Saturday, December 4, 2010

ಸಮ್ಮಿಲನದ ಸವಿನೆನಪು

೩ ವಾರ ಬೆಂಗಳೂರಿನಲ್ಲಿಲ್ಲದ ಕಾರಣ, ಮೊನ್ನೆ ಶನಿವಾರ ಬಟ್ಟೆಗಳ ರಾಶಿಯೇ ನನ್ನ ಮುಂದಿತ್ತು, ರಾತ್ರಿಗೆ ಎಲ್ಲ ಬಟ್ಟೆ ಮುಗಿದು ಸುಸ್ತಾಗಿ ಹಾಸಿಗೆ ಮೇಲೆ ಬಿದ್ದೆ, ಅಲಾರಂ ಹೊಡೆದುಕೊಂಡಾಗ ಭಾನುವಾರ ಬೆಳಗ್ಗೆ ೭.೩೦, ಕಣ್ತುಂಬಾ ನಿದ್ರೆ, ಹಾಸಿಗೆಯಲ್ಲೇ ಹೊರಳಾಡಿದೆ ಹೋಗಲೋ ಬೇಡವೋ ಅಂತ, ಈ ಚಳಿಯಲ್ಲಿ ಇಂಥ ನಿದ್ರೆ ಹೇಗಪ್ಪ ಬಿಟ್ಟು ಹೋಗೋದು ಅಂದ್ಕೊಂಡು ಸ್ವಲ್ಪ ಹೊತ್ತು ಹೊರಳಾಡಿದೆ.

ಛೆ ಇಲ್ಲೇ ಇದ್ದರೂ ಹೋಗಲಿಲ್ಲ ಅಂದ್ರೆ, ಅಲ್ಲದೆ ಸಂಪದದಲ್ಲಿ ಬರುತ್ತೇನೆಂದು ಬೇರೆ ಹೇಳಿದ್ದೇನೆ, ಜೊತೆಗೆ ಇನ್ನೂ ಹುಡುಗ, ಅಲ್ಲದೆ ಅಷ್ಟೊಂದು ಆಸಕ್ತಿಯಿಂದ ಜಾಗ ಹುಡುಕಿ ಕಾರ್ಯಕ್ರಮದ ದಿನ, ಸಮಯ ತಿಳಿಸಿದ್ದಾರೆ, ಕೆಲವರು ಬರುತ್ತೇವೆ ಅಂದಿದ್ದಾರೆ, ಹೋಗದಿದ್ದರೆ ಕೊಟ್ಟ ಮಾತಿಗೆ ದ್ರೋಹ, ಏನನ್ನೋ ಕಳೆದುಕೊಂಡ ಭಾವ.

ಅಂತೂ ಎದ್ದೆ, ಅವಲಕ್ಕಿ ಮಾಡಿ ತಿಂಡಿ ತಿಂದು ನವರಂಗ್ ಕಡೆ ಹೆಜ್ಜೆ ಹಾಕಿದೆ, ಬಸ್ ಹತ್ತಿ ಕುಳಿತೆ. ಟ್ರಾಫಿಕ್ಕಿಲ್ಲ ಜೊತೆಗೆ ಸುಂದರ ವಾತಾವರಣ. ಮೆಜೆಸ್ಟಿಕ್ನಲ್ಲಿ ಕೇವಲ 15 ನಿಮಿಷದಲ್ಲಿದ್ದೆ, ಅಲ್ಲಿಂದ ೩೩೫ ಬಸ್ ಹತ್ತಿದೆ, ೨೦ ನಿಮಿಷದಲ್ಲಿ ದೊಮ್ಮಲೂರಿನ ವಾಟರ್ ಟ್ಯಾಂಕ್ಗೆ ಬಂದು ಬಿದ್ದಿದ್ದೆ.


ಅಲ್ಲಿಂದ ಶುರುವಾಯಿತು ಜಾಗ ಹುಡುಕುವ ಕಥೆ, ೨೦ ನಿಮಿಷ ಇಡೀ ದೊಮ್ಮಲೂರಿನ ೨ನೇ ಹಂತವನ್ನು ಸುತ್ತು ಹಾಕಿದ್ದೆ, ಆಟೋದವನನ್ನ, ಅಂಗಡಿಯವನನ್ನ, ರಸ್ತೆಯಲ್ಲಿ ಹೋಗುವವನನ್ನ, ರಸ್ತೆ ಗುಡಿಸುವವರನ್ನ, ಉಹೂಂ ಯಾರಿಗೂ ಗೊತ್ತಿಲ್ಲ. ಆ ಚಳಿಯಲ್ಲೂ ಬೆವರಿ ಹೋಗಿದ್ದೆ, ವಿಳಾಸ ಹುಡುಕಿ ಹುಡುಕಿ ಸುಸ್ತಾಗಿ ಹೋದ ನಾನು ಒಂದು ಹಂತಕ್ಕೆ ವಾಪಸ್ ಹೋಗುವ ಅಂತ ಅಂದ್ಕೊಂಡೆ, ಇಲ್ಲಿವರೆಗೂ ಬಂದು ಯಾಕೆ ಸೋಲಬೇಕು ಅಂತ ಮತ್ತೆ ಹುಡುಕಲು ಪ್ರಯತ್ನಿಸಿದೆ.


ಕಡೆಗೂ ಯಾರೋ ಒಬ್ಬರು ದೊಮ್ಮಲೂರಿನ ಕ್ಲಬ್ ಹತ್ತಿರ ಇದೆ ಹೋಗಿ ಅಂದರು, ಅಲ್ಲಿ ಹೋದಾಗ ಕಡೆಗೂ ಸಿಕ್ತು. ಹರೀಶ್ ಮೊದಲಿರುತ್ತಾರೆ ಅಂದುಕೊಂಡಿದ್ರೆ ಮಿಕ್ಕಿದವರನ್ನು ಸ್ವಾಗತಿಸುತ್ತಾರೆ ಅಂದ್ರೆ ಗೋಪಿಯವ್ರೆ ಹರೀಶ್ರನ್ನು ಸ್ವಾಗತಿಸಿದ್ದರು.


ನಾನು ಒಳಗೆ ಹೋದಾಗ ಪರಿಚಯವಾಗಿದ್ದು ಮಂಜು, ನನ್ನನ್ನು ಹೆಗಡೆಯವರಿಗೆ ತೋರಿಸಿ ಚಿಕ್ಕು ನೋಡಿ ಅಂದ್ರು, ಯಾವ ಚಿಕ್ಕು ಅಂತ ನೋಡಿದ ಹೆಗಡೆಯವರು ಹೈಸ್ಕೂಲ್ ಮಾಸ್ಟರ್ ತರ ಕಂಡ್ರು. ಹಾಗೆ ಗೋಪಿನಾಥ್ ಮತ್ತವರ ಕುಟುಂಬ, ಮಂಜು ಕುಟುಂಬ, ಹರೀಶ್, ತೇಜಸ್ವಿ, ನಾಗರಾಜ್, ಕವಿ ನಾಗರಾಜರು, ಶ್ಯಾಮಲಾ ಜನಾರ್ಧನನ್, ಅ೦ಜನ್ ಕುಮಾರ್,ರೂಪ ರಾವ್ ಎಲ್ಲರ ಪರಿಚಯವಾದ ಮೇಲೆ ಕಾರ್ಯಕ್ರಮ ಶುರುವಾಯ್ತು.


ಹೊರಗೆ ಹಕ್ಕಿಗಳ ಕಲರವ, ಒಳಗೆ ಸಂಪದಿಗರ ಕಲರವ. ಶ್ರೀಮತಿ ಗೋಪಿನಾಥ್ರವರ ಪ್ರಾರ್ಥನೆಯಿಂದ ಶುರುವಾದ ಕಾರ್ಯಕ್ರಮ ಹರೀಶ್ರವರ ನಿರೂಪಣೆಯೊಂದಿಗೆ ಮುಂದುವರೆಯಿತು, ಕಾರ್ಯಕ್ರಮಕ್ಕೆ ಚೆನ್ನಾಗಿಯೇ ತಯಾರಾಗಿ ಬಂದಿದ್ದ ಹರೀಶ್ರವರು ಪ್ರತಿಯೊಬ್ಬರನ್ನೂ ಚೆನ್ನಾಗಿ ಪರಿಚಯಿಸಿದರು. ೩ ಗಂಟೆಗಳ ಕಾಲ ಯಾವುದೇ ಅಡೆ ತಡೆಯಿಲ್ಲದೆ ಕಾವ್ಯ, ಕಥೆ, ಸಣ್ಣ ಕಥೆ, ವಿಮರ್ಶೆಗಳಲ್ಲಿ ಮುಂದುವರೆಯಿತು. ತೇಜಸ್ವಿಯವರ ಕವನಗಳು, ಮಂಜುರವರ ಅಪಘಾತದ ಕಥೆ ಮತ್ತೆ ಅವರು ಹೇಳುವ ಪರಿ ಮತ್ತು ಪದಗಳ ಸಂಯೋಜನೆ, ಗೋಪಿಯವರ ಅನುಭವ, ಆಸುಮನದ ಸಾಲುಗಳು, ಶ್ಯಾಮಲಾ ಜನಾರ್ಧನನ್ರವವರ ವಿಮರ್ಶೆ, ರೂಪಾರಾವ್ರವರ ಸಣ್ಣ ಕಥೆ, ಕವಿ ನಾಗರಾಜರ ಹಿತನುಡಿಗಳು, ಶ್ರೀಮತಿ ಶಾಂತೀ ಗೋಪಿನಾಥವರ ಪ್ರಾರ್ಥನೆ, ಅಂಜನ್ ಕುಮಾರರ ಅನುಭವ, ಆತ್ಮೀಯರವರ ಸುಂದರ ಸಾಲುಗಳು. ೩ ಗಂಟೆ ಕೇವಲ ೩ ನಿಮಿಷಗಳಲ್ಲಿ ಮುಗಿದುಹೋದ ಅನುಭವ. ಆಮೇಲೆ ಸಣ್ಣ ವಿರಾಮ.


ಗೋಪಿನಾಥ್ ಮತ್ತವರ ಕುಟುಂಬ, ಮಂಜು ಕುಟುಂಬ ಜೊತೆಗೆ ಶ್ಯಾಮಲಾ ಜನಾರ್ಧನನ್ರವರು ಸೇರಿ ಮಾಡಿದ ಕೋಲ್ಡ್ ಕಾಫಿ ಚೆನ್ನಾಗಿತ್ತು.
ಆಮೇಲೆ ಕೊನೆಯ ಹಂತ ವಂದನಾರ್ಪಣೆ. ಎಲ್ಲ ಮುಗಿದಾಗ ೨ ಗಂಟೆ.


ಅಂತೂ ಭಾನುವಾರವನ್ನು ಸಾರ್ಥಕಪಡಿಸಿಕೊಂಡ ಭಾವ ಬಸ್ಸಿನಲ್ಲಿ ಹತ್ತಿ ಕುಳಿತಾಗ ನನ್ನಲ್ಲಿ.

ಎಲ್ಲ ಮಂಜುನಾಥನ ಮಹಿಮೆ

ಹೊಸ ಪ್ರೊಜೆಕ್ಟ್ , ಮುಗಿಸುವ ಅವಧಿ ಬೇರೆ ಕಡಿಮೆ ಇದ್ದುದರಿಂದ ಹಗಲು-ರಾತ್ರಿಯೆನ್ನದೆ ಆ ವಾರ ಕೆಲಸ ಮಾಡಿದ್ದೆ. ಶುಕ್ರವಾರದ ದಿನ ಸ್ವಲ್ಪ ದಣಿವನ್ನು ನಿವಾರಿಸಿಕೊಳ್ಳಲು ಬೇಗ ಬಂದು ಹಾಸಿಗೆ ಮೇಲೆ ಬಿದ್ದೆ.

ನಮ್ಮ ಗುಂಪಿನಲ್ಲಿರೋ ಹುಡುಗರಲ್ಲಿ ಒಂದಷ್ಟು ಜನದ್ದು ಆಗ್ಲೇ ಮದುವೆ ಆಗಿದೆ. ಇನ್ನೊಂದು ಸ್ವಲ್ಪ ಹುಡುಗರ ಲಗ್ನ ಆಗಿದೆ, ಮತ್ತೆ ಕೆಲವರು ಇನ್ನೂ ಹುಡುಗಿಯರನ್ನ ಹುಡುಕ್ತಿದ್ದಾರೆ.

ಕೊನೆ ಕೆಟಗರಿಯಲ್ಲಿ ನಾನೂ ಒಬ್ಬ.

ನನ್ನ ಆಫೀಸಲ್ಲೂ ಸಹ ನನ್ನ ಜೊತೆಗೆ ಕೆಲಸಕ್ಕೆ ಸೇರಿದ ಬಹುತೇಕ ಮಂದಿ ಮದುವೆ ಆಗಿ ಇನ್ನು ಸ್ವಲ್ಪ ದಿನಗಳಲ್ಲಿ ಮತ್ತೊಂದು ಗುಡ್ ನ್ಯೂಸ್ ಕೊಡೊ ಹಂತದಲ್ಲಿದ್ದಾರೆ.

ನಾನೂ ಸಹ ಊರಿಗೆ ಹೋದಾಗಲೆಲ್ಲ 'ಮದುವೆ ಗಿದುವೆ ಮಾಡೋ ಏನಾದರೂ ಯೋಚನೆ ಇದೆಯಾ ??' ಅಂತ ಕೇಳಿದ್ರೆ....

'ಕಾಫೀ ತಗಬರ್ರೋ ಅಂತ ನಮ್ಮಪ್ಪ ಪೇಪರ್ ಒಳಗೆ ಮುಳುಗಿಬಿಡ್ತಾರೆ'

'ಪಕ್ಕದ್ಮನೆ ರಾಜುಗೆ ೩೪ ವರ್ಷ, ಅದ್ಯಾವಾಗ ಮದುವೆ ಮಾಡ್ತಾರೋ ಏನೋ' ಅಂದು ಮಿಕ್ಸಿ ಆನ್ ಮಾಡ್ತಾರೆ.


ಈ ಸಲ ಏನಾದರಾಗಲಿ ನಾನು ಹೇಳಿದ್ದು ಕೇಳದೆ ಹೋದರೂ ನನ್ನ ಬಾಡಿ ಕಂಡಿಶನ್ ನೋಡಿ ತಿಳಿದುಕೊಳ್ಳಲಿ ಅಂತ ಕಟಿಂಗ್ ಮಾಡಿಸದೆ ಕೂದಲು ಹಾಗೇ ಬಿಟ್ಟೆ, ಶೇವಿಂಗ್ ಸಹ ಮಾಡಿಕೊಳ್ಳಲಿಲ್ಲ. ಈ ಪರಿಸ್ಥಿತಿಯಲ್ಲಿ ಊರಿಗೆ ಹೊರಟೆ.

ನಮ್ಮ ಪಕ್ಕದ ಊರಲ್ಲಿ ಹಿಪ್ಪಿ ಮಂಜ ಅಂತಿದ್ದ, ಅವ್ನು ಕೂದಲು ತುಂಬಾ ಬಿಟ್ಟಿದ್ದರಿಂದ ಜನ ಹಾಗೇ ಕರೆತಿದ್ರು, ನನ್ನನ್ನ ನೋಡಿದ್ರೆ ನಮ್ಮೂರಿನವರು ಹಿಪ್ಪಿ ಚಿಕ್ಕ ಅಂತಿದ್ರೇನೋ.

ಬಸ್ಸಿಂದಿಳಿದು ಮನೆಗೆ ಹೋದ ತಕ್ಷಣ ನನ್ನನ್ನು ನೋಡಿ 'ಯಾಕೆ ಮಗಾ ಹಿಂಗಾಗಿದೀಯಾ, ಮದುವೆ ಮಾಡಿಲ್ಲ ಅಂತ ಕೊರಗಿ ಹಿಂಗಾಗಿದೀಯಾ?, ಆಯ್ತು ಹುಡುಗಿ ಹುಡುಕಿ ಮದುವೆ ಮಾಡೋಣ ತಗೋ' ಹೇಳ್ತಾರೇನೋ

ಅಂತ ಅಂದ್ಕೊಂಡು ಖುಷಿಯಾಗಿ ಮನೆ ಕಡೆ ಹೆಜ್ಜೆ ಹಾಕಿದೆ.

ಹಾಗೇ ನಡೆದುಕೊಂಡು ಹೋಗುವಾಗ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಂಜ
'ಗೌಡ್ರೆ, ಚೆನ್ನಾಗಿದೀರ? ಈಗ ಬಂದ್ರಾ? ಯಾಕೆ ಹಿಂಗೆ ಸೊರಗಿ ಹೋಗಿದ್ದೀರಾ? ಸರ್ಯಾಗಿ ಊಟ ಹಾಕಲ್ವ ಅಲ್ಲಿ?' ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ.

'ಹಂಗೇನಿಲ್ಲ, ಈಗ ಬಂದೆ, ಅದೆಲ್ಲ ಇರ್ಲಿ ಏನು ಕೆಲಸ' ಅಂದೆ.

'ಗೊಬ್ರ ಹಾಕ್ತಿದೀವಿ'

'ಸರಿ, ಕೆಲಸ ಮಾಡಿ' ಅಂತ ಮನೆ ಕಡೆ ನಡೆದೆ.


ಮನೆ ಹತ್ತಿರ ಹೋಗುತ್ತಿದ್ದಂತೆ ಸಾಮಾನ್ಯವಾಗಿ ಬಾಲ ಅಲ್ಲಾಡಿಸಿಕೊಂಡು ಸೊಂಟ ಕುಣಿಸಿಕೊಂಡು ಸ್ವಾಗತಿಸುತ್ತಿದ್ದ ಮೋತಿ ನನ್ನನ್ನು ನೋಡಿ ಒಂದೇ ಸಮನೆ ಬೊಗಳುವುದಕ್ಕೆ ಶುರು ಮಾಡ್ತು (ನನ್ನ ಗುರುತು ಗೊತ್ತಾಗ್ಲಿಲ್ಲ ಅಂತ ಕಾಣ್ಸತ್ತೆ).

ಛೆ ಎಂಥಾ ಸುಸ್ವಾಗತ ಮನೆ ಮಗನಿಗೆ :(

ನಾಯಿ ಬೊಗಳುವ ಶಬ್ಧಕ್ಕೆ ಹೊರಬಂದ ಅಮ್ಮ

'ಯಾಕೆ ಲೇಟ್, ಟ್ರೈನ್ ಲೇಟ್ ಬಂತಾ?'

'ಹೂನಮ್ಮ'

'ಕೈ ಕಾಲು ಮುಖ ತೊಳ್ಕೋ, ಕಾಫೀ ತರ್ತೀನಿ'

ಕಾಫೀ ತಂದಾದ್ಮೇಲೆ 'ಯಾಕೋ, ಕಟಿಂಗ್ ಶೇವಿಂಗ್ ಏನೂ ಮಾಡ್ಕೊಂಡಿಲ್ಲ. ತುಂಬಾ ಕೆಲಸ ಅಂತ ಕಾಣತ್ತೆ, ಪಾಪ. ಅದೇನು ಸಾಪ್ಟೆರೋ ಏನೋ, ಅದ್ಯಾಕಂಗೆ ಕೆಲಸ ಕೊಡ್ತಾರೋ, ಶನಿವಾರ ಭಾನುವಾರನೂ ಕೆಲಸ ಮಾಡ್ಸಿದ್ರೆ ಹೆಂಗೆ. ಒಂದಿನ ರಜೆ ಹಾಕಾದ್ರೂ ಹೋಗಿ ಕಟಿಂಗ್ ಮಾಡ್ಸ್ಕಂಡು ಬರ್ಬಾರ್ದೆ?'

ನನಗೆ ರಜೆಗೆನು ಕೊರತೆ, ಈಗಾಗ್ಲೇ ೨೮ ರಜೆ ಇನ್ನೂ ಬಾಕಿ ಇದೆ, ಜೊತೆಗೆ ಕಾಂಫ್-ಆಫ್ಗಳು. ಅಲ್ದಲೇ ಪ್ರತಿ ತಿಂಗಳೂ ೧.೭೫ ರಜೆ.


ಸಂಜೆಗೆ ನಮ್ಮಪ್ಪ ಕೆಲಸ ಮುಗಿಸಿಕೊಂಡು ಮನೆಗೆ ಬಂದ್ರು.

'ರೀ ಅವನನ್ನು ನೋಡಿದ್ರಾ?' ಅಮ್ಮ ಅಪ್ಪನನ್ನು ಕೇಳಿದ್ರು.

ಅಬ್ಬ, ಈಗಲಾದರೂ ವಿಷಯಕ್ಕೆ ಬರಬಹುದು ಅಂದ್ಕೊಂಡು ಹಾಲ್ನಲ್ಲಿ ಪೇಪರ್ ಓದ್ತಿದ್ದವನು ಇವರ ಮಾತು ಕೇಳೋದಕ್ಕೆ ಕಿವಿ ಅಗಲಿಸಿಕೊಂಡೆ.

'ಯಾಕೆ, ಏನಾಯ್ತು?'

'ಕಂಪನಿಯಲ್ಲಿ ತುಂಬಾ ಕೆಲಸ ಅಂತೆ, ಕಟಿಂಗ್ ಶೇವಿಂಗ್ ಏನೂ ಮಾಡಿಲ್ಲ. ಮೊದಲು ಹೋಗಿ ಅಲ್ದೂರಲ್ಲಿ ಕಟಿಂಗ್ ಮಾಡಿಸಿಕೊಂಡು ಬನ್ನಿ'

'ನಮ್ಮವೇ ಆಫೀಸ್, ತೋಟ-ಗದ್ದೆ, ಆಳು-ಕಾಲು ಅಂತ ಸಾವಿರಾರು ಹಲ್ಲoಡೆ ಇರ್ತವೆ, ಇವಕ್ಕೆ ಅವ್ರ ಕೆಲಸ ಮಾಡ್ಕೊಳ್ಳೋದಕ್ಕೆ ಕಷ್ಟ'

'ಕಾಫೀ ತರದಿಲ್ಲಿ' ಅಂತ ಕಾಫೀ ತರಿಸಿ ಕುಡಿದು 'ನಡಿಯೋ' ಅಂದು ಕಾರನ್ನು ಅಲ್ದೂರಿಗೆ ತಿರುಗಿಸಿದರು.


ನಮ್ಮಜ್ಜನಿಗೆ ಕಟಿಂಗ್ ಮಾಡ್ತಿದ್ದವರ ಹತ್ತಿರ (ಸಣ್ಣವನಿದ್ದಾಗ ಅಜ್ಜ ಆದ್ಮೇಲೆ ನನ್ನ ಕಟಿಂಗ್ ಸರದಿ ಇರ್ತಿತ್ತು) ಕರೆದುಕೊಂಡು ಹೋದರು ನಮ್ಮಪ್ಪ.

ಆ ವಯ್ಯಂಗೆ ಆಗ್ಲೇ ೫೦ ವರ್ಷ ಇತ್ತು, ಈಗ ಏನಿಲ್ಲ ಅಂದ್ರೂ ೬೫.

ಹೈಟೆಕ್ ಸಿಟಿಯ ಹೈಟೆಕ್ ಕಟಿಂಗ್ ಸಲೂನಿನಲ್ಲಿ ಕಟಿಂಗ್ ಮಾಡಿಸಿಕೊಳ್ಳುವ ಅವಕಾಶವಿದ್ದರೂ ವಿಧಿ ನನ್ನನ್ನ ಈ ಸಣ್ಣ ಊರಲ್ಲಿ ಈ ಅಜ್ಜನ ಬಳಿಗೆ ಕರೆದುಕೊಂಡು ಬಂದಿತ್ತು (ವಿಧಿ ಅನ್ನೋದಕ್ಕಿಂತ ನಾ ಆಡಿದ ಆಟವೇ ನನಗೆ ತಿರುಗುಬಾಣವಾದಂತಹ ಪರಿಸ್ಥಿತಿ)

ಕಟಿಂಗ್ ಮಾಡೋ ಛೇರ್ ಮೇಲೆ ಹತ್ತಿದ ತಕ್ಷಣ ಲರಕ್ ಅಂತ ಶಬ್ದ ಬಂತು, ಸ್ವಲ್ಪ ಹೊತ್ತಿಗೆ ಶವದ ಮೇಲೆ ಹಾಕೋ ಬಿಳಿ ಬಟ್ಟೆಯಂತಹ ವಸ್ತ್ರ ನನ್ನ ಮೈಯನ್ನಾವರಿಸಿತು .

ದೊಡ್ಡ ಕನ್ನಡಕ ಹಾಕಿಕೊಂಡ ಅಜ್ಜನ ಕೈಲಿದ್ದ ಕತ್ತರಿ ನಡುಗುತ್ತಿತ್ತು (ವಯಸ್ಸಿನ ಪರಿಣಾಮ). ಅಜ್ಜ ಒಂದೊಂದೇ ಕೂದಲನ್ನು ನಡುಗುತ್ತಿದ್ದ ತನ್ನ ಕೈಯಿಂದ ಕತ್ತರಿಸುತ್ತಿದ್ದ.
ಸುಮಾರು ೩೦ ನಿಮಿಷ ಆದ್ಮೇಲೆ ಅಜ್ಜ 'ಕಟಿಂಗ್ ಆಯ್ತು ಶೇವಿಂಗ್ ಮಾಡ್ಲಾ' ಅಂದ್ರು.

ನಾನು ನನ್ನ ತಲೆಯನ್ನು ಕನ್ನಡಿಯಲ್ಲಿ ನೋಡಿದೆ, ಕೈಯಿಂದ ಕೂದಲುಗಳನ್ನು ಮುಟ್ಟಿದೆ, ಬಹುಷ ಇಲಿಗೆ ಬಿಟ್ಟಿದ್ರೂ ನನ್ನ ತಲೆಯನ್ನು ನೀಟಾಗಿ ಹೆರೆಯುತ್ತಿತ್ತೇನೋ :(

ನನ್ನ ತಲೆಯನ್ನು ನೋಡಿದ್ರೆ ಹಳ್ಳಿಯ ಟಾರ್ ರೋಡ್ ನೆನಪಾಗುವ ಹಾಗಿತ್ತು.

ನಮ್ಮಪ್ಪನಿಗೆ ತೋರಿಸಿ 'ನಿಮಗೆ ಕಟಿಂಗ್ ಮಾಡ್ಸೋಕೆ ಇನ್ಯಾವ ಪುಣ್ಯಾತ್ಮನೂ ಸಿಕ್ಲಿಲ್ಲ್ವ, ಈ ಲುಕ್ಕಲ್ಲಿ ನಾನೇನಾದ್ರೂ ಆಫೀಸಿಗೆ ಹೋದ್ರೆ ವಾಚ್ಮನ್ ಆಗೊಕೂ ಲಾಯಕ್ಕಿಲ್ಲ ಅಂತಾರೆ, ಮೊದ್ಲು ಚಿಕ್ಮಗಳೂರಲ್ಲಿರೋ ಯಾವ್ದಾದ್ರೂ ಒಳ್ಳೆ ಕಟಿಂಗ್ ಸಲೂನಿಗೆ ಕರೆದುಕೊಂಡು ಹೋಗಿ'

ನನ್ನ ಅವಸ್ಥೆ ನೋಡಲಾರದ ನಮ್ಮಪ್ಪ ಚಿಕ್ಕಮಗಳೂರಿನ ಹಾದಿಯಲ್ಲಿ ಸಾಗಿದರು.

ಮಾರ್ಗ ಮಧ್ಯದಲ್ಲಿ ನಮ್ಮ ಸಂಬಂದಿಕರೊಬ್ಬರು ಸಿಕ್ಕಿದ್ರು 'ಏನು ಗುಂಡಣ್ಣ, ಆರಾಮ? ಮಳೆಯೆಲ್ಲಾ ಚೆನ್ನಾಗಾಯ್ತ?, ಕಾಫೀ ಹೇಗಿದೆ? ಎಲ್ಲಿಗೆ ಹೊರಟ್ರಿ?'

ಎಲ್ಲವಕ್ಕೂ ಉತ್ತರಿಸಿದರು ನಮ್ಮಪ್ಪ (ನನ್ನ ಕಟಿಂಗ್ ವಿಷಯನೂ ಬಂತು). ಸ್ವಲ್ಪ ಹೊತ್ತು ಕಷ್ಟ ಸುಖ ಮಾತಾಡಿದ ಅವರು ನನ್ನ ಕಡೆಗೆ ತಿರುಗಿದರು. ಈ ಪುಣ್ಯಾತ್ಮನಾದ್ರೂ ಮದ್ವೆ ವಿಷ್ಯ ಎತ್ತುತ್ತಾರ ಅಂತ ಅವರ ಮುಖ ನೋಡಿದೆ.

'ಏನು ಚೇತನ್, ಯಾವಾಗ ಬಂದೆ ಬೆಂಗಳೂರಿಂದ? ಅಲ್ಲಪ್ಪ, ಅಲ್ಯಾವುದೂ ಕಟಿಂಗ್ ಶಾಪ್ ಸಿಗಲೇ ಇಲ್ವಾ, ಇಲ್ಲಿಗೆ ಬರಬೇಕಿತ್ತಾ. ಏನು ಹುಡುಗ್ರಪ್ಪ ನೀವು. ಸಾಫ್ಟ್ವೇರ್ ಇಂಜಿನಿಯರ್ಸ್ ಅಂತೀರಾ, ಇಷ್ಟೊಂದು ಕಂಜೂಸ್ ಇರಬಾರದು. ೫-೬ ಅಂಕಿ ಸಂಬಳ ತಗೋತೀರಾ, ೧೦-೨೦ ರೂ ಮುಖ ನೋಡ್ತೀರಾ?'

'ಅಂಕಲ್, ನೆನ್ನೆ ಬೆಂಗಳೂರಿಂದ ಬಂದು ನಮ್ಮೂರ ಬಸ್ಸಿಗೆ ಕಾಯ್ತಿದ್ದೆ. ನಿಮ್ಮ ಮಗಳು ಕಾಲೇಜ್ ಟೈಮಲ್ಲಿ ಯಾವ್ದೋ ಹುಡುಗನ ಜೊತೆ ಬೈಕಲ್ಲಿ ಹೋಗ್ತಿದ್ಲು, ಓದೋ ವಯಸ್ನಲ್ಲಿ ಹಿಂಗೆಲ್ಲ ಸುತ್ತಾಡ್ಬಾರ್ದು ಅಂಕಲ್, ಮೊದ್ಲೇ ೧ ವರ್ಷ ಫೈಲ್ ಬೇರೆ ಆಗಿದ್ದಾಳೆ. ಇದೆ ಊರಲ್ಲಿ ಬಾಳಿ ಬೆಳಗಬೇಕಾದವಳು ಯಾರ್ಯಾರ ಜೊತೆ ತಿರುಗಾಡ್ತಿದ್ರೆ ನಿಮಗೆ ಕೆಟ್ಟ ಹೆಸರು ಅಂಕಲ್ ' ನನ್ನ ಸಿಟ್ಟನ್ನು ಒಂದೇ ಸಮನೆ ಅವರ ಮೇಲೆ ಕಾರಿದೆ.

ನನ್ನ ಮುಖ ಸಹ ನೋಡದೆ 'ಗುಂಡಣ್ಣ ಬರ್ತೀನಿ' ಅಂದು ಅಲ್ಲಿಂದ ಕಾಲ್ಕಿತ್ತರು.

ನಮ್ಮಪ್ಪ ನನ್ನನ್ನ ಗುರಾಯ್ಸ್ತಿದ್ರು. 'ಅಪ್ಪ ಕಟಿಂಗ್ ಸಲೂನ್ ೮-೮.೩೦ಕ್ಕೆ ಮುಚ್ತಾರೆ, ಬೇಗ ನಡೀರಿ'.

ಪೇಟೆಗೆ ಹೋಗಿ ನೋಡಿದ್ರೆ ಎಲ್ಲಾ ಕಟಿಂಗ್ ಸಲೂನ್ ಕ್ಲೋಸ್', ವಿಧಿಯಿಲ್ಲದೆ ವಾಪಸ್ ಮನೆಗೆ ಬಂದ್ವಿ.


ಮಾರನೆ ದಿನ ಮಧ್ಯಾಹ್ನ ಬೆಂಗ್ಳೂರಿಗೆ ಹೊರಟೆ. 'ಹೋದ ತಕ್ಷಣ ಕಟಿಂಗ್ ಮಾಡಿಸಿಕೊಳ್ಳೋ' ಅಂತ ಅಮ್ಮ ನಾನು ಹೊರಡೋವಾಗ ಮತ್ತೆ ಹೇಳಿದ್ರು.

ಟ್ರೈನಲ್ಲಿ ಪ್ರಯಾಣ ಮಾಡೋವಾಗ ಸೆಖೆ ಅಂತ ಬಾಗಿಲ ಹತ್ತಿರ ಹೋಗಿ ನಿಂತಿದ್ದೆ, ಒಬ್ಬ ಭಿಕ್ಷುಕ ಬಂದ, ಪರ್ಸಿಂದ ೨ ರೂ ತೆಗೆದು ಕೊಡೋದಕ್ಕೆ ಹೋದೆ.

ಅವನು ನನ್ನನ್ನೇ ಮೇಲಿಂದ ಕೆಳಗೆ ನೋಡಿದ. ವಿಚಿತ್ರವಾದ ತಲೆಗೂದಲು, ಗಡ್ಡ, ಹರಿದ ಜೀನ್ಸ್ ಪ್ಯಾಂಟ್ ನೋಡಿ ಇವನ್ಯಾರೋ ನನ್ನ ಕೆಟಗರಿಯವನೇ ಅಂದ್ಕೊಂಡು ನನ್ನಿಂದ ದುಡ್ಡು ತೆಗೆದುಕೊಳ್ಳದೆ ಮುಂದೆ ಹೋದ (ಅಬ್ಬಬ್ಬ ಒಂದು ಮದುವೆ ಆಗ್ಬೇಕಂದ್ರೆ ಏನೆಲ್ಲಾ ಅವಮಾನ ಸಹಿಸಬೇಕಾಗತ್ತೆ ಅಂತ ಗೊತ್ತಾಗಿದ್ದು ಆಗ).

ಬೆಂಗ್ಳೂರು ತಲ್ಪೋಹೊತ್ತಿಗೆ ಲೇಟ್ ಆದದ್ದರಿಂದ ಬೆಳಗ್ಗೆ ಏಳುವುದು ತಡವಾಯಿತು, ಆಫೀಸಿಗೆ ಹೋಗಿ ಸಂಜೆ ವಾಪಸ್ ಬಂದಾದ್ಮೇಲೆ ಕಟಿಂಗ್ ಮಾಡಿಸಿಕಂಡ್ರಾಯ್ತು ಅಂತ ಆಫೀಸಿಗೆ ಹೊರಟೆ.

ಕೋರಮಂಗಲಕ್ಕೆ ಹೋಗೋ ೧೭೧ ಬಸ್ ತುಂಬಿ ತುಳುಕಾಡ್ತಿದ್ರೂ ನನ್ನ ಪಕ್ಕದಲ್ಲಿ ಯಾರೂ ಬಂದು ಕುಳಿತುಕೊಳ್ಳಲಿಲ್ಲ. ಬಹುಷ ಇಷ್ಟೆಲ್ಲಾ ಆಗಿದ್ರಲ್ಲಿ ಇದೊಂದೆ ನನಗೆ ಅನುಕೂಲಕರವಾದ ಪ್ರಸಂಗ :).


ಆಫೀಸಿನಲ್ಲಿ ನನ್ನ ಪಕ್ಕ ಕೂರೋ ಆಂಟಿ 'ಇವತ್ತೊಂದಿನ ಬೇರೆ ಡೆಸ್ಕಲ್ಲಿ ವರ್ಕ್ ಮಾಡ್ತೀನಿ' ಅಂತ ಶಿಫ್ಟ್ ಆಯ್ತು.

ಸ್ವಲ್ಪ ಹೊತ್ತಾದ ಮೇಲೆ ಮ್ಯಾನೇಜರ್ ಮೀಟಿಂಗ್ ಕರೆದ. ಬಹುಷ ಅಪ್ರೈಸಲ್ ಮೀಟಿಂಗ್ ಇರ್ಬೇಕು ಅಂದ್ಕೊಂಡು ಮನಸ್ನಲ್ಲೇ ಮಂಡಿಗೆತಿಂತಾ ಮೀಟಿಂಗ್ ರೂಮಿನತ್ತ ಹೆಜ್ಜೆ ಹಾಕಿದೆ.

ಅಲ್ಲಿ ಮ್ಯಾನೇಜರ್ 'ಚೇತನ್, ಆ ಮಾಡ್ಯೂಲ್ ನಿಮ್ಮ ಕೈಲಿ ಮಾಡೋಕಾಗ್ಲಿಲ್ಲ ಅಂದಿದ್ರೆ ಇನ್ನೊಬ್ರಿಗೆ ಅಸೈನ್ ಮಾಡ್ತಿದ್ದೆ, ನೀವು ಈ ರೀತಿ ತಲೆ ಕೆಡಿಸಿಕೊಳ್ತೀರಾ ಅಂತ ಗೊತ್ತಿರಲಿಲ್ಲ. ಸುಮ್ನೆ ಟೈಮ್ ಸಹ ವೇಸ್ಟ್ ನೋಡಿ. ಯು ನೋ? ಆಲ್ ದೀಸ್ ತಿಂಗ್ಸ್ ವಿಲ್ ಆಫೆಕ್ಟ್ ಯುವರ್ ಅಪ್ರೈಸಲ್, ಸ್ವಲ್ಪ ಕೆಲಸದ ಕಡೆ ಗಮನ ಕೊಡಿ'.

ಪಕ್ಕದಲ್ಲಿರೋ ಪ್ರೊಜೆಕ್ಟರ್ ತಗೊಂಡು ಅವನ ತಲೆಗೆ ಕುಕ್ಕೊವಷ್ಟು ಕೋಪ ಬಂತು. ಕೆಲಸ ಅಸೈನ್ ಮಾಡಿ ಇನ್ನು ಒಂದು ವಾರ ಆಗಿಲ್ಲ, ನನ್ನ ಗೆಟಪ್ ನೋಡಿ ಹಿಂಗೆ ಹೇಳಿದ್ನಲ್ಲ ಅಂತ ಸಿಟ್ಟು ಬಂತು.

'ಓಕೆ' ಅಂದು ಮೀಟಿಂಗ್ ಮುಗಿಸಿಕೊಂಡು ನನ್ನ ಡೆಸ್ಕ್ ಹತ್ತಿರ ಹೋದೆ.


ಸಂಜೆ ಡ್ಯೂಟಿ ಮುಗಿಸಿ ಕಟಿಂಗ್ ಸಲೂನಿಗೆ ಹೋದೆ. ಕಟಿಂಗ್ ಮಾಡೋನು ನನ್ನ ಕೂದಲನ್ನು ಒಂದ್ನಿಮಿಷ ನೋಡಿ 'ಸಾರ್, ನಿಮ್ಮ ಕೂದಲು ಕಟಿಂಗ್ ಮಾಡೋಕಾಗಲ್ಲ, ಇದಕ್ಕೊಂದೇ ಪರಿಹಾರ'

'ಏನದು'

'ಬೋಳ ಮಾಡಿಸ್ಬಿಡಿ'

ಬೋಳ ??:(

ಶಾಕ್ ಹೊಡೆದಿದ್ರೂ ಆ ರೀತಿ ಶಾಕ್ ಆಗ್ತಿರ್ಲಿಲ್ವೇನೋ. ನಾನು ಬೋಳ ಆಗೋದನ್ನ ಕನಸಿನಲ್ಲಿಯೂ ಊಹಿಸಿಕೊಂಡಿರಲಿಲ್ಲ.
ಅಕಸ್ಮಾತ್ ಆಗಿದ್ರೆ ಸಣ್ಣವನಿದ್ದಾಗ ಧರ್ಮಸ್ಥಳದಲ್ಲಿ ಹರಕೆ ತೀರಿಸೋದಕ್ಕೆ.
ಅದು ಬಿಟ್ರೆ ನನ್ನ ಹಣೆಬರಹ ಸರಿಯಿಲ್ಲ ಅಂದ್ರೆ ವಯಸ್ಸಾದ ಮೇಲೆ.

ಒಂದು ಸ್ವಲ್ಪ ಹೊತ್ತು ಯೋಚನೆ ಮಾಡಿ 'ಬೇಡ ಬಿಡಿ' ಅಂತ ಅಲ್ಲಿಂದ ಎದ್ದು ವಾಪಸ್ ಮನೆಗೆ ಹೋದೆ.

ರಾತ್ರಿ ಹೊರಟು ಧರ್ಮಸ್ಥಳಕ್ಕೆ ಬೆಳಗ್ಗೆ ತಲುಪಿದೆ.

ಬೋಳ ಮಾಡಿಸಿಕೊಳ್ಳಲು ಹೋಗಿ ಕುಳಿತೆ. ಕೂದಲುಗಳ ಮಾರಣಹೋಮ ನೋಡಲಾರದೆ ಕಣ್ಮುಚ್ಚಿಕೊಂಡು ಕುಳಿತೆ. ಕೇವಲ ೨ ನಿಮಿಷದಲ್ಲಿ ಕೂದಲುಗಳು ನನ್ನ ಪಾದ ಸೇರಿದ್ದವು.
ತಲೆಗೆ ಒಂದೆರಡು ಏಟು ಪಟ್ ಅಂತ ಬಿತ್ತು 'ಮಸಾಜ್ ಮಾಡ್ತಿರಬೇಕು' ಅಂದ್ಕೊಂಡು ಹಾಗೆ ಕುಳಿತೆ.

'ಚಿಕ್ಕು ಚಿಕ್ಕು' ಅಂತ ಮತ್ತೆ ಪಟ್ ಅಂತ ಏಟು ಬಿದ್ದಾಗ ಕಣ್ಣುಜ್ಜಿಕೊಂಡು ಎದ್ದೆ.
ಎದುರಿಗೆ ಉಲ್ಲ!!!!!!!!!! ನೀನೇನೋ ಇಲ್ಲಿ ಅಂದೆ ಯಾವಾಗ ಬಂದೆ ಧರ್ಮಸ್ಥಳಕ್ಕೆ? ಮೊದ್ಲೇ ಹೇಳಿದ್ರೆ ಒಟ್ಟಿಗೆ ಬರಬಹುದಿತ್ತಲ್ಲ??

ಧರ್ಮಸ್ಥಳ??? ಯಾಕೋ ಚಿಕ್ಕು ಮೈ ಹುಷಾರಿಲ್ವ?? ಎಲ್ಲಿ ಕಳೆದು ಹೋಗಿದೀಯ? ಧರ್ಮಸ್ಥಳ ತುಂಬಾ ದೂರ ಇದೆ, ' ಅಂದ.

ಓ, ಹಾಗಾದರೆ ಇಷ್ಟೊತ್ತು ಕಂಡಿದ್ದು ಕನಸು, ತಲೆ ಮುಟ್ಟಿ ನೋಡಿದೆ, ಕೂದಲುಗಳು ಹಾಗೆ ಇತ್ತು, ಗಡ್ಡಕ್ಕೆ ಕೈ ಹಾಕಿದೆ, ಗಡ್ಡ ಇಲ್ಲ :)

'ಬರ್ತೀಯಾ, ನಳಪಾಕಕ್ಕೆ ತಿಂಡಿಗೆ ಹೋಗಣ? ಮೀಟರ್, ವೆಂಕ, ಸೌಜ, ಬಾಬು, ಧೋಪ ಆಗ್ಲೇ ಅಲ್ಲಿಗೆ ಹೋಗಿದ್ದಾರೆ'

'ತಡಿ ಸ್ವಲ್ಪ ಹೊತ್ತು, ರೆಡಿ ಆಗ್ತೀನಿ' ಅಂದು ದೇವರ ಕೋಣೆಗೆ ಕೈ ಮುಗಿಯಲಿಕ್ಕೆ ಹೋದೆ.

ದೇವರ ರೂಮಿನಲ್ಲಿದ್ದ ಮಂಜುನಾಥ ನನ್ನನ್ನು ನೋಡಿ ನಗುತ್ತಿದ್ದ

Friday, July 9, 2010

ನನ್ನೂರ ನೋಡು ಬಾರಾ





ನನ್ನ ಮನೆಯ ಬಲಕ್ಕಿರುವುದು ಗಿರಿ
ಮುಂಜಾನೆಯೆದ್ದು ಅದ ನೋಡುವುದು ಒಂದು ಸಿರಿ

ಎಡಕ್ಕಿರುವುದು ರಂಗನ ಬೆಟ್ಟ
ಮುಸ್ಸಂಜೆ ನೋಡಬೇಕು ಅದರ ರಂಗಿನಾಟ

ನೋಡುತ್ತಾ ನಿಂತಿರುವೆ ನನ್ನೂರು
ಸಾಟಿಯಿಲ್ಲ ಅದಕ್ಕೆ ಯಾವೂರೂ

Wednesday, July 7, 2010

ಬರೆಯಲಾಗದ ಕವಿತೆ

ನಾ ಬರೆಯಹೋದೆ ಕವಿತೆ
ಬರೆಯಲಾಗದೆ ಕುಳಿತೆ

ನೆನಪಾಗುತ್ತಿದ್ದವು ಪದಗಳು ಅಲ್ಲೊಂದು ಇಲ್ಲೊಂದು
ಜೋಡಿಸಲಾಗುತ್ತಿರಲಿಲ್ಲ ಒಂದನೊಂದು

ಪದಗಳ ಜೋಡಣೆಯಾಗದ ಹೊರತು
ಮೂಡುವಂತಿರಲಿಲ್ಲ ಕವಿತೆಯ ಗುರುತು

ಕೈಯ್ಯಲಿದ್ದ ಲೇಖನಿ
ಸುರಿಸುತ್ತಿತ್ತು ಕಂಬನಿ

ನಾ ಬರೆಯಲಾಗದ ಕವಿತೆ
ಬರೆಯಲಾರದೆ ಮರೆತೆ

Thursday, June 17, 2010

ಸ್ವಲ್ಪ ಫ್ಲಾಶ್ಬ್ಯಾಕ್ಗೆ ಹೋಗಿಬನ್ನಿ

ಅಂಬಾಸಿಡರ್ ಕಾರ್ ಟಾರ್ ರೋಡ್ ದಾಟಿ ಮಣ್ಣಿನ ರಸ್ತೆಗೆ ಬಂದ ತಕ್ಷಣ ಸಡನ್ನಾಗಿ ನಿಲ್ತು. ಲಗೋರಿ ಆಡ್ತಿದ್ದ ನಾವು ಹೆದರಿ ದೇವಸ್ಥಾನದ ಒಂದು ಮೂಲೆಗೆ ಹೋಗಿ ಕದ್ದು ಕುಳಿತೆವು (ಯಾಕಂದ್ರೆ ಆಗೆಲ್ಲ ಅಂಬಾಸಿಡರ್ ಕಾರಲ್ಲಿ ಬಂದವ್ರು ಮಕ್ಳನ್ನ ಕಿಡ್ನಾಪ್ ಮಾಡ್ಕೊಂಡು ಹೋಗ್ತಾರೆ ಅಂತಿದ್ರು, ಹಾಗಾಗಿ).


ಇದ್ದಕ್ಕಿದ್ದ ಹಾಗೆ ನಮ್ಜೊತೆ ಇದ್ದ ಅಕ್ಕ ಓಡಿ ಕಾರ್ ಹತ್ತೇಬಿಟ್ಲು. ನಮಗೆಲ್ಲ ಶಾಕ್. ಕಾರ್ ಹಾಗೆ ಮುಂದಕ್ಕೆ ಹೋಯ್ತು. ನಾವು ಓಡಿ ಹಿಂದುಗಡೆಯಿಂದ ನೋಡಿದ್ರೆ ನಮ್ಮಪ್ಪ ಕಾರಲ್ಲಿದ್ರು.

ಒಂದೇ ಉಸಿರಿಗೆ ಕಾರ್ ಹಿಂದೆ ಓಡೋದಕ್ಕೆ ಶುರು ಮಾಡಿದ್ವಿ. ಕಾರು ಹೋಗಿ ನಮ್ಮನೆ ಹತ್ತಿರ ನಿಲ್ತು. ಅಕ್ಕ ಕಾರಿಂದಿಳಿದು ನಗ್ತಿದ್ಲು. ನಮಗೆಲ್ಲ ಹೊಟ್ಟೆ ಉರಿ, ನಮ್ಮನ್ನ ಕಾರಲ್ಲಿ ಹತ್ತಿಸಿಕೊಳ್ಳಲಿಲ್ಲ ಅಂತ. ಸ್ವಲ್ಪ ಹೊತ್ನಲ್ಲಿ ಹೊಟ್ಟೆ ಉರಿ ಕಡಿಮೆ ಆಗಿತ್ತು ಯಾಕಂದ್ರೆ ಕಾರಿಂದ ಟಿ.ವಿ ಇಳಿಸ್ತಿದ್ರು, ನಮಗೆಲ್ಲರಿಗೂ ಖುಷಿಯೋ ಖುಷಿ. ಆಂಟೆನ ಏರಿಸಿ ಟಿ.ವಿ ಹಾಕಿದ ತಕ್ಷಣ ತೆರೆಯ ಮೇಲೆ ಬಂದ ವೈಟ್ ಸ್ಕ್ರೀನ್ ನೋಡಿ ಏನೋ ವಿಸ್ಮಯ ಕಂಡ ಹಾಗೆ. ಆಂಟೆನ ತಿರುಗಿಸಿ ಹಾಸನ ಸ್ಟೇಶನ್ಗೆ ಸೆಟ್ ಮಾಡಿದ ತಕ್ಷಣ ಡಿ.ಡಿ ೧ ಬಂತು, ಟಿ.ವಿಯಲ್ಲಿ ದೃಶ್ಯ ನೋಡಿ ಕಣ್ಣಿಗೆ ಹಬ್ಬ.

ಬಂದ ಹೊಸತರಲ್ಲಿ ರಾಮಾಯಣ ನೋಡೋದಕ್ಕೆ ನಮ್ಮನೆ ಹಾಲ್ ಫುಲ್ ಆಗಿರೋದು.ಆಮೇಲಾಮೇಲೆ ಸುರಭಿ, ತೆಹಕೀಕಾತ್,ಮಹಾಭಾರತ, ಚಿತ್ರಹಾರ್, ಮೋಗ್ಲಿ, ಮಾಲ್ಗುಡಿ ಡೇಸ್, ಸ್ಟ್ರೀಟ್ ಹಾಕ್, ರಂಗೋಲಿ. ೨ ತಿಂಗಳಿಗೊಮ್ಮೆ ರೀಜನಲ್ ಫಿಲಂ ಅಂತ ಕನ್ನಡ ಚಿತ್ರ ಹಾಕೊದನ್ನೇ ಕಾಯ್ತಿದ್ವಿ.

ಸ್ವಲ್ಪ ವರ್ಷ ಆದ್ಮೇಲೆ ಕನ್ನಡ ಚಾನೆಲ್ ಡಿ.ಡಿ ೯ ಬರೋದಕ್ಕೆ ಶುರುವಾಯ್ತು, ಆ ದಿನ ಕನ್ನಡ ಬರತ್ತೆ ಅಂತ ಅರ್ಧ ಗಂಟೆ ಮೊದಲೇ ಟಿ.ವಿ ಹಾಕ್ಕೊಂಡು ಕೂತಿದ್ವಿ. ಬಹುಷ ಸಂಜೆ ೪ ಅಥವಾ ೪.೩೦ ಇರ್ಬೇಕು. 'ಜೋಗದ ಸಿರಿ ಬೆಳಕಿನಲ್ಲಿ...' ಹಾಕಿದ್ರು, ನೋಡಿ ಫುಲ್ ಖುಷ್.

ಆಮೇಲಾಮೇಲೆ ಮಾಯಾಮೃಗ, ಗುಡ್ಡದ ಭೂತ, ಚಿತ್ರಮಂಜರಿ, ಸಬೀನಾ ಭಾನುವಾರದ ಸಂಜೆಯ ಚಲನಚಿತ್ರ ನಮ್ಮ ದೈನಂದಿನ ಬದುಕಿನ ಭಾಗವಾಗಿ ಹೋದವು. ರಾತ್ರಿ ೯.೩೦ ೧೦ ಅನ್ನೋ ಹೊತ್ತಿಗೆ ಎಲ್ಲ ಕೆಲಸ ಮುಗಿಸಿ ಪಾಚ್ಕೊತಿದ್ವಿ.

ಆಮೇಲೆ ಕಾಲೇಜ್ ಅಂತ ಹೊರಗಡೆ ಹೋದಮೇಲೆ ಟಿ.ವಿಯ ಸಂಪರ್ಕ ಕಡಿಮೆಯಾಯ್ತು. ಡಿಗ್ರಿಯಲ್ಲೂ ಸಹ ಹಾಸ್ಟೆಲ್ನಲ್ಲಿರೋವಾಗ ಆಗಾಗ ಕ್ರಿಕೆಟ್ ನೋಡ್ತಿದ್ವಿ ಅಷ್ಟೆ.

ಆಮೇಲೆ ಬೆಂಗ್ಳೂರ್ನಲ್ಲಿ ಕೆಲಸ, ಬ್ಯಾಚಲರ್ಸ್ ರೂಮ್, ಟಿ.ವಿ ಅವಶ್ಯಕತೆ ಕಾಣಿಸ್ಲಿಲ್ಲ (ಹರಟೆ ಹೊಡೆಯೋಕೆ ಸಮಯ ಇಲ್ದಿರೋವಾಗ ಇನ್ನು ಟಿ.ವಿ ತಗೊಂಡು ಏನು ಮಾಡೋದು ಅಂತ). ಕೆಲಸ ಮುಗಿಸಿ ರೂಮಿಗೆ ಬಂದು ಹರಟೆ ಹೊಡೆದು ಅಡಿಗೆ ಮಾಡಿ ಊಟ ಮುಗಿಸಿ ಮಲಗಿಕೊಳ್ಲೋದ್ರಲ್ಲಿ ಸಮಯ ಆಗಿರೋದು.

ಈ ನಡುವೆ ಇದ್ದ ಡೆಸ್ಕ್ಟಾಪ್ಗಳು ಹೋಗಿ ಲ್ಯಾಪ್ಟಾಪ್ ಬಂದವು, ಅದರಲ್ಲೇ ಫಿಲ್ಮ್ ನೋಡೋದಾಯ್ತು.

ಈ ಗ್ಯಾಪಲ್ಲಿ ಟಿ.ವಿಯಲ್ಲಿ ಭಯಂಕರ ಬದಲಾವಣೆಗಳಾಗಿ ಹೋಗಿತ್ತು. ಎಲ್ಲೆಲ್ಲೂ ರಿಯಾಲಿಟಿ ಶೋಗಳಾಟ. ನಮ್ಮ ಹಳ್ಳಿಗಳಲ್ಲೂ ಭಾರೀ ಬದಲಾವಣೆ, ೧೦ ಗಂಟೆಗೆ ಲೈಟ್ ಆರಿಸುತ್ತಿದ್ದ ಮನೆಗಳು ಈಗ ರಾತ್ರಿ ೧೨-೧ ಆದ್ರೂ ಬೆಳಕನ್ನ ಹೊರಸೂಸುತಿರ್ತವೆ. ಕೇಬಲ್, ಟಾಟಾ ಸ್ಕೈ, ಡಿಶ್ ಟಿ.ವಿ, ಸನ್ ಡೈರಕ್ಟ್ ಇವುಗಳ ಮಹಿಮೆಯಿಂದ.

ಸಂಜೆ ಕೆಲಸ ಮುಗಿಸಿ ದೇವಸ್ಥಾನದ ಹತ್ತಿರನೋ, ಬಾವಿ ಕಟ್ಟೆ ಹತ್ತಿರನೋ, ಶಾಲೆ ಬಳಿನೋ ಜನ ತೋಟ-ಗದ್ದೆ, ಮಳೆ-ಬೆಳೆ ಹೀಗೆ ಕಷ್ಟ-ಸುಖ ಮಾತಾಡ್ತಿದ್ದವರು ಈಗ ಅಲ್ಲೆಲ್ಲೂ ಕಾಣಿಸಲ್ಲ.

ಅಕಸ್ಮಾತ್ ಅಪ್ಪಿ-ತಪ್ಪಿ ಯಾರಾದ್ರೂ ಇದ್ರೆ 'ಲೋ, ಸ್ಕೋರ್ ಏನಾಯ್ತೋ?' , 'ಕರೆಂಟ್ ಹೋಗಿಬಿಡ್ತಲ್ಲೋ, ಛೆ ರಾಖಿ ಸಾವಂತ್ ಮದ್ವೆ ಮಿಸ್ ಆಯ್ತು? ಯಾರ್ನ ಮದ್ವೆ ಆದ್ಲೋ ಸ್ವಯಂವರದಲ್ಲಿ?' ಈ ತರ ಮಾತುಗಳು.

ಡಿ.ಡಿ ೧,೯ ಚೆನ್ನಾಗಿತ್ತಲ್ವ??

Monday, June 14, 2010

ಗೌಡ್ರು ರಂಗಣ್ಣ ಮತ್ತೆ ರಾಜಕೀಯ - ೨

ರಂಗಣ್ಣ ರೆಸಾರ್ಟ್ ಓಪನ್ ಮಾಡಿ ೧ ತಿಂಗಳಾಗಿತ್ತು, ಗೌಡ್ರಿಗೆ ಅವ್ನು ಸಿಕ್ಕದೆ ತುಂಬಾ ದಿನಗಳಾಗಿತ್ತು.

ಗೌಡ್ರ ತೋಟಕ್ಕೆ ಹೋಗ್ಬೇಕಂದ್ರೆ ರಂಗಣ್ಣನ ರೆಸಾರ್ಟ್ ಮುಂದೇನೆ ಹೋಗ್ಬೇಕು.

ತುಂಬಾ ದಿನ ಆಗಿದ್ರಿಂದ ಗೌಡ್ರು ತೋಟಕ್ಕೆ ಹೊರಟ್ರು, ರಂಗಣ್ಣನ ರೆಸಾರ್ಟ್ ಹತ್ತಿರ ಹೋಗ್ತಿದ್ದಂತೆ ಎದ್ರುಗಡೆಯಿಂದ ಒಬ್ಬ ವ್ಯಕ್ತಿ ಬರ್ತಿದ್ದ. ಬಹುಷ ರೆಸಾರ್ಟ್ಗೆ ಬಂದಿರೋ ವ್ಯಕ್ತಿ ಇರ್ಬೇಕು ಅಂದ್ಕೊಂಡು ಗೌಡ್ರು ಮುಂದೆ ಹೋಗ್ತಿದ್ರು.

'ಗೌಡ್ರೆ' ಅಂಥ ಆ ವ್ಯಕ್ತಿ ಕೂಗಿದ್ದನ್ನು ನೋಡಿ ಗಲಿಬಿಲಿಗೊಂಡರು ಗೌಡ್ರು.

ಜೀನ್ಸ್ ಪ್ಯಾಂಟ್, ಕೂಲಿಂಗ್ ಗ್ಲಾಸ್ ಹಾಕಿದ್ದ ವ್ಯಕ್ತಿ ನೋಡಿ 'ಯಾರು ನೀವು?' ಅಂದ್ರು ಗೌಡ್ರು.

ನಾನು ಗೌಡ್ರೆ ರಂಗಣ್ಣ.

ನೀನೇನ್ಲಾ, ಏನ್ಲಾ ನಿನ್ನ ಅವತಾರ, ಲಕ್ಷಣವಾಗಿ ಪಂಚೆ ಹಾಕಳ್ತಿದ್ದವ್ನು ಇದೆಂಥದ್ಲಾ ಹಾಕಂಡಿದೀಯ?

ಇಲ್ಲ ಗೌಡ್ರೆ, ಇದು ಜೀನ್ಸ್ ಪ್ಯಾಂಟ್, ಟೀ ಶರ್ಟ್. ಇಲ್ಲಿ ಬರೋ ಹೈಕ್ಳು ಲೆವೆಲ್ಗೆ ನಾವೂ ಇರ್ಬೇಕಲ್ವ ಅದ್ಕೆ ಈ ಗೆಟಪ್.

ಸೆಟಪ್ ಗೂತ್ತು ಕಣ್ಲಾ ಅದೆಂತದ್ಲ ಗೆಟಪ್?

ಅಯ್ಯೋ ಗೌಡ್ರೆ, ಹೊರ್ಗಡೆಯಿಂದ ಬಂದರಿಗೆ ನಾವು ಚೆನ್ನಾಗಿ ಕಾಣ್ಬೇಕಲ್ವ ಅದ್ಕೆ ಹಿಂಗೆ ಅಂದೆ.

ಕಣ್ಣು ಕಾಣಿಸಲ್ವೇನ್ಲಾ, ಕನ್ನಡಕ ಬೇರೆ ಹಾಕಂಡಿದೀಯ?

ಗೌಡ್ರೆ ಅದು ಕೂಲಿಂಗ್ ಗ್ಲಾಸ್.

ಎಣ್ಣೆ ಹೊಡೆಯೋ ಗಲಾಸ್ ಗೊತ್ತು ಅದೆಂತದ್ಲ ಕೂಲಿಂಗ್ ಗ್ಲಾಸ್?

ಇದು ಹಾಕಂಡ್ರೆ ಕಣ್ಣು ತಂಪಾಗಿರತ್ತೆ ಗೌಡ್ರೆ.

ಅದೇನೋ ಸರಿ ಆದ್ರೆ ನಿನ್ನ ಕಣ್ಣೇ ಕಾಣ್ಸಲ್ವಲ್ಲ, ನಿನ್ನ ಕೆಟ್ಟ ದೃಷ್ಟಿ ಯಾರಿಗೂ ಬೀಳ್ಬಾರ್ದು ಅಂತಾನಾ?

ಗೌಡ್ರೆ ನಿಮ್ದು ಬರೀ ತಮಾಷೇನೆ ಆಯ್ತು.

ಆಮೇಲೆ, ಏನಾಯ್ತಲ ನಿಂದು ಪಾರ್ಟಿ ಸೇರ ಪ್ಲಾನ್?

ಸೇರ್ದೆ ಗೌಡ್ರೆ.

ಇನ್ನು ಉದ್ಧಾರ ಆಯ್ತು ಬಿಡು ನಮ್ಮೂರು.
ಆಮೇಲೆ ನಿಮ್ಮ ಪಕ್ಷ್ದರ್ದು ಏನ್ಲಾ ಹೊಸ ಕಥೆ?

ಏನು ಗೌಡ್ರೆ?

ಅದ್ಯಾರೋ ಎಣ್ಣೆ ಹೊಡೆಯೋನಿಗೆ ಎಣ್ಣೆ ಪೋಸ್ಟ್ ಕೊಟ್ಟವ್ರಂತೆ, ಅಲ್ಲ ಕಣ್ಲ ಆಗೆಲ್ಲ ಇದ್ಯಾ ಗೊತ್ತ್ರೋನನ್ನ ಇದ್ಯಾ ಮಂತ್ರಿ ಅಂತ ಕಾನೂನು ಗೊತ್ತ್ರೋನನ್ನ ಕಾನೂನು ಮಂತ್ರಿ ಅಂಥ ಮಾಡ್ತಿದ್ರು, ನಿಮ್ಮ ಪಾರ್ಟಿಲೇನ್ಲ ಹಿಂಗೆ?

ರಾಜ್ಕೀಯ್ದಲ್ಲಿ ಯಾರು ಸಾಚಾಗಳವ್ರೆ ಗೌಡ್ರೆ?

ಅದೂ ಸರಿನೆ ಅನ್ನು, ಅಲ್ಲ ಕಣ್ಲ ಅವ್ನ್ದೆನೆನೇನ ಹಗರಣ ಐತಂತ್ಲ.

ಎಂಥ ಗೌಡ್ರೆ?

ಅದೇ ಆ ನರ್ಸಮ್ಮನ ಹತ್ರ ಹೋಗಿ ಇಂಜೆಕ್ಷನ್ ಚುಚ್ಸ್ಕೊಂಡು ಬರೋದ್ರ ಬದ್ಲು ಇವ್ನೇ ಇಂಜೆಕ್ಷನ್ ಚುಚ್ಚಕೆ ಹೋಗಿದ್ನಂತೆ?

ಎಲ್ಲರ್ದು ಈ ಕಥೆಗಳು ಇದ್ದಿದ್ದೆ ಗೌಡ್ರೆ, ಕೆಲವ್ರದ್ದು ವಿಸ್ಯ ಗೊತ್ತಾಗತ್ತೆ ಇನ್ನು ಉಳ್ದೋರದ್ದು ಗೊತ್ತೇ ಆಗಲ್ಲ, ಒಳಗೊಳಗೆ ಮುಚ್ಚಾಕ್ತರೆ, ಆದ್ರೆ ನಮ್ಮೂರು ನರ್ಸಮ್ಮ ಹಂಗಿಲ್ಲ ಗೌಡ್ರೆ ಬಾಲ ಒಳ್ಳೆವ್ಳು.

ಓ ಹಿಂಗಾ ಇಸ್ಯ, ಭಲೇ ಕಿಲಾಡಿ ಕಣ್ಲ ನೀನು, ಸರ್ಯಾದ ಪಕ್ಷಕ್ಕೆ ಸೇರ್ತಿದೀಯ, ಹೋಗು, ನಮ್ಮ ರಾಜ್ಯದಲ್ಲಿ ಇನ್ನೇನಾದ್ರು ಉಳ್ದಿದ್ರೆ ಅದ್ನೂ ಮುಕ್ಕ್ಹೋಗು.

ಅಂದ ಗೌಡ್ರು ತೋಟದ ಕಡೆ ಹೆಜ್ಜೆ ಹಾಕಿದ್ರು.

Thursday, June 10, 2010

ಹುಡುಗ - ಹುಡುಗಿ

ಪ್ರೈಮರಿ ಸ್ಕೂಲಲ್ಲಿ ನನ್ನ ಪಾದವೇ ನನಗೆ ಸೈಕಲ್

ನಿಮ್ಮಪ್ಪ ಕೊಡಿಸಿದ್ದರು ನಿನಗೆ ಬೈಸಿಕಲ್

ಹೈಸ್ಕೂಲಲ್ಲಿ ನನಗೂ ಸಿಕ್ತು ಸೈಕಲ್
ನಾನಾಗ ತೋರಿಸಿದ್ದೆ ನನ್ನ ಸ್ಟೈಲ್

ಮಾರನೇ ದಿನ ನೀ ತಂದೆ ಸ್ಕೂಟಿಯನ್ನು
ನೀನಾಗ ನೋಡಬೇಕಿತ್ತು ನನ್ನ ಮುಖವನ್ನು

ಕಾಲೇಜಿನಲ್ಲಿ ನನ್ನ ಜೊತೆಗಿತ್ತು ಪಲ್ಸರ್
ನಿನ್ನ ಜೊತೆಗಿತ್ತು ಡಿಜ್ಜೈರ್

ಕೆಲಸ ಹುಡುಕಲೆಂದು ಬೆಂಗಳೂರಿಗೆ ಬಂದಿದ್ದೆ
ನೀನಾಗ ನಿನ್ನ ಗಂಡನ ಜೊತೆ ಅಮೆರಿಕಕ್ಕೆ ಹಾರಿದ್ದೆ

(ಇದು ನನ್ನ ಗೆಳೆಯ ಹೇಳಿದ್ದನ್ನ ಕವನಗಳ ರೂಪದಲ್ಲಿ ಇಳಿಸಿದ್ದೇನೆ)

Thursday, May 13, 2010

ಗೌಡ್ರು ರಂಗಣ್ಣ ಮತ್ತೆ ರಾಜಕೀಯ - ೧

ಏನು ರಂಗಣ್ಣ ತುಂಬಾ ದಿನದಿಂದ ಪತ್ತೇನೆ ಇಲ್ಲ, ಎಲ್ಲಿ ಹೋಗಿತ್ತೋ ಸವಾರಿ. ಗೌಡ್ರು ಗದ್ದೆ ಕಡೆ ಹೋಗ್ತಿದ್ದಾಗ ಸಿಕ್ಕ ರಂಗಣ್ಣನ ಕೇಳಿದ್ರು.

ಹೂಂ ಗೌಡ್ರೆ, ಪ್ಯಾಟೆಲಿ ಸ್ವಲ್ಪ ಕೆಲ್ಸ ಇತ್ತು, ಹಂಗಾಗಿ ಅಲ್ಲೇ ಇದ್ದೆ.

ಅದೇನ್ಲ ಅಂತ ಕೆಲ್ಸ? ಅದೆಂತದೋ ಹೋಟ್ಲು ಓಪನ್ ಮಾಡ್ತೀಯಂತೆ ಅದ್ಕಾ?

ಅದೇ ಗೌಡ್ರೆ, ರೆಸಾರ್ಟ್ ಅಂತ, ಅದ್ಕೆ ಸ್ವಲ್ಪ ಓಡಾಡ್ತಿದೀನಿ

ಓ, ಅದೇನೋ ಸರ್ಕಾರ ಬೀಳಸ್ಬೇಕು ಅಂದ್ರೆ ರಾತ್ರಿ ರಾತ್ರಿನೇ ರಾಜಹಂಸದಲ್ಲಿ ಓಡಿಹೋಗಿ ಡೀಲ್ ಮಾಡ್ಕೋತಾ ಇದ್ರಲ್ಲ ಅಂತದ?

ಅಲ್ಲ ಗೌಡ್ರೆ, ಬೆಂಗಳೂರಲ್ಲಿ ಅದೇನೋ ಸಾಪ್ಟೆರ್ ಅಂತಾರಲ್ಲ, ಅಲ್ಲಿ ಕೆಲ್ಸ ಮಾಡ ಹೈಕ್ಳುಗಳು ಕಿತ್ಕೊಂಡು ಕಾಸು ಖರ್ಚು ಮಾಡ್ತಾವಂತೆ ಇಂಥದಕ್ಕೆ, ಅದ್ಕೆ ಅದ್ನ ಹಾಕಿ ನಾನು ನಾಕು ಕಾಸು ಮಾಡನ ಅಂತ.

ಅಲ್ಲ ಕಣ್ಲ, ಊರೋರು ಹೊಟ್ಟೆಗೆ ಹೊಡೆದು ಇಂಥ ಹಲ್ಕಾ ಕೆಲ್ಸ ಮಾಡೋಕೆ ನಿಂಗೆ ಹೆಂಗಾದ್ರೂ ಮನ್ಸು ಬಂತ್ಲಾ?

ನಾನೇನು ಮಾಡ್ದೆ ಗೌಡ್ರೆ, ಅವ್ರಿಗೆ ಅವ್ರ ಕಾಸು ಕೊಟ್ಟಿದೀನಲ್ಲ.

ಹೂಂ ಕೊಟ್ಟಿದೀಯ, ಆದ್ರೆ ಎಷ್ಟು? ಚಿಲ್ರೆ ಕೊಟ್ಟಿದೀಯಲ್ಲ. ಎಕ್ರೆಗೆ ಏನಿಲ್ಲ ಅಂದ್ರೂ ೧.೫ ಲಕ್ಷ ಆದ್ರೆ ನೀನು ಕೊಟ್ಟಿರೋದು ಬರೀ ೬೦ ಸಾವಿರ, ಅಂತೂ ಅವ್ರ ಜೀವನಕ್ಕೆ ಇದ್ದ ಸ್ವಲ್ಪ ಜಾಗನೂ ನುಂಗಿ ನೀರು ಕುಡಿದೆ, ಇರೋ ದುಡ್ಡು ಖಾಲಿ ಆದ್ಮೇಲೆ ನಿನ್ನ ರೆಸಾರ್ಟ್ಗೆ ಕೆಲ್ಸ ಮಾಡಕೆ ಹಾಕೊತೀಯ, ಏನು ಐನಾತಿ ಬುದ್ದಿನಯ್ಯ ನಿಂದು.

ಏನು ಮಾಡೋದು ಗೌಡ್ರೆ, ಎಲ್ಲ ಕಡೆನೂ ಹಿಂಗೆ ಅಲ್ವ, ಅದೆಲ್ಲ ಇರ್ಲಿ ಗೌಡ್ರೆ ನಾನು ಎಂ,ಎಲ್,ಏ ಆಗಣ ಅಂತ ಅದ್ಕೆ ಒಂದು ಪಾರ್ಟಿ ಸೇರಣ ಅಂತ, ಏನಂತೀರ?

ಯಾಕ್ಲಾ, ನಮ್ಮೂರು ಹಾಳು ಮಾಡಿದ್ದು ಸಾಕಾಗ್ಲಿಲ್ವ ಈಗ ಇಡೀ ರಾಜ್ಯನ ನುಂಗ್ಬುಡೋ ಪ್ಲಾನಾ.

ಹಂಗೇನಿಲ್ಲ ಗೌಡ್ರೆ ನನ್ನ ಹೆಸ್ರು ಪ್ಯಾಮಸ್ ಆಗ್ಲಿ ಅಂತ.

ಅಲ್ಲ ಕಣ್ಲ ಸುತ್ತ ಇರೋ ೪-೫ ಹಳ್ಳಿಗೆ ನೀನೆಂಥ ದಗ್ಲಬಾಜಿ ಅಂತ ಗೊತ್ತು, ಇನ್ನ ತುಂಬಾ ಜನ್ಕೆ ಗೊತ್ತಾಗಲಿ ಅಂತನ. ಅದಿರ್ಲಿ ಯಾವ ಪಾರ್ಟಿಗೆ ಸೇರ್ಬೇಕು ಅಂಥ?

ಅದೇ ಗೌಡ್ರೆ, ಈಗ ಸರ್ಕಾರ ನಡೆಸ್ತವ್ರಲ್ಲ ಅವ್ರ ಪಾರ್ಟಿಗೆ.

ಸರ್ಹೋಯ್ತು ಬುಡು, ರಾಕ್ಷಸರ ಗುಂಪಿಗೆ ಇನ್ನೊಬ್ಬ ಸೇರ್ಕಂಡಂಗಾಯ್ತು.

ಅದ್ಯ್ಯಾಕೆ ಹಂಗಂತೀರಿ ಗೌಡ್ರೆ, ನಾನೂ ಸ್ವಲ್ಪ ಸಮಾಜ ಸೇವೆ ಮಾಡಣ ಅಂತ.

ಮುಚ್ಕಂಡಿರ್ಲಾ ಕಂಡಿದೀನಿ ನೀನು ಮಾಡ್ತಿರ ಸಮಾಜ ಸೇವೆನ.

ಅಷ್ಟೊತ್ತಿಗೆ ಎದ್ರುಗಡೆ ಬಂದ ಚಂದ್ರಣ್ಣನ್ನ 'ಏನ್ಲ ಚಂದ್ರ, ಹೆಂಗಿದೀಯ, ಅಲ್ಲ ಕಣ್ಲ ಜಮೀನು ಯಾಕ್ಲಾ ಮಾರಕೆ ಹೋದ್ಲಾ, ಇವ್ನು ಕೊಟ್ಟ ಕಾಸು ಖರ್ಚಾದ್ಮೇಲೆ ಹೊಟ್ಟೆಗೆ ಏನು ನೀರು ಬಿಟ್ಕಂತೀಯೇನ್ಲಾ? ನಿನ್ನ ಹೆಂಡ್ತಿ ಮಕ್ಳು ಗತಿ ಏನ್ಲಾ?

ಗೌಡ್ರೆ ರಂಗಣ್ಣ ಹೇಳವ್ನೆ ಅದೇನೋ ರೆಸಾರ್ಟ್ ಮಾಡ್ತಾವ್ನಲ್ಲ ಅದ್ಕೆ ನನ್ನೇ ಮ್ಯಾನೇಜರ್ ಮಾಡ್ತಾನಂತೆ.

ಸರ್ ಹೋಯ್ತು ಬುಡು, ಆಯ್ತು ಏನಾದ್ರೂ ಮಾಡ್ಕೋ ಹೋಗು.

ಅವ್ನು ಅಲ್ಲಿಂದ ಹೋದ್ಮೇಲೆ 'ಎಂ,ಎಲ್,ಏ ಆಗಕೆ ಸರ್ಯಾಗಿದಿಯ ಬಿಡು ರಂಗಣ್ಣ'

ಅದಿರ್ಲಿ ಅವನ್ಯಾವನೋ ಸ್ವಾಮಿದು ಎಂಥದ್ಲಾ ಅದು ಹಗರಣ, ಅಲ್ಲ ಕಣ್ಲ ಅಂಥರಿಗೆ ಯಾಕ್ಲಾ ಸರ್ಕಾರ ಭೂಮಿ ಕೊಡ್ಬೇಕು? ಇಂಥ ಬ್ಯಾವರ್ಸಿ ಕೆಲ್ಸ ಮಾಡಕೇನ್ಲ ?

ಇಲ್ಲ ಗೌಡ್ರೆ ಅದೇನೋ ಯೋಗ ಮಾಡ್ಲಿಕ್ಕೆ ಜಾಗ ಕೇಳಿದ್ನಂತೆ ಅದ್ಕೆ ಕೊಟ್ರಂತೆ.

ಅಲ್ಲ ಕಣ್ಲ, ಒಂದಡಿ ಅದ್ನಿಡಕೆ ಎಂಥಕಲ ೧೦೦ ಎಕ್ರೆಗಟ್ಲೆ.

ಹೂಂ ಗೌಡ್ರೆ ನಂಗೂ ಅದೇ ಯೋಚ್ನೆ ಎಂತಕೆ ಅಷ್ಟು ಕೊಟ್ಟರೆ ಅಂಥ, ಆಮೇಲೆ ಅದೇನೋ ಬೇರೆ ವಿಸ್ಯಕ್ಕೆ ಅಂತೆ.

ಎಂಥದ್ಲ ಆ ವಿಸ್ಯ?

ಅದೇ ಗೌಡ್ರೆ, ಹಿಂದಿನ ಕಾಲ್ದಲ್ಲಿ ರಾಜ್ರುಗಳು ರಾಜ್ಯ ಗೆದ್ದಾಗ ಸೋತ ರಾಜ ಮತ್ತೆ ಅವ್ರ ಜೊತೆ ಇರ ಹೆಂಗುಸ್ರನ್ನ ಕರ್ಕಬಂದು ಬೇರ್ಬೇರೆ ಅರ್ಮನೆಲಿ ಇಡ್ತಿದ್ನಂತಲ್ಲ ಅಂಗೆ ಈ ಸ್ವಾಮಿನೂ ತಮಿಳ್ನಾಡು, ಆಂಧ್ರ, ಅಮೇರಿಕ, ಇಂಗ್ಲೆಂಡ್ ಅಲ್ಲಿಂದ ಎಲ್ಲ ಹೀರೋಯಿನ್, ಬಿಳೆ ಹುಡ್ಗೀರ್ನ ಕರ್ಕಬಂದು ಇವ್ನು ೧೦೦ ಎಕ್ರೆನಲ್ಲಿ ಕಟ್ಸಿರೋ ಕುಟೀರದಲ್ಲಿ ಇಡ್ತಿದ್ನಂತೆ.

ಆಮೇಲೆ ಈ ರಾಜಕಾರಣಿಗಳು ಅಲ್ಲಿ ಹೋಗರು, ಈ ತರ ಡೀಲ್ಗಳು ಆಗವು ಗೌಡ್ರೆ.

ತಕ್ಕಳಪ್ಪ, ಭಲೇ ಸ್ವಾಮಿ ಕಣ್ಲ ಅವ. ಇಂಥವ್ರಿಂದ್ಲೆ ಸ್ವಾಮ್ಗಳ ಮೇಲೆ ನಂಬಿಕೆ ಹೋಗ್ತಿರೋದು. ಬಡ್ಡಿ ಮಗನೇ ನೀನೇನಾದ್ರೂ ರೆಸಾರ್ಟ್ ಮಾಡಿ ಇಂಥ ಥರ್ಡ್ ಕ್ಲಾಸ್ ಕೆಲ್ಸ ಮಾಡಿದ್ರೆ ಬೆಂಡೆತ್ತಿ ಊರಿಂದ ಬಹಿಷ್ಕಾರ ಹಾಕ್ತೀವಿ.

ಇಲ್ಲ ಗೌಡ್ರೆ ಹಂಗೆಲ್ಲ ಮಾಡಾಕಿಲ್ಲ, ಊರ್ಜನಾನ ಎದ್ರ್ಹಾಕಂಡು ಬದ್ಕಕಾದೀತ ?

ಹಂಗಿದ್ರೆ ಒಳ್ಳೇದು ನೋಡು, ನಾನಿನ್ನು ಬರ್ತೀನಿ ಕಣ್ಲ, ಬೇಸಾಯ ಮಾಡ್ತಾವ್ರೆ ಗದ್ದೆ ಕಡೆ ಹೋಗ್ಬೇಕು ಅಂಥ ಹೊರಟ್ರು ಗೌಡ್ರು.

Friday, April 30, 2010

ಸೈಕಲ್ಲೂ ಗ್ಲೋಬಲ್ ವಾರ್ಮಿಂಗೂ


ಸ್ವಲ್ಪ ದಿನದ ಹಿಂದೆ ಶೇವಿಂಗ್ ಪುರಾಣ ಬರೆದು ನನ್ನ ಗೆಳೆಯರಿಗೆ ಲಿಂಕ್ ಕಳ್ಸಿದ್ದೆ, ಕಥೆ ಓದಿದ ಸೌಜ 'ನಾನು ಚಾಕಲೇಟ್ ವೆಂಕನ ಹತ್ರನೇ ಕೊಟ್ಟಿದ್ದೆ, ಬಹುಷ ಧೋಪ ಹಾಗೆ ಮಾಡಿರಬೇಕು' ಅಂತ ರಿಪ್ಲೇ ಮಾಡಿದ.

ಲೋ, ಅದು ಕಥೆ ಕಣೋ ಅಂದಾಗ ಸುಮ್ನಾದ.

ಅದಾಗಿ ಸ್ವಲ್ಪ ದಿನಾ ಆದ್ಮೇಲೆ ಅಂದ್ರೆ ಮೊನ್ನೆ ಭಾನುವಾರ ಫೋನ್ ಮಾಡಿದೆ. 'ಇಲ್ಲೇ ಎಲ್ಲೋ ಬಂದಿದ್ದಂತೆ ಕರೆದಿದ್ರೆ ನಾನೂ ಬರ್ತಿದ್ದೆ'

ಇಲ್ವೋ, ಕಮರ್ಷಿಯಲ್ಗೆ ಹೋಗಿದ್ವಿ ಹಂಗೆ ಕುಳ್ಡನ್ನ ಬಿಟ್ಟು ಹೊರಟೆ

ಸರಿ, ಮತ್ತೇನು ವಿಶೇಷ

ಏನಿಲ್ಲ, ಸೈಕಲ್ ತಗೋಬೇಕು ಅಂತ ನಾನು ಕುಳ್ಡ ನೋಡಿದ್ವಿ

ತಗೊಂಡ್ರಾ?

ಇಲ್ಲ, ಅವ್ನೇನೋ ರಿವ್ಯೂ ನೋಡಿ ಆಮೇಲೆ ತಗೊಳ್ಳೋಣ ಅಂದ.

ನಾನು ಸೈಕಲ್ಗೆ ಯಾಕಪ್ಪ ರಿವ್ಯೂ

ತಡಿಯಪ್ಪ ಸ್ವಲ್ಪ, ನೋಡಿ ನಾಳೆ ತಗೊಳ್ಳೋಣ ಕುಳ್ಡ ಅಂದ್ನಂತೆ.

ಆಯ್ತಪ್ಪ ಅಂದು ಹಂಗೆ ಬಂದೆ ನೋಡು

ಮನೇಲಿ ನೆಟ್ ಇದ್ರೆ ಏನಕ್ಕೆ ಬೇಕಾದ್ರೂ ರಿವ್ಯೂ ನೋಡ್ತಾರೆ ನೋಡು

ಅದೆಲ್ಲ ಇರ್ಲಿ, ಏನು ಕಮರ್ಷಿಯಲ್ಗೆ??

ಸೈಕಲ್ ತಗೊಳ್ಳೋಣ ಅಂತ

ಸೈಕಲ್ಲಾ????

ಲೇ, ಬೈಕಿದೆ, ಕಾರಿದೆ, ಇದೇನೋ ಹೊಸ ವಿಚಾರ

ಹಂಗೆ ಕಣೋ, ಎಲ್ರೂ ಅದೇನೋ ಗ್ಲೋಬಲ್ ವಾರ್ಮಿಂಗ್, ಗೋ ಗ್ರೀನ್, ಸೇವ್ ಅರ್ಥ್ ಅಂತಾರಲ್ಲ ಅದ್ಕೆ ನಮ್ಕಡೆಯಿಂದ ಸ್ವಲ್ಪ ಕಾಣಿಕೆ ಇರ್ಲಿ ಅಂತ

ಯಾವ್ತರನಪ್ಪ?

ಆಫೀಸಿಗೆ ಸೈಕಲ್ನಲ್ಲಿ ಹೋಗೋಣ ಅಂತ

ಚೆನ್ನಾಗಿದೆ ಬಿಡು, ಕಾರ್ ಬೈಕ್ ಬಿಟ್ಟು ಸೈಕಲ್ ಸವಾರಿ. ಆದ್ರೂ ಆಫೀಸಿಗೆ ಹೋದ್ರೆ ಬೆವ್ತು ಹೋಗಿರ್ತೀಯಲ್ಲೋ

ಪರ್ಫ್ಯೂಮ್ಗಳು ಇರೋದ್ಯಾಕೆ ಹೇಳು, ಇದಕ್ಕೆ

ಲೇ, ನೀನು ಹಾಕೊಂಡು ಹೋದ್ರೂ ಅಲ್ಲಿಗೆ ಹೋಗೋಹೊತ್ತಿಗೆ ಏನು ಇರಲ್ಲ

ಬ್ಯಾಗಲ್ಲಿ ಪರ್ಫ್ಯೂಮ್ ಬಾಟಲಿ ಇಟ್ಕೊಂಡು ಹೋಗೋದು, ಆಮೇಲೆ ಮತ್ತೆ ಅಲ್ಲೊಂದು ಸಲ ಹಾಕೊಳ್ಳೋದು

ಆಹಾ, ಏನು ಐಡಿಯಾನಪ್ಪ ನಿಂದು?

ಹೆಂಗೆ ನಾವು !!!

ಅಕಸ್ಮಾತ್ ನಿನ್ನ ವಾಸನೆಗೆ ನಿನ್ನ ಕಲೀಗ್ಸೆಲ್ಲ ಮೂರ್ಚೆ ಹೋದ್ರೆ??

ಹೋದ್ರೆ ಹೋಗ್ತಾರೆ ಬಿಡೋ, ನಾನೇನ್ಮಾಡಕಾಗತ್ತೆ ಅದು ಅವರ ಕರ್ಮ

ನಿನ್ನಿಂದ ಕಂಪನಿ ಪ್ರೊಡಕ್ಟಿವಿಟಿ ಕಡಿಮೆಯಾಗ್ತಿದೆ ಅಂತ ದೂರು ಬಂದ್ರೆ??

ಏನು ಫ್ರೆಂಡ್ಸಪ್ಪ ನೀವು, ಏನಾದ್ರೂ ಒಳ್ಳೇದು ಮಾಡ್ತೀವಿ ಅಂತ ಸಪೋರ್ಟ್ ಮಾಡ್ತೀರಾ ಅಂದ್ರೆ ಮಧ್ಯದಲ್ಲಿ ಕಾಲು ಹಾಕ್ತೀರಲ್ಲ

ಏನೋ ನಿನ್ನ ಅನುಕೂಲಕ್ಕೆ ಹೇಳ್ದೆ, ಈ ಕಾರಣದಿಂದ ನಿನ್ನಿಂದ ಕಂಪನಿಗೆ ಲಾಸ್ ಅಂತ್ಹೇಳಿ ಕಿತ್ತುಹಾಕಿದ್ರೆ?

ಲೇ??

ಹೂನಪ್ಪ, ಸರಿ ಹಂಗೂ ಓ,ಕೆ ಅಂದ್ಕೋ, ಆದ್ರೆ ಪ್ರತಿ ದಿನ ನಿನ್ನ ಹೆಂಡ್ತಿ ನಿನ್ನ ಬಟ್ಟೆ ಒಗೀಬೇಕು, ಅವಳು ಕ್ಯಾಕರಿಸಿ ನಿನ್ನ ಮುಖಕ್ಕೆ ಆರತಿ ಮಾಡ್ತಿರ್ತಾಳೆ, ಪ್ರತಿ ಸಲ ಬಟ್ಟೆ ಎತ್ತಿ ಕುಕ್ಕರಿಸೋವಾಗ್ಲೂ ನಿಂಗೆ ಒದ್ದ ಹಾಗೆ ಆಗತ್ತೆ, ಆಗ??

ಗುರುವೇ ಸೈಕಲ್ಲೂ ಬೇಡ ಏನೂ ಬೇಡ ಆರಾಮಾಗಿ ಬೈಕಲ್ಲೇ ಹೋಗಿಬರ್ತೀನಿ

ಅಂತೂ ಸೇವ್ ಅರ್ತ್ ಬದ್ಲು ಸೇವ್ ಮಿ ಅನ್ನೋ ಸ್ಲೋಗನ್ಗೆ ಶರಣಾದ.

Tuesday, April 27, 2010

ಮಿಲನ

ನಾ ನಡೆವ ಹಾದಿಯಲಿ ನೀ ಬರಲು
ನಿನ್ನ ಗೆಜ್ಜೆಯ ಸದ್ದು ನನ್ನ ಕಿವಿ ತಾಕಲು
ಬಿರಬಿರನೆ ನಾ ಹೆಜ್ಜೆ ಹಾಕಲು

ನಾ ಬಂದ ರಭಸಕೆ ನೀ ನನ್ನ ನೋಡುತಿರಲು
ಸನಿಹಕೆ ಬಂದಾಗ ನಿನ್ನ ಕೈ ನನ್ನ ಮೈ ಸೋಕಲು
ನನಗಾಗೇರಿತ್ತು ಒಂಥರಾ ಅಮಲು

ಇಷ್ಟೊತ್ತು ಎಲ್ಲಿಗೆ ಹೋಗಿದ್ದೆ ಎಂದವನು
ಬರಸೆಳೆದು ಹಿಡಿದಿದ್ದೆ ನಿನ್ನನು
ಅಧರಕೆ ಕೊಟ್ಟೆ ಒಂದು ಮುತ್ತನು

Thursday, April 22, 2010

ಚುರ್ಮುರಿ - ೩

೧) ಅವನು ಆ ಮ್ಯಾಚ್ ಪೂರ್ತಿ ನೋಡಬೇಕೆಂದು ಬೆಳಗ್ಗೆ ಕುಳಿತ, ೫೦ ಓವರಲ್ಲಿ ಪಾಕಿಸ್ತಾನ ಟೀಮ್ ೨೭೯ ರನ್ ಹೊಡೆದಿತ್ತು, ಸೆಕೆಂಡ್ ಇನಿಂಗ್ಸಲ್ಲಿ ಇಂಡಿಯಾ ಟೀಮ್ನ ಆಟ ನೋಡುತ್ತಿದ್ದ. ಒಂದೂ ಬಾಲ್ ಮಿಸ್ಸಾಗಬಾರದೆಂದು ಅವರಮ್ಮನ ಹತ್ತಿರ ತಿಂಡಿ ತರಿಸಿಕೊಂಡು ತಿಂದ. ಲಂಚ್ ಬ್ರೇಕಲ್ಲಿ ಊಟಕ್ಕೆ ಹೋದ.
ಇಂಡಿಯಾ ಟೀಮ್ ೪೯.೫ ಓವರಲ್ಲಿ ೯ ವಿಕೆಟ್ಗೆ ೨೭೪ ರನ್ ಹೊಡೆದಿತ್ತು, ಬ್ಯಾಟಿಂಗ್ ಮಾಡ್ತಿದ್ದವನು ಯುವರಾಜ್ ಸಿಂಗ್. ಬೌಲರ್ ಬಂದು ಬಾಲ್ ಎಸೆದ, ಒಂದು ಪಿಚ್ ಬಿದ್ದು ಪುಟಿಯುವಷ್ಟರಲ್ಲಿ ಕರೆಂಟ್ ಹೋಗಿತ್ತು.

೨) ಅಕ್ಕಿಯ ರೇಟು ಗಗನಕ್ಕೇರಿದ್ದರೂ ಭತ್ತ ಇನ್ನೂ ಪಾತಾಳದಲ್ಲಿರುವುದನ್ನು ಮನಗಂಡ ಅವನು ಇದ್ದ ಗದ್ದೆಯನ್ನೆಲ್ಲ ತೋಟ ಮಾಡಿದನು.

೩) ಅವನು ಕಷ್ಟಪಟ್ಟು ದುಡಿದ ದುಡ್ಡನ್ನು ಮಗನಿಗೆ ಸರಕಾರೀ ಕೆಲಸ ಸಿಗಲೆಂದು ಒಬ್ಬ ರಾಜಕಾರಣಿಗೆ ಕೊಟ್ಟ.
ಇವನ ಪಕ್ಕದ ಮನೆಯ ನೆಂಟರೊಬ್ಬರು ಅದೇ ಕೆಲಸಕ್ಕೆ ಅದೇ ರಾಜಕಾರಣಿಗೆ ದುಡ್ಡು ಕೊಟ್ಟಿದ್ದರು.
ವಿಷಯ ತಿಳಿದ ಅವನು ದುಡ್ಡನ್ನು ತಿಮ್ಮಪ್ಪನ ಹುಂಡಿಗೆ ಹಾಕಿದೆನೆಂದು ತನ್ನನ್ನು ತಾನೇ ಸಮಾಧಾನಗೊಳಿಸಿಕೊಂಡ.

Monday, April 19, 2010

ಒಂದು ಶೇವಿಂಗ್ ಪುರಾಣ

ಒಂದೆರಡು ದಿನ ಶೇವ್ ಮಾಡದೇ ಬಿಟ್ಟಿದ್ದರಿಂದ ಗಡ್ಡದ ಕೂದಲುಗಳು ತಲೆ ಕೂದಲಿಗೆ ಪೈಪೋಟಿ ಕೊಡುತ್ತಿದ್ದವು. ಶನಿವಾರ ಬೇರೆ, ವೀಕೆಂಡ್. ಏನಾದರಾಗಲಿ ಇವತ್ತು ಶೇವ್ ಮಾಡೇ ತೀರಬೇಕು ಅಂದ್ಕೊಂಡೆ. ಪಕ್ಕದ ರೂಮಲ್ಲಿ ಮೀಟರ್, ಬಾಬು ಇನ್ನೂ ಮುಸುಕಿ ಹಾಕಿ ಮಲ್ಕೊಂಡಿದ್ರು.

ಮೀಟರ್ ಗೊರಕೆ ಶಬ್ದ ರಾಜ್ಕುಮಾರ್ ರೋಡಲ್ಲಿ ಹೋಗ್ತಿದ್ದ ವಾಹನಗಳಿಗೆ ಪೈಪೋಟಿ ಕೊಡ್ತಿತ್ತು.ಆ ಗೊರಕೆ ಶಬ್ದ ತಡೀಲಾರದೆ ನಾನು ಇನ್ನೊಂದು ರೂಮಿಗೆ ಶಿಫ್ಟ್ ಆಗಿದ್ದೆ. ೩ ಬೆಡ್ರೂಮ್ ಮನೆ ಆಗಿರೋದ್ರಿಂದ ಪುಣ್ಯ, ಇನ್ನು ಸಿಂಗಲ್ ಬೆಡ್ರೂಮ್ ಮಾಡಿದ್ರೆ ನನ್ನ ನಿದ್ದೆನೆಲ್ಲಾ ಮೀಟರ್ ಗೊರಕೆ ತಿಂದು ಮುಗಿಸುತ್ತಿತ್ತೇನೋ.

ಈ ನಡುವೆ ಉಲ್ಲನಿಗೆ ಮೈಸೂರಲ್ಲಿ ಕೆಲಸ ಸಿಕ್ಕಿ ಅಲ್ಲಿಗೆ ಹೋದ, ಬಾಬುದು ಮದುವೆ ಇನ್ನೇನು ಸ್ವಲ್ಪ ದಿನಗಳಲ್ಲಿ, ಉಳಿದವರು ಅಂದ್ರೆ ನಾನು, ಮೀಟರ್. ಈಗ ಅವರಿಬ್ಬರು ಇಲ್ಲದ ಕಾರಣ ಸಿಂಗಲ್ ಬೆಡ್ರೂಮ್ ಹುಡುಕಲೇಬೇಕು, ನನ್ನನ್ನ ದೇವ್ರೇ ಕಾಪಾಡಬೇಕು :(

ಒಂದ್ಸಲ ವೆಂಕ ನಮ್ಮ ಮನೆಗೆ ಬೆಳ್ಗೆ ಬಂದಿದ್ದ, ಮೀಟರ್ ಗೊರಕೆ ಶಬ್ದ ಕೇಳಿ 'ಬಾಬು, ನೀನು ಹೇಗೆ ಮೀಟರ್ ಪಕ್ಕ ಮಲಗ್ತೀಯಪ್ಪ? ಏನಾದ್ರೂ ಗೊರಕೆ ಬಗ್ಗೆ ಪಿ.ಎಚ್.ಡಿ ಮಾಡ್ಬೇಕು ಅಂತಿದೀಯಾ?'

ಕೇಳಿಸಿಕೊಂಡ ಮೀಟರ್ 'ನನ್ಮಕ್ಕಳ. ನೀವ್ಯಾರೂ ಗೊರಕೆ ಹೊಡೆಯೋದೇ ಇಲ್ವೇನೋ ಅನ್ನೋ ಹಾಗೆ ಹೇಳ್ತೀರಾ. ಈ ನಡುವೆ ಅಷ್ಟೊಂದು ಗೊರಕೆ ಹೊಡೆಯೊಲ್ಲ, ಅದೂ ಅಲ್ಲದೆ ಬೆಳಗ್ಗೆ ಹೊತ್ತು ಹೊಡೆಯೋಕೆ ಇಲ್ಲ'. ಬಹುಷ ಗೊರಕೆ ಹೊಡೀತಾ ಇದ್ದಾನೋ ಇಲ್ವೋ ಅಂತ ತಿಳಿಯೋದಕ್ಕೆ ಮೀಟರ್ ಆತ್ಮ ರಾತ್ರಿಯೆಲ್ಲ ಎಚ್ಚರ ಇರ್ತಿತ್ತೇನೋ.

ವಿಷಯಾಂತರ ಆಗೋಯ್ತಲ್ಲ ? ನನ್ನ ಶೇವಿಂಗ್ ಪುರಾಣ ಬಿಟ್ಟು ಮೀಟರ್ ಗೊರಕೆ ಪುರಾಣಕ್ಕೆ ಶಿಫ್ಟ್ ಆಗಿದೀನಲ್ವ?

ಬೆಳಗ್ಗೆ ಎದ್ದೆ ಅಂದ್ನಲ್ಲ. ಹಲ್ಲುಜ್ಜಿ, ಕೈ ಕಾಲು ಮುಖ ತೊಳೆದುಕೊಂಡು ಅಂಗಡಿಗೆ ಹೋಗಿ ದಿನಸಿ ತಂದು ಅವಲಕ್ಕಿ ಮಾಡಿ, ತಿಂದು, ಟೀ ಕುಡಿದು, ಸ್ವಲ್ಪ ಹೊತ್ತು ಪೇಪರ್ ಓದಿ ಆದ್ಮೇಲೆ, ಶೇವಿಂಗ್ ಮಾಡ್ಕೊಳ್ಳೋದಕ್ಕೆ ಹೊರಟೆ. ಶೇವಿಂಗ್ ಕಿಟ್ ತಂದು, ಒಳಗಿದ್ದ ಶೇವಿಂಗ್ ಕ್ರೀಮ್ ತೆಗೆದು ಕಷ್ಟಪಟ್ಟು (ತಿಣುಕಾಡಿ) ಪ್ರೆಸ್ ಮಾಡಿ (ಮುಗಿಯುವ ಹಂತದಲ್ಲಿದ್ದುದರಿಂದ , ಟೂತ್ ಪೇಷ್ಟ್ ಮುಗಿಯೋವಾಗ ಕಷ್ಟ ಪಡ್ತೀವಲ್ಲ ಹಾಗೆ) ಸ್ವಲ್ಪ ಹೊತ್ತಾದ ಮೇಲೆ ಒಂದು ಶೇವಿಂಗ್ಗೆ ಆಗಷ್ಟು ಕ್ರೀಮ್ ಬಂತು. ಕ್ರೀಮ್ನ ಬ್ರಶ್ಗೆ ಹಾಕಿ ಗಡ್ದಕ್ಕೆಲ್ಲ ಮೆತ್ತಿ ಕಿಟ್ನಿಂದ ಬ್ಲೇಡ್ ಹೊರತೆಗೆದ್ರೆ ಅದು ನನ್ನನ್ನು ನೋಡಿ ನಗೋರ ಹಾಗೆ ಕಾಣುಸ್ತು. ಯಾಕೆಂದ್ರೆ 'ನಿನ್ನ ಗಡ್ದದಲ್ಲಿರೋ ೧೦% ಕೂದಲು ಸಹ ತೆಗೆಯೋದಕ್ಕೆ ನನ್ನಿಂದ ಆಗಲ್ಲ' ಅಂತ ಬ್ಲೇಡ್ ಗಹಗಹಿಸಿ ನಗೋರ ಹಾಗೆ ಕಾಣುಸ್ತು.

ಮುಖ ತೊಳೆದುಕೊಂಡು ಪ್ಯಾಂಟ್ ಹಾಕೊಂಡು ಬ್ಲೇಡ್ ತರೋದಕ್ಕೆ ಅಂಗಡಿಗೆ ಹೋದೆ. ಬಂದವನು ಶೇವಿಂಗ್ಗೆ ಹೊರಟೆ.

'ಅಯ್ಯೋ ಶಿವನೇ' ಶೇವಿಂಗ್ ಕಿಟ್ ನೋಡಿ ಆಗ ಜ್ಞಾಪಕಕ್ಕೆ ಬಂತು

ಕ್ರೀಮ್ ಕಾಲಿಯಾಗಿದೆ ! ? :(

ಈ ಸಲ ಮುಖ ತೊಳೆಯೋ ಅವಶ್ಯಕತೆ ಇರ್ಲಿಲ್ಲ, ಹೋಗಿ ಕ್ರೀಮ್ ತಂದು ಗಡ್ಡಕ್ಕೆ ಹಚ್ಹ್ಕೊತ್ತಿದ್ದೆ.

ಅಷ್ಟರಲ್ಲಿ 'ಪ್ಲೀಸ್ ಓಪನ್ ದಿ ಡೋರ್' ಅಂತ ಕಾಲಿಂಗ್ ಬೆಲ್ ಸದ್ದಾಯ್ತು.
'ಲೇ, ಚಿಕ್ಕು ಬಾಗಿಲು ತೆಗೆಯೋ' ವೆಂಕ ಹೊರಗಡೆಯಿಂದ ಅರಚುತ್ತಿದ್ದ.

'ಅದ್ಯಾಕೆ ಹಂಗೆ ಆಡ್ತೀಯ ಸ್ವಲ್ಪ ಸಮಾಧಾನ' ಅಂತ ಹೇಳಿ ಬಾಗಿಲು ತೆಗೆದೆ.

'ಬೇಗ ಹೊರಡು, ಸೌಜ (ಯು ಎಸ್ಗೆ ಹೋಗಿ ಬಂದಿದ್ದ) ಮೆಜೆಸ್ಟಿಕ್ ಹತ್ರ ಇದ್ದಾನೆ, ಚಾಕಲೇಟ್ ಇಸ್ಕೊಂಡು ಬರೋಣ'

'ಯಾಕಪ್ಪ, ನೀನೇ ಹೋಗಿ ತಗೊಂಡು ಬರಬಹುದಲ್ಲ?'

'ಮಗನೇ, ಎಲ್ಲ ಕಾಲು ಹತ್ರಾನೇ ಬಂದು ಬೀಳಬೇಕು ನಿಮಗೆ. ಅವ್ನಿಗೆ ನಾನು ಚಾಕಲೇಟ್ ತಂದು ನಿಮಗೆ ಕೊಡಲ್ಲ ಅಂತ ಅನುಮಾನ ಅದ್ಕೆ ಕರ್ಕೊಂಡು ಬಾ' ಅಂತ ಸೌಜ ಹೇಳ್ದ ಅಂದ.

'ಎಂತ ರೆಪ್ಯುಟೇಶೇನ್ ಇಟ್ಟಿದೀಯಾ ನೋಡು, ೧೦ ನಿಮಿಷ ತಡಿ ಶೇವಿಂಗ್ ಮಾಡ್ಕೊಂಡು ಬರ್ತೀನಿ'

'ಏನು ಮಾಡೋದು, ಈಗ ಹೊರಡಪ್ಪ, ಅವ್ನಿಗೆ ೧೧ಕ್ಕೆ ಬಸ್ಸಂತೆ, ಈಗ ೧೦.೪೫ ಬೇಗ ನಡಿ'

ನನ್ನ ಗಡ್ಡ ಕ್ರೀಮ್ ಅಡಿ ಅಳ್ತಿತ್ತು :(

'ಸರಿ' ಅಂತ್ಹೇಳಿ ಮುಖ ತೊಳೆದು ಬಟ್ಟೆ ಚೇಂಜ್ ಮಾಡ್ಕೊಂಡು ವೆಂಕನ ಜೊತೆ ಹೊರಟೆ.

ಮೆಜೆಸ್ಟಿಕ್ನಲ್ಲಿ ಸೌಜ ಸಿಕ್ಕಿದ, ನನ್ನ ನೋಡಿ 'ಏನು ಚಿಕ್ಕು, ಗಡ್ಡ ಹಿಂಗೆ ಬಿಟ್ಟಿದೀಯಲ್ಲೋ, ದೇವದಾಸ್ ತರ ಆಗಿದೀಯಾ. ತಡಿ ಅಂಕಲ್ ಆಂಟಿಗೆ ಹೇಳಿ ಹುಡುಗನಿಗೆ ಬೇಗ ಮದ್ವೆ ಮಾಡ್ಸಿ ಅಂತೀನಿ'

ಪಕ್ಕದಲ್ಲಿದ್ದ ವೆಂಕ ಮುಸಿಮುಸಿ ನಕ್ತಿದ್ದ.

ಬೈಕಲ್ಲಿ ವಾಪಸ್ ಮನೆಗೆ ಹೋಗೋವಾಗ ನವರಂಗ್ ಹತ್ತಿರ ವೆಂಕ 'ಚಿಕ್ಕು, ಆಪ್ತರಕ್ಷಕ ಫಿಲ್ಮ್ ನೋಡ್ಕೊಂಡು ಹೋಗೋಣ'

'ಲೇ ಆಪ್ತಮಿತ್ರ, ಮೊದ್ಲು ನನ್ನನ್ನ ಮನೆಗೆ ಬಿಡು, ಶೇವಿಂಗ್ ಆದ್ಮೇಲೆ ಬೇರೆ ಕೆಲಸ' ಅಂತ ಬೈಕ್ನ ಮನೆ ಕಡೆ ತಿರುಗಿಸೋಕೆ ಹೇಳಿದೆ.

Tuesday, April 13, 2010

ನೀರು ಹಾಕು!

ನಮ್ಮ ಅಕ್ಕನ ಮಗನಿಗೆ ೨ ವರ್ಷ, ಅವನು ಟಾಯ್ಲೆಟ್ನಲ್ಲಿ ಸೂಸು ಮಾಡಿ ಆದ್ಮೇಲೆ ನೀರು ಹಾಕಿ ಬರ್ತಿದ್ರು.


ಮೊನ್ನೆ ಸಂಜೆ ಅಕ್ಕನ ಜೊತೆ ವಾಕ್ ಮಾಡೋವಾಗ ಅವ್ನಿಗೆ ಅರ್ಜೆಂಟ್ ಆಯ್ತು, ಸೂಸು ಆದ್ಮೇಲೆ ಅಮ್ಮನಿಗೆ 'ಅಮ್ಮ, ನೀರು ಹಾಕು' ಅಂತ ರಚ್ಚೆ ಹಿಡಿದು ಕೂತ್ನಂತೆ.

ವಿಧಿ ಇಲ್ಲದೆ ನಮ್ಮಕ್ಕ ಕೈಲಿದ್ದ ನೀರಿನ ಬಾಟಲಿಯಲ್ಲಿದ್ದ ನೀರನ್ನು ಹಾಕಿ ವಾಪಸ್ ಮನೆಗೆ ಕರೆದುಕೊಂಡು ಹೋದ್ಲು.

Sunday, April 11, 2010

ಪ್ರಕೃತಿ

ಎತ್ತ ನೋಡಿದರತ್ತ ನಿನದೇ ಚೆಲುವು
ನಿನ್ನ ಮೇಲೆ ನನಗೆಲ್ಲಿಲ್ಲದ ಒಲವು

ಪರ್ವತದ ಮೇಲೆ ಮಂಜಿನ ತೋರಣ
ಅದರ ಮೇಲೆ ರವಿಯ ಹೊನ್ನಿನ ಕಿರಣ

ಅದೋ ಅಲ್ಲಿ ಕಾಮನಬಿಲ್ಲಿನ ಚಿತ್ತಾರ
ಆ ಸಪ್ತವರ್ಣಗಳ ನೋಡುವುದೇ ಸಡಗರ

ಆಗಸದಲ್ಲಿ ಕಾರ್ಮೋಡದ ಆರ್ಭಟ
ಇನ್ನೇನು ಶುರುವಾಗಲಿದೆ ಧರೆಯ ಮೇಲೆ ಅದರಾಟ

ಇಳೆಯ ಮೇಲೆ ಮಳೆಯ ನರ್ತನ
ಎಲೆಯ ಮೇಲೆ ಹನಿಯ ಸಿಂಚನ

ಎಲ್ಲೆಲ್ಲೂ ಹಸಿರ ಹೊದಿಕೆ
ಸಾಲುವುದಿಲ್ಲ ಎರಡೂ ನಯನ ಅದಕೆ

Monday, April 5, 2010

ಚುರ್ಮುರಿ - ೨

೧) ಕಂಡ ಕಂಡಲ್ಲೆಲ್ಲ ಕಾಯಿನ್ ಬೂತ್ ಇಟ್ಟು ಕಾಂಚಾಣದ ಕನಸು ಕಾಣಲಾರಂಬಿಸಿದ,
ಕೆಲವೇ ದಿನಗಳಲ್ಲಿ ಕಾಣದ ಕಡೆ ಮೊಬೈಲ್ ಕಂಡು ಕರುಬಲಾರಂಬಿಸಿದ.

೨) ಅವನ ಮಾತಿನ ಮೋಡಿಗೆ ಜನ ಓಟು ಹಾಕಿದರು
ಗೆದ್ದ ಮೇಲೂ ಮಾತನ್ನಾಡುತ್ತಲೇ ಇದ್ದಾನೆ

೩) ಮೊದಲ ಟೆಸ್ಟ್ನಲ್ಲಿ ಮೊದಲನೆಯವನಾಗಬೇಕೆಂದು ಅವನು ಒಂದು ತಿಂಗಳು ಹಗಲೂ ರಾತ್ರಿ ಕಷ್ಟಪಟ್ಟು ಓದಿದ, ಇವನು ಹಿಂದಿನ ದಿನ ಇಂಟರ್ನಲ್ ಬುಕ್ಕಿಗೆ ೮ ಉತ್ತರಗಳನ್ನೂ ಬರೆದಿಟ್ಟಿದ್ದ. ೮ ರಲ್ಲಿ ೬ ಪ್ರಶ್ನೆಗಳನ್ನು ಲೆಕ್ಚರರ್ ಕೊಟ್ಟಿದ್ದರು. ೫ನ್ನು ಬಿಟ್ಟು ಮಿಕ್ಕ ೩ನ್ನು ಹರಿದು, ಟೆಸ್ಟಾದ ಮೇಲೆ ಆ ಬುಕ್ಕನ್ನು ಇಟ್ಟು ಬಂದ. ಇವನು ಅವನಿಗಿಂತ ಮೊದಲಾಗಿದ್ದ.

ಕೈ - ಕೊಟ್ಟಳು

ಸ್ಕೂಟಿಯಲ್ಲಿ ಚೂಟಿಯ
ನೋಡಿ

ಬೈಕಲ್ಲಿ ಬೆಂಬತ್ತಿ
ಓಡಿ

ಕಾಫಿಡೇಯಲ್ಲಿ ಅವಳನ್ನು
ಕಾಡಿ

ಪ್ರೀತಿಯ ಭಿಕ್ಷೆ
ಬೇಡಿ

ಜೊತೆ ಒಂದಾದ
ಜೋಡಿ

ಅವನ ಶ್ರೀಮಂತಿಕೆ
ನೋಡಿ

ಕೈಲಿದ್ದ ಕಾಸೆಲ್ಲ
ಜಾಲಾಡಿ

ಕೈಕೊಟ್ಟಳು ಬೇರೊಬ್ಬನೊಂದಿಗೆ
ಓಡಿ

ಚುರ್ಮುರಿ - ೧

೧) ಅವನು ಸಮಾಜ ಸೇವೆ ಮಾಡಬೇಕೆಂದು ರಾಜಕಾರಣಕ್ಕೆ ಇಳಿದ. ಸಮಾಜದ ಸೇವೆ ಪಡೆದುಕೊಂಡು ರಾಜಕೀಯದಿಂದ ನಿವ್ರ್ರತ್ತಿ ಹೊಂದಿದ.

೨) ಅಪ್ಪ ಅಮ್ಮನ ಮಾತು ಕೇಳದೆ ಇದ್ದ ಬದ್ದ ಹೊಲವನ್ನೆಲ್ಲ ಮಾರಿ ಪೇಟೆಯಲ್ಲಿ ಬ್ಯುಸಿನೆಸ್ ಮಾಡಲು ಹಣ ತೆಗೆದುಕೊಂಡು ಹೋದ.
ರೈಲಿನಲ್ಲಿ ಮೂತ್ರ ಮಾಡಲು ಹೋದಾಗ ಯಾರೋ ದುಡ್ಡಿನ ಚೀಲವನ್ನು ಅಪಹರಿಸಿದ್ದರು.
ಈಗ ಅವನು ತಾನು ಮಾರಿದ ತೋಟದಲ್ಲೇ ಕೂಲಿ ಕೆಲಸ ಮಾಡುತ್ತಿದ್ದಾನೆ.

) ಕಾಲೇಜಿನ ಕೊನೆಯ ದಿನ ತನ್ನ ಗರ್ಲ್ ಫ್ರೆಂಡ್ಗೆ ಮೊಬೈಲ್ ಕೊಡಿಸಿದ ಹುಡುಗ ತನ್ನ ನಂಬರ್ ಅವಳಿಗೆ ಕೊಡದೆ ಅವಳು ಹೋದ ಮೇಲೆ ಪರಿತಪಿಸುತ್ತಿದ್ದ.

Wednesday, March 24, 2010

ನಾರಿ ನಾ ಪರಾರಿ

ನೀರನು ತರಲು ಹೋದ
ನೀರೆಯ ಹಿಂದೆ ಹೋದೆ

ಖಾಲಿ ಕೊಡವ ಬಾವಿಗೆಸೆದು
ತುಂಬಿದ ಕೊಡವ ಮೊಗೆದು

ಸೆರಗನು ಸೊಂಟಕೆ ಸಿಕ್ಕಿಸಿ
ಕೊಡವನು ನಡುವಲಿ ಕೂರಿಸಿ

ನುಲಿಯುತ ನಡೆಯುತಿಹಳು ನಾರಿ
ಹಿಂದಿರುಗಿ ನೋಡಿದಳು ತಾ ಬಂದ ದಾರಿ

ನನ್ನನು ಕಂಡು ಕಡುಕೋಪದಿಂದಾದಳು ಮಾರಿ
ಅದ ಕಂಡು ನಾನಾದೆ ಪರಾರಿ

Thursday, March 18, 2010

ಮೊದಲ ಮಳೆ



ಮೊದಲ ಮಳೆಯ
ಮೋಡಿಗೆ ಮನಸೋತು
ನಾ ಹೆಜ್ಜೆಯಿಟ್ಟೆ
ಹೊರಗೆ



ನೋಡಿದ ಅಮ್ಮ
ಸಿಡಿಲು ಗುಡುಗಿನ ಆರ್ಭಟಕ್ಕೆ ಹೆದರಿ
ಕರೆಯುತ್ತಿದ್ದಳು
ಒಳಗೆ

ಇದಾವುದನ್ನೂ ಲೆಕ್ಕಿಸದೆ
ಮೈಯೊಡ್ಡಿದೆ ತುಂತುರು
ಮಳೆಗೆ

ಒಂದೊಂದೇ ಹನಿಯು
ಮುಖವನ್ನು ಚುಂಬಿಸಿ ಮರೆಯಾದ ಅನುಭವ
ನನ್ನೊಳಗೆ


ಮಳೆ ನಿಂತಾಗ
ಮುಗಿಲನ್ನು ಮುಟ್ಟಿದ
ಸಂಭ್ರಮ
ಮೈಮನದೊಳಗೆ

Thursday, March 11, 2010

ಧರೆ

ಕಾಲದ ಸುಳಿಗೆ ಸಿಲುಕಿ
ತನ್ನಾಭರಣಗಳನ್ನೆಲ್ಲ ಕಳಚಿ
ನಿರಾಭರಣೆಯಾಗಿದ್ದಳವಳು
ಇಂದು ಅದೇ ಕಾಲದ ಮಹಿಮೆಗೆ
ಸಿಂಗಾರ ಮಾಡಿಕೊಂಡು
ನಳನಳಿಸುತ್ತಿದ್ದಳು

Tuesday, February 23, 2010

ಬ್ರಮ್ಹಗಿರಿಯ ಚಾರಣ


2 ವರ್ಷಗಳ ಹಿಂದೆ ಬ್ರಮ್ಹಗಿರಿಗೆ ಹೋಗ್ಬೇಕು ಅಂತ ಅರ್ಧಕ್ಕೆ ಹೋಗಿ ವಾಪಸ್ ಬಂದಿದ್ದ ನಮಗೆ ಮುಂದೊಂದು ದಿನ ಹೇಗಾದ್ರು ಮಾಡಿ ತುದಿ ತಲುಪ್ಲೇಬೇಕು ಅಂತ ನಿರ್ಧಾರ ಮಾಡಿದ್ವಿ. ಪಕ್ಯ, ವೆಂಕ ಮನಸ್ಸು ಮಾಡಿ ಎಲ್ಲ ಬುಕ್ ಮಾಡಿ ಹೊರಡೋದಕ್ಕೆ ಸಿದ್ಧವಾದೆವು. ಆದ್ರೆ ಈ ಟ್ರಿಪ್ನಲ್ಲಿ ನಮ್ಮ್ಹುಡುಗ್ರು ಕೈ ಕೊಟ್ಟಿದ್ರು - >


(ಮೀಟರ್ - ಶಿವರಾತ್ರಿ ಜಾತ್ರೆಗೆ ಊರಿಗೆ ಹೋಗ್ಬೇಕು ಅಂತ ಡ್ರಾಪ್ ಆದ, ಜಾತ್ರೆಯಲ್ಲಿ ಯಾರಾದ್ರು ಒಳ್ಳೆ ಹುಡ್ಗಿ ಸಿಗ್ತಾಳೆ ಅಂತ ಪ್ಲಾನ್ ಹಾಕ್ದ್ದ ಅಂತ ಕಾಣತ್ತೆ.

ಉಲ್ಲ - ಶಿವರಾತ್ರಿಯಲ್ಲಿ ಜಾಗರಣೆ ಇರ್ಬೇಕು ಅಂದ್ಕೊಂಡಿದ್ದ.

ಶೆಟ್ಟಿ - ಹೋಗಿರೋ ಜಾಗನೇ ಏನು ಹೋಗದು ಬರಲ್ಲ ಅಂದಿದ್ದ, ಪಾಪ ಮಿಸ್ ಮಾಡ್ಕೊಂಡ.


ಜಯ, ಸೌಜ ಮತ್ತೆ ರಶ್ಮಿ - ಕಂಪನಿ ಪಾರ್ಟಿ ಅಂತ ಇಲ್ಲೇ ಉಳ್ ಕೊಂಡ್ರು, ಜಯ ಬರ್ದೇ ಇರೋದು ನೋಡಿ ನನ್ನ ವೆಂಕನ ಕ್ಯಾಮೆರಾಗಳು ಕುಣಿದಾಡುತಿದ್ವು).

ಅಂತೂ ಪಕ್ಯ ನಾವೆಲ್ಲಾ ಸೇರಿ 7 ಜನನ್ನ ಹೊರಡಿಸಿದ್ದ, ಆದ್ರೆ ಕೊನೆ ದಿನ ಅವನಿಗೆ ಕಾಲ್ ಮಾಡಿ ಏನಾದ್ರೂ ತರೋದು ಇದ್ರೆ ಹೇಳಪ್ಪ ಅಂತ ಕೇಳೋಣ ಅನ್ನೋವಷ್ಟರಲ್ಲಿ ೩ ಜನ ಕೈ ಎತ್ತಿದ್ದಾರೆ ಕಣೋ ಅಂದ.
ಸರಿ ಆಯ್ತು ಬಿಡಪ್ಪ, ನಾವು 4 ಜನ ಆಗಿದ್ದಾಗಲಿ ನಡಿ ಹೋಗೋಣ, ವೆಂಕನಿಗೆ ಹೇಳಿ ಮಿಕ್ಕಿದ್ದು ಏನೇನು ತಗೋಬೇಕು ತಗೋ ಬಾ ಅಂದರಾಯ್ತು ಅಂದು ಕೆಲಸ ಮುಗಿಸಿಕೊಂಡು ಲಗೇಜ್ ಪ್ಯಾಕ್ ಮಾಡೋದಕ್ಕೆ ಮನೆ ಬಸ್ ಹತ್ತಿದೆ.

ಎಲ್ಲ ಪ್ಯಾಕ್ ಮಾಡ್ಕೊಂಡು ವೆಂಕನ ರೂಮಿಗೆ ಹೋಗಿ ಅಲ್ಲಿಂದ ಆಟೋದಲ್ಲಿ ಮಜೆಸ್ಟಿಕ್ಗೆ ಹೋದ್ವಿ. ಸ್ವಲ್ಪ ಹೊತ್ತಾದ ಮೇಲೆ ಪಕ್ಯ ಮತ್ತೆ ಅವನ ಫ್ರೆಂಡ್ ರಂಜನ್ (ಡುಮ್ಮ - ಪಕ್ಯ ಕರೆಯೋದು) ಬಂದ್ರು. 11.30ರ ವೋಲ್ವೋಗೆ ಹತ್ತು ಕುಳಿತ್ವಿ, ಎರಡು ದಿನ ಬೆಂಗಳೂರಿಗೆ ಬರಲ್ಲ ಅಂತ ಸಲಾಂ ಹೊಡೆದು ಡ್ರೈವರ್ ಕೊಟ್ಟ ರಗ್ಗನ್ನು ಹೊದ್ಕೊಂಡು ನಿದ್ರಾದೇವಿಗೆ ಶರಣಾದೆವು.

ಬಸ್ಸು ಮುಂಜಾನೆ 4.30ರ ಸುಮಾರಿಗೆ ಗೋಣಿಕೊಪ್ಪಲಿನಲ್ಲಿ ನಮ್ಮನ್ನು ಕೆಡವಿ ಅದರ ಹಾದಿ ಹಿಡಿಯಿತು. ಗೋಣಿಕೊಪ್ಪಲಿನಿಂದ ಶ್ರೀ ಮಂಗಲಕ್ಕೆ 5.45ಕ್ಕೆ ಮೊದಲ ಬಸ್, ಅಲ್ಲಿವರೆಗೆ ನಾವು ಗೋಣಿಕೊಪ್ಪಲಿನಲ್ಲೆ ಕಾಲ ದೂಡಬೇಕಿತ್ತು ಜೊತೆಗೆ ಬೆಳಗಿನ ಕೆಲಸಗಳನ್ನು!.
ಅರ್ಧ ಗಂಟೆ ಹರಟೆ ಹೊಡ್ಕೊಂಡು ಕೂತವರು ಪಕ್ಯನಿಗೆ ಹೋಗಿ ಯಾವುದಾದರು ಲಾಡ್ಜ್ ಇದೆಯಾ ವಿಚಾರಿಸ್ಕೊಬಾ ಅಂದ್ವಿ.

ಪಕ್ಯ ಹೋಗಿ 10 ನಿಮಿಷ ಆದ್ಮೇಲೆ ಬಂದವನು, 1 ಲಾಡ್ಜ್ ಇದೆ ಆದ್ರೆ 2 ಬೆಡ್ರೂಮ್ ಅಂತೆ 600 ರೂ ಹೇಳ್ದಾ ಅಂದ.
ವೆಂಕ ಇದ್ದವನು 'ಲೇ ಹೆಗ್ನ, ನಾವೇನು 24 ಗಂಟೆ ಲಾಡ್ಜ್ನಲ್ಲಿರಲ್ಲ ಒಂದೆರಡು ಗಂಟೆಗೆ ಮಾತ್ರ ಅಂತ ಕೇಳಬೇಕಿತ್ತು'.
ನೀನೆ ಹೋಗಿ ಕೆಳ್ಕೊಬಾರಪ್ಪ ಅಂದ ಪಕ್ಯ.
ಬಾ ಅಂತ ಪಕ್ಯನ್ನ ವೆಂಕ ಎಳ್ಕೊಂಡು ಹೋದ.
ಹೋಗಿ 10 ನಿಮಿಷದೊಳಗೆ ಶ್ರೀ ಮಂಗಲಕ್ಕೆ ಹೋಗೋ ಬಸ್ ಬಂತು. ನಾನು ವೆಂಕನಿಗೆ ಕಾಲ್ ಮಾಡಿ 'ಲೇ, ಬಸ್ ಬಂತು ಕಣ್ರೋ' ಅಂದೆ.
ಪಾಪ ಟಾಯ್ಲೆಟ್ನಲ್ಲಿದ್ದ ಅನ್ಸತ್ತೆ 'ಹೋಗ್ಲಿ ಬಿಡು ಇನ್ನೊಂದು ಬಸ್ ಕ್ಯಾಚ್ ಮಾಡಣ' ಅಂದ.

10 ನಿಮಿಷ ಆದ್ಮೇಲೆ ಇಬ್ರೂ ಬಂದ್ರು.
ಅಬ್ಬ ಈಗಂತೂ ಫುಲ್ ಆರಾಮ್ ಅಂದ್ರು ಇಬ್ರು.

'ಏನ್ರಪ್ಪ ಲಾಡ್ಜ್ ಸಿಕ್ತಾ? ಹಾಗಿದ್ರೆ' ರಂಜನ್ ಕೇಳ್ದ.

ಇಲ್ಲ ಅಂದ ವೆಂಕ.

ಮತ್ತೆ ಹೆಂಗೆ ಫುಲ್ ಆರಾಮ್??


'ಆ ಲಾಡ್ಜ್ ಹತ್ರ ಹೋದ್ವಿ 500 ರೂ ಕಡಿಮೆ ಬರ್ಲಿಲ್ಲ, ಅಷ್ಟು ಕೊಡೋದು ವೇಸ್ಟ್ ಅಂದ್ಕೊಂಡು ಹೊರಡೋದಕ್ಕೆ ರೆಡಿಯಾದ್ವಿ. ರಿಸಪ್ಶನಿಷ್ಟ್ ಮಲಗೋಕೆ ರೆಡಿಯಾಗ್ತಿದ್ದ, ಅವ್ನು ಮಲಗಿದ್ದು ಕನ್ಫರ್ಮ್ ಆದ್ಮೇಲೆ , ಪಕ್ಕದಲ್ಲೇ ಟಾಯ್ಲೆಟ್ ಇತ್ತು ಹೋಗಿ ಮುಗಿಸ್ಕೊಂಡು ಬಂದ್ವಿ' ಅಂದ ವೆಂಕ.

'ನನ್ಮಕ್ಳ ಇದೇ ಕೆಲಸ ಮಾಡಿ, ನಮ್ಮ ಕಥೆ ಈಗ ಹಾಗಿದ್ರೆ' ಅಂದೆ.

'ಆ ರೋಡ್ ಡೆಡ್ ಎಂಡ್ನಲ್ಲಿ ಲಾಡ್ಜ್ ಇದೆ ಫಸ್ಟ್ ಫ್ಲೋರ್ನಲ್ಲಿ, ಹೋಗಿ ನಿಮ್ಮ ಲಕ್ ಟ್ರೈ ಮಾಡಿ'.

ಸರಿನಪ್ಪ ಅಂದ್ಕೊಂಡು ನಾನು ಹೊರಟೆ. ಹೋಗಿ ನೋಡಿದೆ ಇನ್ನೂ ಪುಣ್ಯಾತ್ಮ ಸುಖ ನಿದ್ರೆಯಲ್ಲಿದ್ದ. ನಿಂಗೆ ದೇವ್ರು ಇದೇ ರೀತಿ ಸುಖ ನಿದ್ರೆ ಕೊಡಲಿ ನಾನು ವಾಪಸ್ ಹೋಗೋವರೆಗೂ ಅಂದ್ಕೊಂಡು ನನ್ನ ಕೆಲಸಕ್ಕೆ ಹೋದೆ. ಅಕಸ್ಮಾತ್ ವಾಪಸ್ ಹೋಗೋವಾಗ ಸಿಕ್ಕಿದ್ರೆ ಏನು ಹೇಳೋದು ಅಂತ ಮನಸ್ನಲ್ಲೇ ಸ್ಕೆಚ್ ಹಾಕೊಂಡು ಪ್ರಕ್ರ್ರುತಿ ಕರೆ ಮುಗಿಸಿ ವಾಪಸ್ ಹೊರಟೆ, ಸದ್ಯ ಅವ್ನು ಎದ್ದಿರಲಿಲ್ಲ.

ಆಗ್ಲೇ ೬.೩೦ ಆಗಿತ್ತು, ಹೊಟ್ಟೆ ಬೇರೆ ಚುರುಗುಡ್ತಿತ್ತು. ಆಗ ತಾನೇ ಒಂದು ಹೋಟೆಲ್ ಓಪನ್ ಆಗಿತ್ತು, ಎಲ್ಲರೂ ಅಲ್ಲಿಗೆ ಹೆಜ್ಜೆ ಹಾಕಿದೆವು. ಅಲ್ಲೇ ಇದ್ದ ಸಿಂಕಲ್ಲೇ ಬ್ರಶ್ ಮಾಡಿ ಇಡ್ಲಿ,ಬನ್, ಚೌ ಚೌ ಬಾತ್ ಆರ್ಡರ್ ಮಾಡಿದೆವು. ಬೆಟ್ಟ ಹತ್ತಬೇಕಲ್ಲ ಬೆಳಗ್ಗೆ ಜಾಸ್ತಿ ತಿಂದರೆ ಚೆನ್ನಾಗಿ ಹತ್ತಬಹುದು ಅಂತ ಸರಿಯಾಗಿ ತಿಂದ್ವಿ.

ತಿಂಡಿ ತಿಂದು ಹೊರಗೆ ಬಂದ ಕೂಡಲೇ ಬಸ್ ಸ್ಟ್ಯಾಂಡ್ನಲ್ಲಿ ಶ್ರೀ ಮಂಗಲ, ಇರ್ಪು, ಕುಟ್ಟ ಅಂತ ಕೂಗ್ತಿದ್ರು. 7.15ರ ಸುಮಾರಿಗೆ ಶ್ರೀ ಮಂಗಲ ಬಸ್ ಹತ್ತಿದ್ವಿ. ವೆಂಕ, ಪಕ್ಯ, ರಂಜನ್ ಬಸ್ ಹತ್ತಿದ ತಕ್ಷಣವೇ ಪಾಚ್ಕೊಂಡ್ರು. ಬಸ್ ಶ್ರೀ ಮಂಗಲ ಬರೋ ಹೊತ್ತಿಗೆ 8.15 ಆಗಿತ್ತು. ಇಳಿದವರೇ ಟ್ರೆಕ್ ಮಾಡೋದಕ್ಕೆ ಅನುಮತಿ ಪಡೆಯೋದಕ್ಕೆ ಫಾರೆಸ್ಟ್ ಆಫೀಸಿಗೆ ಹೋದ್ವಿ.
ಅಲ್ಲಿ 8.15 ಆದ್ರೂ ಹೊರಗಡೆ ಲೈಟ್ ಹಾಗೇ ಉರೀತಿತ್ತು, ಅವ್ರು ಬರೋದು ೯ ಅಂತ ಗೊತ್ತಾಯ್ತು. ಅಲ್ಲೇ ಸ್ವಿಚ್ ಇದೆಯೇನೋ ಅಂತ ನೋಡಿದ್ವಿ, ಉಹುಂ, ಇರ್ಲಿಲ್ಲ. ನಾನು ಪಕ್ಯನಿಗೆ ಹೇಳ್ದೆ, ಅವನು ವೆಂಕನ ಸಲಹೆಯ ಮೇರೆಗೆ ಮೈನ್ ಸ್ವಿಚ್ ಆರಿಸಿ ಬಂದ.


ಇನ್ನೂ ಮುಕ್ಕಾಲು ಗಂಟೆ ಏನು ಮಾಡೋದು ಅಂದ್ಕೊಂಡು ಶ್ರೀ ಮಂಗಲ ಪೇಟೆ ಸುತ್ತೋಕೆ ೩ ಜನ ಹೊರಟ್ವಿ, ರಂಜನ್ ಅಲ್ಲೇ ಬಿಟ್ಟು.
ಪೇಟೆ ಸುತ್ತಾಡಿ ೧ ಲೋಟ ಕಾಫಿ ಕುಡಿದು ವಾಪಸ್ ಹೋದ್ವಿ, ಆಗ ತಾನೇ ಬಂದಿದ್ರು, ಪರ್ಮಿಶನ್ ತಗೊಂಡಾದ್ಮೇಲೆ ಆ ವಯ್ಯಂಗೆ ಹೊರಗಡೆ ಲೈಟ್ ಉರೀತಿತ್ತು ಮೈನ್ ಸ್ವಿಚ್ ಆರಿಸಿದ್ವಿ ಈಗ ಆನ್ ಮಾಡ್ತೀವಿ , ಅದ್ರ ಸ್ವಿಚ್ ಆಫ್ ಮಾಡಿ ಅಂದ್ವಿ, ಅವ್ನು ಹಂಗೆ ಮುಖ ನೋಡಿ ಆಗ್ಲಿ ಸಾರ್ ಅಂದ.

ಶ್ರೀ ಮಂಗಲದಿಂದ ಇರ್ಪುಗೆ ಬಸ್ನಲ್ಲಿ ಹೋಗ್ಬೇಕಿತ್ತು, ಅಕ್ಕಿ ದಿನಸಿ ಸಾಮಾನು ತಗೊಂಡು ಬಸ್ ಹತ್ತಿದೆವು. ಇನ್ನೇನು ಬಸ್ ಹೊರಡ್ಬೇಕು ಅಷ್ಟರಲ್ಲಿ ಇನ್ನೊಂದು ಟ್ರೆಕ್ ಟೀಮ್ ಬಂತು. ಒಬ್ಬನ ಕೈಲಿ ಪ್ಲಾಸ್ಟಿಕ್ ತಟ್ಟೆ ಇತ್ತು. ನಮಗೆ ಅನುಮಾನ ಬಂದು, ಪಕ್ಯ ತಟ್ಟೆ ತೆಗೆದುಕೊಂಡಿದೀಯೇನೋ ಅಂದೆ, ಅವ್ನು ಇಲ್ಲ ಅಂತ ಮುಖ ಅಲ್ಲಾಡಿಸಿದ. 'ಅದ್ಯಾವ ಸೀಮೆ ಟ್ರಿಪ್ ಆರ್ಗನೈಸ್ ಮಾಡ್ತೀರೋ, ನಿನ್ನ ಜನ್ಮಕ್ಕೆ ಒಂದಿಷ್ಟು, ಹೋಗಿ ತಗೋ ಬಾ' ವೆಂಕ ಕ್ಯಾಕರಿಸಿ ಉಗಿತಿದ್ದ.
ಪಕ್ಯ ಓಡಿ ಹೋಗಿ ತಂದ.


ಬಸ್ ಇರ್ಪು ತಲುಪುವ ಹೊತ್ತಿಗೆ 10.30 ಗಂಟೆ ಆಗಿತ್ತು. ಜಾತ್ರೆ ನಡೀತಿತ್ತು ಶಿವರಾತ್ರಿ ಹಬ್ಬದ ಪ್ರಯುಕ್ತ. ಅಲ್ಲಿಂದ ೩ ಜನ ಗೈಡ್ ಒಟ್ಟಿಗೆ ಹೊರಟ್ವಿ, ಒಟ್ಟು 3 ಟೀಮ್ (18 ಜನ) ನಮ್ದು ಸೇರಿ. ಶುರುವಾಯ್ತು ಅಲ್ಲಿಂದ ನಮ್ಮ ಚಾರಣ......

ಕ್ಕಿಗಳ ಕಲರವ, ಪ್ರಕ್ರ್ರತಿಯ ಸೌಂದರ್ಯ ಆಸ್ವಾದಿಸುತ್ತಾ , ಒಬ್ಬೊಬ್ಬರ ಕಾಲು ಎಳೀತಾ,ಸಿಕ್ಕ ಸಿಕ್ಕ ಜರಿಗಳಲ್ಲಿ ತಂಪಾದ, ಅಷ್ಟೇ ಶುದ್ಧವಾದ ನೀರು ಕುಡೀತಾ, ಬಾಟಲಿಗೆ ನೀರು ತುಂಬಿಸಿಕೊಂಡು ಸೆಖೆ ಆದ್ರೆ ಮುಖಕ್ಕೆ ತಲೆಗೆ ಸುರಿದುಕೊಂಡು, ನಮ್ಮ ಪಯಣ ಸಾಗಿತ್ತು.

೧ ಗಂಟೆ ನಡೆದಿರಬಹುದು, ಅಷ್ಟೊತ್ತಿಗೆ ಎದ್ರುಗಡೆಯಿಂದ ಇಬ್ರು ಬರ್ತಿದ್ರು, ಗಂಡ ಹೆಂಡತಿ ಟ್ರೆಕ್ ಹೋಗಿ ವಾಪಸ್ ಬರ್ತಿದ್ರು. ಮುಂದೆ ಹೋಗಿದ್ದ ಗೈಡ್ ಅವರನ್ನ ವಾಪಸ್ ಕರ್ಕೊಂಡು, ಬೈಕೊಂಡು ಬರ್ತಿದ್ದ ಕನ್ನಡದಲ್ಲಿ, ಅವ್ರಿಗೆ ಕನ್ನಡ ಬರ್ತಿರ್ಲಿಲ್ಲ. 'ಟ್ರೆಕ್ ಮಾಡೋದಕ್ಕೆ ಪರ್ಮಿಶನ್ ಇಲ್ಲದೆ ಹೋಗಿದ್ದಾರೆ ಸಾರ್, ಇವರಿಗೆ ಜೈಲ್ಗೆ ಹಾಕಿಸಬೇಕು ಸಾರ್ ಇಲ್ಲಾಂದ್ರೆ ನಮ್ಮನ್ನ ಹಾಕ್ತಾರೆ' ಗೈಡ್ ನಮ್ಮನ್ನ ನೋಡಿ ಒಂದೇ ಸಮನೆ ಉಗಿತಿದ್ದ.

ನಾವು ಏನಾಯ್ತು ಅಂತ ಅವರನ್ನ ಕೇಳಿದಕ್ಕೆ '೮ ಗಂಟೆಗೆ ಫಾರೆಸ್ಟ್ ಆಫೀಸಿಗೆ ಹೋದ್ವಿ, ಯಾರೂ ಇರ್ಲಿಲ್ಲ. ಫೋನ್ ಸಹ ಮಾಡಿದ್ವಿ, ಯಾರೂ ಎತ್ತಲಿಲ್ಲ. ಇನ್ನೇನು ಮಾಡೋದು ಅಂತ ಟ್ರೆಕ್ ಮಾಡೋದಕ್ಕೆ ಶುರು ಮಾಡಿದ್ವಿ' ಅಂದ.

ನನ್ಮಕ್ಳು ಮೊದ್ಲೇ ತಪ್ಪು ಮಾಡಿದ್ರು ಅದ್ರ ಜೊತೆಗೆ ಬೇಡದೆ ಇರೋ ವಿಷಯಗಳು.
ಅಷ್ಟೊತ್ತಿಗೆ ಗೈಡ್ ಇದ್ದವನು 'ಸಾರ್, ಕಥೆ ಹೇಳ್ತಾ ಇರ್ತಾರೆ ಇವ್ರು. ಅವರನ್ನ ಫಾರೆಸ್ಟ್ ಆಫೀಸಿಗೆ ಕರ್ಕೊಂಡು ಹೋಗ್ತೀವಿ ನೀವು ಇಲ್ಲೇ ಇರಿ'.

ನಾವೆಲ್ಲರೂ ಹೋಗ್ಲಿ ಬಿಡಿ ಸಾರ್ ಹೆಂಗಿದ್ರೂ ವಾಪಸ್ ಹೋಗ್ತಿದ್ದಾರಲ್ಲ ಅಂದ್ವಿ.

ಇಲ್ಲ ಸಾರ್ ಹಂಗೆಲ್ಲ ಆಗಲ್ಲ, ಹೆಚ್ಚು ಕಡಿಮೆ ಆದ್ರೆ ನಮ್ಮ ಕುತ್ತಿಗೆಗೆ ಬರತ್ತೆ ಸಾರ್ ಅಂದ ಇನ್ನೊಬ್ಬ ಗೈಡ್.

ಆಮೇಲೆ ೩ ಜನನೂ ಏನೋ ಮಾತಾಡ್ಕೊಂಡು ವೆಂಕನ್ನ 'ನೀವು ಬನ್ನಿ ಸಾರ್' ಇಲ್ಲ ಅಂತ ಅವರನ್ನೂ ಕರ್ಕೊಂಡು ಆಚೆಗೆ ಹೋದ್ರು.

ಏನೋ ಡೀಲ್ ಮಾಡ್ಕೊಂಡು ಅವರಿಬ್ಬರನ್ನ ವಾಪಸ್ ಕಳ್ಸಿ ೪ ಜನನೂ ವಾಪಸ್ ಬಂದ್ರು.
ಎಷ್ಟಕ್ಕೆ ಡೀಲಾಯ್ತು ವೆಂಕ?

೧೫೦೦.೦೦

ಮೂವರಿಗೂ ೫೦೦ ರೂ ಹಾಗಿದ್ರೆ . ೨೦೦೦ ಕೇಳಬೇಕಿತ್ತು, ೫೦೦ ರೂ ನಮ್ಮ ಖರ್ಚಿಗೆ ಇಟ್ಕೊಬಹುದಿತ್ತಲ್ಲ? :)

ಮಾಡಬಹುದಿತ್ತು....ಹೋಗ್ಲಿ ಬಿಡಿ

೧೫ ನಿಮಿಷ ಈ ಆಟ ಮುಗಿದ ಮೇಲೆ ಮತ್ತೆ ಪಯಣ ಶುರುವಾಯಿತು. ಸುಮಾರು ೧೨.೩೦ಕೆ ಒಂದು ಹೊಳೆ ಸಿಕ್ತು (ಲಕ್ಷ್ಮಣತೀರ್ಥ). ಹೊಟ್ಟೆ ಬೇರೆ ಚುರುಗುಡ್ತಿತ್ತು, ಬೆಳಗ್ಗೆ ಬೇರೆ ಬೇಗ ತಿಂದ ಪರಿಣಾಮ ಎಲ್ಲರೂ ತಿನ್ನೋದಕ್ಕೆ ಕಾತರರಾಗಿದ್ದರು.
ಪಕ್ಯ ಬ್ಯಾಗಿಂದ ಚಪಾತಿ ಮತ್ತೆ ಟೊಮೇಟೊ ಪಲ್ಯ ತೆಗೆದ. ಗೈಡ್ಗೆ ಕೊಟ್ಟು ಎಲ್ಲರೂ ೩-೩ ಚಪಾತಿ ತಿಂದು ಹೊಳೆಯಲ್ಲಿ ಕೈ ತೊಳೆದುಕೊಂಡು ಮತ್ತೆ ಹೆಜ್ಜೆ ಹಾಕಿದೆವು. ಇಲ್ಲಿವರೆಗೆ ಕಾಡಿನ ತಂಪಲ್ಲಿ ಆರಾಮಾಗಿ ಹೋಗ್ತಿದ್ದ ನಮಗೆ ಬಯಲು ಜಾಗ ಸಿಕ್ತು. ಅರ್ಧ ಗಂಟೆ ನಡೆಯೋವಷ್ಟರಲ್ಲಿ ಸುಸ್ತಾಗಿ ಸಿಕ್ಕ ಬಂಡೆ ಮೇಲೆ ಹಾಗೇ ಬಿದ್ಕೊಂಡ್ವಿ.

ಆದ್ರೆ ಡುಮ್ಮ ಇನ್ನು ಹತ್ತುತ್ತನೇ ಇದ್ದ. ಅವ್ನು ಬರೋವರೆಗೋ ಕಾದ್ವಿ. ಬಂದಾದ್ಮೇಲೆ ಪಕ್ಯ 'ಲೋ ಡುಮ್ಮ, ನಿನ್ನಿಂದನೆ ಲೇಟ್ ಆಗ್ತಿರೋದು, ಇಲ್ಲಂದಿದ್ರೆ ಇಷ್ಟೊತ್ತಿಗೆ ಆ ಟೀಮಿಗಿಂತ ಮೊದ್ಲು ಹೋಗ್ತಿದ್ವಿ'.

ಅದ್ಕೆ ರಂಜನ್ 'ಇವೆಲ್ಲ ಡಂಗಾಣಿಗಳು ಬೇಡಮ್ಮ, ನಂಗೇನೂ ನೀವು ಕಾಯೋದು ಬೇಡ ನಾನು ನಿಧಾನಕ್ಕೆ ಬರ್ತೀನಿ. ನೀವು ಹೋಗ್ತಿರಿ'.

'ಅದ್ಹೇಗಾಗತ್ತೆ, ನೀನು ಬಂದ್ರೆ ನಮ್ಮ ಟೀಮಿಗೆ ಒಂತರಾ ಗಾಂಭೀರ್ಯ' ಅಂತಂದ ಪಕ್ಯ.

ನಾನಿದ್ದೋನು 'ಗಾಂಭೀರ್ಯ ಅಲ್ಲ ಮಗಾ, ಗಜ ಗಾಂಭೀರ್ಯ ಅನ್ನು' ಅಂದೆ :).

ಅಲ್ಲಿವರೆಗೆ ನಿರ್ಜೀವವಾಗಿದ್ದ ಮೊಬೈಲ್ಗಳು ಸಿಗ್ನಲ್ ಸಿಕ್ಕ ಪರಿಣಾಮ ಒಂದೇ ಸಮನೆ ಹೊಡೆದುಕೊಳ್ಳತೊಡಗಿದವು(ಮೆಸೇಜು, ಕಾಲ್). ಅವ್ರ ಅಪ್ಪ ಅಮ್ಮನಿಗೆ, ಹೆಂಡತಿಗೆ, ಗರ್ಲ್ಫ್ರೆಂಡ್ಗೆ ಕಾಲ್ ಮಾಡಿ ತಾವು ಇರೋ ಜಾಗ ಹೇಳಾದಮೇಲೆ ಮತ್ತೆ ಕಾಲುಗಳು ಬೆಟ್ಟದ ಕಡೆ ಹೆಜ್ಜೆ ಹಾಕಿದವು.
೧.೩೦ಕ್ಕೆ ಸರಿಯಾಗಿ ಗೆಸ್ಟ್ ಹೌಸ್ ತಲುಪಿದ್ವಿ.

೧೫ ನಿಮಿಷ ರೆಸ್ಟ್ ತಗೊಂಡು ಬ್ರಮ್ಹಗಿರಿ ಪೀಕ್ಗೆ ಹೋಗೋಣ ಅಂತ ಗೈಡ್ ಅಂದ.

ಬ್ಯಾಗ್ ಅಲ್ಲೇ ಗೆಸ್ಟ್ ಹೌಸ್ನಲ್ಲಿ ಎಸೆದು ಮತ್ತೆ ಶುರುವಾದ ಪಯಣ ಸುಮಾರು ೨ ತಾಸು ಎಲ್ಲೂ ಕೂರದೆ ಮುಂದುವರೆಯಿತು ಕಾರಣ ಸಮನಾದ ಹಾದಿ, ಅಲ್ಲದೆ ದೂರದ ಬೆಟ್ಟಗಳು, ಮೋಡಗಳು ನಮ್ಮ ಹರಟೆ ಇವುಗಳಿಂದ ನಮ್ಮ ದಾರಿ ಸಾಗಿದ್ದೇ ತಿಳಿಯಲಿಲ್ಲ.
ಕೊನೆಗೂ ಬ್ರಮ್ಹಗಿರಿಯ ತುದಿ ಹತ್ತುವ ಜಾಗ ಬಂತು. ಎಲ್ಲರಿಗೂ ಆ ಬೆಟ್ಟ ನೋಡಿ ಶಾಕ್ ಹೊಡೆದ ಹಾಗಾಯ್ತು. ೭೦-೭೫ ಡಿಗ್ರಿಯಲ್ಲಿದ್ದ ಬೆಟ್ಟವನ್ನ ನೋಡಿ ಹೇಗಪ್ಪ ಹತ್ತೋದು ಅಂತ ಎಲ್ಲರ ಮನಸ್ಸಿನಲ್ಲೂ ಪ್ರಶ್ನೆಗಳ ಸರಮಾಲೆ ಏಳುತ್ತಿತ್ತು.

ಡುಮ್ಮ ಇದ್ದವನು 'ನನ್ನ ಕೈಲಿ ಆಗಲ್ಲ ನೀವು ಹೋಗಿ' ಅಂದ. ನಾವು ಹತ್ತೋದಕ್ಕೆ ರೆಡಿ ಇದೀವೇನೋ ಅನ್ನೋರ ಹಾಗೆ!!!!!

೫ ನಿಮಿಷ ಎಲ್ಲ ಯೋಚನೆ ಮಾಡಿ ಹತ್ತಿದರೆ ಆಯ್ತು ಅಂತ ನಿರ್ಧಾರ ಮಾಡಿ ಹತ್ತೋದಕ್ಕೆ ಶುರು ಮಾಡಿದ್ವಿ, ಆಗ ೩.೩೦ ಆಗಿತ್ತು.

ನಾನು,ಪಕ್ಯ ಮುಂದಿದ್ವಿ, ವೆಂಕ ಸ್ವಲ್ಪ ಹಿಂದಿದ್ದ.

'ಪಕ್ಯ, ಎಷ್ಟು ಆಗತ್ತೋ ಅಷ್ಟು ಓಡೋಣ' ಅಂದೆ. ಈ ತರ ತಲೆಹಿಡಕ ಐಡಿಯಾಗಳು ನಮ್ಮಲ್ಲಿ ಸಾಮಾನ್ಯವಾಗಿದ್ದರಿಂದ ಪಕ್ಯ 'ಹೂಂ' ಅಂದ. ಸ್ವಲ್ಪ ಜಾರಿದ್ರೆ ಬಿದ್ದು ಮತ್ತೆ ಬೆಟ್ಟದ ತಳ ತಲುಪೋ ಹಾಗಿದ್ದ ಜಾಗದಲ್ಲಿ ಓಡೋದಕ್ಕೆ ಶುರುಮಾಡಿದ್ವಿ. ೨ ನಿಮಿಷ ಓಡಿ ಭಯಂಕರ ಸುಸ್ತಾಗಿ ೫ ನಿಮಿಷ ರೆಸ್ಟ್ ತಗೊಂಡ್ವಿ. ವೆಂಕ ಇನ್ನೂ ಕೆಳಗೆ ಇದ್ದ.

ಕೆಲವರು ಕೋಲು ಹಿಡ್ಕೊಂಡು ಹತ್ತುತ್ತಿದ್ರು ಇನ್ನ ಕೆಲವರು ತೆವಳಿಕೊಂಡು ಹೋಗ್ತಿದ್ರು :).

ನಾವು ಯಾವುದರ ಸಹಾಯವಿಲ್ಲದೆ ಹತ್ತುತ್ತಿದ್ದೆವು, ನಡೆಯುವಾಗ ಹಿಂದಿರುಗಿ ನೋಡ್ತಿರ್ಲಿಲ್ಲ,ಆಯಾ ತಪ್ಪಿ ಬೀಳೋ ಸಂಭವ ಜಾಸ್ತಿಯಿದ್ದುದ್ದರಿಂದ. ನಿಂತು ತಿರುಗಿ ನೋಡಿ ಮತ್ತೆ ಮುಂದುವರೆಯುತ್ತಿದ್ದೆವು. ಅಂತೂ ಅರ್ಧ ಗಂಟೆಯಾಗುವಷ್ಟರಲ್ಲಿ ಸುಸ್ತಾಗಿ ಹೋಗಿದ್ದೆವು, ತುದಿ ಸ್ವಲ್ಪಾನೆ ಕಾಣಿಸ್ತಿತ್ತು. ೧೦ ನಿಮಿಷ ಬಂತು ಪಕ್ಯ ನಡಿ ಅಂತ ಹೊರಟ್ವಿ.

ಕೊನೆಗೂ ಬಂತು, ಯಾವದನ್ನ ನೋಡ್ಬೇಕು ಅಂತ ೨ ಸಲ ಟ್ರೆಕ್ ಮಾಡ್ಕೊಂಡು ಬಂದ್ವೋ ಅದು.

ಶರ್ಟ್ ಬಿಚ್ಚೆಸೆದು ಹಾಗೇ ಹುಲ್ಲಿನ ಮೇಲೆ ಇಬ್ರೂ ಬಿದ್ಕೊಂಡ್ವಿ. ಒಂದು ಟೀಮ್ ಆಗ್ಲೇ ಹೋಗಿತ್ತು, ಇನ್ನೊಂದು ಟೀಮಿನ ಸ್ವಲ್ಪ ಜನ ಬೆಟ್ಟದಲ್ಲಿ ಕೂತಿದ್ರು. ೫ ನಿಮಿಷ ಆದ್ಮೇಲೆ ವೆಂಕ ಬಂದ. ಸುಸ್ತಾಗಿದ್ದ ನಾವು ಕೇಕ್ ತಿಂದು ಜ್ಯೂಸ್ ಕುಡಿದು ಸ್ವಲ್ಪ ಡುಮ್ಮಂಗೆ ಇಟ್ವಿ.

ಒಂದು ವಿಷಯ ೨ ಟೀಮ್ನಲ್ಲಿ ಕಾಮನ್ ಇದ್ದಿದ್ದು ಅಂದ್ರೆ ಡುಮ್ಮಂದಿರೆ!!! ಅವ್ರಿಬ್ರೂ ಕಾಲು ಗಂಟೆ ಆದ್ರೂ ಬರ್ಲಿಲ್ಲ. ಮೇಲಿಂದ ಹೋಗಿ ನೋಡಿದ್ವಿ, ಇಬ್ರೂ ಕಾಣಲಿಲ್ಲ....ಮೇಲಿಂದ ಕಿರುಚಿದ್ವಿ. ಉಹುಂ, ಶಬ್ಧನೆ ಇಲ್ಲ.
ಸ್ವಲ್ಪ ಹೊತ್ತು ನೋಡಿ ಆಮೇಲೆ ಸ್ವಲ್ಪ ಕೆಳಗೆ ಹೋಗಿ ನೋಡುವ ಅಂದೆ.

೧೦ ನಿಮಿಷ ಬಿಟ್ಟು ಆ ಟೀಮಿನ ಡುಮ್ಮ ಬಂದ. ನಮ್ಮ ಡುಮ್ಮ?? :(
ಅವರನ್ನ ಕೇಳಿದಾಗ 'ಬರ್ತಾ ಇದ್ದಾರೆ, ಕೆಳಗೆ ಇದ್ದಾರೆ'.

ಪಕ್ಯ ನಾನು ಹೋದ್ವಿ, ಸ್ವಲ್ಪ ಹೊತ್ತು ಕೂಗಿದ ಮೇಲೆ ಅವನು ಹೋ ಅಂದ ಸದ್ದು ಕೇಳುಸ್ತು, ಮುಂದೆ ಹೋಗಿ ನೋಡಿದ್ವಿ. ಒಬ್ನೇ ಬರೋ ಹಾಗೆ ಇರ್ಲಿಲ್ಲ. ಪಕ್ಯ ಇದ್ದವನು ನಾನು ಹೋಗಿ ಕರ್ಕೊಂಡುಬರ್ತೀನಿ ಅಂದ. ಒಬ್ರು ಬರೋದೆ ಕಷ್ಟ ಆಗಿರೋ ದಾರಿಯಲ್ಲಿ ಪಕ್ಯ ಅಂತೂ ಡುಮ್ಮನನ್ನ ಕೈ ಹಿಡ್ಕೊಂಡು ಕರ್ಕೊಂಡು ಬಂದ.

ಆದ್ರೂ ರಂಜನ್ಗೆ(ಡುಮ್ಮ) ಒಂದು ಹ್ಯಾಟ್ಸಾಫ್ ಹೇಳಲೇಬೇಕು, ಆ ಪೀಕ್ ಹತ್ತೋ ಧೈರ್ಯ ಮಾಡಿದ್ದಕ್ಕೆ.


ನಮ್ಮ ಫೋಟೋ ಅವ್ರ ಹತ್ರ ತೆಗೆಸಿ ಅವ್ರ ಫೋಟೋ ನಾವು ತೆಗೆದು ಮತ್ತೆ ವಾಪಸ್ ಇಳಿಯೋದಕ್ಕೆ ಶುರು ಮಾಡಿದ್ವಿ. ನಾವು ಬಂದ ದಾರಿನಲ್ಲೇ ಇಳಿದಿದ್ರೆ ನಮ್ಮನ್ನ ಮಣ್ಣು ಮಾಡೋ ಅವಶ್ಯಕತೆನೂ ಇರ್ತಿರ್ಲಿಲ್ಲ. ಅದ್ಕೆ ಬರೀ ಹುಲ್ಲು ಇರೋ ಜಾಗದಲ್ಲೇಇಳಿಯೋದಕ್ಕೆ ಶುರು ಮಾಡಿದ್ವಿ. ಅಲ್ಲೆಲ್ಲ ಬರೀ ಇಲಿಗಳು ತೂತು ಮಾಡಿದ್ವು, ನಮ್ಮ ಪುಣ್ಯಕ್ಕೆ ಎಲ್ಲೂ ಹಾವು ಇರ್ಲಿಲ್ಲ. ಇದ್ದಿದ್ರೆ ಡೈರೆಕ್ಟಾಗಿ ಕೆಳಗೆ ಲ್ಯಾಂಡ್ ಆಗ್ತಿದ್ವೇನೋ.

ನಾನು ವೆಂಕ ೧೦ ನಿಮಿಷಕ್ಕೆ ಕೆಳಗೆ ಬಂದ್ವಿ. ಪಕ್ಯ ಮತ್ತೆ ಡುಮ್ಮ ನಿಧಾನ ಬರ್ತಿದ್ರು.

ಅಲ್ಲಿಂದ ಮತ್ತೆ ೧.೩೦ ಗಂಟೆಗಳ ಕಾಲ ಸಮನಾದ ಜಾಗದಲ್ಲಿ ವೇಗವಾಗಿ ನಮ್ಮ ಕಾಲುಗಳು ಹೆಜ್ಜೆ ಹಾಕಿದವು. ಸಂಜೆ ಆದ ಕಾರಣ, ಸೂರ್ಯ ಚೆನ್ನಾಗಿ ಕಾಣುತ್ತಿದ್ದ ಜೊತೆಗೆ ದೂರದ ಬೆಟ್ಟಗಳು, ಆ ಚೆಲುವನ್ನು ಆಸ್ವಾದಿಸುತ್ತಾ ಹೆಜ್ಜೆಗಳ ವೇಗ ಜಾಸ್ತಿಯಾಗುತ್ತಿತ್ತು ಕತ್ತಲಾಗುತ್ತಿದ್ದರಿಂದ .
ಮಾರ್ಗ ಮಧ್ಯದ ಕಾಡಿನಲ್ಲಿ ಪಕ್ಯ 'ಅಡಿಗೆಗೆ ಸೌದೆ ತಗೊಳ್ರೋ' ಅಂದಿದ್ದ. ಎಲ್ಲರೂ ಸ್ವಲ್ಪ ಸ್ವಲ್ಪ ತಗೊಂಡು ಗೆಸ್ಟ್ ಹೌಸ್ ಕಡೆ ಹೆಜ್ಜೆ ಹಾಕಿದ್ವಿ.

ರಾತ್ರಿ ೭ ಗಂಟೆ ಆಗಿತ್ತು ಗೆಸ್ಟ್ ಹೌಸ್ ತಲುಪುವ ಹೊತ್ತಿಗೆ. ಸೌದೆ ಎಸೆದು ಕ್ಯಾಮೆರಾ ಇಟ್ಟು ೧೦ ನಿಮಿಷ ರೆಸ್ಟ್ ತಗೊಂಡಾದ್ಮೇಲೆ ಗೆಸ್ಟ್ ಹೌಸ್ನಲ್ಲಿದ್ದ ಕೊಡ ತಗೊಂಡು ನೀರು ತರೋದಕ್ಕೆ ಪಕ್ಯ ನಾನು ಹೊರಟ್ವಿ.

ನನ್ನ ಮೊಬೈಲ್ ಲೈಟಲ್ಲೇ ಹೊಳೆ ಹುಡುಕ್ತಾ ನಾನು ಪಕ್ಯ ಹೆಜ್ಜೆ ಹಾಕಿದ್ವಿ. ಅಷ್ಟೊತ್ತಿಗಾಗ್ಲೆ ಉಳಿದ ಟೀಮಿನವರು ನೀರು ತರ್ತಿದ್ರು. ಅಂತೂ ಒಂದು ಕೊಡ ನೀರನ್ನ ಕಷ್ಟಪಟ್ಟು ತುಂಬಿಸಿ ಪಕ್ಯ ಹೊತ್ಕೊಂಡು ಬಂದ ನಾನು ಬೆಳಕಾಗಿದ್ದೆ ಅವನಿಗೆ.

ಡುಮ್ಮ,,ಕುಳ್ಡ ತರಕಾರಿ ಹೆಚ್ತಿದ್ರು. ಪಕ್ಯನ್ನ ನೋಡಿದ್ದೇ ತಡ ಕುಳ್ಡ ಇದ್ದವನು 'ಲೇ, ಪಲಾವ್ ಮಾಡ್ತೀನಿ ಅಂತ ಹೀರೆಕಾಯಿ ತಂದಿದೀಯಲ್ಲೋ ಮಂಗ ನನ್ಮಗನೇ, ಅದ್ರ ಜೊತೆಗೆ ಬೀನ್ಸ್ ಬಲಿತು ಹೋಗಿದೆ, ಕ್ಯಾರೆಟ್ ಬೇರೆ ಇಲ್ಲ. ಅದೇನೋ ಪಲಾವ್ ಮಾಡಿ ಕಿಸಿದು ದಬಹಾಕ್ತೀನಿ ಅಂದ್ಯಲ್ಲ...ಇದೇನಾ. ಸರಿ ಮಾಡು ಅದ್ಹೇನು ಮಾಡ್ತೀಯಾ ನೋಡೋಣ'.

ನಾನು ಆಗಿದ್ರೆ ಕುಳ್ಡನ ತಲೆ ಮೇಲೆ ಕೊಡದಲ್ಲಿದ್ದ ಎಲ್ಲ ನೀರು ಸುರೀತಿದ್ನೇನೋ ಆದ್ರೆ ಪಕ್ಯ ಸುಮ್ನೆ ಕೇಳ್ತಿದ್ದ.

'ನಾನು ನನ್ನ ಫ್ರೆಂಡ್ಗೆ ಹೇಳ್ದೆ ಅವ್ನು ಇಷ್ಟನ್ನ ತಂದ' ಪಕ್ಯ ಅಂದ.

ಬೈತಾನೆ ವೆಂಕ ನಾನೇ ಮಾಡ್ತೀನಿ ಅಂತ ಪಲಾವ್ ಮಾಡಿದ. ಆದ್ರೆ ರುಚಿನೇ ಇರ್ಲಿಲ್ಲ, ಇನ್ನೇನು ಮಾಡೋದು ಅಂತ ಅದನ್ನೇ ನಾನು ವೆಂಕ ತಿಂದ್ವಿ. ಪಕ್ಯ ಡುಮ್ಮ ಕುಡಿದಾದ್ಮೇಲೆ ಊಟ ಮಾಡ್ತೀವಿ ಅಂದ್ರು. ಇನ್ನೊಂದು ಟೀಮಿನವರು ಅಂತ್ಯಾಕ್ಷರಿ ಹಾಡ್ತಿದ್ರು ನಾವೂ ಆಗಾಗ ಒಂದೊಂದು ಫಿಲಂ ಹೆಸರು ಹೇಳ್ತಿದ್ವಿ.

ಪಕ್ಯ ಡುಮ್ಮ ಕುಡಿದಾದ್ಮೇಲೆ ಊಟ ಮಾಡೋದಕ್ಕೆ ಕೂತ್ರು, ಯಾಕೋ ರುಚಿ ಹತ್ಲಿಲ್ಲ ಅನ್ಸತ್ತೆ, ಗೈಡ್ಗಳು ಸಾರು ಮಾಡಿದ್ರು ಅದನ್ನೇ ಪಲಾವ್ ಮೇಲೆ ಸುರ್ಕೊಂಡು ತಿಂದ್ರು.
ಪಲಾವ್ ಮೇಲೆ ಸಾಂಬಾರ್!!!!

ಊಟ ಆದ್ಮೇಲೆ ಮಲಗೋಕೆ ರೆಡಿಯಾದ್ವಿ. ಪಕ್ಕದ ರೂಮಲ್ಲಿದ್ದ ಒಂದು ಬೆಡ್ ತಂದು ನಮ್ಮ ರೂಮಿಗೆ ಹಾಕೊಂಡು ಎಲ್ರೂ ಮಲಗಿದೆವು. ಕುಳ್ಡ, ಡುಮ್ಮ ಕಿತ್ಕೊಂಡು ಗೊರಕೆ ಹೊಡೆಯೋದಕ್ಕೆ ಶುರು ಮಾಡಿದ್ರು. ಒಂದು ಗಂಟೆ ನಿದ್ರೆ ಬರ್ಲಿಲ್ಲ ಆಮೇಲೆ ಆಯಾಸ ಆಗಿದ್ದ ಪರಿಣಾಮ ನಿದ್ರೆ ಹತ್ತಿತು.

ಬೆಳಗ್ಗೆ ೭ ಗಂಟೆಗೆ ಎದ್ದು ಎಲ್ಲ ಕೆಲಸ ಮುಗಿಸಿ ಮ್ಯಾಗಿ ತಿಂದ್ಕೊಂಡು ನರಿಮಲೆ ಬೆಟ್ಟಕ್ಕೆ ಹೊರಟ್ವಿ.

೧೦ ಗಂಟೆಗೆ ಬೆಟ್ಟ ತಲುಪಿದ್ವಿ. ನಾವು ನರಿಮಲೆ ಅಂದ್ರೆ ತುಂಬಾ ನರಿ ಇರ್ತವೇನೋ ಅಂದ್ಕೊಂಡು ಗೈಡ್ ಕೇಳಿದ್ವಿ ಯಾಕೆ ನರಿಮಲೆ ಅಂತಾರೆ ಅಂತ.
'ಕೊಡಗು ಭಾಷೇಲಿ ನರಿ ಅಂದ್ರೆ ಹುಲಿ ಅಂತ ಆಗೆಲ್ಲ ಇಲ್ಲಿ ಹುಲಿ ತುಂಬಾ ಇದ್ವು ಅದ್ಕೆ ಹಾಗಂತಿದ್ರು'.

೩೦ ನಿಮಿಷ ಕೂತು ಮತ್ತೆ ಕೆಳಗಿಳಿಯೋದಕ್ಕೆ ಶುರು ಮಾಡಿದ್ವಿ. ೧೨.೩೦ ರ ಹೊತ್ತಿಗೆ ಇರ್ಪು ಫಾಲ್ಸ್ ಹತ್ರ ಬಂದ್ವಿ.
ಭಾನುವಾರ ಆದ್ದರಿಂದ ಸ್ವಲ್ಪ ಜಾಸ್ತಿ ಜನಾನೇ ಇದ್ರು. ಅಲ್ಲೇ ಬಂದೆ ಮೇಲೆ ಚಿಟ್ಟೆಗಳು ಇದ್ವು. ಕ್ಯಾಮೆರಾ ತೆಗೆದು ೩-೪ ಫೋಟೋ ತೆಗೆದೆ(ಪಿಕಾಸ ಲಿಂಕ್ ನೋಡಿ)
ನಾನು ಕುಳ್ಡ ನೀರಿಗೆ ಇಳಿಯೋದಕ್ಕೆ ರೆಡಿ ಆದ್ವಿ, ಪಕ್ಯನ್ನ ಕರೆದ್ವಿ ಬರಲ್ಲ ಅಂದ. ನೀರು ಬೀಳೋತನಕ ಕಬ್ಬಿಣದ ಜಾಲರಿ ಹಾಕಿದ್ರು. ಸೆಕೆಯಲ್ಲಿ ಬೆವೆತಿದ್ದ ದೇಹಕ್ಕೆ ತಣ್ಣೀರು ಸಿಕ್ಕ ಪರಿಗೆ ದೇಹ ಗಡಗಡ ನಡುಗ್ಲಿಕ್ಕೆ ಶುರುವಾಯ್ತು. ಕುಲ್ಡನಿಗೆ ಕಬ್ಬಿಣ ಎಲ್ಲಿ ತನಕ ಇತ್ತು ಅನ್ನೋದು ಕಾಣಿಸಲಿಲ್ಲ ಅನ್ಸತ್ತೆ. ಜಾರಿ ಕಾಲು ತರಚಿಕೊಂಡು ಇಂಗು ತಿಂದ ಮಂಗನ ಹಾಗೆ ಬಂಡೆ ಮೇಲೆ ಹೋಗಿ ಕುಳಿತಿದ್ದ. ನಾನು ಹೋಗಿ ಯಾಕೋ ಏನಾಯ್ತೋ ಅಂತ ಕೇಳಿದ್ರೆ ಕಾಲು ತೋರ್ಸಿದ.


೨ ಗಂಟೆಯ ತನಕ ನೀರಲ್ಲಿ ಆಟ ಆಡಿ ನಾನು ವೆಂಕ ಇರ್ಪು ಕಡೆ ಹೊರಟ್ವಿ. ಪಕ್ಯ ಡುಮ್ಮ ಅಲ್ಲೇ ಇದ್ದ ಹೋಟೆಲ್ ಹತ್ರ ರೆಸ್ಟ್ ತಗೋತಿದ್ರು.
ಹೊಟ್ಟೆ ಬೇರೆ ಚುರುಗುಡ್ತಿತ್ತು, ೨ ದಿನದಿಂದ ಬ್ರೆಡ್ ಬನ್ ತಿಂದಿದ್ದ ನಮಗೆ ಮತ್ತೆ ಅದೇ ತಿನ್ನಬೇಕಲ್ಲ ಅನ್ನನಾದ್ರು (ಪಲಾವ್ ಪಲಾವ್ ಆಗಿರ್ಲಿಲ್ವಲ್ಲ) ಸಿಕ್ಕಿದ್ರೆ ಅಂತ ಯೋಚನೆ ಮಾಡ್ತಿದ್ವಿ, ಅಷ್ಟೊತ್ತಿಗೆ ಇನ್ನೊಂದು ಟೀಮಿನವರು ದೇವಸ್ಥಾನದಲ್ಲಿ ಊಟ ಕೊಡ್ತಿದ್ದಾರೆ ಹೋಗಿ ಅಂದ್ರು.

ಅಷ್ಟು ಹೇಳಿದ್ದೆ ತಡ ಎಲ್ರೂ ಶೂ ಬಿಚ್ಚಿ ದೇವಸ್ಥಾನದ ಕಡೆ ಓಡಿದ್ದೇ!!!

ಬಹುಷ ಅನ್ನ ನಮಗೇ ಕಾಯ್ತಿತ್ತೇನೋ. ೪ ಜನಕ್ಕೆ ಸರಿಯಾಗಿತ್ತು. ಆಮೇಲೆ ಬಂದೋರಿಗೆ ಖಾಲಿ ಖಾಲಿ.

ಊಟ ಮಾಡ್ಕೊಂಡು ಬಸ್ ಸ್ಟಾಪ್ ಹತ್ರ ಹೋಗಿ ಕೂತ್ಕೊಂಡು ಆ ಟೀಮಿನ ಜೊತೆ ಹರಟೆ ಹೊಡೀತಿದ್ವಿ ಅಷ್ಟೊತ್ತಿಗೆ ೩.೪೫ಕ್ಕೆ ಇರ್ಬೇಕು ಗೋಣಿಕೊಪ್ಪಲಿಗೆ ಹೋಗೋ ಬಸ್ ಬಂತು. ಹತ್ತಿ ಕುಳಿತು ಕೆಲವರು ಗಡದ್ದಾಗಿ ನಿದ್ದೆ ಮಾಡಿದ್ರು. ಬಸ್ ಗೋಣಿಕೊಪ್ಪಲು ತಲ್ಪೋ ಹೊತ್ತಿಗೆ ೫.೩೦ ಆಗಿತ್ತು. ಬಸ್ ಇದ್ದಿದ್ದು ೧೧.೪೫ಕ್ಕೆ. ಪೇಟೆ ಸ್ವಲ್ಪ ಸುತ್ತಾಡಿ, ಪಕ್ಯ ಡುಮ್ಮ ಕುಡೀಬೇಕು ಅಂದ್ಮೇಲೆ ೭ ಗಂಟೆಗೆ ಒಂದು ಬಾರಿಗೆ ಹೋಗಿ
ಕುಳಿತವರು ಅಲ್ಲೇ ಊಟ ಮಾಡಿ ಏಳೋವಾಗ ೧೧ ಗಂಟೆ.

ಅಲ್ಲಿಗೆ ಮೊದಲು ಹೋದವರು ನಾವೇ ಕೊನೆಗೆ ಬಂದವರು ನಾವೇ!!!!



ಗೋಣಿಕೊಪ್ಪಲಿಗೆ ಬಂದ ಮೊದಲ ದಿನ ಬೆಳಗ್ಗೆ ಕುಳಿತ ಜಾಗದಲ್ಲೇ ಹೋಗಿ ಮತ್ತೆ ಕುಳಿತೆವು.

೧೧.೪೫ಕ್ಕೆ ಬಂದ ವೋಲ್ವೋ ಬಸ್ ಹತ್ತಿ ಕುಳಿತ ನಾವು ಮೆಜೆಸ್ಟಿಕ್ ತಲುಪೋ ಹೊತ್ತಿಗೆ ಬೆಳಗ್ಗೆ ೫.೧೫. ಅಲ್ಲಿಂದ ಡುಮ್ಮ ಪಕ್ಯ ಅವ್ರ ರೂಮಿಗೆ ಹೊರಟರು ನಾನು ವೆಂಕ ನವರಂಗ್ ಬಸ್ ಹತ್ತಿದ್ವಿ. ಇಳಿದಾದ ಮೇಲೆ ವೆಂಕ ಅವ್ನ ಮನೆಗೆ ಹೋದ. ನಾನು ಮನೆ ತಲುಪಿ ಬ್ಯಾಗ್ ಎಸೆದು ಹಾಸಿಗೆ ಮೇಲೆಬಿದ್ದೆ.

Thursday, February 4, 2010

ಹಾಲು ಕೊಳ್ತೀರಾ?

ಊಟ ಆಗಿತ್ತು, ಅಮ್ಮ ನನಗೆ ಅಪ್ಪನಿಗೆ ಹಾಲು ತಂದು ಇಟ್ಟು ಅಡಿಗೆ ಮನೆಗೆ ಕೆಲಸ ಮಾಡೋದಕ್ಕೆ ಹೋದ್ರು. ನಮ್ಮಪ್ಪ ಹಾಲು ಕುಡೀತಾ 'ಹಾಲು ದೇಹಕ್ಕೆ ಒಳ್ಳೆಯದು ರಾತ್ರಿ ೧ ಲೋಟ ಕುಡೀತಾ ಇರಿ' ಅಂತ ಅಂದ್ರು.

ನಾವು ತುಂಬಾ ದಿನದಿಂದ ಕುಡೀತಾನೆ ಇದೀವಿ ಅಂದೆ.
ಸಾಮಾನ್ಯವಾಗಿ ತಪ್ಪು ಮಾತಾಡದ ನಮ್ಮಪ್ಪ ಅಂದು 'ಓ ಹೌದಾ, ನೀವೇನು ಹಾಲು ಕೊಂಡು ಕೊಳ್ತೀರಾ?' ಅಂದ್ರು .

'ಇಲ್ಲ, ಹಸು ಸಾಕಿದೀವಿ!!' ಅಂದೆ.

ನಮ್ಮಮ್ಮ ಅಡಿಗೆ ಮನೆಯಲ್ಲಿದ್ದವರು ಚಾವಡಿಗೆ ಬಂದು 'ನಾವು ತಪ್ಪಿ ಹೇಳಿದ್ರೆ ಕಂಗಳಿ ಜನಗಳು ಅಂತಿದ್ರಿ, ಈಗ ಹೇಳಿ' ಅಂತ ತಡೀಲಾರದೆ ನಗ್ತಿದ್ರು.

Wednesday, February 3, 2010

ಎಸ್ಸೆಮ್ಮೆಸ್ಸು

೩೦ರಂದು ಎಸ್ಸೆಮ್ಮೆಸ್ಸು ಬಂತೊಂದು
ಸೇವಿಂಗ್ಸ್ ಅಕೌಂಟ್ಗೆ ಕಾಸು ಬಿತ್ತೆಂದು

ಅದ ತೋರಿಸಿದೆ ನನ್ನ ಹುಡುಗಿಗೆ
ಕರೆದುಕೊಂಡು ಹೋದಳು ಮಾಲ್ ಗೆ

ಮಾರನೇ ದಿನ ಮತ್ತೊಂದು ಎಸ್ಸೆಮ್ಮೆಸ್ಸು
ತೋರಿಸುತ್ತಿತ್ತು ನನ್ನ ಅಕೌಂಟ್ ಟುಸ್ಸ್

Monday, February 1, 2010

ಹುಡುಗಿ ನೋಡ್ಲಿಕ್ಕ

ಏನೋ ಹುಡುಗಿ ನೋಡ್ಲಿಕ್ಕ ಅಂದ
ಇಲ್ಲ ಇಲ್ಲ ಊರಲ್ಲಿ ಸ್ವಲ್ಪ ಕೆಲಸ ಇದ ಎಂದ

ಈ ಅಂದ ಚಂದ ನನ್ನತ್ರ ಬೇಡ ಅಂದ
ನಿನ್ನತ್ರ ಸುಳ್ಯಾಕ ಹೇಳ್ತಿನಿರು ಎಂದ

ಅಧೇನ್ಹೇಳು ಮುಂದ ಅಂದ

ಈ ವಾರ ಒಂದ
ಮುಂದಿನವಾರದೊಳಗ ಹನ್ನೊಂದಂದ

Wednesday, January 27, 2010

ಎಲ್ ಬೋರ್ಡ್ನ ಪರಮಾವಧಿ!

ಮಾರುತಿ ೮೦೦ ಕಾರ್ ತಗೊಂಡು ೧೫ ವರ್ಷ ಓಡಿಸಿ ಚಾಲನೆಯಲ್ಲಿ ಪರಿಪೂರ್ಣನಾಗಿ ಗಾಡಿ ಎಕ್ಷ್ಪೈರ್ ಆದ್ಮೇಲೆ ಹೊಸ ಸೆಡಾನ್ ಕಾರ್ ತಗೊಂಡು ಎಲ್ ಬೋರ್ಡ್ ಹಾಕಿಸಿ ಓಡಿಸುವುದು!!

Thursday, January 21, 2010

ಅ(ಪ್ಪ)ಮ್ಮ

ನವಮಾಸ ನಿನ್ನ ಗರ್ಭದಲ್ಲಿ ನನ್ನ ಸಲಹಿದೆ
ಹೊರಬಂದಾಗ ನನ್ನ ನೋಡಿ ನೀ ಸಂಭ್ರಮಿಸಿದೆ

ನನ್ನ ನಗುವಿಗೆ ನೀ ನಗುವಾದೆ
ನನ್ನ ನೋವಿಗೆ ನೀ ಮರುಗಿದೆ
ನನ್ನ ನಲಿವಿಗೆ ನೀ ನವಿಲಾದೆ

ನನ್ನ ಪುಟ್ಟ ಹೆಜ್ಜೆಗೆ ನೀ ಗೆಜ್ಜೆಯಾದೆ
ನನ್ನ ತೊದಲ ನುಡಿಗೆ ನೀ ಮೊದಲಾದೆ

ನನ್ನ ಬೇಕು ಬೇಡಗಳಿಗೆ ನೀ ಸ್ಪಂದಿಸಿದೆ

ನಾ ಕೇಳಿದೆ ನನ್ನ ಕನಸಲ್ಲಿ ಇದೇಕೆಂದು
ನೀ ಹೇಳಿದೆ ಇದೆಲ್ಲ ನಿನ್ನ ಕರ್ತವ್ಯವೆಂದು
ನಾ ಹೇಳಿದೆ ನೂರು ಜನ್ಮ ಬಂದರೂ ತೀರಿಸಲಾಗದೆಂದು

.............

ಎಲ್ಲ ಸಾಲುಗಳು ಅಮ್ಮನಿಗೆ. ಮೊದಲ ಎರಡು ಸಾಲುಗಳನ್ನು ಬಿಟ್ಟು ಮಿಕ್ಕಿದ್ದು ಅಪ್ಪನಿಗೆ.

ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು

ಅಮ್ಮ ಕರೆಯುತ್ತಿದ್ದಳು ಒಳಗೆ
ಆಗಲ್ಲ ಎಂದಿರುತ್ತಿದ್ದೆ ಹೊರಗೆ

ಲಗೋರಿ ಚಿನ್ನಿದಾಂಡು ಬುಗುರಿ ಮರಕೋತಿಯಾಟ
ಮುಗಿಯುತ್ತಿರಲಿಲ್ಲ ನಮ್ಮ ಚೆಲ್ಲಾಟ

ಮೀನು ಹಿಡಿಯಲು ಹೋಗುತ್ತಿದ್ದೆ ಅಜ್ಜನ ಜೊತೆಗೆ
ಮನೆಗೆ ಬರುತ್ತಿದ್ದೆ ತುಂಬಿದ ಕೂಳೆಯೊಂದಿಗೆ

ಶಾಲೆಯಲ್ಲಾಡುತ್ತಿದ್ದೆ ಖೋ ಖೋ ಕಬಡ್ಡಿ
ಹರಿಯುತ್ತಿದ್ದರೂ ನೋಡುತ್ತಿರಲಿಲ್ಲ ಚಡ್ಡಿ

ಹರಿಯುತ್ತಿದೆ ನೆನಪುಗಳ ಸುರಿಮಳೆ
ಸುರಿಯುತ್ತಿದೆ ಹೊರಗಡೆ ಮಳೆ

ಆಡುತ್ತಿದ್ದಾರೆ ಅದರಲ್ಲೇ ಮಕ್ಕಳು
ಕಚೇರಿಯಿಂದ ನೋಡುತ್ತಾ ಒದ್ದೆಯಾಗಿದೆ ನನ್ನ ಕಂಗಳು
ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು

Monday, January 18, 2010

ಪಕ್ಕದ ಮನೆ ಹುಡುಗಿ!

ಪಕ್ಕದ ಮನೆ ಹುಡುಗಿ ಸೂಪರ್
ನೋಡೋಕಂತ ಹೋದ ಮೀಟರ್
ಅವರಮ್ಮ ಓದ್ತಿದ್ರು ಪೇಪರ್
ಇವನನ್ನ ನೋಡಿ ಹರದ್ರು ಪರ್ ಪರ್

ದೂರ ವಾಣಿ

ನಾ ಬಂದಾಗ ನೀನಿರಲಿಲ್ಲ
ನೀ ಬಂದಾಗ ನನ್ನ ಕೇಳುವವರಿಲ್ಲ

ಆಗೆಲ್ಲ ನನ್ನದೇ ರಾಜ್ಯಭಾರ
ಹರಡಿತ್ತು ನನ್ನ ಪ್ರಸಿದ್ಧಿ ದೂರ ದೂರ

ಕಾಯುತ್ತಿದ್ದರು ಗಂಟೆಗಟ್ಟಲೆ ನನ್ನ ಕರೆಗೆ
ಕಾಯಬೇಕಾಗಿದೆ ನಾ ದಿನಗಟ್ಟಲೆ ಬರುವ ಕರೆಗೆ

ನನ್ನ ಸ್ಥಾನವನ್ನ ನೀ ಅಲಂಕರಿಸಿರುವೆ
ಒಂದರ್ಥದಲ್ಲಿ ನನ್ನ ನೀ ಆಕ್ರಮಿಸಿರುವೆ

ಆಗ ಎಲ್ಲೆಲ್ಲೂ ನನ್ನದೇ ಅಶರೀರವಾಣಿ
ಈಗ ಕೇಳುವವರಿಲ್ಲ ನನ್ನ ವಾಣಿ
ಅದಕ್ಕೆ ನನ್ನ ಹೆಸರು ದೂರ ವಾಣಿ

ಸಣ್ಣತನ

ಗೆಳೆಯ ನೀ ಪಡಬೇಡ ಸಂಶಯ

ನಾ ಹೋಗಿದ್ದೆ ಗೆಳತಿಯ ಕರೆಯ ಮೇರೆಗೆ
ಬಂದಿದ್ದಳವಳು ಗೆಳೆಯನ ಜೊತೆಗೆ

ಮಾತನಾಡಿಸಿದ್ದೆ ಗೆಳತಿಯ ಸಖನೆಂಬ ಸಲಿಗೆಯಿಂದ
ಅದ ತಿಳಿದೆ ನೀ ನಿನ್ನ ಗೆಳೆಯನಿಂದ

ಅಷ್ಟಕ್ಕೆ ನೀ ದೂರವಾದೆ

ನೀನೆ ಗೆದ್ದ ಹೃದಯ
ನಿನ್ನ ಸಣ್ಣತನದಿಂದ ಚೂರಾಯ್ತಲ್ಲ ಇನಿಯ

ಉಪ್ಪಿಟ್ಟು ಉಪ್ಪಾಗಿತ್ತು

ಬರುವೆನೆಂದೆ ನನ್ನಮ್ಮನ ಕರೆಗೆ
ಮಾರನೆ ದಿನ ಹೊರಟೆ ಊರಿಗೆ

ತೋರಿಸಿದಳಮ್ಮ ಹುಡುಗಿಯ ಚಿತ್ರವನ್ನ
ಹಾಕಂದೆ ನಾ ಚಿತ್ರಾನ್ನವನ್ನ

ಅಮ್ಮ ಕೇಳುತ್ತಿದ್ದಳು ಮತ್ತೆ ಮತ್ತೆ ನನ್ನ
ನೋಡಿದಳು ನನ್ನ ನಾಚಿಕೆಯನ್ನ

ಹೋದೆವು ಹುಡುಗಿಯ ಮನೆಗೆ
ಬಂದವು ಉಪ್ಪಿಟ್ಟು ಕೇಸರಿಬಾತು ನಮ್ಮೆಡೆಗೆ

ಚಿತ್ರ ನೋಡಿ ಬಂದಿದ್ದ ನಾನು
ಅವಳನ್ನು ನೋಡಿ ಆಮೇಲೆತ್ತಲಿಲ್ಲ ಮುಖವನು

ಉಪ್ಪಿಟ್ಟು ಉಪ್ಪಾಗಿತ್ತು
ಕೇಸರಿಬಾತು ಕಹಿಯಾಗಿತ್ತು

Friday, January 15, 2010

ಯಾಕೀ ಧೋರಣೆ

ಕೆಲವರು ಮಾಡುತ್ತಿದ್ದಾರೆ ಐ.ಟಿಯವರ ಅಪಹಾಸ್ಯ

ಕನ್ನಡಕ್ಕೇನು ಮಾಡಿದ್ದಾರೆ ಎಂಬುದು ಅವರ ಹಾಸ್ಯ


ತಮ್ಮ ಕೊಡುಗೆ ಏನೆಂಬುದು ಗೊತ್ತಿಲ್ಲ ಅವರಿಗೆ

ಗೊತ್ತಿಲ್ಲದವರ ಬಗ್ಗೆ ಮಾತಾಡಲು ಬರುತ್ತದೆ ಇವರಿಗೆ


ಅದಕ್ಕಲ್ಲವೇ ಇರುವುದು ಗಾದೆ

ಪ್ರತ್ಯಕ್ಷವಾಗಿ ನೋಡಿದರೂ ಪ್ರಮಾಣಿಸಿ ನೋಡೆಂದು

ಇದು ಗೊತ್ತಿಲ್ಲವೇ ಇವರಿಗೆಂದೂ


ಐ.ಟಿಯವರನ್ನು ನಂಬಿ ಬದುಕ್ಕುತ್ತಿರುವವರು ಎಷ್ಟೋ ಜನರು

ಅವರಲ್ಲಿ ಯಾರೂ ಇಲ್ಲವೇ ಈ ತೆಗಳುವ ಕುಟುಂಬದವರು


ತಮಿಳು ತೆಲುಗು ಮಲಯಾಲಿಗಳಿಗೂ ಕಲಿಸುತ್ತಾರವರು ಕನ್ನಡವನ್ನ

ಕಲಿತವರು ಮಾಡುತ್ತಾರೆ ಅವರಿಗೆ ನಮನವನ್ನ


ಅವರ ಮನೆಗೆ ಹೋದ್ರೆ

ಸಿಗುವುದು ಕನ್ನಡ ಪುಸ್ತಕಗಳ ಜಾತ್ರೆ


ಮಾಡದಿರಿ ಒಂದು ವರ್ಗದ ನಿಂದನೆಯನ್ನ

ಬೇರ್ಪಡಿಸದಿರಿ ನಮ್ಮಗಳ ಸಂಬಂಧವನ್ನ


ನಾ ಬಹಳ ನೋಡಿದ್ದೇನೆ ಐ.ಟಿಯಲ್ಲದವರನ್ನು

ಕನ್ನಡ ಬಂದರೂ ಬಾರದಂತೆ ನಟಿಸುವವರನ್ನು


ನಮ್ಮನಮ್ಮಲ್ಲೇ ಯಾಕೀ ಘರ್ಷಣೆ

ಮಾಡಿಕೊಳ್ಳುವ ಹೊರಗಿನವರಿಂದ ನಮ್ಮ ನುಡಿಯ ರಕ್ಷಣೆ

ಮೊದಲ ಕವನ

ವಿಸ್ಮಯವೆಂಬ ನನ್ನ ಮನೆಯ ಮೇಲೆ
ನಾ ಬರೆಯಲು ಕುಳಿತೆ ಕನ್ನಡದ ವರ್ಣಮಾಲೆ
ಆಮೇಲೆ ಹರಿಯಿತು ಪದಗಳ ಸರಮಾಲೆ

ಸೂರ್ಯ ಚಂದ್ರ ಚುಕ್ಕಿಗಳ ಸಂಗಮದಲಿ
ಮೋಡ ಮಂಜಿನ ಮುಸುಕಿನಲಿ
ಮಳೆ ಚಳಿ ಗಾಳಿಯಾಟದಲಿ
ಪ್ರಾಣಿ ಪಕ್ಷಿಗಳ ಒಡನಾಟದಲಿ
ಗಿರಿ ಶೃ೦ಗಗಳ ದೃಶ್ಯ ವೈಭವದಲಿ

ಅದೆಲ್ಲವನ್ನಿಲ್ಲಿಳಿಸಿದ್ದೇನೆ ಕವನಗಳ ರೂಪದಲಿ
ಇದು ಎಂದಿಗೂ ಮೂಡುತಿರಲಿ
ಎಂದು ಪ್ರಾರ್ಥಿಸುವೆ ಆ ದೇವರಲಿ

Wednesday, January 6, 2010

ಒಂದು ರೇಶನ್ ಕಾರ್ಡಿನ ಕಥೆ....

ನಮ್ಮೂರಲ್ಲಿ......

ಅಪ್ಪ ರೇಶನ್ ಕಾರ್ಡ್ನಲ್ಲಿ ನನ್ನ ಹೆಸರು ತೆಗೆಸ್ಬೇಕು ಬೆಂಗಳೂರಲ್ಲಿ ಮಾಡ್ಸ್ಬೇಕು ಅಂದ್ರೆ ಅಂದೆ, 'ಸರಿ, ತಾಲ್ಲೂಕಾಫೀಸಿಗೆ ಹೋಗಿ ಒಂದು ಅರ್ಜಿ ಕೊಟ್ಟು ಬರೋಣ ನಡಿ' ಅಂತ ನಮ್ಮಪ್ಪರು ಅಂದ್ರು. ಊರಿಂದ ಚಿಕ್ಕಮಗಳೂರಿಗೆ ಹೋದ್ವಿ. ಫುಡ್ ಆಪ್ಹೀಸಹತ್ರ ಹೋಗಿ ಕೇಳಿದ್ವಿ 'ನಿನ್ನ ಹೆಸರು ತೆಗೆಸ್ಬೇಕು' ಅಂತ ಒಂದು ಅರ್ಜಿ ಕೊಡಪ್ಪ ಅಂದ್ರು. 'ನನ್ನ ಹೆಸರಲ್ಲೇ ಬರ್ಕೊಟ್ರೆ ಆಗತ್ತಲ್ಲ' ಅಂದೆ. ಹೂಂ ಅಂದ್ರು.


ಆ ದಿನ ಟೈಪಿಂಗ್ ಮಾಡೋರು ಯಾರು ಇರ್ಲಿಲ್ಲ ಅಲ್ಲಿ. ವಿಧಿ ಇಲ್ಲದೆ ನಾನೇ ೨ ಅರ್ಜಿ ಬರೆದೆ (ಅಷ್ಟೊಂದು ಬರೆದ ಕಾರಣ ಕೈ ಬಾರಿ ನೋವ್ತಿತ್ತು, ಪೆನ್ ಅಷ್ಟೊಂದು ಧೀರ್ಘವಾಗಿ ಹಿಡಿದು ತುಂಬಾ ದಿನಗಳಾದ ಕಾರಣ ಅನ್ಸತ್ತೆ).


ಬರೆದು ಹೋಗಿ ಕೊಟ್ರೆ 'ಮನೆ ಯಜಮಾನ್ರ ಹೆಸರು ಮೊದ್ಲು ಬರ್ಬೇಕು, ಅವ್ರು ಹೇಳೋ ಹಾಗೆ ಇರ್ಬೇಕು' ಅಂದ್ರು. 'ನನ್ಮಗ ಮೊದ್ಲೇ ಹೇಳಬಹುದಿತ್ತಲ್ಲ' ಅಂದ್ಕೊಂಡು ಮತ್ತೆ ವಿಧಿ ಇಲ್ಲದೆ ಅಪ್ಪನಿಗೆ ಕೊಟ್ಟು 'ನೀವೇ ಬರೀರಿ ನನ್ನ ಕೈ ನೋಯ್ತಿದೆ' ಅಂತ ಕೊಟ್ಟೆ.


ನಂತರ ಹೋಗಿ ಮತ್ತೆ ಕೊಡೋದಕ್ಕೆ ಹೋದ್ರೆ 'ನಾವು ಇನ್ಸ್ಪೆಕ್ಶನ್ಗೆ ಹೋಗ್ತಿದಿವಿ, ಡಿಲೀಶನ್ ಸರ್ಟಿಫಿಕೆಟ್ ನಾಳೆ ಕೊಡ್ತೀವಿ' ಅಂದ್ರು.

ಸಾರ್ 'ಅದಕ್ಕೋಸ್ಕರ ಮತ್ತೆ ಊರಿಂದ ಬರ್ಬೇಕು, ಇವತ್ತೇ ಕೊಡೋದಕ್ಕೆ ಪ್ರಯತ್ನ ಮಾಡಿ' ಅಂದೆ.
'ಇಲ್ಲ ಇಲ್ಲ, ಆಗಲ್ಲ, ನಾಳೆ ಬರ್ರಿ' ಅಂದ್ರು.

ಮಾರನೆ ದಿನ ನಾನು ಮಾತ್ರ ಹೋದೆ. 'ಸರ್, ಡಿಲೀಶನ್ ಸರ್ಟಿಫಿಕೆಟ್' ರೆಡಿ ಆಯ್ತಾ ಅಂದೆ.


'ಇಲ್ರಿ, ಹೇಗಿದ್ರು ಹೊಸ ರೇಶನ್ ಕಾರ್ಡ್ ಬರ್ತಿದೆ, ಅದ್ರಲ್ಲಿ ನಿಮ್ಮ ಹೆಸರು ಇರತ್ತೆ, ಹಾಗಾಗಿ ಈಗ ಕೊಡೋದಕ್ಕಾಗಲ್ಲ, ಅದು ಬಂದಾದ್ಮೇಲೆ ಮತ್ತೆ ಒಂದು ಅರ್ಜಿ ಬರೆದುಕೊಡಿ' ಅಂದ್ರು.

ಇದು ಆಗದ ಕೆಲಸ ಅಂದ್ಕೊಂಡು, ನಮ್ಮಪ್ಪಂಗೆ ಫೋನ್ ಮಾಡಿ ಹಿಂಗೆ ಹೇಳ್ತಿದ್ದಾರೆ ಏನು ಮಾಡೋದು ಅಂದೆ. 'ನೀನು ಈಗ ಹೊರಡು, ನಾನು ಮಾಡುಸ್ತೀನಿ' ಅಂದ್ರು.


ನಾನು ವಾಪಸ್ ಬೆಂಗಳೂರಿಗೆ ಬಂದೆ.

೧೫ ದಿನ ಆದ್ಮೇಲೆ ನಮ್ಮಪ್ಪರು ಡಿಲೀಶನ್ ಸರ್ಟಿಫಿಕೆಟ್ ನನ್ನ ಕೈಲಿ ಇಟ್ರು.

ಒಂದು ದೊಡ್ಡ ಕೆಲಸ ಆಗಿತ್ತು ಇನ್ನೊಂದು ಬಾಕಿ ಇತ್ತು.



ಬೆಂಗ್ಳೂರಲ್ಲಿ.....

ಇಲ್ಲಿ ಫುಡ್ ಆಫೀಸಿಗೆ ಹೋಗಿ ಅರ್ಜಿ ಬರೆದು ಕೊಟ್ಟೆ.
ನನ್ನ ಪುಣ್ಯಕ್ಕೆ ಅವತ್ತೇ ಅವ್ರು ರಶೀತಿ ಕೊಟ್ಟು ೧ ವಾರ ಆದ್ಮೇಲೆ ಬಂದು ಫೋಟೋ ತೆಗೆಸಿಕೊಳ್ಳೋದಕ್ಕೆ ಹೇಳಿದ್ರು.

ಸರಿ ೧ ವಾರ ಆದ್ಮೇಲೆ ಅಂದ್ರೆ ನೆನ್ನೆ ಹೋದೆ.

ಅಪ್ಪ್ಲಿಕೇಶನ್ ನಂಬರ್ ಕೊಟ್ಟೆ. ಅವ್ರು ಇನ್ನು ಬಂದಿಲ್ಲ ಅಂದ್ರು. ಪಕ್ಕದ ಸೆಕ್ಷನ್ಗೆ ಹೋಗಿ ವಿಚಾರ್ಸಿ ಅಂದ್ರು. ಅಲ್ಲಿ ಕೇಳಿದ್ರೆ ಇಲ್ಲೂ ಬಂದಿಲ್ಲ, ಇನ್ನೊಂದು ಸೆಕ್ಷನ್ಗೆ ಹೋಗಿ ವಿಚಾರ್ಸಿ ಅಂದ್ರು.

ಅಲ್ಲಿ ಹೋದ್ರೆ ೩ ಗಂಟೆಗೆ ಬಾರೋ ಪುಣ್ಯಾತ್ಮ ೩.೪೫ಕ್ಕೆ ಬಂದ್ರು.
ಅವರನ್ನ ಕೇಳಿದ್ರೆ 'ತಡಿರಿ ನೋಡ್ತೀನಿ' ಅಂದ್ರು. ಸ್ವಲ್ಪ ಹೊತ್ತಾದ್ಮೇಲೆ 'ಇದು ನನ್ನ ಏರಿಯಾ ಅಲ್ಲ, ೧ 'ನ' ಬ್ಲಾಕ್ ಅಂತ ನಮಗೆ ಕೊಟ್ಟಿದ್ದಾರೆ ಆದ್ರೆ ನಿಮ್ಮದು ೧ 'ಕ' ಬ್ಲಾಕ್, ಹಾಗಾಗಿ ಎದ್ರುಗಡೆರ್ದು ಆ ಏರಿಯಾ ಅಲ್ಲಿ ಹೋಗಿ ವಿಚಾರ್ಸಿ' ಅಂದ್ರು.

ಅಲ್ಲಿ ಹೋಗಿ ಕೇಳಿದ್ರೆ 'ಈಗ ನಮಗೆ ಬಂದಿರೋದರಿಂದ, ನಾನು ಏರಿಯಾ ಇನ್ಸ್ಪೆಕ್ಶನ್ ಮಾಡ್ಬೇಕು, ಇನ್ನೊಂದು ದಿನ ಬನ್ನಿ' ಅಂದ್ರು.

ಆ ಇನ್ನೊಂದು ದಿನದ ಕಥೆ ಏನೋ....