಿ ರುಚಿಯಾಗಿ ಮಾಡಿ ಬಡಿಸಿದ್ದನ್ನ ತಿಂದ ದೇಹಕ್ಕೆ ಹೊರಗಿನ ಊಟಕ್ಕೆ ಹೊಂದಿಕೊಳ್ಳಲು ತುಸು ಸಮಯ ಬೇಕಲ್ಲ) ಬಯ್ಯುತ್ತಾ, ಮತ್ತೆರಡು ಚಪಾತಿಗಳನ್ನ ಜಾಸ್ತಿ ಹಾಕಿಸಿಕೊಂಡು ತಿಂದರೆ ಸಮಾಧಾನ.

ಒಂದು ವೇಳೆ ಹಾಸ್ಟೆಲ್ ಊಟ ಬೋರ್ ಅನಿಸಿದರೆ ಕಾಲೇಜ್ ಕ್ಯಾಂಪಸ್ ಆಚೆಗಿರುವ ಚಂದ್ರಣ್ಣನ ಡಾಬಾದಲ್ಲಿ ಫ್ರೆಂಡ್ಸ್ ಜೊತೆ ಸೇರಿ ಹಾಫ್ ಎಗ್ ಫ್ರೈಡ್ ರೈಸ್, ಬ್ರೆಡ್ ಆಮ್ಲೆಟ್ ಹೊಟ್ಟೆ ಒಳಗೆ ಹೋದರೆ ಮೃಷ್ಟಾನ್ನ ತಿಂದ ಖುಷಿ.

ಮೊದಲೆರಡು Cycle (Atlas ಅಥವಾ Ranger ಸೈಕಲ್ ಅಲ್ಲ. Physics & Chemistry) ಮುತುವರ್ಜಿಯಿಂದ ಓದಿದವನಿಗೆ (ಓಡಿಸಿದವನಿಗೆ) ಮುಂದೆ ಅದನ್ನೇ ಮೈಂಟೇನ್ ಮಾಡಿಕೊಂಡು ಹೋಗಲಾಗುವುದಿಲ್ಲ. ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಅನ್ನೋ ಹಾಗೆ, ಇಲ್ಲಿ ಸಹವಾಸ ದೋಷದಿಂದ ಬಹುತೇಕ ಮಂದಿ ಕೆಡದಿದ್ದರೂ ಸ್ವಲ್ಪ ಮಟ್ಟಿಗೆ ಎಕ್ಕುಟ್ಟಿ ಹೋಗಿರುತ್ತಾರೆ.

ಯಾಕೋ ಮಗಾ, ಇಂಟರ್ನಲ್ಸ್ ಬರೆಯಲ್ವೇನೋ? ಅಂತ ಫ್ರೆಂಡ್ ಕೇಳಿದ್ರೆ 'ಎಂಥ ಓದಿಲ್ಲ, ಇನ್ನೆಂಥ ಬರೆಯೋದು?, ಉಳಿದ ೨ ಇಂಟರ್ನಲ್ನಲ್ಲಿ ಆವ್ರೇಜ್ ತೆಗ್ದ್ರಾಯ್ತು ಬಿಡು ಮಗಾ'. ಕೇಳಿದ ಫ಼್ರೆಂಡಿಗೂ ಏನೋ ತಳಮಳ. 'ಸರಿ ಬಿಡೋ, ಹಾಗಿದ್ರೆ ನಾನೂ ಬರೆಯೋಲ್ಲ. Next time ಬರ್ದ್ರಾಯ್ತು' ಅಂತ ಅಂದು ಇಬ್ರೂ ಸಿಟಿಗೆ ಹೋಗಿ Theater ಕಡೆಗೆ ಹೆಜ್ಜೆ ಹಾಕಿ Cinema ನೋಡಿ ಸಂಜೆ ಹಾಸ್ಟೆಲ್ಗೆ ಬಂದ್ರೆ, ಇಂಟರ್ನಲ್ ಬರೆದು ೧೫ ಮಾರ್ಕ್ಸ್ ಬರದೆ ತಲೆ ಕೆಡಿಸಿಕೊಂಡವರನ್ನ ನೋಡಿ 'ನಮ್ಮಂಗೆ ಮಾಡಿದ್ರೆ ಈ ಸ್ತಿತಿ ಬರ್ತಿತ್ತಾ?' , ಬರೆದವನಿಗೆ ಎಲ್ಲಿಲ್ಲದ ಉರಿ.

ಸಂಕ್ರಾಂತಿಗೋ, ಗೌರಿ ಗಣೇಶ ಹಬ್ಬಕ್ಕೋ, ದೀಪಾವಳಿಗೋ, ಹೀಗೆ ಯಾವುದಾದರೂ ರಜೆ ಸಿಕ್ಕಾಗ ಅದೂ ಪುಣ್ಯಕ್ಕೆ ಇಂಟರ್ನಲ್ಸ್  ಇಲ್ದೇ ಇದ್ದಾಗ ಊರಿಗೆ ಯಾರಾದ್ರೂ ಹೋಗಿ ವಾಪಸ್ ಬಂದ್ರೆ ಅವನ ರೂಮಿಗೆ ನಾಯಿಗಳಂತೆ ನುಗ್ಗಿ ಇದ್ದ ಬದ್ದ ತಿಂಡಿಯನ್ನೆಲ್ಲಾ ತಿಂದು ಖಾಲಿ ಮಾಡಿ, ಸ್ವಲ್ಪ ಹೊತ್ತಿನ ತರುವಾಯ ಏನೂ ತಂದೇ ಇಲ್ಲವೇನೋ ಎನ್ನುವ ಸ್ತಿತಿ. ಪಾಪ ಊರಿಂದ ಬಂದವನು ಒಂದು ವಾರವಾದರೂ ಅಮ್ಮ ಮಾಡಿಕೊಟ್ಟ ಕುರುಕಲು ತಿನ್ನುವ ಆಸೆಯಿಟ್ಟುಕೊಂಡವನಿಗೆ ಖಾಲಿ ಬ್ಯಾಗ್, ಖಾಲಿ ಪ್ಲಾಸ್ಟಿಕ್ಕೇ ಗತಿ.

ಅಕಸ್ಮಾತ್ 2ನೇ  ಇಂಟರ್ನಲ್ನಲ್ಲಿ (ಅದು ಅವರಿಗೆ ಮೊದಲ ಇಂಟರ್ನಲ್) 15 ಬರ್ಲಿಲ್ಲ ಅಂದ್ರೆ, ಕೊನೆಯದರಲ್ಲಿ ಕಾಪಿ ಹೊಡೆದಾದ್ರೂ ಆವರೇಜ್ ತೆಗೆಯೋ ಅದಮ್ಯ ಉತ್ಸಾಹ (ಆಹಾ, ಅದಮ್ಯ ಉತ್ಸಾಹ?!, ಮಣ್ಣು, ಅನಿವಾರ್ಯ. ಇಲ್ಲದಿದ್ದರೆ ಸರ್/ಮೇಡಂ ಕೈಯೇ ಕಾಲಾಗುವ ಪರಿಸ್ತಿತಿ).

ಪ್ರತಿ ತಿಂಗಳೂ ಮೆಸ್ ಬಿಲ್ ನೋಡಿ 'ಅಯ್ಯೋ ಅಯ್ಯೋ ಇಷ್ಟು ಬಂದಿದೆಯಾ' ಅಂತ ಬೈಕೊಂಡು (ಊಟ ಚೆನ್ನಾಗಿಲ್ಲ ಅಂತ ಸರ್ಯಾಗಿ ತಿಂದು. ತಿಂದಿರೋ ರೇಂಜಿಗೆ ಅದರ ಡಬಲ್ ಬರ್ಬೇಕಿತ್ತು!) ಹಾಸ್ಟೆಲ್ ಗಬ್ಬೆಬ್ಬಿಸಿ, ಹೇಗೋ ಆವ್ರೇಜ್ ತಗೊಂಡು ೩ ತಿಂಗ್ಳು ಹೆಂಗ್ಹೆಂಗೋ ಕಾಲ ತಳ್ಳಿ, ರೂಮಿನಲ್ಲಿ ಅವಾಗಾವಾಗ ಕಾಣಿಸಿ ಕೊಳ್ಳುತ್ತಿದ್ದ ಪುಣ್ಯಾತ್ಮರು, ಎಕ್ಸಾಮ್ ಹಿಂದಿನ ದಿನ ಒಳ್ಳೆ Fevicol ಅಂಟಿಸಿಕೊಂಡಿದ್ದಾರೇನೋ ಅನ್ನುವ ಅನುಮಾನ, ರೂಮಿನಿಂದ ಹೊರಬರದದ್ದನ್ನ ನೋಡಿ.

ಎಕ್ಸಾಮ್ ಟೈಮಲ್ಲಿ ಹಾಸ್ಟೆಲಲ್ಲಿ ಒಂದು ರೀತಿಯ ಸ್ಮಶಾನ ಮೌನ. ಅಪ್ಪಿ ತಪ್ಪಿ ಯಾರಾದ್ರೂ ಬಂದು ಹೊರಗೆ ಹೋಗುವ ಬಾ ಎಂದು ಕರೆದರೆ 'ಇಲ್ಲ ಮಗಾ, ಏನೂ ಓದಿಲ್ಲ' ಅನ್ನುವ ಸಿದ್ಧ ಉತ್ತರ. ಬಾಕಿ ಸಮಯದಲ್ಲಿ ೧೦ ಗಂಟೆಗೆ ಮಲಗುತ್ತಿದ್ದ ಟ್ಯೂಬ್ಲೈಟ್ಗೆ ಎಕ್ಸಾಮ್ ಸಮಯದಲ್ಲಿ ನಿದ್ರೆಯಿಂದ ಮುಕ್ತಿ (ಅದಕ್ಕೆ ಇತ್ತ ರೂಮಿನ ಯಜಮಾನನ ಮೇಲೂ, KEBಗೂ ಶಾಪ ಹಾಕುವ ಕೆಲಸ !).

ಪಕ್ಕದಲ್ಲಿರುವ ಚಂದ್ರಣ್ಣನ ಡಾಬಾಗಂತೂ ಭಾರೀ ಡಿಮ್ಯಾಂಡ್. ರಾತ್ರಿ ನಿದ್ದೆ ಬರ್ಬಾರ್ದು ಅಂತ ಪ್ರತಿ ಒಂದೊಂದು ಗಂಟೆಗೆ ಅವನ ಡಾಬಾಕೆ ಎಂಟ್ರಿ. ಒಟ್ನಲ್ಲಿ Tea planters, ಕಾಲೇಜ್ ಸ್ಟೂಡೆಂಟ್ಸ್ಗೆಒಂದು Thanks ಹೇಳ್ಲೇಬೇಕು. ಜೊತೆಗೆ ಚಂದ್ರಣ್ಣಗೂ ಲಾಟರಿ ( ಹಾಕಿದ ಟೀ ಪುಡಿಯನ್ನ ಮತ್ತೆ ಮತ್ತೆ ಹಾಕಿ ಲಾಭ ಮಾಡ್ಕೊಳ್ಳೋಲ್ವೇ!).

ಅಂತೂ ಹೇಗೋ ಕಷ್ಟಪಟ್ಟು ಇಂಜಿನಿಯರಿಂಗ್ ಮುಗ್ಸಾಯ್ತು. ಅಲ್ಲಲ್ಲೇ ಮೂಲೆಯಲ್ಲಿ ಸಿಕ್ಕಿಕೊಂಡಿದ್ದ ಬ್ಯಾಕ್ಗಳನ್ನೂ (Back) ಹೇಗೋ Clear ಮಾಡಾಯ್ತು. ಮುಂದೇನಪ್ಪ? (ಇನ್ನೇನು, ಎಲ್ಲಾ ಗಂಟು ಮೂಟೆ ಕಟ್ಕೊಂಡು ರೈಟ್ ಹೇಳೋದು!). ಎಲ್ಲರೂ ಸಾಮಾನನ್ನ ಪ್ಯಾಕ್ ಮಾಡಿ, ಬೆಂಗಳೂರಲ್ಲಿ ಸಿಗೋಣ ಮಗಾ (Campus selection ಎಲ್ಲಿಂದ ಆಗ್ಬೇಕು ಕಂಪನಿಗಳು ಕಾಲೇಜಿಗೆ ಬರದೆ ಇದ್ರೆ?  ದೂರದೂರಿನಲ್ಲಿರುವ ಕಾಲೇಜಿಗೆ ಕಂಪನಿಗಳು ಬರುವುದು ದೂರದ ಮಾತೇ!) ಅಂತ ಹೇಳಿ ಊರಿಗೆ ಹೋಗಿ ಸ್ವಲ್ಪ ದಿನ ಅಲ್ಲೇ settle.

ಊರಲ್ಲಿ ಒಂದು 15 ದಿನ ಇದ್ದು ಅಪ್ಪನ ಬಳಿ ಸ್ವಲ್ಪ ಜಾಸ್ತಿ ದುಡ್ಡನ್ನು(Friends ಜೊತೆ ಇರೋದಕ್ಕೆ ಒಂದು ವ್ಯವಸ್ಥೆ ಮಾಡ್ಬೇಕು, ಕೆಲಸ ಹುಡುಕ್ಬೇಕು, ಅದೂ ಇದೂ ಅಂತ ಏನೇನೋ ಹೇಳಿದ್ರೆ, ಅವ್ರು ಪಾಪ ಮಗ ಇಷ್ಟೆಲ್ಲಾ ಓದಿದ್ದಾನೆ, ಬೆಂಗಳೂರಲ್ಲಿ ಬಾಡಿಗೆ ಮನೆ  ಮಾಡ್ಬೇಕು, ಕೆಲಸ ಹುಡ್ಕೋದಕ್ಕೆ, ಅಂತ ಕೇಳಿದ್ದಕ್ಕಿಂತ ಸ್ವಲ್ಪ ಜಾಸ್ತಿ ಕೊಟ್ಟು) ಕಿತ್ಕೊಂಡು, ಅಮ್ಮ ಮಾಡಿಕೊಟ್ಟ ತಿಂಡಿಯನ್ನ ಬ್ಯಾಗಲ್ಲಿ ಹಾಕಿಕೊಂಡು ಬೆಂಗಳೂರೆಂಬ ಮಹಾಸಾಗರದ ಕಡೆಗೆ ಪಯಣ ಸಾಗುತ್ತದೆ.

ಊರಿಂದ ಪೇಟೆಗೆ ಲೋಕಲ್ ಬಸ್ಸಲ್ಲಿ ಬಂದು, ಕರ್ನಾಟಕ ರಾಜ್ಯ ರಸ್ತೆಯ ಕೆಂಪು ಬಸ್ ಹತ್ತಿ (ಇನ್ನ ಕೆಲವರು, ಇಂಟರ್ಸಿಟಿ ಟ್ರೈನಲ್ಲೋ, ಪ್ಯಾಸೆಂಜರ್ ಟ್ರೈನಲ್ಲೋ, ರಾಣಿ ಚೆನ್ನಮ್ಮ Expressನಲ್ಲೋ) ನವರಂಗಲ್ಲೋ (ಇಳಿದ ತಕ್ಷಣ ಕಾಣುವುದೇ Theater, ಬಹುತೇಕ ನಮ್ ಹುಡುಗ್ರೆಲ್ಲಾ ಅದೇ ಏರಿಯಾದಲ್ಲೇ ಸೆಟ್ಲ್ ಆಗೋದ್ರಿಂದ ಅದೇ ಅವ್ರಿಗೆ ವಾರದ ಸಿನೆಮಾ ಅಡ್ಡಾ) , ಮೆಜೆಸ್ಟಿಕ್ ಬಸ್ಟ್ಯಾಂಡ್ನಲ್ಲೋ ಇಳಿದು ಪಿಳಿಪಿಳಿ ಕಣ್ಣು ಬಿಡುವ ಸಮಯ. ಒಂದು ಕ್ಷಣಕ್ಕೆ ದೇವ್ರೇ ಎಲ್ಲಿಗೆ ಬಂದ್ನಪ್ಪಾ ಎಂಬ ಗಾಬರಿ. ಪುಣ್ಯಕ್ಕೆ ಕಣ್ಣಿಗೆ ಪಕ್ಕದಲ್ಲೇ ತಗಲಿಹಾಕಿಕೊಂಡಿರುವ ಕಾಯಿನ್ ಬೂತ್ ಕಾಣಿಸುತ್ತದೆ.

ಒಂದು ರೂಪಾಯಿ ಕಾಯಿನ್ ಹಾಕಿ ದೊಡ್ದಪ್ಪಂಗೋ, ದೊಡ್ಡಮ್ಮಗೋ, ಅಕ್ಕಳಿಗೋ (ಅಕಸ್ಮಾತ್ ಯಾರಾದ್ರೂ ಮೊದ್ಲೇ ಬೆಂಗ್ಳೂರಲ್ಲಿ ಸೆಟ್ಲ್ ಆಗಿದ್ರೆ) ಫೋನ್ ಮಾಡಿ ಹೇಗೆ ಬರ್ಬೇಕು ಅಂತ ಕೇಳ್ಕಂಡು, ಅವ್ರು ಹೇಳಿದ BMTC bus ಹತ್ಕಂಡು ಅವರಿರುವ ಏರಿಯಾದಲ್ಲಿ ಇಳಿದು ಅಲ್ಲಿಂದ ಮತ್ತೆ 1 ರೂಪಾಯಿಯನ್ನ ಕಾಯಿನ್ ಬೂತ್ ಹುಂಡಿಗೆ ಹಾಕಿ ತಾನು ತಲುಪಿರುವುದು ಹೇಳಿದರೆ ಸ್ವಲ್ಪ ಹೊತ್ತಿನ ನಂತರ ಅವರು ಬಂದು ಮನೆಗೆ ಕರ್ಕೊಂಡು ಹೋದ್ರೆ ಸಮುದ್ರದಿಂದ ಎತ್ತಿ ದಡಕ್ಕೆ ಹಾಕಿದಂತೆ.

ಒಂದು ಕಡೆ ಕೆಲಸ ಹುಡುಕ್ಬೇಕು, ಅದಕ್ಕೂ ಮೊದಲು ನೆಟ್ಟಗೆ ಸೆಟ್ಲ್ ಆಗ್ಬೇಕು. ಏನಪ್ಪಾ ಮಾಡೋದು?. ಹಾಸ್ಟೆಲ್ಲಿಂದ ಊರಿಗೆ ಬರೋ ಕೊನೆ ದಿನ 3-4 friends ಸೇರಿ ಬೆಂಗ್ಳೂರಲ್ಲಿ ಹಾಸ್ಟೆಲ್ಲೋ, ಮನೆನೋ ಮಾಡೋದು ಅಂತ ಮಾತಾಡ್ಕೊಂಡು, ಬೆಂಗ್ಳೂರಿನ contact number share ಮಾಡ್ಕೊಂಡು, ಬೆಂಗ್ಳೂರಿಗೆ ಎಲ್ಲಾ ತಲುಪಿ ಆದ್ಮೇಲೆ ಒಂದ್ಕಡೆ ಸಿಗೋಣ ಅಂದವರು, ಒಂದು ಸಂಜೆ ನವರಂಗ್ ಬಳಿ ಭೇಟಿ ಆಗಿ ಮುಂದಿನ ಯೋಜನೆ ಬಗ್ಗೆ ಮಾತುಕತೆ ಸಾಗುತ್ತದೆ.

ಒಬ್ಬ ಹಾಸ್ಟೆಲ್ ಹುಡ್ಕೋಣ ಅಂದ್ರೆ ಇನ್ನೊಬ್ಬ ಮನೆ ಮಾಡೋಣ ಅಂತಾನೆ. ಮನೆ ಅಂದ್ರೆ ಸುಮ್ನೆ ರಗಳೆ, ಹಾಸ್ಟೆಲ್ ಬೆಸ್ಟ್ (ಹಿಂದಿನ ಅನುಭವ, ಆದರೆ ಬೆಂಗ್ಳೂರಲ್ಲಿ ಅದಕ್ಕಿಂತ ಒಳ್ಳೆ ಹಾಸ್ಟೆಲ್, ಅದಕ್ಕಿಂತ ಒಳ್ಳೆ ಊಟ ಎಲ್ಲಿ ಸಿಗ್ಬೇಕು ಹೇಳಿ) ಅಂದ್ಕೊಂಡು ಹುಡುಕುವ ಕಾರ್ಯಕ್ಕೆ ಗ್ಯಾಂಗ್ ಕೈ ಹಾಕುತ್ತೆ. ಒಂದೆರಡು ದಿನ ಹುಡುಕಿ ಹುಡುಕಿ ಸುಸ್ತಾಗಿ, ಹಾಸ್ಟೆಲ್ಲಿಗಿಂತ ಮನೆ ಮಾಡೋದೇ ವಾಸಿ ಅನ್ನುವ ತೀರ್ಮಾನಕ್ಕೆ ಬರುತ್ತಾರೆ. ಕಾರಣ, ಹಾಸ್ಟೆಲ್ ಫೀ (ಇನ್ನೂ ಕೆಲ್ಸನೇ ಸಿಕ್ಕಿಲ್ಲ, ಅಷ್ಟೊಂದು ದುಡ್ಡೆಲ್ಲಿಂದ ತರೋದು ಅನ್ನೋ ಅಭಿಪ್ರಾಯ ಎಲ್ಲರದ್ದೂ, ಆದ್ದರಿಂದ ಹಾಸ್ಟೆಲ್ ಸೇರೋ ಪ್ಲಾನ್ ಡ್ರಾಪ್).

ಸರಿ ಇನ್ನೇನ್ಮಾಡೋಕಾಗತ್ತೆ ಒಂದು ಮನೆ ಮಾಡಿದ್ರಾಯ್ತು ಅಂತ ಎಲ್ಲ ನಿರ್ಧರಿಸಿ, 4 ಜನಕ್ಕೆ Single bedroom house ಸಾಲಲ್ಲ, Double bedroom house ಮಾಡೋಣ ಅಂತ ಅಂದ್ಕೊಂಡು ಮನೆ ಹುಡುಕ್ಲಿಕ್ಕೆ ರೆಡಿಯಾಗ್ತಾರೆ. ಹೀಗೆ ಸುತ್ತಿದ್ರೆ ಮನೆ ಸಿಗೋದಿಲ್ಲವೆಂದು, ಸುಮ್ನೆ broker ಹತ್ರ ಹೋಗಿ ಎಂದು ಯಾರೋ ಹೇಳಿದ್ದನ್ನ ಕೇಳಿ ಅದೇ ಸರಿ ಅಂತ ಅವರ ಬಳಿ ಹೋದ್ರೆ, ಆತ ಒಂದು ತಿಂಗ್ಳು ಬಾಡಿಗೆ ದುಡ್ಡು ತನ್ನ ಚಾರ್ಜ್ ಅಂದಾಗ ಎಲ್ರಿಗೂ ಗಾಬರಿ. ಇದೊಳ್ಳೆ ಫಜೀತಿ ಆಯ್ತಲ್ಲಪ್ಪ ಅಂದ್ಕೊಂಡು ಬ್ರೋಕರಿಗೆ ಬೇಡ ನಾವೇ ಹುಡ್ಕೋತಿವಿ ಬಿಡಿ ಅಂದು ವಾಪಸ್ ತಮ್ಮ ಅಡ್ಡಾ (Navarang) ಬಳಿ ಬಂದು ಟೇ ಕುಡೀತಾ ಒಬ್ರ ಮುಖ ಒಬ್ರು ನೋಡ್ತಾ, ಟೀ ಕುಡಿದ್ಮೇಲೆ ನಾಳೆ ಸಿಗೋಣ, ಆಗ ಯೋಚನೆ ಮಾಡೋಣ.

ಮಗಾ Ad Mag, Free Ads Magazineನಲ್ಲಿ Ads ಇರ್ತಾವಂತೆ ಮನೆ ಬಾಡಿಗೆ ಇರೋದು. ತಂದು ಹುಡ್ಕೋಣ ಅಂದು ಅದನ್ನ ಕೊಂಡು, ಹುಡುಕ್ತಾ ಹೋದ್ರೆ ಡಬಲ್ ಬೆಡ್ರೂಮ್ ಮನೆ ರೇಟ್ ಜಾಸ್ತಿ ಹಾಗಾಗಿ ಸಿಂಗಲ್ ಬೆಡ್ರೂಮ್ ಬೆಸ್ಟ್ ಅಂತ decide ಮಾಡಿ, tick ಮಾಡಿರೋ ಮನೆ ನೋಡೋಕೆ ಹೋದ್ರೆ ಒಂದೂ ಹಿಡಿಸ್ಲಿಲ್ಲ. ಮುಂದೇನಪ್ಪ? ಬ್ರೋಕರ್ರೇ ದೇವ್ರು !

ಅಂತೂ ಹೇಗೋ ಸಿಂಗಲ್ ಬೆಡ್ರೂಮ್ ಹುಡ್ಕಿದ್ದಾಯ್ತು (ಬ್ರೋಕರ್ರಿಗೆ ನೋಡಿ ಸಾರ್, ಸ್ಟೂಡೆಂಟ್ಸ್ ನಾವು, ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಅಂತ ಎಷ್ಟೋ ಅಡ್ಜಸ್ಟ್ ಮಾಡ್ಸಿ, ಸ್ವಲ್ಪ ಉಳ್ಸಿ). ಊರಲ್ಲಿ, ಹಾಸ್ಟೆಲ್ಲಿನ ವಿಶಾಲ ರೂಮಲ್ಲಿ ಇದ್ದವರಿಗೆ ಸಿಂಗಲ್ ಬೆಡ್ರೂಮ್ ತುಂಬಾ ಸಣ್ಣದೇ ಆದ್ರೆ ಏನೂ ಮಾಡೋ ಹಾಗಿಲ್ಲ, ಅನಿವಾರ್ಯ, adjust ಮಾಡ್ಕೊಂಡು ಹೋಗ್ಬೇಕು. hall ಸ್ವಲ್ಪ ವಿಶಾಲವಾಗಿ ಇರೋದ್ರಿಂದ ಎಲ್ರೂ ಹಾಲಲ್ಲೇ ನಿದ್ರೆ!, ಒಂದು ಬೆಡ್ರೂಮ್ luggage room ಆಗಿ convert ಆಗಿತ್ತು.

ಮಲಗಿ ಸ್ವಲ್ಪ ಹೊತ್ತು ಆಗಿರಲ್ಲ ಅಷ್ಟೊತ್ತಿಗೆ ಪಕ್ಕದಿಂದ ಗೊರಕೆ ಸದ್ದು, ಅವ್ನಿಗೆ ತಿವಿದೋ, ಅಲ್ಲಾಡ್ಸೋ, ಲೇಯ್ ಅಂತ ಜೋರು ಮಾಡಿದ್ರೆ ಗೊರಕೆ stop. ಎಲ್ಲಿಯ stop ?! ಮತ್ತೆ 10 ನಿಮ್ಶಕ್ಕೆ ಶುರು. ಹೋಗ್ತಾ ಹೋಗ್ತಾ ಅನಿವಾರ್ಯವಾಗಿ ಅಡ್ಜಸ್ಟ್ ಆಗ್ಲೇಬೇಕು.

ಬೆಳಗ್ಗೆ ಬೇಗ ಎದ್ದೋನೇ ಜಾಣ, ಇಲ್ಲಾಂದ್ರೆ ಬಾತ್ರೂಮಿಗೆ ಕ್ಯೂ (ಇದನ್ನ ಜಾಸ್ತಿ ಬಿಡಿಸಿ ಹೇಳ್ಬೇಕಾಗಿಲ್ಲ ಅಂದ್ಕೋತೀನಿ !). ಒಳಗೆ ಹೋದವನು ಎಲ್ಲಾದ್ರೂ ಬೇಗ ಬರದೇ ಇದ್ರೆ?! ಹೋಗ್ಲಿ ಬಿಡಿ ಆ ಕಷ್ಟ ಒಳಗೆ ಹೋದೋನಿಗೆ, ಹೊರಗೆ ಕಾಯ್ತಾ ಇರೋನಿಗೆ ಇರ್ಲಿ!

Single bedrromಗೆ ಎರಡು ಟಾಯ್ಲೆಟ್ ಇರ್ಬೇಕು, ಇಲ್ಲಾಂದ್ರೆ ಹುಡುಗ್ರ ಕಷ್ಟ ಯಾರಿಗೆ ಹೇಳೋದು !

ಮನೆ ಮಾಡಿದ್ದಾಯ್ತು. ನೆಕ್ಸ್ಟ್? ಕೆಲಸ. ಮಹಾಸಾಗರದಲ್ಲೊಂದು ಕೆಲಸ ಹುಡುಕ್ಬೇಕು! Resume printout ತಗೊಂಡು, ೮-೧೦ copy xerox ಮಾಡ್ಕೊಂಡು, ಪಕ್ಕದ ದರ್ಶಿನಿಯಲ್ಲಿ ತಿಂಡಿ ತಿಂದ್ಕೊಂಡು, BMTC bus ಹತ್ತಿ daily pass ತಗೊಂಡು ಬಿಟ್ರೆ ಅವತ್ತಿನ ಅರ್ಧ ಕೆಲಸ ಆದಂತೆ. ಒಂದು ದಿವಸ ಕೋರಮಂಗಲದಲ್ಲಿರೋ ಎಲ್ಲಾ ಕಂಪನಿಗಳ ಬಳಿ ಹೋಗಿ Resume drop ಮಾಡಿ ಬಂದ್ರೆ, next day ಮಾರತ್ ಹಳ್ಳಿ, ಇನ್ನೊಂದಿನ ವೈಟ್ ಫೀಲ್ಡ್. ಎಲ್ಲಾ ಕಡೆ drop ಮಾಡಿ ಬಂದಾಯ್ತು.

ಯಾರಿಗೂ call ಬರಲೇ ಇಲ್ಲ. ಏನಪ್ಪಾ ಮಾಡೋದು? ಸಿಕ್ಕ ಸಿಕ್ಕ ಕನ್ಸಲ್ಟೆನ್ಸಿಗಳಿಗೆ, ಕಂಪನಿಗಳಿಗೆ ಮೈಲ್ ಮಾಡೋದು ಕಣ್ರೋ, ಎಲ್ಲಾದ್ರೂ ಲಾಟ್ರಿ ಹೊಡೀಬಹುದು ಅಂತ ಅದನ್ನೂ ಮಾಡಿದ್ದಾಯ್ತು. ಆದ್ರೂ ಇಲ್ಲ. ಛೆ, ಬಂದು ೨ ತಿಂಗ್ಲಾಯ್ತು, ಒಂದು interview ಸಹ attend ಆಗಿಲ್ಲ್ವಲ್ಲಪ್ಪ ಅಂತ ಯೋಚ್ನೆ. ಓದು ಮುಗಿದು, ಇಲ್ಲಿ ಬಂದು ಮನೆ ಮಾಡೋವರೆಗೂ ಅಪ್ಪನ ಕೈಲಿ  ದುಡ್ಡು ಇಸ್ಕೊಂಡಾಯ್ತು, ಇನ್ನೂ ಇಸ್ಕೋಳ್ಳೋದು ಅಂದ್ರೆ?. ಎಲ್ರದ್ದೂ ಇದೇ ಕಥೆ.

ಒಬ್ರಿಗೆ Education loan ತೀರಿಸೋ ಚಿಂತೆ, ಇನ್ನೊಬ್ಬಂಗೆ ಅಕ್ಕನ ಮದ್ವೆ ಮಾಡೋ ಚಿಂತೆ, ಮತ್ತೊಬ್ಬಂಗೆ ಮನೆ ಸಾಲ ತೀರಿಸೋ ಚಿಂತೆ. ಹೀಗೆ ಸಮಸ್ಯೆಗಳ ಸಾಲು. ಎಲ್ರಿಗೂ ಕೆಲ್ಸ ಸಿಗ್ಬೇಕು.

ಒಬ್ನಿಗೆ ಹೇಗೋ, ಯಾರ್ದೋ ರೆಫರೆನ್ಸಿಂದ ಒಂದು ಕಂಪನಿ interview ಸಿಕ್ತು. clear ಆಯ್ತು, ಕೆಲಸ ಸಿಕ್ತು, ಇನ್ನೊಬ್ಬಂಗೆ ಕನ್ಸಲ್ಟೆನ್ಸಿ ಮುಖಾಂತರ ಕೆಲಸ ಆಯ್ತು. ಹೀಗೆ ಒಬ್ಬೊಬ್ರಿಗೆ ಕೆಲ್ಸ ಸಿಗ್ತಾ ಹೋಯ್ತು. ಕೆಲಸ ಸಿಕ್ಕ ವಿಷಯ ಕೇಳಿ ಊರಲ್ಲಿರೋ ಅಪ್ಪ ಅಮ್ಮನಿಗೆ ನಿಟ್ಟುಸಿರು.

ಒಂದು ತಿಂಗ್ಳಾಯ್ತು, ಸಂಬಳ ಬಂತು. ಮೊದಲ ಸಂಬಳ. ಮನೆಗೆ ಕಳ್ಸ್ತೀನಿ ಅಂದ್ರೆ, ಬೇಡ ಮಗಾ ನೀನೇ ಇಟ್ಕೋ ಖರ್ಚಿಗೆ ಬೇಕಾಗತ್ತೆ ಅಂತ ಅಪ್ಪ. ಮೊದಲ ಸಂಬಳ!! Mobile ತಗೋಬೇಕು, Friendsಗೆ party ಕೊಡುಸ್ಬೇಕು, ಹೊಸ bike ತಗೋಬೇಕು,  ಹೊಸ ಬಟ್ಟೆ ತಗೋಬೇಕು ! ಆದ್ರೆ ಬರೋ ಸಣ್ಣ ಸಂಬಳದಲ್ಲಿ ಆಗೋದೊಂದೇ, ಮೊಬೈಲ್ ತಗೊಳ್ಳೋದು. ಫ್ರೆಂಡ್ಸ್ ಪಾರ್ಟಿ ಕೇಳಿದ್ರೆ? ನನ್ಮಕ್ಲಾ, ನೀವು ಕೆಲ್ಸ ಸಿಕ್ಕ ತಕ್ಷಣ ಪಾರ್ಟಿ ಕೊಟ್ರೇನ್ರೋ? ತಡ್ಕಳಿ, ಮುಂದಿನ ತಿಂಗ್ಳು ಕೊಡ್ಸ್ತೀನಿ!

ಎಲ್ಲರಿಗೂ ಒಳ್ಳೆ ಸಂಪಾದನೆ, ಈಗ ಸಿಂಗಲ್ ಬೆಡ್ರೂಮ್ ಇನ್ನೂ ಚಿಕ್ಕದೆನಿಸುತ್ತಿತ್ತು. ಬರೀ ಗ್ಯಾಸ್ ಇದ್ದ ಮನೆಗೆ, Fridge, TV, Washing machine ಬಂತು. ಮನೆ ಸಾಲ್ತಿಲ್ಲ, ಚೇಂಜ್ ಮಾಡ್ಬೇಕು. ಡಬಲ್ ಬೆಡ್ರೂಮ್ ಮನೆಗೆ ಶಿಫ್ಟ್ ಆಯ್ತು ಗ್ಯಾಂಗ್. ಕೆಲ್ಸ ಸಿಗೋ ಮುಂಚೆ ಎಲ್ರೂ ಒಟ್ಟಿಗೆ ತಿಂಡಿ, ಊಟ ಮಾಡ್ತಿದ್ರು. ಈಗ ಒಟ್ಟಿಗೆ ತಿಂದದ್ದೇ ಕಡಿಮೆ. ವೀಕೆಂಡ್ನಲ್ಲಿ ಎಲ್ರೂ hotel ಹೋಗಿ, ಹರಟೆ ಹೊಡೆದು, ತಿಂದು ಬಂದದ್ದೇ ಸಮಾಧಾನ.

ತಿಂಗಳುಗಳು ಉರುಳ್ತಾ ಹೋಯ್ತು, ಆಫೀಸ್, ಮನೆ ಇಷ್ಟೇ! ಛೆ. ನಡೀರ್ರೋ, ಎಲ್ಲಾದ್ರೂ trip ಹೋಗೋಣ ಈ weekend? ಎಲ್ರಿಗೂ ಅದೇ ಬೇಕಾಗಿತ್ತು. ಟ್ರೆಕಿಂಗ್ ಹೋಗೋಣ, ಚೆನ್ನಾಗಿರತ್ತೆ. ಶುರುವಾಯ್ತು ಟ್ರೆಕಿಂಗ್. ಒಬ್ಬ ಫ್ರೆಂಡ್ ತಂದ camera, ಟೆಂಟ್ ಎಲ್ಲಾ ವ್ಯವಸ್ಥೆಯಾಯ್ತು. ಟ್ರೆಕಿಂಗ್ ಹೋಗ್ಬಂದಾಯ್ತು. Photos ನೋಡಿ ಎಲ್ರೂ ಫಿದಾ. ಎಲ್ಲರ ಮನ್ಸಲ್ಲೂ ಒಳ್ಳೆ ಕ್ಯಾಮೆರಾ ತಗೋಬೇಕು ಅನ್ನೋ ಬಯಕೆ. ನೆಟ್ಟಲ್ಲಿ ನೋಡಿ, ಅಮೆರಿಕಾಗೆ ಹೋದ ಒಬ್ಬ ಫ್ರೆಂಡಿಗೆ christmas ಟೈಮಲ್ಲಿ ಆಫ಼ರ್ ನೋಡಿ ತರ್ಸಿದ್ದಾಯ್ತು.

ಶುರುವಾಯ್ತು ನೋಡಿ, ಟ್ರೆಕಿಂಗ್ ಮೇಲೆ ಟ್ರೆಕಿಂಗ್. ತಿಂಗಳಿಗೊಂದೊಂದು. ಈ ತಿಂಗ್ಳು ಯಾವ ಸ್ಪಾಟ್, ಮುಂದಿನ ತಿಂಗ್ಳು ಯಾವ್ದು? ಎಷ್ಟು ಜನ ಬರ್ತಾರೆ? ಎಲ್ಲಿ permission ತಗೋಬೇಕು, ಯಾರ್ಯಾರು snacks ತರ್ತಾರೆ? ಏನ್ರಲ್ಲಿ ಹೋಗೋದು? ಎಲ್ಲಿ ಉಳಿಯೋದು?. trip, party, film. ಊರಿಗೆ ಆಗಾಗ ಹೋಗಿಬರೋದು.

ಎಲ್ಲಾ ಫ್ರೆಂಡ್ಸ್ ಬೈಕ್ ತಗೊಂಡಾಯ್ತು. ವೀಕೆಂಡ್ ಬಂದ್ರೆ ನಡೀರೋ ಹೋಗೋಣ ಅಂತ ಹೊರಟಾಯ್ತು. ಕೆಲವೊಮ್ಮೆ short trip ಇನ್ನ ಕೆಲವೊಮ್ಮೆ long trip. ಹೀಗೆ ಕಾಲ ಸಾಗ್ತಾ ಇತ್ತು.

ಈ ನಡುವೆ ಒಂದಷ್ಟು ಫ್ರೆಂಡ್ಸ್ ಹೊರಗೆ (ಅಮೇರಿಕ, ಇಂಗ್ಲೆಂಡ್) ಹೋಗಿ ಅಲ್ಲೇ ಸೆಟ್ಲ್ ಆದ್ರು. Time ಓಡ್ತಾ ಇತ್ತು. ಒಬ್ಬೊಬ್ರದ್ದು ಮದುವೆ ಆಗ್ತಾ ಬಂತು, ಕೆಲವರದ್ದು Love marriage (ಸ್ವಲ್ಪ easy, ಮನೆಯವರ ವಿರೋಧ ಇಲ್ದಿದ್ರೆ!), ಇನ್ನ ಕೆಲವರದ್ದು arranged marriage (ಆ ಜಾತಕ, ಈ ಜಾತಕ, ಅದು match ಆಗ್ತಿಲ್ಲ, ಇದು match ಆಗ್ತಿಲ್ಲ, ಹುಡುಗ ಇಷ್ಟ ಇಲ್ಲ, ಹುಡುಗಿ ಇಷ್ಟ ಇಲ್ಲ, ಕೊನೆಗೊಮ್ಮೆ ಎಲ್ಲಾ match ಆಗಿ settle).

4 ಜನ ಇದ್ದ ಡಬಲ್ ಬೆಡ್ರೂಮ್ ಮನೆ ಈಗ ಖಾಲಿ ಖಾಲಿ. ಹೊಸ ಹುಡುಗರು ಬರುವ ತನಕ !

Sunday, November 17, 2013

ಬ್ಯಾ-ಸಾಯ - > ಕೆಲವೇ ಗಂಟೆಗಳ ಕಥೆ


ಭತ್ತ ಹಾಕೋಕೆ ಸರಿಯಾಗತ್ತೆ. ಕೆಂಪ ಮತ್ತೆ ಬಸವ ಎರಡೂ ಕಾಡು ಹತ್ತದೆ ಹಟ್ಟಿಯಲ್ಲೇ ಬಿದ್ಕಂಡಿವೆ ಆದ್ರೆ ಇವ್ನೇ ಪತ್ತೆ ಎಲ್ಲಿ ಹಾಳಾಗಿ ಹೋದಾ ಇವ್ನು, ನೆನ್ನೆ ಚೆನ್ನಾಗಿ ಮಳೆ ಬಂದಿದೆ , ಇವತ್ತೊಂದು ಸಾಲು ಹೂಡಿಬಿಟ್ರೆ ನಾಟಿ ಮಾಡಿ ಬಿಡಬಹುದಿತ್ತು ಅಂಥಾ ಗೌಡ್ರು ಚಾವಡಿಯ ಬಳಿ ಶತಪಥ ತಿರುಗ್ತಿದ್ರು. ಲೇ ಒಂದ್ಲೋಟ ಕಾಪಿ ತಾರೇ ಅಂಥಾ ಅಲ್ಲಿಂದ್ಲೇ ಕೂಗಿ ಹೇಳಿದ್ರು ಅವರ ಹೆಂಡತಿಗೆ.

ಆ ಜಿಟಿಜಿಟಿ ಮಳೆಯಲ್ಲೇ ಕೊಟ್ಟಿಗೆಯಿಂದ ಸೌದೆ ತಂದು ಹೊರಗಡೆ ಇದ್ದ ನೀರಿನ ಒಲೆಗೆ ಬೆಂಕಿ ಹಾಕಲು ಕೊಳಪೆ ಹಿಡಿದುಕೊಂಡು ಒಂದೇ ಸಮನೆ ಉಸಿರುಬಿಡುತ್ತಿದ್ದ ಲಕ್ಷ್ಮಿಗೆ ತನ್ನ ಗಂಡನ ಕೂಗು ಕೇಳಿಸಿ ಅಲ್ಲಿಂದ ಅಡಿಗೆ ಮನೆಗೆ ಹೆಜ್ಜೆ ಹಾಕುವಾಗ ಅಲ್ಲೇ ಒಲೆಯ ಬಳಿ ಬೂದಿಯ ಮೇಲೆ ಮಲಗಿ ಸುಖ ನಿದ್ರೆ ಅನುಭವಿಸುತ್ತಿದ್ದ ಕರಿಯನ ಬಾಲದ ಮೇಲೆ ಅವಳ ಕಾಲು ಅವಳಿಗರಿವಿಲ್ಲದಂತೆ ಸೋಕಿದಾಗ ಕಯ್ಯಯೋ ಅಂದು ಎದ್ದು ಕುಳಿತು ತನ್ನ ಒಡತಿಯಾದ್ದರಿಂದ ಹಾಗೆ ಸುಮ್ಮನೆ ಬಾಲವನ್ನು ಮುದುಡಿಕೊಂಡು ಮತ್ತೆ ಬೂದಿಯ ಮೇಲೆ ಮೈ ಚಾಚಿತು.

ಹಿಂದಿನ ಒಲೆಯಲ್ಲಿ ಇಟ್ಟಿದ್ದ ಕಾಪಿ ಪಾತ್ರೆಯನ್ನ ಮುಂದಿನ ಒಲೆಗಿರಿಸಿ ಕಾದ ಬಳಿಕ ಲೋಟಕ್ಕೆ ಸುರಿದುಕೊಂಡು ಚಾವಡಿಯ ಬಳಿ ಹೋದಳು. ಕಾಪಿಯನ್ನ ಗಂಡನ ಕೈಗಿರಿಸಿ ಹಿಂದಿರುವಾಗ ಗೌಡ್ರು, ಎಲ್ಲಿ ಸತ್ನೇ ಇವ್ನು? ನೆನ್ನೆ ಸರ್ಯಾಗಿ ಹೇಳಿದ್ಯಾ ಇಲ್ವಾ?. ಹೇಳಿದ್ದೆ, ಬರ್ತೀನಿ ಅಂದಿದ್ದ. ಎಂಥ ಬರೋದು, ೯:೩೦ ಆಗ್ತಾ ಬಂತು, ಇಷ್ಟೊತ್ತಿಗೆ ಬೇಸಾಯ ಮಾಡಿ ಎತ್ಗಳ್ನ ಮೇಯಕ್ಕೆ ಬಿಡಬೇಕಾಗಿತ್ತು. ಮನೆಹಾಳು ಮಾಡೋಕೆ ಇರೋದು ಇವು ಅಂಥಾ ಕಾಪಿಯನ್ನ ಕುಡೀತಾ ಕೂತ್ರು.

ಬರ್ಲಿ ನನ್ಮಗಾ ಈ ವಾರ ಬಟ್ವಾಡೆ ಕೊಡದೆ ಎಲ್ಲದನ್ನೂ ಮುರ್ಕಂಡ್ರೆ ಬಡ್ಡಿಮಗಂಗೆ ಆಗ ಬುದ್ದಿ ಬರತ್ತೆ, ಕೇಳ್ದಾಗೆಲ್ಲಾ ಸಾಲ ಕೊಟ್ಟು ಕೊಟ್ಟು ಈಗ ಕೊಬ್ಬಿ ಕೂತಿದ್ದಾರೆ, ಸೊಸೈಟಿ ಅಕ್ಕಿ ಬೇರೆ ಚೆನ್ನಾಗಿ ಸಿಕ್ಬಿಟ್ಟಿದೆ, ಈ ಸರ್ಕಾರ್ದವ್ರಿಗೆ ಮೆಟ್ನಲ್ಲಿ ಹೊಡೀಬೇಕು. ಗೌಡನ ಮನೆ ಹಾಳಾದ್ರೆ ಹಾಳಾಗ್ಲಿ ನಂಗೇನು ಅಂಥಾ ಸುಖವಾಗಿ ತಿಂದು ತಿರುಗ್ತಾವ್ರೆ. ಕಾಪಿ ಕುಡಿಯುತ್ತಿದ್ದ ಗೌಡರ ಮನದಲ್ಲಿ ಅಸಂಖ್ಯ ಪ್ರಶ್ನೆಗಳು, ಬೈಗುಳಗಳು ಹಾದುಹೋಗುತ್ತಿದ್ದವು.

ಅಮ್ಮೋರೆ? ಕೊಳಪೆ ಊದುತ್ತಿದ್ದ ಲಕ್ಷ್ಮಿ ಮಂಜನ ಸ್ವರ ಕೇಳಿ ಹಿಂದಕ್ಕೆ ತಿರುಗಿದಳು. ಎಂಥದ ಮಾರಾಯಾ ನೀನು? ಅಲ್ನೋಡಿದ್ರೆ ಗೌಡ್ರು ಕ್ಯಾಕರಿಸಿ ಉಗೀತಿದ್ದಾರೆ ನೀನು ಬಂದಿಲ್ಲ ಅಂಥಾ ಇಲ್ಲಿ ನೋಡಿದ್ರೆ ಹಿಂದ್ಗಡೆ ಬಂದಿದೀಯಾ. ಗೌಡ್ರೆನಾದ್ರೂ ನಿನ್ನನ್ ನೋಡಿದ್ರೆ ಕೊಲೆ ಮಾಡ್ತಾರೆ! ಯಾವ ಭಾವವನ್ನೂ ಪ್ರದರ್ಶಿಸದೆ ಹೇಳಿದಳು ಲಕ್ಷ್ಮಿ. ಹಲ್ಕಿರಿದು ನಿಂತಿದ್ದ ಮಂಜ (ಗೌಡ್ರು ಹಿಂದ್ಗಡೆ ಬರೋದು ಕಡಿಮೆ ಹಾಗಾಗಿ ಸಿಕ್ಕಿಕೊಳ್ಳುವ ಸಂಭವವೂ ಕಡಿಮೆಯೆಂದು ತಿಳಿದಿದ್ದ ಮಂಜ ತನ್ನ ೩೨ ಹಲ್ಲುಗಳನ್ನು ಪ್ರದರ್ಶಿಸಿದ್ದ).

ಅಮ್ಮೋರೆ ಗೌಡ್ರು ಬಯ್ತಿದ್ದಿದ್ದು ದೂರ್ದಿಂದಾನೆ ಕೇಳುಸ್ತು ಅದ್ಕೆ ತೋಟದಲ್ಲಿ ನುಗ್ಗಿ ಹಿಂಗ್ಬಂದೆ ಅಂದ. ಒಂದ್ಲೋಟ ಕಾಪಿ ಕೊಡಿ ಕುಡ್ಕೊಂಡು ಬೇಸಾಯಕ್ಕೆ ಹೋಗ್ತೀನಿ ಅಂದು ಅಡಿಗೆ ಮನೆಯ ಕಿಟಕಿಯ ಹಿಂದೆ ಸಿಕ್ಕಿಸಿದ್ದ ತೆಂಗಿನ ಚಿಪ್ಪನ್ನು ತೆಕ್ಕೊಂಡು ಅಲ್ಲೇ ಕೂತ್ಕೊಂಡ. ಆಹಾಹ್ಹ ಯಜ್ಮಾನ ಚಿಪ್ಪು ಹಿಡ್ಕಂಡು ಕೂತ್ಕಂಡ, ನೀನು ಇಲ್ಲಿದೀಯಾ ಅಂಥಾ ಗೊತ್ತಾದ್ರೆ ಇಬ್ರುನ್ನು ನೇಣಿಘಾಕ್ತಾರೆ, ನೀನು ಬಂದಿರೋದನ್ನ ನಾನು ಹೇಳಿಲ್ಲ ಅಂಥಾ. ಬಾ ಇಲ್ಲಿ ಒಲೆಗೆ ಬೆಂಕಿ ಹಾಕು ಅಷ್ಟೊತ್ತಿಗೆ ಕಾಪಿ ಕೊಡ್ತೀನಿ ಅಂದು ಮನೆಯೊಳಕ್ಕೆ ಹೋದ್ಲು.

ಏನೋ ಕರಿಯಾ, ಗಡದ್ದಾಗಿ ನಿದ್ದೆ ಮಾಡ್ತಿದೀಯಾ? ನಿಂದೇ ಪುಣ್ಯ ನೋಡು. ಬೆಚ್ಚಗೆ ನಿದ್ರೆ, ತಿನ್ನಾಕೆ ಮೀನು ಮಾಂಸ ಮೂಳೆ! ಕರಿಯನಿಗೆ ಅರ್ಥವಾಯಿತೋ ಇಲ್ವೋ ಆದ್ರೆ ಮಂಜನನ್ನ ನೆಕ್ತಾ ಕೂರ್ತು. ಹಚಾ ಆಚೆ ಹೋಗು ಅಂಥಾ ಜೋರು ಮಾಡಿ ಕೊಳಪೆಯಿಂದ ಉರುವಲು ಶುರುಮಾಡಿದ.ಲಕ್ಷ್ಮಿ ಕಾಫಿಯನ್ನ ತಂದಳು. ಮಂಜ ಬೆಂಕಿ ಹೊತ್ತಿಸಿ ಮೈ ಕಾಯಿಸುತ್ತಾ ಕುಳಿತಿದ್ದ. ಕಾಫಿ ಕಂಡ ತಕ್ಷಣ ಮೇಲೆ ಇಟ್ಟಿದ್ದ ತೆಂಗಿನ ಚಿಪ್ಪನ್ನು ತೆಗೆದು ಅಮ್ಮೋರ ಮುಂದೆ ತನ್ನ ಕೈಯನ್ನು ಒಡ್ಡಿದ.

ಅಮ್ಮೋರೆ ನಾನು ದನ ಬಿಟ್ಟಾದ್ಮೇಲೆ ಆ ಮೆಟ್ಲ್ಹತ್ರ ಸ್ವಲ್ಪ ನಿಂತ್ಕಳಿ. ಇಲ್ಲಾಂದ್ರೆ ಮಾಮೂಲಂತೆ ಕಾಡಿನ ಕಡೆಗೆ ಓಡ್ತಾವೆ ಅಂದು ಕಾಪಿಯನ್ನ ಸೊರ ಸೊರ ಅಂಥಾ ಹೀರಿ ಚಿಪ್ಪನ್ನು ತೊಳೆದು ಮೇಲಿಟ್ಟು, ಒಲೆಯಿಂದ ಉರಿಯುತ್ತಿರುವ ಒಂದು ಕಟ್ಟಿಗೆಯನ್ನ ತೆಗೆದುಕೊಂಡು ಬೀಡಿಯನ್ನು ಹತ್ತಿಸಿ ಸೇದುತ್ತಾ ಹಟ್ಟಿಯ ಕಡೆ ಮೆಲ್ಲನೆ ಹೆಜ್ಜೆ ಹಾಕಿದನು.

ಏಯ್ ಮಂಜ ಎಲ್ಲಿ ಸಾಯೋಕೆ ಹೋಗಿದ್ಯೋ? ಇಲ್ಲೆಲ್ಲಿ ತೋಟದ ಒಳಗಿಂದ ಬರ್ತಿದೀಯಾ? ಹೊಟ್ಟೆಗೆ ಅನ್ನ ತಿನ್ತೀರೋ ...ತಿನ್ತೀರೋ? ಸಾಲ ಬೇಕು ಬೇಕೆಂದಾಗ ಕೊಟ್ಟು ಸಾಯ್ತೀವಿ ಆದ್ರೆ ಕೆಲ್ಸಕ್ಕೆ ಬೇಕೆಂದಾಗ ಊರೂರು ತಿರುಗ್ತೀರಾ? ಗೌಡನ ಮನೆ ಕಡೆ ಕಣ್ಣೆತ್ತಿ ಸಹ ನೋಡಲ್ಲ. ನಿಮ್ಮಂಥರನ್ನ ಕಟ್ಕಂಡು ಸಾಯಕಿಂತ ಗದ್ದೆ ಮಾರೋದೇ ವಾಸಿ.

ಅನೀರೀಕ್ಷಿತವಾಗಿ ಗೌಡ್ರು ಎದುರಿಗೆ ಕಂಡ ತಕ್ಷಣ ಮಂಜ ನಡುಗಹತ್ತಿದ ಆದರೂ ಸಾವರಿಸಿಕೊಂಡು ಕೈಲಿದ್ದ ಬೀಡಿಯನ್ನೆಸೆದು 'ಗೌಡ್ರೆ ಮನೆ ಕಡೆನೇ ಬರ್ತಿದ್ದೆ ಆದ್ರೆ ಆ ನಂಜ ಬರೋವಾಗ ಮಧ್ಯೆ ಸಿಕ್ಕಿ ನಿಮ್ಗೌಡ್ರ ಗದ್ದೆಲಿ ಹುಗುಳು ಬಿದ್ದು ನೀರೆಲ್ಲಾ ಖಾಲಿಯಾಗಿದೆ ಅಂದ, ಅದ್ಕೆ ಹೋಗಿ ಹುಗುಳು ಕಟ್ಟಿ ನೀರು ಬಿಟ್ಟು ಬರೋಹೊತ್ತಿಗೆ ಇಷ್ತೊತ್ತಾಯ್ತು' ಅಂಥಾ ಸುಳ್ಳನ್ನ ಬಹಳ ಚೆನ್ನಾಗಿಯೇ ಹೇಳಿದ. ಗೌಡ್ರು 'ಸರಿ ಸರಿ ಬೇಗ ಹೋಗಿ ಬೇಸಾಯ ಕಟ್ಟು ಮತ್ತೆ, ಹಿಂಗೆ ನಿಧಾನ ಮಾಡ್ತಾ ಹೋದ್ರೆ ಎಲ್ರೂ ಗದ್ದೆ ಕುಯ್ಲು ಶುರು ಮಾಡ್ತಾರೆ ನಾವು ನಾಟಿ ಮಾಡ್ತಿರ್ತೀವಿ'. ಮಂಜ ಬಚಾವಾದೆ ಅಂದ್ಕೊಂಡು ಹಟ್ಟಿಯ ಬಳಿ ಹೋದ.

ಹಟ್ಟಿಯಿಂದ ಮುಂದೆ ಹೋಗಿ ಬಲಕ್ಕೆ ತಿರುಗಿದರೆ ಗೌಡರ ಮನೆಗೆ ಹತ್ತಲು ಮೆಟ್ಟಿಲುಗಳ ಸಾಲು, ಅದೇ ಹಾದಿಯಲ್ಲಿ ಸಾಗಿದರೆ ದಟ್ಟವಾದ ಕಾಡು. ಎಡಕ್ಕೆ ಹೋದರೆ ೭ ರಿಂದ ೮ ಮನೆಗಳು ನಂತರ ಗದ್ದೆಗೆ ಸಾಗುವ ಹಾದಿ. ಕೆಂಪ ಮತ್ತು ಬಸವ ಬಿಳೀ ಹುಲ್ಲನ್ನ ಮೆಲ್ಲುತ್ತಾ ಕೂತಿದ್ದವು. ಮಂಜ ಬಂದೊಡನೆ ಎದ್ದು ನಿಂತವು. ಒಂದೆರಡು ದಿನದಿಂದ ಹೊರಗಡೆ ಬಿಟ್ಟಿರಲಿಲ್ಲವಾದ್ದರಿಂದ ಇಂದು ಆ ಭಾಗ್ಯ ದೊರಕಬಹುದೆಂದು ಮಂಜನನ್ನೇ ನೋಡುತ್ತಿದ್ದವು. ಎರಡರ ಹಗ್ಗವನ್ನ ಬಿಚ್ಚಿದ.

ನೇಗಿಲು ತೆಗೆದುಕೊಂಡು ಅವುಗಳ ಹಿಂದೆ ಹೊರಟನು. ಬಸವ ಮುಂದೆ ಹೋಗುತ್ತಾ ಗದ್ದೆಯ ಕಡೆ ತನ್ನ ಹೆಜ್ಜೆಯನ್ನು ಹಾಕಿತ್ತು, ಹಿಂದೆ ಬರುತ್ತಿದ್ದ ಕೆಂಪನೂ ಸಹ ಬಿಳಿಯನನ್ನೇ ಹಿಂಬಾಲಿಸಿತು. ದನಗಳು ಗದ್ದೆಯ ಕಡೆ ಹೋದದ್ದನ್ನ ನೋಡಿ ಲಕ್ಷ್ಮಿ ಮನೆಗೆ ಹೋದಳು. ಮಂಜನಿಗೆ ಇನ್ನು ಬೇಸಾಯ ಮಾಡಬಹುದೆಂದು ಸಮಾಧಾನವಾಯಿತು.

ಹಾಗೆ ಸಾಗುವಾಗ ಕೆಳಗಿನ ಮನೆಯ ಈರೆಗೌಡ್ರು ಮಂಜನನ್ನ ನೋಡಿ 'ಏನೋ ಮಂಜ, ಇಷ್ಟೊತ್ತಿಗೆ ಬೇಸಾಯಕ್ಕೆ ಹೋಗ್ತಿದೀಯಲ್ಲೋ? ಅಲ್ನೋಡಿದ್ರೆ ನಿಮ್ಗೌಡ್ರು ನಿಂಗೆ ಕ್ಯಾಕರಿಸಿ ಉಗೀತಿದ್ರು, ಎಂಥದ್ಲಾ ನಿನ್ ಕಥೆ?'. ಮಂಜ ಹಲ್ಕಿರಿದು 'ಎದ್ದೇಳೋವಾಗ್ಲೆ ತುಂಬಾ ಹೊತಾಯ್ತು ಗೌಡ್ರೆ ಹಂಗಾಗಿ ಇಷ್ಟೊತ್ತು, ನಮ್ಗೌಡ್ರದ್ದು ಯಾವಾಗ್ಲೂ ಇದ್ದದ್ದೇ, ಅದ್ಸರಿ ನಿಮ್ ಗದ್ದೆ ಬ್ಯಾಸಾಯ ಆಯ್ತೋ?. ಗೌಡ್ರು ಜೋರಾಗಿ ನಗುತ್ತಾ 'ಬ್ಯಾಸಾಯನೂ ಆಯ್ತೂ ನಾಟಿನೂ ಆಯ್ತು, ಹೋಗ್ಹೊಗು ಬ್ಯಾಸ್ಯಾಯ ಮಾಡ್ನಡಿ ಇಲ್ಲಾಂದ್ರೆ ಎತ್ಗಳು ಕಾಡ್ನ ಹತ್ತುತವೆ' ಅಂಥಾ ಅಂದ್ರು.

ಆಗ್ಲಿ ಗೌಡ್ರೆ, ಬೀಡಿ ಏನಾರ ಇದ್ರೆ ಒಂದು ಇತ್ಲಾಗೆ ಕೊಡೋಕಾಗತ್ತೆನು ನೋಡಿ' ಮಂಜ ಗೌಡ್ರ ಕಣ್ಗಳನ್ನೇ ನೋಡ್ತಾ ಕೇಳ್ದ. 'ನಿನ್ನನ್ನ ನಿಲ್ಸಿ ಮಾತಾಡ್ಸಿದ್ದಕ್ಕೆ ಒಂದು ಬೀಡಿನೂ ಹೋಯ್ತು' ಅಂತಂದು ಗೌಡ್ರು ಜೇಬಿಗೆ ಕೈ ಹಾಕಿ ಬೀಡಿಯ ಕಟ್ಟನ್ನು ತೆಗೆದು ಒಂದನ್ನು ಮಂಜನ ಕೈಗಿತ್ತರು. ಮಂಜ ಬೀಡಿಯನ್ನು ತೆಗೆದುಕೊಂಡು ಬರ್ತೀನಿ ಗೌಡ್ರೆ, ಬ್ಯಾಸಾಯ ಆದ್ಮೇಲೆ ನಿಮ್ಗದ್ದೆ ಕಡೆ ಹೋಗಿ ನೀರಿದೆಯಾ ಇಲ್ವಾ ಅಂತ ನೋಡ್ಕಂಬತೀನಿ ಅಂದು ಮುಂದೆ ಸಾಗಿದ.

ಇದ್ದಕಿದ್ದಂತೆ ಕಂತ್ರಿನಾಯಿಗಳ ಕಿರುಚಾಟ ಕೇಳಲಾರಂಭಿಸಿತು. ೬-೭ ನಾಯಿಗಳು ಕಚ್ಹಾಡುತ್ತಿದ್ದವು. ಕೆಂಪ ಮತ್ತು ಬಸವನನ್ನ ನೋಡಿದ ತಕ್ಷಣ ಅವುಗಳನ್ನ ಬೆರೆಸಿಕೊಂಡು ಬಂದವು. ದನಗಳು ಮತ್ತು ನಾಯಿಗಳು ಮುನ್ನುಗ್ಗುವುದನ್ನ ನೋಡಿದ ಮಂಜ ಕೈನಲ್ಲಿದ್ದ ನೇಗಿಲನ್ನು ಎಸೆದು ಬೇಲಿಯನ್ನ ಹಾರಿ ನಿಂತನು. ಎರಡೂ ದನಗಳು ಮೆಟ್ಟಿಲನ್ನು ಹತ್ತಿ ಕಾಡಿನ ಕಡೆ ಓಡಿದವು. ಬೇಲಿ ದಾಟಿ ರಸ್ತೆಗೆ ಬಂದು ಮಂಜ ಅವುಗಳನ್ನ ಹಿಂಬಾಲಿಸಿದ. ಗೌಡ್ರು ಮತ್ತೆ ಲಕ್ಷ್ಮಿ, ನಾಯಿಗಳ ಕಿರುಚಾಟ ಕೇಳಿ ಕಣಕ್ಕೆ ಬರುವಷ್ಟರಲ್ಲಿ ದನಗಳು ಕಾಡಿನ ಮುಖ ನೋಡಿಯಾಗಿತ್ತು. ಕರಿಯ ಕಂತ್ರಿನಾಯಿಗಳನ್ನ ಸೇರಿಕೊಂಡಿತ್ತು. ಮೆಟ್ಟಿಲು ಹತ್ತಿ ಏದುಸುರಿನಿಂದ ಓಡುತ್ತಿದ್ದ ಮಂಜ, ಕಣದಲ್ಲಿ ನಿಂತಿದ್ದ ಗೌಡ್ರ ಮುಖ ನೋಡಿ ಮತ್ತಷ್ಟು ಬಿರುಸಿಂದ ಓಡಲಾರಂಭಿಸಿದ !

Thursday, November 14, 2013

ಗದ್ದೆಯಲ್ಲೊಂದು ಗ್ರೂಪ್ ಫೋಟೋ !


ಊರಿಗೆ ಹೋದಾಗ ಕ್ಯಾಮೆರಾ ತೆಗೆದುಕೊಂಡು ಒಂದೆರಡು ಬಾರಿ ಗದ್ದೆಯ ಕಡೆ ಹೋದದ್ದನ್ನು ಮೋಹನ ಗಮನಿಸಿದ್ದ. ನಾನು ಕ್ಯಾಮೆರಾವನ್ನು ಕುತ್ತಿಗೆಗೆ ನೇತಾಕಿಕೊಂಡು ಹೋಗುತ್ತಿದ್ದುದ್ದನ್ನು ಅವರ ಗುಂಪಿನವರಿಗೂ ತೋರಿಸಿದ್ದ. ಯಾವುದೋ ಲೋಕದಿಂದ ಬಂದವನ ಹಾಗೆ ಅವರು ನನ್ನನ್ನು ಗಮನಿಸುತ್ತಿದ್ದರು (ಮದುವೆ ಮನೆಯಲ್ಲಿ ಮಾತ್ರ ಕ್ಯಾಮೆರಾ ನೋಡುತ್ತಿದ್ದವರಿಗೆ ನನ್ನ ಈ ಅವಸ್ಥೆ ನಗು ತರಿಸಿರಬಹುದು).

ಒಂದು ದಿನ ನಡುಮನೆಯಲ್ಲಿ ನಾನು ಪೇಪರ್ ಓದುತ್ತಾ ಕುಳಿತಿದ್ದಾಗ ಮೋಹನ ಬಂದು ಅಮ್ಮನ ಬಳಿ 'ಅಮ್ಮೋರೇ, ಸಣ್ಣ ಗೌಡ್ರಿಗೆ ಹೇಳಿ ನಮ್ದೆಲ್ಲರ್ದೂ ಒಂದು ಫೋಟೋ ತೆಗೀಲಿಕ್ಕೆ ಹೇಳಿ' ಅಂತಿದ್ದ. 'ಇನ್ನೂ ಇಲ್ಲೇ ದನ ಕಾಯ್ತಿದಿರೇನ್ರೋ, ಗದ್ದೆ ಕುಯ್ಯೋದಕ್ಕೆ ಹೋಗ್ರೋ' ಎಂದು ಅಮ್ಮ ಆತನ ಮಾತನ್ನ ಕಿವಿಗೆ ಹಾಕಿಕೊಳ್ಳದೆ ಗದರಿಸುತ್ತಿದ್ದರು. 'ಅಯ್ಯೋ ಅಮ್ಮೋರೇ ಅಲ್ಲೇ ಇರ್ತೀವಿ, ಗೌಡ್ರಿಗೆ ಗದ್ದೆಗೆ ಬರೋವಾಗ ಕ್ಯಾಮೆರಾ ತಕ್ಕಂಬರಕೆ ಹೇಳಿ' ಅಂದ. 'ನಿಮ್ದೊಳ್ಳೆ ಕಥೆ ಕಣ್ರಾ ಮಾರಾಯ, ಸರಿ ಬೇಗ ಹೊರಡಿ, ಅವ್ನಿಗೆ ಹೇಳ್ತೀನಿ' ಎಂದು ಅಮ್ಮ ಅವನನ್ನ ಕಳಿಸಿದ್ಲು. ಅವನು 'ಮರೀಬ್ಯಾಡ್ರೀ ಅಮ್ಮೋರೇ' ಅಂತ ಕೂಗಿಕೊಂಡೇ ಹೋಗ್ತಿದ್ದ.

ನಾನು ತಿಂಡಿ ತಿಂದು ಕ್ಯಾಮೆರಾ ಕುತ್ತಿಗೆಗೇರಿಸಿಕೊಂಡು ಗದ್ದೆಯ ಕಡೆ ಹೊರಟೆ. ದೂರದಿಂದ ನಾನು ಬರುವುದನ್ನು ಗಮನಿಸಿದ ಮೋಹನ ಅಲ್ಲಿಂದಲೇ 'ಸಣ್ಗೌಡ್ರು ಕ್ಯಾಮೆರಾ ತಗೊಂಡು ಬರ್ತಿದ್ದಾರೆ' ಅಂತ ಕೂಗಿ ಹೇಳ್ತಿದ್ದಿದ್ದು ಕೇಳಿಸ್ತಿತ್ತು. ಹತ್ತಿರ ಹೋದಾಗ ಎಲ್ಲಾ ನನ್ನನ್ನ ನೋಡಿ ಹಲ್ಕಿರಿಯುತ್ತಿದ್ದರು. ನನಗೆ ಅವರೆಲ್ಲರನ್ನು ನೋಡಿ ಗಾಬರಿಯಾಯ್ತು, ಎಲ್ಲರೂ ಹೊಸ ಬಟ್ಟೆ ಹಾಕಿಕೊಂಡು ಬಂದಿದ್ರು (ಬಹುಶಃ ಹೊಸ ಬಟ್ಟೆ ಹಾಕ್ಕೊಂಡು ಗದ್ದೆ ಕೊಯ್ಲು ಮಾಡಿದ್ದವ್ರಲ್ಲಿ ಇವ್ರೇ ಮೊದ್ಲು ಅನ್ಸತ್ತೆ).

ನನಗೆ ನಗು ತಡೆಯಲಾಗಲಿಲ್ಲ 'ಅಲ್ವೋ ಮೋಹನ, ಮದ್ವೆಗೆ ಹೋಗ್ಬೇಕಾದವರು ತಪ್ಪಿ ಗದ್ದೆ ಕೊಯ್ಲಿಕ್ಕೆ ಬಂದಿರೋ ಹಾಗೆ ಇದೆಯಲ್ಲೋ?'. ಆತ 'ಗೌಡ್ರೇ ಈ ಗೆಟಪ್ ಫ಼ೋಟೋಕೆ' ಅಂದ. 'ಹಾಗಿದ್ದವ್ರು ಅಲ್ಲೇ ಮನೆ ಹತ್ರಾನೇ ತೆಗೆಸ್ಕೋಬಹುದಿತ್ತಲ್ಲೋ, ಇಲ್ಲಿ ಬಂದು ಹೊಸ ಬಟ್ಟೆ ಎಲ್ಲಾ ಗಲೀಜ್ ಮಡ್ಕೋಳ್ಳೊ ಸ್ತಿತಿ ಯಾಕೆ?' ಮೋಹನ ಅದಕ್ಕೆ 'ನಮ್ಮೂರಲ್ಲಿ ಎಲ್ರಿಗೂ ತೋರಿಸ್ಬೇಕಲ್ಲ ಗೌಡ್ರೇ, ನಮ್ಮ ಗೌಡ್ರ ಗದ್ದೆಲಿ ನಾವು ಕೆಲ್ಸ ಮಾಡ್ತಿರೋದನ್ನ' ಅಂದ.

ಸರಿ ಸರಿ ಎಲ್ಲಾ ಚೆನ್ನಾಗಿ ನಿಂತ್ಕಳಿ ಅಂದೆ. ಎಲ್ರೂ ಕೈಲಿ ಕುಡುಗೋಲು ಹಿಡ್ಕೊಂಡು ಕ್ಯಾಮೆರಾಗೆ ಪೋಸ್ ಕೊಡೋಕೆ ನಿಂತ್ರು, ಯಾರಾದ್ರೂ ದೂರದಿಂದ ಈ ದೃಶ್ಯ ನೋಡಿದ್ರೆ ಕುಡುಗೋಲು ಹಿಡ್ಕೊಂಡು ಸಾಯ್ಸೋಕೆ ಬರ್ತಿರ್ಬೇಕೇನೋ ಅನ್ನೋ ಹಾಗಿತ್ತು. ಹಿಂಗ್ಯಾರಾದ್ರೂ ಪೋಸ್ ಕೊಡ್ತಾರೇನ್ರೋ ಅಂದದ್ದಕ್ಕೆ, ಹಿಂಗೇ ಹೊಡೀರಿ ಗೌಡ್ರೆ ಅಂದ್ರು. ಸರಿ ಕಣ್ರಪ್ಪ ನಿಮ್ಮಿಷ್ಟ ಅಂದು ನಾನು ಕ್ಯಾಮೆರಾ ಆನ್ ಮಾಡಿ ಎಲ್ಲರನ್ನೂ ಸ್ವಲ್ಪ ನಗಾಡ್ರಪ್ಪ ಎಂದೆ, ಅವರ ನಗುಗಿಂತ ನನಗೇ ನಗು ಜಾಸ್ತಿ ಬರ್ತಿತ್ತು ಆದರೂ ತಡೆದುಕೊಂಡು ಕ್ಯಾಮೆರಾ ಕ್ಲಿಕ್ ಮಾಡಿದೆ.

ಆಯ್ತು ಕಣ್ರಪ್ಪಾ ಅಂದೆ, ಕ್ಷಣಾರ್ಧದಲ್ಲಿ ಎಲ್ರೂ ನನ್ನನ್ನ ಸುತ್ತುವರಿದಿದ್ದರು, ಫೋಟೋ ಹೇಗೆ ಬಂದಿದೆ ಎಂದು ನೋಡುವ ಕುತೂಹಲಕ್ಕೆ.ನಾನು ಪ್ಲೇ ಬಟನ್ ಒತ್ತಿದೆ ಆದರೆ ಫೋಟೋ ಕಾಣಿಸಲಿಲ್ಲ. ಆಗ ಗೊತ್ತಾಯ್ತು ಮೆಮೊರಿ ಕಾರ್ಡ್ ಮನೆಯಲ್ಲೇ ಬಿಟ್ಟು ಬಂದಿದ್ದೇನೆಂದು. ಅವರಿಗೆ ವಿಷಯ ಹೇಳಿ ಮೋಹನನನ್ನ ಮನೆಗೋಡಿಸಿದೆ, ಅಮ್ಮನಿಗೆ ಹೇಳಿ ತೆಗೆದುಕೊಂಡು ಬಾ ಎಂದು.

ಮೋಹನ ಒಂದೇ ಉಸುರಿಗೆ ಓಡಿದ್ದ, ತಿರುಗಿ ಬರುವಷ್ಟರಲ್ಲಿ ಹೊಸ ಬಟ್ಟೆಗೆ ಕೆಸರೆಲ್ಲಾ ಮೆತ್ತಿಕೊಂಡಿತ್ತು, ಈಗ ಅವನಿಗೆ ಅದ್ಯಾವುದರ ಬಗ್ಗೆ ಪರಿವೇ ಇರಲಿಲ್ಲ. ಬಟ್ಟೆ ಹಿಂಗಾಗಿದ್ಯಲ್ಲೋ ಎಂದಾಗ, ಹೆಂಗಾದ್ರೂ ಇರ್ಲಿ ಗೌಡ್ರೆ, ಒಂದು ಸಕತ್ತಾಗಿರೋ ಫೋಟೋ ತೆಗೀರಿ ಎಂದು ಎಲ್ಲರೊಳಗೊಂದಾಗಿ ಫೋಟೋಗೆ ಹಲ್ಕಿರಿದು ನಿಂತ.

Tuesday, August 6, 2013

ಸಣ್ಣಕಥೆ - ಅಲಕ್ಷ್ಯ


ಎಲ್ಲ ಒಂಬತ್ತು ಜನ ಸ್ನೇಹಿತರೂ ಮುಂದಿನ ವಾರ ಟ್ರೆಕಿಂಗ್ ಹೋಗುವುದೆಂದು ನಿಶ್ಚಯ ಮಾಡಿದ್ದರು,  ಆ ದಿನ ಬಂತು, ಆದರೆ ಸಂಖ್ಯೆ ಒಂಬತ್ತರಿಂದ ಐದಕ್ಕಿಳಿದಿತ್ತು ಉಳಿದವರಿಗೆ ಆಫೀಸ್ ಕೆಲಸವಿದ್ದುದ್ದರಿಂದ. ಎಲ್ಲರೂ ಬ್ಯಾಗ್ ಹೊತ್ತುಕೊಂಡಿದ್ದರು, ಬ್ಯಾಗಲ್ಲಿ ಚಿಪ್ಸ್, ಬಿಸ್ಕೆಟ್ಸ್, ನೀರಿನ ಬಾಟಲಿ ಇತ್ತು.  ಅದರಲ್ಲಿಬ್ಬರ ಬ್ಯಾಗಿನ ಮೂಲೆಯಲ್ಲಿ ಯಾರಿಗೂ ಕಾಣದಂತೆ ಮದ್ಯದ ಬಾಟಲಿಗಳೂ ಸ್ಥಾನವನ್ನ ಆಕ್ರಮಿಸಿಕೊಂಡಿದ್ದವು. ರಾತ್ರಿ ಬಸ್ ಹತ್ತಿ ಬೆಳಗ್ಗೆ ಟ್ರೆಕಿಂಗ್ ಶುರು ಮಾಡಬೇಕಿದ್ದ ಊರನ್ನ ತಲುಪಿದರು, ಅಕ್ಟೋಬರ್ ತಿಂಗಳ ಚಳಿಗೆ ಎಲ್ಲರೂ ನಡುಗುತ್ತಿದ್ದರು. ಹತ್ತಿರವಿದ್ದ ಒಂದು ಸಣ್ಣ ಅಂಗಡಿಯಲ್ಲಿ ತಿಂಡಿ ತಿಂದು, ಕಾಫಿ ಕುಡಿದು ಟ್ರೆಕಿಂಗ್ ಶುರು ಮಾಡಿದರು. ಬೆಟ್ಟ ಏರುತ್ತಿದ್ದಂತೆ ಚಳಿಯ ತೀವ್ರತೆಯೂ ಏರುತ್ತಿತ್ತು, ಆಹ್ಲಾದಕರ ವಾತಾವರಣ, ಸುಮಾರು ೨ ಗಂಟೆಗಳ ತರುವಾಯ ಎಲ್ಲರ ಹೊಟ್ಟೆ ಚುರುಗುಡುತ್ತಿತ್ತು, ಬ್ಯಾಗ್ ಓಪನ್ ಮಾಡಿ ಸ್ನ್ಯಾಕ್ಸ್ ತಿಂದರು, ಒಬ್ಬ ಮದ್ಯದ ಬಾಟಲಿಯನ್ನ ಓಪನ್ ಮಾಡಿದ, ಉಳಿದವರೆಲ್ಲರೂ ಅವನ ಮೇಲೆ ಮುಗಿಬಿದ್ದು ಬಾಟಲಿಯನ್ನ ಕಿತ್ತುಕೊಂಡು ಖಾಲಿ ಮಾಡಿ ಅಲ್ಲೇ ಎಸೆದರು. ಎಲ್ಲ ಆದ ಮೇಲೆ ಬಾರದಿದ್ದ ಗೆಳೆಯರಲ್ಲೊಬ್ಬನಿಗೆ ಕಾಲ್ ಮಾಡಿ 'ಸಕತ್ತಾಗಿದೆ ಮಗಾ ಜಾಗ, ಲೈಫ಼ಲ್ಲಿ ಒಂದ್ಸಲ ವಿಸಿಟ್ ಮಾಡ್ಲೇಬೇಕು' ಅಂದ. ಅತ್ತ ಕಡೆಯಿಂದ ಆತ ಸದ್ಯದಲ್ಲೇ ಪ್ಲಾನ್ ಮಾಡ್ತೀವಿ ಅಂದ. ಸುಮಾರು ೩ ತಿಂಗಳ ನಂತರ ಉಳಿದ ಸ್ನೇಹಿತರು ಅಲ್ಲಿಗೆ ಟ್ರೆಕಿಂಗ್ ಹೊರಟರು. ಹಿಂದಿನ ದಿನ ಸ್ವಲ್ಪ ಮಳೆ ಬಂದಿತ್ತು, ನಡೆಯುವಾಗ ಅಲ್ಲಲ್ಲಿ ಜಾರುವ ಅನುಭವವಾಗುತ್ತಿತ್ತು, ಎಲ್ಲರೂ ಎಚ್ಚರಿಕೆಯಿಂದ ಹೆಜ್ಜೆಯಿಡುತ್ತಿದ್ದರು. ಇದ್ದಕ್ಕಿದ್ದಂತೆ ಕೊನೆಯಲ್ಲಿದ್ದವನು ಜಾರಿ ಹೋ ಎಂದು ಕಿರುಚಿದ, ಮುಂದೆ ಹೋಗುತ್ತಿದ್ದವರು ಜೋಪಾನ ಕಣೋ ಎಂದು ಮುನ್ನಡೆಯುತ್ತಿದ್ದರು. ಆದರೆ ಆತ ಜಾರಿದವನು ಅಲ್ಲೇ ಬಿದ್ದಿದ್ದ ಖಾಲಿ ಬಾಟಲಿಯ ಮೇಲೆ ಕಾಲಿರಿಸಿದ್ದ. ಆಯತಪ್ಪಿ ಬೆಟ್ಟದ ಮೇಲಿಂದ ಕೆಳಗೆ ಬಿದ್ದ ಅವನ ಪ್ರಾಣಪಕ್ಷಿ ಹಾರಿಹೋಗಿತ್ತು.
.
.
.
.
.
.
.
.
.
.
.
.
.
.
.
.
.
        
        ಗೆಳೆಯ ಎಸೆದಿದ್ದ ಬಾಟಲಿ ಇವನ ಬಲಿ ಪಡೆದುಕೊಂಡಿತ್ತು.

Tuesday, June 25, 2013

ವಿಜಯವಾಣಿಯಲ್ಲಿ ನನ್ನದೊಂದು ಲೇಖನ


 ಭಾನುವಾರದ ವಿಜಯವಾಣಿಯಲ್ಲಿ ನನ್ನದೊಂದು ಲೇಖನ - ಒಂದು ಮಳೆಯ ಕಥೆ



Friday, June 14, 2013

ವಿಪರ್ಯಾಸ

ಅತ್ತ - >

ಹೊಳೆಯಿಂದ ತನ್ನ ಹೊಲಕ್ಕೆ ನೀರು ಹಾಯಿಸಲು 
ಕರೆಂಟಿಗೆ ಕಾದು ಕಾದು ಬಾರದಿದ್ದಾಗ ಆತ 
ಹಾಡಹಗಲೇ ಆತ್ಮಹತ್ಯೆ ಮಾಡಿಕೊಂಡಿದ್ದ 

ಇತ್ತ - >

ಹಗಲು ಹೊತ್ತಿನಲ್ಲೇ ಆ ಮಾಲ್ ನಲ್ಲಿ 
ಸಾವಿರಾರು ಬಲ್ಬ್ ಗಳ ಬೆಳಕು 
ಎಲ್ಲರ ಕಣ್ಣು ಕುಕ್ಕುತ್ತಿದ್ದವು