Thursday, June 17, 2010

ಸ್ವಲ್ಪ ಫ್ಲಾಶ್ಬ್ಯಾಕ್ಗೆ ಹೋಗಿಬನ್ನಿ

ಅಂಬಾಸಿಡರ್ ಕಾರ್ ಟಾರ್ ರೋಡ್ ದಾಟಿ ಮಣ್ಣಿನ ರಸ್ತೆಗೆ ಬಂದ ತಕ್ಷಣ ಸಡನ್ನಾಗಿ ನಿಲ್ತು. ಲಗೋರಿ ಆಡ್ತಿದ್ದ ನಾವು ಹೆದರಿ ದೇವಸ್ಥಾನದ ಒಂದು ಮೂಲೆಗೆ ಹೋಗಿ ಕದ್ದು ಕುಳಿತೆವು (ಯಾಕಂದ್ರೆ ಆಗೆಲ್ಲ ಅಂಬಾಸಿಡರ್ ಕಾರಲ್ಲಿ ಬಂದವ್ರು ಮಕ್ಳನ್ನ ಕಿಡ್ನಾಪ್ ಮಾಡ್ಕೊಂಡು ಹೋಗ್ತಾರೆ ಅಂತಿದ್ರು, ಹಾಗಾಗಿ).


ಇದ್ದಕ್ಕಿದ್ದ ಹಾಗೆ ನಮ್ಜೊತೆ ಇದ್ದ ಅಕ್ಕ ಓಡಿ ಕಾರ್ ಹತ್ತೇಬಿಟ್ಲು. ನಮಗೆಲ್ಲ ಶಾಕ್. ಕಾರ್ ಹಾಗೆ ಮುಂದಕ್ಕೆ ಹೋಯ್ತು. ನಾವು ಓಡಿ ಹಿಂದುಗಡೆಯಿಂದ ನೋಡಿದ್ರೆ ನಮ್ಮಪ್ಪ ಕಾರಲ್ಲಿದ್ರು.

ಒಂದೇ ಉಸಿರಿಗೆ ಕಾರ್ ಹಿಂದೆ ಓಡೋದಕ್ಕೆ ಶುರು ಮಾಡಿದ್ವಿ. ಕಾರು ಹೋಗಿ ನಮ್ಮನೆ ಹತ್ತಿರ ನಿಲ್ತು. ಅಕ್ಕ ಕಾರಿಂದಿಳಿದು ನಗ್ತಿದ್ಲು. ನಮಗೆಲ್ಲ ಹೊಟ್ಟೆ ಉರಿ, ನಮ್ಮನ್ನ ಕಾರಲ್ಲಿ ಹತ್ತಿಸಿಕೊಳ್ಳಲಿಲ್ಲ ಅಂತ. ಸ್ವಲ್ಪ ಹೊತ್ನಲ್ಲಿ ಹೊಟ್ಟೆ ಉರಿ ಕಡಿಮೆ ಆಗಿತ್ತು ಯಾಕಂದ್ರೆ ಕಾರಿಂದ ಟಿ.ವಿ ಇಳಿಸ್ತಿದ್ರು, ನಮಗೆಲ್ಲರಿಗೂ ಖುಷಿಯೋ ಖುಷಿ. ಆಂಟೆನ ಏರಿಸಿ ಟಿ.ವಿ ಹಾಕಿದ ತಕ್ಷಣ ತೆರೆಯ ಮೇಲೆ ಬಂದ ವೈಟ್ ಸ್ಕ್ರೀನ್ ನೋಡಿ ಏನೋ ವಿಸ್ಮಯ ಕಂಡ ಹಾಗೆ. ಆಂಟೆನ ತಿರುಗಿಸಿ ಹಾಸನ ಸ್ಟೇಶನ್ಗೆ ಸೆಟ್ ಮಾಡಿದ ತಕ್ಷಣ ಡಿ.ಡಿ ೧ ಬಂತು, ಟಿ.ವಿಯಲ್ಲಿ ದೃಶ್ಯ ನೋಡಿ ಕಣ್ಣಿಗೆ ಹಬ್ಬ.

ಬಂದ ಹೊಸತರಲ್ಲಿ ರಾಮಾಯಣ ನೋಡೋದಕ್ಕೆ ನಮ್ಮನೆ ಹಾಲ್ ಫುಲ್ ಆಗಿರೋದು.ಆಮೇಲಾಮೇಲೆ ಸುರಭಿ, ತೆಹಕೀಕಾತ್,ಮಹಾಭಾರತ, ಚಿತ್ರಹಾರ್, ಮೋಗ್ಲಿ, ಮಾಲ್ಗುಡಿ ಡೇಸ್, ಸ್ಟ್ರೀಟ್ ಹಾಕ್, ರಂಗೋಲಿ. ೨ ತಿಂಗಳಿಗೊಮ್ಮೆ ರೀಜನಲ್ ಫಿಲಂ ಅಂತ ಕನ್ನಡ ಚಿತ್ರ ಹಾಕೊದನ್ನೇ ಕಾಯ್ತಿದ್ವಿ.

ಸ್ವಲ್ಪ ವರ್ಷ ಆದ್ಮೇಲೆ ಕನ್ನಡ ಚಾನೆಲ್ ಡಿ.ಡಿ ೯ ಬರೋದಕ್ಕೆ ಶುರುವಾಯ್ತು, ಆ ದಿನ ಕನ್ನಡ ಬರತ್ತೆ ಅಂತ ಅರ್ಧ ಗಂಟೆ ಮೊದಲೇ ಟಿ.ವಿ ಹಾಕ್ಕೊಂಡು ಕೂತಿದ್ವಿ. ಬಹುಷ ಸಂಜೆ ೪ ಅಥವಾ ೪.೩೦ ಇರ್ಬೇಕು. 'ಜೋಗದ ಸಿರಿ ಬೆಳಕಿನಲ್ಲಿ...' ಹಾಕಿದ್ರು, ನೋಡಿ ಫುಲ್ ಖುಷ್.

ಆಮೇಲಾಮೇಲೆ ಮಾಯಾಮೃಗ, ಗುಡ್ಡದ ಭೂತ, ಚಿತ್ರಮಂಜರಿ, ಸಬೀನಾ ಭಾನುವಾರದ ಸಂಜೆಯ ಚಲನಚಿತ್ರ ನಮ್ಮ ದೈನಂದಿನ ಬದುಕಿನ ಭಾಗವಾಗಿ ಹೋದವು. ರಾತ್ರಿ ೯.೩೦ ೧೦ ಅನ್ನೋ ಹೊತ್ತಿಗೆ ಎಲ್ಲ ಕೆಲಸ ಮುಗಿಸಿ ಪಾಚ್ಕೊತಿದ್ವಿ.

ಆಮೇಲೆ ಕಾಲೇಜ್ ಅಂತ ಹೊರಗಡೆ ಹೋದಮೇಲೆ ಟಿ.ವಿಯ ಸಂಪರ್ಕ ಕಡಿಮೆಯಾಯ್ತು. ಡಿಗ್ರಿಯಲ್ಲೂ ಸಹ ಹಾಸ್ಟೆಲ್ನಲ್ಲಿರೋವಾಗ ಆಗಾಗ ಕ್ರಿಕೆಟ್ ನೋಡ್ತಿದ್ವಿ ಅಷ್ಟೆ.

ಆಮೇಲೆ ಬೆಂಗ್ಳೂರ್ನಲ್ಲಿ ಕೆಲಸ, ಬ್ಯಾಚಲರ್ಸ್ ರೂಮ್, ಟಿ.ವಿ ಅವಶ್ಯಕತೆ ಕಾಣಿಸ್ಲಿಲ್ಲ (ಹರಟೆ ಹೊಡೆಯೋಕೆ ಸಮಯ ಇಲ್ದಿರೋವಾಗ ಇನ್ನು ಟಿ.ವಿ ತಗೊಂಡು ಏನು ಮಾಡೋದು ಅಂತ). ಕೆಲಸ ಮುಗಿಸಿ ರೂಮಿಗೆ ಬಂದು ಹರಟೆ ಹೊಡೆದು ಅಡಿಗೆ ಮಾಡಿ ಊಟ ಮುಗಿಸಿ ಮಲಗಿಕೊಳ್ಲೋದ್ರಲ್ಲಿ ಸಮಯ ಆಗಿರೋದು.

ಈ ನಡುವೆ ಇದ್ದ ಡೆಸ್ಕ್ಟಾಪ್ಗಳು ಹೋಗಿ ಲ್ಯಾಪ್ಟಾಪ್ ಬಂದವು, ಅದರಲ್ಲೇ ಫಿಲ್ಮ್ ನೋಡೋದಾಯ್ತು.

ಈ ಗ್ಯಾಪಲ್ಲಿ ಟಿ.ವಿಯಲ್ಲಿ ಭಯಂಕರ ಬದಲಾವಣೆಗಳಾಗಿ ಹೋಗಿತ್ತು. ಎಲ್ಲೆಲ್ಲೂ ರಿಯಾಲಿಟಿ ಶೋಗಳಾಟ. ನಮ್ಮ ಹಳ್ಳಿಗಳಲ್ಲೂ ಭಾರೀ ಬದಲಾವಣೆ, ೧೦ ಗಂಟೆಗೆ ಲೈಟ್ ಆರಿಸುತ್ತಿದ್ದ ಮನೆಗಳು ಈಗ ರಾತ್ರಿ ೧೨-೧ ಆದ್ರೂ ಬೆಳಕನ್ನ ಹೊರಸೂಸುತಿರ್ತವೆ. ಕೇಬಲ್, ಟಾಟಾ ಸ್ಕೈ, ಡಿಶ್ ಟಿ.ವಿ, ಸನ್ ಡೈರಕ್ಟ್ ಇವುಗಳ ಮಹಿಮೆಯಿಂದ.

ಸಂಜೆ ಕೆಲಸ ಮುಗಿಸಿ ದೇವಸ್ಥಾನದ ಹತ್ತಿರನೋ, ಬಾವಿ ಕಟ್ಟೆ ಹತ್ತಿರನೋ, ಶಾಲೆ ಬಳಿನೋ ಜನ ತೋಟ-ಗದ್ದೆ, ಮಳೆ-ಬೆಳೆ ಹೀಗೆ ಕಷ್ಟ-ಸುಖ ಮಾತಾಡ್ತಿದ್ದವರು ಈಗ ಅಲ್ಲೆಲ್ಲೂ ಕಾಣಿಸಲ್ಲ.

ಅಕಸ್ಮಾತ್ ಅಪ್ಪಿ-ತಪ್ಪಿ ಯಾರಾದ್ರೂ ಇದ್ರೆ 'ಲೋ, ಸ್ಕೋರ್ ಏನಾಯ್ತೋ?' , 'ಕರೆಂಟ್ ಹೋಗಿಬಿಡ್ತಲ್ಲೋ, ಛೆ ರಾಖಿ ಸಾವಂತ್ ಮದ್ವೆ ಮಿಸ್ ಆಯ್ತು? ಯಾರ್ನ ಮದ್ವೆ ಆದ್ಲೋ ಸ್ವಯಂವರದಲ್ಲಿ?' ಈ ತರ ಮಾತುಗಳು.

ಡಿ.ಡಿ ೧,೯ ಚೆನ್ನಾಗಿತ್ತಲ್ವ??

No comments:

Post a Comment