Friday, September 9, 2011

ಬೆಂಗಳೂರಲ್ಲೊಂದಿನ - ೧

ಭೂಕಂಪ ಏನಾದ್ರೂ ಆಯ್ತಾ?? ಇಲ್ಲ, ನಾನು ಚೆನ್ನಾಗೆ ಇದೀನಲ್ಲ. ಮತ್ತೆ, ಏನದು ಸೌಂಡ್. ಡೈನಮೈಟ್ ಇರ್ಬಹುದಾ, ಛೆ ಚ್ಯಾನ್ಸೆ ಇಲ್ಲ. ನವರಂಗ್ ಹತ್ರ ಯಾವ ಕಲ್ಲು ಇದೆ ಸಿಡಿಸೋಕೆ. ಮಹಾಲಕ್ಷ್ಮಿ ಲೇ ಔಟ್ನಲ್ಲಿರೋ ಆಂಜನೇಯನಿಗೆ ಯಾರಾದ್ರೂ ಇಟ್ರಾ, ಇಲ್ಲ ಅಂತ ಕೆಲಸ ಯಾರೂ ಮಾಡಲ್ಲ. ಮತ್ತೇನದು?? ಮೆಟ್ರೋ ವರ್ಕಾ?? ಅಲ್ಲ, ಅದೂ ಇನ್ನೇನು ಮುಗೀತಾ ಬಂತು. ಇನ್ನೇನಪ್ಪ ಈ ತರ, ಅರ್ಧ ಗಂಟೆಯಿಂದ ನಿದ್ರೆ ಮಾಡೋಕೆ ಬಿಡ್ತಿಲ್ವಲ್ಲ ಈ ಸೌಂಡ್ ಅಂತ ಹಾಸಿಗೆಯಿಂದ ಎದ್ದು ಚಾವಡಿಗೆ ಬಂದೆ.

ಆಗ ಗೊತ್ತಾಯ್ತು ಇದು ಮೆಟ್ರೋ ವರ್ಕಲ್ಲ, ಮೀಟರ್ ವರ್ಕ್ ಅಂತ (ಪುಣ್ಯಾತ್ಮನ ಗೊರಕೆಯ ಸದ್ದು). ಲೇ ಅಂದೆ, ಸ್ವಲ್ಪ ಮಗ್ಗುಲು ಬದಲಿಸಿ ಮಲ್ಕೊಂಡ, ಸೌಂಡ್ ನಿಲ್ತು, ಎಷ್ಟೊತ್ತು ೨ ನಿಮ್ಷ ಮತ್ತೆ ಶುರು. ದೇವ್ರೇ ಕಾಪಾಡಪ್ಪ, ಸೌಂಡ್ ನಿಲ್ಸಪ್ಪ ಅಂತ ಬೇಡ್ಕೊಂಡೆ, ಇಲ್ಲ ಅವನಿಗೂ ಕರುಣೆ ಬರ್ಲಿಲ್ಲ. ಏನಪ್ಪಾ ಮಾಡೋದು ಅಂತ ಯೋಚನೆ ಮಾಡ್ತಿದ್ದಾಗ, ಅಕ್ಕ ಕೊಟ್ಟ ಹತ್ತಿ ನೆನಪಿಗೆ ಬಂತು. ತೆಗೆದು ಎರಡೂ ಕಿವಿಗೆ ಹಾಕಿಕೊಂಡೆ.

ಊಹ್ಮ್ಹ್, ಏನೂ ಉಪಯೋಗ ಇಲ್ಲ.
ಇನ್ನೇನು ಮಾಡೋಕಾಗಲ್ಲ ಅಂತ ಹಾಗೆ ಬಿದ್ಕೊಂಡೆ, ಅರ್ಧ ಗಂಟೆ ಆದ್ಮೇಲೆ ಸೌಂಡ್ ನಿಲ್ತು. ಸದ್ಯ ಬಚಾವಾದೆ ಅಂದ್ಕೊಂಡು ನಿದ್ರೆಗೆ ಶರಣಾದೆ. ಅವ್ನ ಗೊರಕೆ ವಿಚಾರದ ಬಗ್ಗೆ ಯಾರಾದ್ರೂ ಕೇಳಿದ್ರೆ, ಹೌದಾ?? ಗೊರಕೆ ಹೊಡಿತೀನಾ, ನಂಗೆ ಗೊತ್ತೇ ಆಗಲ್ಲ ಅಂತ ಕೇಳ್ತಾನೆ.
ಪಾಪ ಅವ್ನಿಗೆ ಗೊರಕೆ ಹೊಡೆಯೋವಾಗ ತಾನು ನಿದ್ರೆ ಹೋಗಿರ್ತೇನೆ ಅನ್ನೋದು ಗೊತ್ತಿರಲ್ಲ ಅನ್ಸತ್ತೆ.
…..........................................
ಕೌಸಲ್ಯ ಸುಪ್ರಜಾ ರಾಮ ಪೂರ್ವ ಸಂಧ್ಯಾ ಪ್ರವರ್ಥಥೆ ಉತ್ಹಿಷ್ಟ ನರಸರ್ದೂಲ ಕರ್ಥವ್ಯಂ.....
ಕರ್ಥವ್ಯಂ ಕರ್ಥವ್ಯಂ, ಧಿಡೀರನೆ ಎದ್ದೆ. ಕೆಲಸಕ್ಕೆ ಹೋಗಪ್ಪ ಅಂತ ಮೊಬೈಲ್ನಲ್ಲಿಟ್ಟಿದ್ದ ಅಲಾರಾಂ ಕೂಗ್ತಿತ್ತು, ಥತ್ತೆರಿಕೆ, ಆರಾಮಾಗಿ ನಿದ್ರೆ ಮಾಡೋಕೂ ಬಿಡಲ್ಲ, ಕರೆಕ್ಟ್ ಟೈಮಿಗೆ ಹೊಡ್ಕೊಳ್ಳತ್ತೆ.
ಪಾಪ! ಅದು ಏನು ಮಾಡತ್ತೆ, ಆ ಸಾಫ್ಟ್ವೇರ್ ಕರೆಕ್ಟಾಗೆ ಕೆಲಸ ಮಾಡತ್ತೆ, ಲೇಟಾಗಿ ಅನ್ನೋದಕ್ಕೆ ನಮ್ಮ ಸರ್ಕಾರ ಕೆಟ್ಹೋಯ್ತಾ!

ಅಲಾರಾಂ ಆಫ್ ಮಾಡಿ ೧೦ ನಿಮ್ಷ ಮಲ್ಕೊಳ್ಳೋಣ ಅಂತ ಹಾಗೆ ಬಿದ್ಕೊಂಡೆ.
ಲೇ ಚಿಕ್ಕು, ಆಫೀಸಿಗೆ ಹೋಗಲ್ವೇನೋ?, ಮೀಟರ್ ಬಂದು ಕೂಗಿದಾಗಲೇ ಎಚ್ಚರ ಆಗಿದ್ದು, ೧೦ ನಿಮ್ಷ ಹೋಗಿ ಅರ್ಧ ಗಂಟೆ ಆಗಿತ್ತು.
ಯಾಕೋ, ರಜೆನೇನಪ್ಪ?
ಹ್ಮ್ಮ್!!!!!!, ರಜೆ ಹಾಗಂದ್ರೇನು?, ಎಲ್ಲೋ ಕೇಳಿದ ಹಾಗಿದ್ಯಲ್ಲ, ವೀಕೆಂಡ್ನಲ್ಲೇ ರಜೆ ಕೊಡಲ್ಲ ಇನ್ನ ವೀಕ್ ಡೇಸ್ನಲ್ಲಿ ಕೊಡ್ತಾರಾ??
ಸರಿನಪ್ಪ ನಾನು ಹೊರಟೆ ಅಂತ ಹೋದ.

ನಾನು ಎದ್ದು ರೇಡಿಯೋ ಆನ್ ಮಾಡಿ, ನೀರಿಗೆ ಕಾಯ್ಲ್ ಇಟ್ಟು ಹಲ್ಲುಜ್ಜಕ್ಕೆ ಹೋದೆ.

ನೀರು ಕಾದ ಮೇಲೆ ಸ್ನಾನಕ್ಕೆ ಸಿದ್ಧವಾಗಿ ಕಾಯ್ಲ್ ಆಫ್ ಮಾಡಿ ಸೈಡಿಗಿಟ್ಟು ಮಗ್ ತೆಗೆದು ಮೈ ಮೇಲೆ ನೀರು ಹಾಕೊಂಡೆ.
ಅಬ್ಬಬ್ಬ ಬಿಸಿ ಬಿಸಿ, ನೀರು ಕುದೀತಿತ್ತು.
ಹೊರಗೆ ರೇಡಿಯೋದಲ್ಲಿ ಸಕತ್ ಹಾಟ್ ಮಗಾ ಅಂತ ಕೇಳಿಸ್ತಿತ್ತು.

ಸುಮ್ನೆ, ಎಫ್ ಎಂ ರೈನ್ಬೋಗೆ ಹಾಕಿದ್ರೆ ಈ ಗತಿ ಬರ್ತಿರ್ಲಿಲ್ವೇನೋ ಅಂದ್ಕೊಂಡು ತಣ್ಣೀರು ಮಿಕ್ಸ್ ಮಾಡ್ಕೊಂಡು ಸ್ನಾನ ಮಾಡಿ ಹೊರಗೆ ಬಂದೆ.
ತಿಂಡಿ ಮಾಡ್ಕೊಂಡು, ಮಧ್ಯಾಹ್ನದ ಊಟ ಪ್ಯಾಕ್ ಮಾಡ್ಕೊಂಡು ಬ್ಯಾಗ್ ಎತ್ಕೊಂಡು ಹೊರಟೆ.

ನವರಂಗ್ ಹತ್ತಿರ ತುಂಬಿ ತುಳುಕುತ್ತಿದ್ದ ೯೬ ಡಿ ಬಸ್ ಹತ್ತಿ ಕುಳಿತೆ!!!!
ನಿಲ್ಲೋಕೆ ಜಾಗ ಇರಲ್ಲ ಇನ್ನೆಲ್ಲಿ ಕೂತ್ಕೊಳ್ಳೋದು, ಕಷ್ಟಪಟ್ಟು ಬ್ಯಾಗ್ ಹೆಗಲಿಗೆ ನೇತುಹಾಕೊಂಡು ನಿಂತೆ. ಮುಂದಿನ ಸ್ಟಾಪ್ನಲ್ಲಿ ಇಳಿಯೋನು ಒಬ್ಬ ನನ್ನನ್ನ ದಾಟಿ ಹೋಗೋವಾಗ ಬ್ಯಾಗ್ ಅಡ್ಡಬಂದಿದ್ರಿಂದ 'ಏನು ಹುಡುಗ್ರಯ್ಯ, ಕಾಲೇಜಿಗೆ ಹೋಗೋ ಇವಕ್ಕೆ ಸ್ವಲ್ಪನೂ ಗೊತ್ತಾಗಲ್ಲ, ತೆಗ್ದು ಕೈಲಾದ್ರೂ ಇಟ್ಕೊಳ್ಳಯ್ಯ'.

'ಸರಿ' ಅಂತಂದು ಕೈನಲ್ಲಿ ಇಟ್ಕೊಂಡೆ.

ಮಲ್ಲೇಶ್ವರಂ ಹತ್ರ ಬಸ್ ಬಂದಾಗ ಬಸ್ ಅರ್ಧ ಖಾಲಿಯಾಯ್ತು. ಬಸ್ಸಲ್ಲಿ ಹಾಕಿದ್ದ ಎಫ್ ಎಂನಲ್ಲಿ 'ಇದೇನಾ ಸಭ್ಯತೆ, ಇದೇನಾ ಸಂಸ್ಕೃತಿ' ಹಾಡು ಬರ್ತಿತ್ತು, ಒಂದು ಹುಡ್ಗಿ, ಸುಮಾರು ೧೯-೨೦ ವಯಸ್ಸಿರಬಹುದು. ಸಣ್ಣ ಚಡ್ಡಿ, ಶರ್ಟ್ ಡ್ರೆಸ್ ಹಾಕಿದ್ಲು, ಬಸ್ ಮುಂದಿನ ಬಾಗ್ಲಿಂದ ಹತ್ತಿದ್ಳು. ಹತ್ತಿದ ತಕ್ಷಣ ಆ ಹಾಡು ಕೇಳಿ ಅವ್ಳಿಗೆ ಏನನ್ಸಿತೋ ಅಥ್ವ ಅಲ್ಲಿದ್ದವರೆಲ್ಲ ಅವ್ಳನ್ನೇ ನೋಡಿದ್ದಕ್ಕೋ ಅವ್ಳಿಗೆ ಮುಜುಗರ ಆಗಿ ತನ್ನ ಚಡ್ಡಿಯನ್ನ ಕೈನಿಂದ ಎಳೆದುಕೊಳ್ತಿದ್ಲು!!

ಜೀನ್ಸ್ ಚಡ್ಡಿ, ಎಳೆದ್ರೆ ಉದ್ದ ಆಗತ್ತಾ??

ಬಹುಶ, ಈ ಹುಡ್ಗಿ ೮ನೇ ಕ್ರಾಸಲ್ಲೋ, ಮಂತ್ರಿ ಮಾಲಲ್ಲೋ ಯಾವ್ದೋ ಹರಿದ ಜೀನ್ಸ್ ತಗೊಂಡಿರ್ಬೇಕು (ಬಹುತೇಕ ಹುಡುಗರ ಜೀನ್ಸ್ ಪ್ಯಾಂಟ್ ಹಾಗೇ), ಮಲ್ಲೇಶ್ವರಂನಲ್ಲಿ ಈ ಹುಡ್ಗಿ ಆ ಪ್ಯಾಂಟ್ ತಗೊಂಡಿದ್ದು ನೋಡಿ ಶಿವ ತನ್ನ ೩ನೇ ಕಣ್ಣನ್ನೋ ಅಥ್ವಾ ತ್ರಿಶೂಲವನ್ನೋ ಸಿಟ್ಟಿನಿಂದ ಬಿಟ್ಟಿರಬೇಕು, ಆಗ ಅದು ತುಂಡಾಗಿ ಚಡ್ಡಿ ಆಗಿರ್ಬೇಕು, ಇವ್ಳು ವಿಧಿಯಿಲ್ಲದೇ ಅದ್ನ ಹಾಕೊಂಡಿದ್ದಾಳೆ!!

ಮುಂದುವರೆಯುವುದು

No comments:

Post a Comment