Thursday, September 10, 2009

ಮಳೆಗಾಲದ ನೆನಪುಗಳು

ಆಗ ಅಂದ್ರೆ ನಾವು ಸಣ್ಣವರಿದ್ದಾಗ ನಮ್ಮೂರಿನಲ್ಲಿ ಮಳೆಗಾಲ ಅಂದ್ರೆ ಏನೋ ಒಂಥರಾ ಖುಷಿ

ಆಗೆಲ್ಲಾ ಮಲೆನಾಡಲ್ಲಿ ಮಳೆಗಾಲ ಬಂತು ಅಂದ್ರೆ ಸಾಕು ಜನ ಗದ್ದೆಮೀನು ಹಿಡಿಯೋದಕ್ಕೆ ಕೂಳೆ ತಗೊಂಡು ಗದ್ದೆ ಕಡೆ ಹೊರಟುಬಿಡ್ತಿದ್ರು. ಯಾವ ಗದ್ದೆ ನೋಡಿದ್ರೂ ಕೂಳೆನೇ. ನಾನೂ ಸಹ ನಮ್ಮ ತಾತ‌ನ ಜೊತೆ ಕೂಳೆ ತಗೊಂಡು ನಮ್ಮ ಗದ್ದೆಗೆ ಹೊರಟುಬಿಡ್ತಿದ್ದೆ. ಬೆಳಗ್ಗೆ ಹಾಕಿದ್ರೆ ಮಧ್ಯಾಹ್ನನೋ ಸಂಜೆನೋ ಬಂದು ತಗೊಂಡು ಹೋಗ್ಬೇಕಿತ್ತು.

ಕೂಳೆ ಹಾಕಿ ಮನೆಗೆ ಹೋಗಿ ಅರ್ಧ ಗಂಟೆ ಆಗಿರ್ತಿರ್ಲಿಲ್ಲ ನಮ್ಮ ತಾತಂಗೆ ನಡಿ ತಾತ ಹೋಗಣ ಅಂತಿದ್ದೆ, ನಂಗೆ ತರ ತರಹದ ಮೀನು ನೋಡೋ ಆಸೆ. ನಮ್ಮ ತಾತ ತಡಿ ಮಗ ಸ್ವಲ್ಪ ಹೊತ್ತು ಬಿಟ್ಟು ಹೋಗೋಣ ಅಂತ, ಅವ್ರಿಗೆ ಜಾಸ್ತಿ ಮೀನು ಬೀಳಲಿ ಅಂತ ಆಸೆ. ಅಂತೂ ತಾತನ ಆಸೆಯೇ ಯಾವಾಗ್ಲೂ ಗೆಲ್ತಿತ್ತು (ಮನೆಯವರೆಲ್ಲರೂ ಮೀನು ತಿನ್ನಬೇಕಲ್ಲ, ನನ್ನ ಆಸೆ ಗೆದ್ರೆ ನಾನೊಬ್ನೇ ತಿನ್ನಬೇಕಾಗತ್ತೆ.

ಗ‌ದ್ದೆಗೆ ಹೋಗಿ, ನ‌ಮ್ಮ ತಾತ‌ ಕೂಳೆ ತೆಗೀತಾ ಇದ್ರೆ ನಾನು ಆ ಬ‌ಣ್ಣ ಬ‌ಣ್ಣದ‌ ಮೀನುಗ‌ಳು ಅವು ಕುಣಿದಾಡೋದ‌ನ್ನ ನೋಡ್ತಿದ್ದೆ. ನ‌ಮ್ಮಜ್ಜ ಎಲ್ಲಾ ಮೀನು ತೆಗೆದಾದ‌ ಮೇಲೆ ಗ‌ದ್ದೆಯ‌ಲ್ಲಿ ಇನ್ನೂ ಮೀನು ಇದ್ರೆ ಮ‌ತ್ತೆ ಕೂಳೆ ಹಾಕ್ತಿದ್ರು, ಮಾರ‌ನೇ ದಿನ‌ದ‌ ಊಟ‌ಕ್ಕೆ :).

ನ‌ಮ್ಮಮ್ಮ ಕಾರ‌ ರೆಡಿ ಮಾಡ್ಕೊಂಡು ಕಾಯ್ತಿದ್ರು, ಅಕ‌ಸ್ಮಾತ್ ಮೀನು ಬಿದ್ದಿಲ್ದೆ ಇದ್ರೆ ಅದೇ ಕಾರ‌ ತ‌ರ‌ಕಾರಿ ಸಾರಿಗೆ :)

ಇನ್ನೋ ತಿನ್ನೋ ವಿಷ‌ಯ‌, ಆಹಾ ಗದ್ದೆಮೀನು ಸಾರು, ಅಕ್ಕಿ ರೊಟ್ಟಿ ಇದ್ರೆ ಸ್ವರ್ಗ‌ ಸುಖ‌. ಯಾವ ಮೀನು ಸಾರು ಸಹ‌ ಗದ್ದೆಮೀನಿನ‌ ಸಾರಿಗೆ ಪೈಪೋಟಿ ಕೊಡೋಕಾಗ‌ಲ್ಲ.

ಒಮ್ಮ್ಮೆ ಹಿಂಗಾಯ್ತು, ಬೆಳಗ್ಗೆ ನಾನು,ತಾತ‌ ಕೂಳೆ ತಗೊಂಡು ನಮ್ಮ ಗದ್ದೆಗೆ ಹೋಗಿ ಹಾಕಿಬ‌ಂದ್ವಿ. ಸಾಯ‌ಂಕಾಲ‌ ಹೋದ್ವಿ, ನಾನು ಗದ್ದೆ ಬದಿಯಲ್ಲಿ ಕೂತಿದ್ದೆ. ನ‌ಮ್ಮಜ್ಜ ಕೂಳೆ ಎತ್ತೋವಾಗ‌ ಯಾಕೋ ತುಂಬಾ ಭಾರ‌ ಇದೆ, ಬಾರೀ ಮೀನು ಬಿದ್ದಿರ್ಬೇಕು ಕ‌ಣೋ ಅಂತ‌ ಕೂಳೆಯ‌ ಕೆಳ‌ಗಿದ್ದ ಬ‌ಟ್ಟೆ ತೆಗೆದ್ರು, ಇದ್ದಕಿದ್ದಂತೆ ಕೇರೆ ಹಾವೊಂದು ಹೊರ‌ಗೆ ಬ‌ರ‌ಬೇಕೇ, ನಾನು ಎದ್ನೋ ಬಿದ್ನೋ ಅಂತ‌ ಪ‌ರಾರಿ, ನ‌ಮ್ಮ ಗ‌ದ್ದೆಯ‌ ಇನ್ನೊಂದು ತುದಿಯ‌ಲ್ಲಿದ್ದೆ. ನ‌ಮ್ಮ ತಾತ‌ ಕೂಗಿದಾಗ್ಲೇ ಅಲ್ಲಿಗೆ ಹೋಗಿದ್ದು. ಅವ್ರು ಕೂಳೆಯ‌ನ್ನ ಎಸೆದಿದ್ರು, ಹಾವು ಹೋಗಿತ್ತು ಸ್ವಲ್ಪ ಮೀನಿತ್ತು. ಇವ‌ತ್ತಿಗೆ ತ‌ರ‌ಕಾರಿ ಸಾರೇ ಗ‌ತಿ ಅಂದ್ಕೊಂಡು ಕೂಳೆ ಮ‌ತ್ತೆ ಹಾಕಿ ಮ‌ನೆಗೆ ಹೆಜ್ಜೆ ಹಾಕಿದ್ವಿ.
ಮ‌ಳೆಗಾಲ‌ ಅಂದ್ರೆ ಜ್ನಾಪ‌ಕ‌ ಬ‌ರೋ ಮ‌ತ್ತೊಂದು ವಿಷ‌ಯ‌ ಅಂದ್ರೆ ಹ‌ಲ‌ಸಿನ‌ ಗಾಳ (ಬೀಜ). ಮ‌ಳೆ ಬ‌ರೋಕೆ ಸ್ವಲ್ಪ ದಿನ‌ಗ‌ಳ‌ ಹಿಂದೆ ತಿಂದ‌ ಹ‌ಲ‌ಸಿನ‌ಹ‌ಣ್ಣಿನ‌ಲ್ಲಿ ಗಾಳ‌ಗ‌ಳ‌ನ್ನು ಬೇರೆ ಮಾಡಿ ಬಿಸಿಲ‌ಲ್ಲಿ ಒಣ‌ಗಿಸ್ತಿದ್ರು. ಅವು ಮ‌ಳೆಗಾಲ‌ಕ್ಕೆ ಉಪ‌ಯೋಗ‌ಕ್ಕೆ ಬ‌ರ್ತಿದ್ವು. ಕೆಂಡ‌ಕ್ಕೆ ಹಾಕಿ ಬೇಯಿಸ್ಕೊಂಡು ಆ ಮಳೆ, ಚಳಿಯಲ್ಲಿ ಅಡಿಗೆ ಮನೆಯಲ್ಲಿ ತಿನ್ತಾ ಕೂತ್ರೆ ಅದೆಷ್ಟು ಹೊಟ್ಟೆಗೆ ಹೋಗ್ತಿದ್ವೋ..

ಮ‌ನೆ ಕ‌ಡಾಯ‌ಕ್ಕೆ ಮ‌ಳೆಗಾಲ‌ದ‌ ನೀರೇ (ಬೋರ್ವೆಲ್ಗೆ ಹೋಗಿ ಆ ಮ‌ಳೆಯ‌ಲ್ಲಿ ನೆನೆದು ಯಾರು ನೀರು ತ‌ರ್ತಾರೆ). ಹೆಂಚಿನ‌ ಕೆಳ‌ಗೆ ಕೊಡ‌ ಇಟ್ಟು ಆ ಕೊಡ‌ಕ್ಕೆ ಬೀಳೋ ನೀರು ನೋಡೋದೇ ಪ‌ರ‌ಮಾನ‌ಂದ‌, ತುಂಬಿದ‌ ತ‌ಕ್ಷಣ‌ ಬ‌ಚ್ಚಲುಮ‌ನೆಯ‌ ಕ‌ಡಾಯ‌ಕ್ಕೆ ಹೋಗಿ ಹಾಕ್ಬೇಕು, ಒಂದೊಂದ್ಸಲ‌ ನೀರು ತ‌ಗೊಂಡು ಹೋಗೋವಾಗ‌ ಚಾವ‌ಡಿ ಅಥ‌ವಾ ನ‌ಡುಮ‌ನೆಯ‌ಲ್ಲಿ ಜಾರಿಬಿದ್ದು ಕೈ ಕಾಲು ಮುರಿದುಕೊಂಡ‌ ಪ್ರಸ‌ಂಗ‌ಗ‌ಳು, ಕೊಡ ಒಡೆದ ಪ್ರಸ‌ಂಗ‌ಗ‌ಳು ಆಗಿದ್ದುಂಟು. ಕೈ ಕಾಲು ಮುರಿದಾಗ‌ ಸುಮ್ನಿರ್ತಿದ್ದವರು ಕೊಡ‌ ಒಡೆದಾಗ‌ ಮ‌ಹಾ ಮ‌ಂಗ‌ಳಾರತಿ ಮಾಡ್ತಿದ್ರು :)

ಶಾಲೆಗೆ 5 ಕಿ.ಮೀ ನ‌ಡೆದುಕೊಂಡು ಹೋಗ್ಬೇಕಾಗಿತ್ತು, ಮ‌ಳೆಗಾಲ‌ದ‌ಲ್ಲಿ ತೋಟದಲ್ಲಿ (ಬೇರೆಯವರದ್ದು) ಹ‌ಲ‌ಸಿನ‌ಹ‌ಣ್ಣು, ಕಿತ್ತಲೆಹ‌ಣ್ಣು, ಮೂಸ‌ಂಬಿ ಇರ್ತಿದ್ವು. ಬೆಳ‌ಗ್ಗೆ ಹೋಗೋವಾಗ‌, ಲೇ ಸಾಯ‌ಂಕಾಲ‌ ಈ ಮ‌ರ‌ಕ್ಕೆ ಹೋಗೋಣ‌ ಕ‌ಣ್ಲ ಅಂತ‌ ಸ್ಕೆಚ್ ಹಾಕ್ತಿದ್ವಿ, ಸಾಯ‌ಂಕಾಲ‌ ಆ ಮ‌ರ‌ದ‌ ತಿಥಿ, ಕೆಲ‌ವೊಮ್ಮೆ ನ‌ಮ‌ಗಿಂತ‌ ಮೊದ‌ಲು ಬ‌ಂದ ಹುಡುಗ‌ರು ತಿಥಿ ಮಾಡಿರ್ತಿದ್ರು :)

ಹಿಂಗೆ ಒಂದ್ಸಲ‌, ನಾನು ನ‌ನ್ನ ಫ್ರೆಂಡ್ ಸಾಯ‌ಂಕಾಲ‌ ಒಬ್ರ ತೋಟ‌ಕ್ಕೆ ನುಗ್ಗಿ, ಅವ್ನು ಹ‌ಲ‌ಸಿನ‌ಮ‌ರ‌ ಹ‌ತ್ತಿದ್ದ, ನಾನು ಕೆಳ‌ಗೆ ಕಾಯ್ತಿದ್ದೆ. 2 ಬಿಳುವ‌ ಹ‌ಣ್ಣು ಇದೆ ಕ‌ಣೋ ಅಂದ‌, ಸ‌ರಿ ಇಳಿಸ್ಕೊಂಡು ಬಾ ಅಂತ‌ ಅಂದೆ ಅಷ್ಟೊತ್ತಿಗೆ ಎಲ್ಲಿದ್ರೋ ತೋಟ‌ದ‌ ಯ‌ಜ‌ಮಾನ‌, ನ‌ನ್ನ ಎದುರಿಗೆ ಬ‌ಂದು ನಿಲ್ಲೋದಾ.

ನಾನು ಎಸ್ಕೇಪಾಗೋಣ‌ ಅಂದ್ರೆ ಅವ್ನು ಮೇಲಿದ್ದಾನೆ, ಫ್ರೆಂಡ್ ಬೇರೆ ಬಿಡೋ ಹಾಗಿಲ್ಲ, ಅಕಸ್ಮಾತ್ ಎಸ್ಕೇಪಾದ್ರೂ ಮುಂದೊಂದು ದಿನ ನಾನು ಮರ ಹತ್ತಿದ್ರೆ ಈ ನನ್ಮಗ ಕೈ ಕೊಟ್ಟೇ ಕೊಡ್ತಾನೆ, ಇನ್ನೇನು ಮಾಡೋದು ಅಂತ‌ ಸುಮ್ನೆ ನಿಂತೆ.
ಅಷ್ಟರಲ್ಲಿ ನಾಲ್ಕೈದು ಏಟು ಪಟ ಪಟ ಬಿದ್ದ ಹಾಗಾಯ್ತು, ಯಾವ್ದೋ ಸೊಪ್ಪು ಮುರ್ಕೊಂಡು ಒಂದೆರ‌ಡು ಏಟು ಬಾರ್ಸಿದ್ರು ನ‌ಂಗೆ, ಅವ್ನು ಇಳಿಯೋಕೆ ಮೀನ‌ ಮೇಷ‌ ಎಣಿಸ್ತಿದ್ದ, ಇವ್ರೊಂದು ಆವಾಜ್ಃ ಹಾಕಿದ್ರು, 2 ಹ‌ಲ‌ಸಿನ‌ಹ‌ಣ್ಣನ್ನು ಇಟ್ಕೊಂಡು ನಿಧಾನ‌ ಇಳಿದ‌. ಅವ್ನಿಗೂ ಒಂದೆರ‌ಡು ಬಿದ್ವು.

'ಇದೇ ಕೆಲ್ಸ ಮಾಡ್ರೋ, ಸ್ಕೂಲ್ ಮುಗಿಸಿ ತೆಪ್ಪಗೆ ಮ‌ನೆಗೆ ಹೋಗೋದು ಬಿಟ್ಟು ಕ‌ದಿಯೋಕೆ ಹೋಗ್ತೀರ‌ಲ್ಲೋ ಅಂದ್ರು, ಇನ್ನೊಂದ್ಸಲ ಹಿಂಗೆ ಮಾಡಿದ್ರೆ ಗೊತ್ತಲ್ಲ ಅಂದ್ರು' ನಾವು ಏನೂ ಹೇಳ‌ದೆ ಸುಮ್ನೆ ನಿಂತಿದ್ವಿ.

ಆಮೇಲೆ ಅವ್ರೇ ಹ‌ಲ‌ಸಿನ‌ಹ‌ಣ್ಣನ್ನು ಬ‌ಗೆದು ನ‌ಮ್ಗೆ ಸ್ವಲ್ಪ ಕೊಟ್ರು, ನಾವು ಏನೂ ಮಾಡ‌ದೇ ಸುಮ್ನೆ ನಿಂತಿದ್ವಿ.ತಿನ್ರೋ ಅಂದ್ರು, ಅವ್ರೊಟ್ಟಿಗೆ ತಿಂದು ಮ‌ನೆಗೆ ಓಡಿದ್ವಿ.

ಇನ್ನು ಶಾಲೆಯಲ್ಲಿ, ಯಾವಾಗ ಸಾಯಂಕಾಲ ಆಗತ್ತೋ ಯಾವಾಗ ಪಿ.ಇ ಕ್ಲಾಸ್ ಶುರುವಾಗತ್ತೋ ಅಂತ ಕಾಯ್ತಿದ್ವಿ. ಆ ಟೈಮ್ ಬಂದ ತಕ್ಷಣ ಫೀಲ್ಡ್ಗೆ ಎಸ್ಕೇಪ್. ಕಬಡ್ಡಿ, ಕೋ ಕೋ ಆಡಿ ನಮ್ಮ ಬಣ್ಣ, ಬಟ್ಟೆಯ ಬಣ್ಣ ಗದ್ದೆಯಲ್ಲಿ ಮಳೆಗಾಲದಲ್ಲಿ ಕೆಲಸ ಮಾಡೋರಿಗೆ ಸ್ಪರ್ಧೆ ಕೊಡೋ ಹಾಗಿರ್ತಿತ್ತು.


ಜೂನ್ ‍ ಜುಲೈ ತಿಂಗಳಿರಬಹುದು, ಮಳೆಗಾಲದ ಸಮಯ. ಒಂದ್ಸಲ ನಮ್ಮ ಮನೆಯ ಮಂಜ ಮಧ್ಯಾಹ್ನಕ್ಕೆ ಬೇಸಾಯ ಮುಗಿಸಿದ. ನಾನು ಊಟ ಮಾಡ್ಕೊಂಡು ಗದ್ದೆಗೆ ಹೋದೆ. ಮಂಜ ಇದ್ದವನು, ಗೌಡ್ರೇ ಚೆನ್ನಾಗಿ ಮೇಯ್ಸಿ ನಾಳೆನೂ ಬೇಸಾಯ ಮಾಡ್ಬೇಕು ಅಂದ. ಹೂಂ ಆಯ್ತು ಊಟಕ್ಕೆ ಮನೆಗೆ ಹೋಗು ಅಂದೆ.

ಮಾಮೂಲಿಯಂತೆ ದನ ಕಾಯಬೇಕಾದ ಕೆಲಸ ನನಗೆ ಬಂತು (ಶನಿವಾರ, ಭಾನುವಾರ ಬೇಸಾಯ ಆದ್ಮೇಲೆ ನಮ್ಮ ಕೆಲಸ ದ‌ನ ಕಾಯೋದೇ).

ಸರಿ ಅವ್ನು ಎತ್ತು ಬಿಟ್ಟಾದ ಮೇಲೆ ನಾನು ಬಸವ ಮತ್ತೆ ಹಂಡ (ಎತ್ತುಗಳ‌ ಹೆಸರು) ಕಾಯ್ತಾ ಕೂತೆ, ಎಲ್ಲೋ ದೂರದಲ್ಲಿ 4 5 ಹುಡುಗ್ರು ಗೋಲಿ ಆಡ್ತಿದ್ರು. ಆಗೆಲ್ಲಾ ಮನೆ ಬಿಡೋವಾಗ್ಲೇ ಜೇಬಲ್ಲಿ ಗೋಲಿ ಇಟ್ಕೊಂಡು ಹೋಗ್ತಿದ್ವಿ, ನನ್ನ ಜೇಬಲ್ಲೂ ಗೋಲಿ ಇದ್ವು.

ಎತ್ತು ಅಲ್ಲೇ ಬಿಟ್ಟು ಆಡೋಕೆ ಹೋಗೋಣ ಅಂದ್ಕೊಂಡು ಹೊರಟೆ. ಸುಮಾರು 1 ಗಂಟೆ ಆಡಿರಬಹುದು, ಸಂಜೆ 4 ಆಗಿತ್ತು ಅನ್ಸತ್ತೆ. ಎತ್ತು ಇದವೇನೋ ಅಂತ ಕಣ್ಣು ಹಾಯ್ಸಿದ್ರೆ, ಹಂಡ ನಾಪತ್ತೆ.

ಈ ಪರಿಸ್ಥಿಥಿಯಲ್ಲಿ ಮನೆಗೆ ಹೋದ್ರೆ ನಮ್ಮಪ್ಪ ನನ್ನ ತಿಥಿ ಮಾಡ್ತಾರೆ ಹಾಗಾಗಿ ಬಸವನ್ನ ಹಟ್ಟಿಗೆ ಕಟ್ಟಿ ಹಂಡ‌ನನ್ನ ಹುಡ್ಕೋಕೆ ಹೋದ್ರೆ ಆಯ್ತು ಅಂತ ಅವ್ನನ್ನ ಹೊಡ್ಕೊಂಡು ಮನೆ ಕಡೆ ಹೆಜ್ಜೆ ಹಾಕಿದೆ.

ನ‌ಮ್ಮ ಬೀದಿಯ‌ಲ್ಲಿ ನ‌ಮ್ದೇ ಕೊನೇ ಮ‌ನೆ, ನ‌ಮ್ಮ ಮ‌ನೆ ಹ‌ತ್ತಿರ‌ ಎಡ‌ದೆ ಕ‌ಡೆ ಹೋದ್ರೆ ತೋಟ‌ಕ್ಕೆ ಹೋಗ‌ಬ‌ಹುದು, ಬ‌ಲ‌ಕ್ಕೆ ಹೋದ್ರೆ ಹ‌ಟ್ಟಿಗೆ. ಬೇಗ‌ ಬೇಗ‌ ಹೆಜ್ಜೆ ಹಾಕ್ತಿದ್ದೆ ನ‌ಮ್ಮಪ್ಪ ಮೇಲಿಂದ‌ನೇ ನೋಡಿದ್ರು,

ಅವ್ರಿಗೆ ಗೊತ್ತಾಯ್ತು ಈ ನನ್ಮಗ ಎಲ್ಲೋ ಆಡೋದಕ್ಕೆ ಹೋಗಿದ್ದಾನೆ ಹಾಗಾಗಿ ಹ‌ಂಡ‌ ಓಡಿಹೋಗಿದೆ ಅಂತ‌.

ಕೈಲಿ ಕ‌ಡ‌ಲೆಕ‌ಡ್ಡಿ ಬ‌ರ್ಲು (ಪ‌ರ್ಕೆ, ಹಿಡ್ಲು) ಇಟ್ಕೊಂಡು ಮೆಟ್ಟಿಲು ಇಳಿತಿದ್ರು. ನಾನು, ಇನ್ನು ಇಲ್ಲೇ ಇದ್ರೆ ನ‌ನ್ನ ಗ್ರಹ‌ಚಾರ‌ ನೆಟ್ಟಗೆ ಇರೋಲ್ಲ ಅಂದ್ಕೊಂಡು, ತೋಟ‌ಕ್ಕೆ ನುಗ್ಗಿದೆ (ಮ‌ಳೆ ಅಲ್ವ ನ‌ಮ್ಮಪ್ಪ ಬ‌ರೋಲ್ಲ ಅಂದ್ಕೊಂಡು) ಆದ್ರೆ ನೋಡ್ತೀನಿ ಹಿಂದೆ ನ‌ನ್ನನ್ನೇ ಅಟ್ಟಿಸ್ಕೊಂಡು ಬ‌ರ್ತಿದ್ರು

ಒಂದು 20 ನಿಮಿಷೆ ಬೆರ್ಸಿರಬಹುದು, ನಾನಂತೂ ಹಿಂದೆ ನೋಡದೆ ಬರೀ ಶಬ್ಧದ ಗ್ರಹಿಕೆಯಿಂದಲೇ ಸುಮ್ನೆ ಓಡ್ತಿದ್ದೆ (ನಾನು ಹಾಗೆ ಓಡ್ತಿದ್ದನ್ನ ನೋಡಿದ ನಮ್ಮ ಮನೆಯ ಚಿಕ್ಕ ಈಗ್ಲೂ ನೆನೆಸಿಕೊಂಡು ನಗಾಡ್ತಿರ್ತಾನೆ). ಸ್ವಲ್ಪ ಹೊತ್ತಾದ ಮೇಲೆ ತಿರುಗಿ ನೋಡಿದೆ, ನಮ್ಮಪ್ಪ ಸುಸ್ತಾಗಿ ನಿಂತಿದ್ರು. ಇನ್ನು ವಾಪಸ್ ಮನೆಗೆ ಹೋದ್ರೆ ಹೊಡ್ದೇ ಹೊಡೀತಾರೆ ಅಂದ್ಕೊಂಡು ಸಾಯಂಕಾಲದ ಹೊತ್ತಿಗೆ ಸಿಟ್ಟು ಸ್ವಲ್ಪವಾದ್ರೂ ಕಡಿಮೆ ಆಗಿರತ್ತೆ ಅಂದ್ಕೊಂಡು ಕೆಳಗಿರೋ ನಮ್ಮಣ್ಣನ ಮನೆಗೆ ಕದ್ದು ಹೋದೆ.

ರಾತ್ರಿ ವಾಪ‌ಸ್ ಮ‌ನೆಗೆ ಬ‌ಂದೆ, ಸ‌ದ್ಯ ಅಪ್ಪನ‌ ಕೈಲಿ ಕ‌ಡ‌ಲೆಕ‌ಡ್ಡಿ ಬ‌ರ್ಲು ಇರ್ಲಿಲ್ಲ. ಸ್ವಲ್ಪ ಹೊತ್ತು ಕಾಯ್ದಿದ್ದು ಅನುಕೂಲನೇ ಆಯ್ತು, ಒದೆ ತಿನ್ನೋದ್ರಿಂದ‌ ಉಳಿದುಕೊಂಡೆ. ಆದ್ರೆ ಬೈಗುಳ‌ ಎದುರಿಸುವುದ‌ಕ್ಕೆ ಸಿದ್ಧನಾಗ‌ಬೇಕಿತ್ತು, ನ‌ನ್ನನ್ನು ನೋಡಿದ್ದೆ ತ‌ಡ‌ 'ಹೊಟ್ಟೆಗೆ ಅನ್ನ ತಿಂತೀರೋ .... ತಿಂತೀರೋ, ನಿಮ್ಗೆಲ್ಲ ಯಾಕೆ ಬೇಕು ಗ‌ದ್ದೆ ತೋಟ‌, ಹೇಳೋ ಒಂದು ಕೆಲ್ಸನೂ ನೆಟ್ಟಗೆ ಮಾಡೋಲ್ಲ, ನಾಳೆಗೆ ಬೇಸಾಯ‌ಕ್ಕೆ ಏನು ಮಾಡೋದು ಈಗ‌. ಬೆಳ್ಗೆ ಬೇಗ‌ ಎದ್ದು ಕಾಲೋನಿಗೆ ಹೋಗಿ ಮ‌ಂಜ‌, ಚಿಕ್ಕನ್ನ ಕ‌ರ್ಕೊಂಡು ಬಾ ಅಂತ ಅಂದ್ರು. ಮಲೆನಾಡಲ್ಲಿ ಅದೂ ಮಳೆಗಾಲದಲ್ಲಿ ಬೆಳ್ಗೆ 6ಕ್ಕೆ ಎದ್ದು ಹೋಗೋದು ಬಾರೀ ಕಷ್ಟದ ಕೆಲಸ. ಆ ಚಳಿಗೆ, ರಗ್ಗು ಹೊದ್ಕೊಂಡು ಮಲ್ಗಿದ್ರೆ ಎದ್ದೇಳೋಕೆ ಮನ್ಸೇ ಬರೋಲ್ಲ. ಏನು ಮಾಡೋದು, ವಿಧ್ ಇಲ್ಲ 'ನಾ ಮಾಡಿದ ಕರ್ಮ ಎನಗೆ' ಅಂದ್ಕೊಂಡು ಮಾರನೇ ದಿನ ಬೇಗ ಎದ್ದು ಹೋಗಿ ಅವ್ರಿಗೆ ಹೇಳಿ ಬಂದೆ.

ಒಂದೆರಡು ದಿನಗಳಾದ ಮೇಲೆ ಹಂಡ ಯಾರ್ದೋ ತೋಟದಲ್ಲಿ ಸಿಕ್ತು.

ಮಳೆಗಾಲದಲ್ಲಿ, ತೋಟಗಳಲ್ಲಿ ಚಕೋತ ಮೂಸಂಬಿ ಕಿತ್ತಲೆ ತುಂಬಾ ಹ‌ಣ್ಣುಗ‌ಳು ಇರ್ತಿದ್ವು. ನ‌ಮ್ಮ ಏರಿಯಾದ‌ಲ್ಲಿ ನಾವೊಂದು ಏಳೆಂಟು ಮ‌ಕ್ಕಳ‌ದ್ದೇ ಕಾರುಬಾರು. ಸಾಮಾನ್ಯವಾಗಿ, ಬೇರೆಯ‌ವ‌ರ‌ ತೋಟ‌ದ‌ಲ್ಲಿ ಕ‌ದಿಯ‌ಬೇಕಾದ‌ ಪ್ರಸ‌ಂಗ‌ ಬ‌ರ್ತಿತ್ತು. ಮ‌ರ‌ ಹ‌ತ್ತುವುದ‌ರ‌ಲ್ಲಿ ಪ‌ಳ‌ಗಿದ್ದ ನಾನು (ಈಗ‌ ಮ‌ರೆತುಹೋಗಿದೆ) ಹ‌ತ್ತಿ ಹ‌ಣ್ಣುಗ‌ಳ‌ನ್ನು ಕೀಳ‌ಬೇಕಾಗುತ್ತಿತ್ತು. ಒಂದಿನ‌ ಎಲ್ಲಾ ಸೇರಿ, ಒಂದು ತೋಟ‌ಕ್ಕೆ ನುಗ್ಗಿದೆವು (ಒಳ್ಳೆ ಕಾಡೆಮ್ಮೆ, ಕಾಡು ಕೋಣ‌ ಹೋಗೋ ರೀತಿ ಹೇಳ್ತಾನ‌ಲ್ಲ ಅಂದ್ಕೊಂಡಿದ್ರೆ, ನಿಜ‌, ಹಾಗೇ ನುಗ್ತಿದ್ವಿ).

ಏಸಲ್ಲೇಶ್ವರ

ನಿನ್ನೆ ನಾನು ಬಾಬು ಮಲ್ಲೇಶ್ವರಂಲ್ಲಿ ಸೇವಾ ಸದನಕ್ಕೆ ಹೋಗೋಣ ಅಂತ ನಿರ್ಧಾರ ಮಾಡಿ ಹೊರಟ್ವಿ, ಅಲ್ಲಿ ಕಳಲು ವಾದನ ಮತ್ತೆ ಭರತ ನಾಟ್ಯ ಕಾರ್ಯಕ್ರಮ ಇತ್ತು. ನವರಂಗಿಂದ ಮಲ್ಲೇಶ್ವರಂಗೆ ನಡ್ಕೊಂಡು ಹೋಗ್ತಿದ್ವಿ. ಎಮ್ ಇ ಎಸ್ ಕಾಲೇಜ್ ಹತ್ರ ಹೋಗೋವಾಗ, ಕಾಲೇಜ್ ಎದ್ರುಗಡೆ ಏಸು, ಅಲ್ಲಾ ಮತ್ತೆ ಈಶ್ವರನ ಫೋಟೋ ಹಾಕಿ ಇಲ್ಲಿ ಮೂತ್ರ ಮಾಡ್ಬಾರ್ದು ಅಂತ ಹಾಕಿದ್ರು.

ನಾನು, ಬಾಬುಗೆ. ಬಾಬು, ಕುಡ್ಕ ಬಂದ್ರೆ ಯಾವ ದೇವ್ರು ಅಂತ ನೋಡೋಲ್ಲ ಸುಮ್ನೆ ಅಭಿಷೇಕ ಮಾಡಿ ಹೋಗ್ತಾನೆ ಅಂದೆ.

ಮತ್ತೆ, ಮೂರೂ ದೇವ್ರನ್ನ ಒಂದೇ ಫೋಟೋದಲ್ಲಿ ಹಾಕಿದ್ರೆ ಹೆಂಗೆ ಅಂದೆ? ಬಾಬು ಇದ್ದವನು, ಹಂಗೆ ಮಾಡಿದ್ರೆ ಒಳ್ಳೆದು ಬ್ರಹ್ಮ ವಿಷ್ಣು ಮಹೇಶ್ವರನ ಹಾಗೆ ಮೂರೂ ದೇವ್ರನ್ನ ಒಂದೇ ಫೋಟೋದಲ್ಲಿ ಹಾಕ್ಬಹುದು ಅಂದ.

ಒಳ್ಳೆ ಉಪಾಯ ಬಾಬು ಅಂದು, ಅದ್ಕೆ ಹೆಸ್ರು ಹಿಂಗೆ ಕೊಟ್ರೆ ಹೆಂಗೆ ಅಂದೆ.

ಹೆಂಗೆ ಚಿಕ್ಕು? ಅಂದ

"ಏಸಲ್ಲೇಶ್ವರ" ಅಂದೆ. ಮಸ್ತ್ ಐಡಿಯಾ ಅಂದ....

ತಿಥಿಗೆ ಕರೀತಾರೆ ಹೋಗಿಬರೋವಂತೆ

ಮೊನ್ನೆ ಊರಿಗೆ ಹೋಗಿದ್ದೆ, ಮನೆಯಲ್ಲಿ ಟಿ.ವಿ ನೋಡ್ತಿದ್ದೆ. ಗೌಡ್ರು ಫ್ಹಿಲ್ಮ್ ಹಾಕಿದ್ರು, ಕ್ಲೈಮ್ಯಾಕ್ಸ್ ಸೀನ್ ಬಂತು. ನಮ್ಮಮ್ಮನೂ ನೋಡೋದಕ್ಕೆ ಬಂದು ಕೂತ್ಕೊಂಡ್ರು. ಫ್ಹಿಲ್ಮಲ್ಲಿ ಶೃತಿ ಸಾಯ್ತಾಳೆ ಅವಳಣ್ಣ (ಅಂಬರೀಷ್) ಹೆಣವನ್ನು ಹೊತ್ಕೊಂಡು ಹೋಗ್ತಾನೆ. ಅಲ್ಲಿಗೆ ಚಿತ್ರದ ಕೊನೆ.

ನಮ್ಮಮ್ಮ ಅದನ್ನ ನೋಡಿ ‘ಛೆ, ಸುಡೋದನ್ನಾದ್ರೂ ತೋರಿಸ್ಬಹುದಿತ್ತು ಅಂತ ಅಂದ್ರು’

ನಾನು ಅದಕ್ಕೆ ‘ಸ್ವಲ್ಪ ಹೊತ್ತು ಕಾಯಿ, ಬ್ರೇಕ್ನ ನಂತರ ತಿಥಿಗೆ ಕರೀತಾರೆ ಹೋಗಿಬರೋವಂತೆ ಅಂದೆ’

........................................................................................................................‍‍‍‍‍‍‍‍‍‍‍‍

ಊಟಕ್ಕೆ ನಾನು, ನಮ್ಮಪ್ಪ ಕೂತಿದ್ವಿ. ತಟ್ಟೆಗೆ ಅಮ್ಮ ಪಲಾವ್ ಹಾಕಿದ್ರು. ಅದಾದ ಮೇಲೆ ಒಂದು ಪಾತ್ರೆಯಲ್ಲಿ ಅನ್ನ ತಂದಿಟ್ರು (ನಮ್ಮಲ್ಲಿ ಅನ್ನ ಜಾಸ್ತಿ ಮಾಡ್ತಾರೆ, ಮಾರನೇ ದಿನ ರೊಟ್ಟಿ ಮಾಡಲಿಕ್ಕೆ).

ನಮ್ಮಪ್ಪ ಅದನ್ನ ನೋಡಿ 'ಓಹೋ ಒಂದು ಖಂಡುಗ ಮಾಡಿದ್ದಾರೆ ನೋಡೋ ಮಾರಾಯ. ಇನ್ನೊಂದು ವಾರ ಅಡಿಗೆ ಮಾಡದೆ ಆರಾಮಾಗಿರ್ಬಹುದು ನಿಮ್ಮ ಅಮ್ಮ'
........................................................................................................................

ನಿನ್ನೆ ನಮ್ಮಮ್ಮ ನಮ್ಮೂರಿಂದ ಬೆಂಗ್ಳೂರಿಗೆ ಬರೋ ಬಸ್ಸಿನ ಕಂಡಕ್ಟರ್ ಹತ್ತಿರ ಹೋಗಿ 'ನಮ್ಮ ಮಗಳು ಬೆಂಗ್ಳೂರಲ್ಲಿ ಕಾಯ್ತಿರ್ತಾಳೆ ಅವಳಿಗೆ ಈ ಹಲಸಿನಹಣ್ಣು ತಲುಪಿಸಿಬಿಡಿ' ಅಂತ ಹೇಳಿದ್ರಂತೆ. ಅದ್ಕೆ ಕಂಡಕ್ಟರ್, ಡ್ರೈವರ್ ಇಬ್ರೂ ಸಹ 'ಅಮ್ಮ, ಹಣ್ಣು ಸುವಾಸನೆ ಬರ್ತಿದೆ, ನಾವೇ ಕತ್ತರಿಸಿ ತಿನ್ತೀವಿ' ಅಂದ್ರಂತೆ.

ಪ್ಯಾಪಿಲಾನ್

ಬಹುಶಃ ಇಂತಹದೊಂದು ಆತ್ಮಕಥೆ ಓದ್ತೀನಿ ಅಂತ ಅಂದ್ಕೊಂಡಿರ್ಲಿಲ್ಲ, ಮೀಟರ್ ಆಗಾಗ ಹೇಳ್ತಿದ್ದ. ಆಮೇಲೆ ದೊಡ್ಡ ಗಾತ್ರದ ಪುಸ್ತಕಗಳನ್ನ ಓದೋದಕ್ಕೆ ಯಾಕೋ ಹಿಂಜರಿಕೆ, ಮುಗಿಸೋಕಾಗಲ್ಲ ಅಂತ. ಒಂದು ಸಲ ಪ್ರಯತ್ನ ಕೂಡ ಮಾಡಿದ್ದೆ ಆದ್ರೆ ಕಾಲು ಭಾಗ ಮುಗಿಸುವಷ್ಟರಲ್ಲಿ ಸುಸ್ತಾಗಿ ಹೋಗಿದ್ದೆ.

ಮೊನ್ನೆ ಉಲ್ಲಂಗೆ ಕೇಳ್ದೆ ಯಾವ್ದಾದ್ರೂ ಇದ್ರೆ ಕೊಡು ಊರಿಗೆ ಹೋಗ್ತಿದೀನಲ್ಲ ಸಮಯ ಕಳೆಯೋದಕ್ಕೆ ಆಗತ್ತೆ ಅಂದೆ. ಪೂರ್ಣಚಂದ್ರ ತೇಜಸ್ವಿಯವರು ಅನುವಾದಿಸಿರುವ ಪ್ಯಾಪಿಲಾನ್ ಪುಸ್ತಕದ 2 ಭಾಗಗಳನ್ನು ಕೊಟ್ಟ.

ಇವತ್ತಿಗೆ ಒಂದನ್ನು ಮುಗಿಸಿ ಇನ್ನೊಂದನ್ನು ಕೈಗೆತ್ತಿಕೊಂಡಿದ್ದೇನೆ.

ಹತಾಶೆ,ನೋವು,ತಾಳ್ಮೆ,ಸಂಕಷ್ಟ,ಆತ್ಮವಿಶ್ವಾಸ,ನಂಬಿಕೆ,ಭರವಸೆ,ತಳಮಳ,ಬದುಕುವ ಹಂಬಲ,ಮಾನವೀಯತೆ,ಪ್ರಾಮಾಣಿಕತೆ ಇನ್ನೂ ಏನೇನೋ..... ಇವುಗಳ ಕೊನೆಯ ಹಂತ ಯಾವ ಮಟ್ಟದ್ದು ಅಂತ ತಿಳಿದುಕೊಳ್ಳಲು ಇದನ್ನೋದಬೇಕು.

ಯಾವುದೋ ಕ್ಷುಲ್ಲಕ‌ ಕಾರ‌ಣ‌ಕ್ಕೋ ಅಥ‌ವಾ ಬ‌ಲ‌ವಾದ‌ ಕಾರ‌ಣ‌ಕ್ಕೋ ತ‌ಮ್ಮನ್ನ ತಾವೇ ಬ‌ಲಿ ಕೊಡುವ‌ವ‌ರು ಇದ‌ನ್ನೊಮ್ಮೆ ಓದಿದ‌ರೆ ಬ‌ಹುಶ‌ಃ ಅವ‌ರಿನ್ನೊಮ್ಮೆ ಅದ‌ರ‌ ಬ‌ಗ್ಗೆ ಒಂದು ಕ್ಷಣ‌ವೂ ಯೋಚಿಸುವುದಿಲ್ಲವೇನೋ.