Wednesday, April 6, 2011

ಕಾಂಕ್ರೀಟ್ ಕಾಡಿನಲ್ಲಿ

ಕಾಂಕ್ರೀಟ್ ಕಾಡಿನಲ್ಲಿ ಕೂತೊಂದು ಕನಸ ಕಂಡ
ನಾ ಕೋಟ್ಯಾಧಿಪತಿಯಾಗಬೇಕೆಂದುಕೊಂಡ

ಸಾಫ್ಟ್ವೇರ್ ಇಂಜಿನಿಯರಾಗಿ ಸೇರಿಕೊಂಡ
ಇನ್ನೇನು ಕನಸು ನನಸಾಯಿತೆಂದುಕೊಂಡ

ದುಡಿದಿದರ್ಧದಷ್ಟನ್ನು ಟ್ಯಾಕ್ಸ್ ಕಟ್ಟಿದ
ಸ್ವಲ್ಪ ಬಾಡಿಗೆ ಮನೆಗೆ ಸುರಿದ
ಮಿಕ್ಕಿದ್ದರಲ್ಲಿ ಬೈಕ್ ತಗೊಂಡ

ಸ್ವಲ್ಪ ವರುಷದ ನಂತರ
ಸಂಬಳ ಜಾಸ್ತಿಯಾದ ನಂತರ

ಬೈಕನ್ನು ಎಸೆದ
ಲೋನನ್ನು ತೆಗೆದ
ಕಾರನ್ನು ಪಡೆದ

ಮದುವೆಯಾಯಿತು
ಹೆಂಡತಿ ಬಂದಳು
ಮನೆ ಬೇಕೆಂದಳು

ಅರವತ್ತಾದರೂ ಮುಗಿಯುವ ಹಾಗಿಲ್ಲ
ತೆಗೆದುಕೊಂಡ ಸಾಲ

Thursday, February 24, 2011

ಚುರ್ಮುರಿ ೫

೧೩) ಹೆಲ್ಮೆಟ್ ಹಾಕದೆ ಹೋಗುತ್ತಿದ್ದ ಅವನನ್ನು ಟ್ರಾಫಿಕ್ ಪೋಲಿಸ್ ತನ್ನ ಬೈಕ್ನಲ್ಲಿ ಹಿಂಬಾಲಿಸಿ ಧಮಕಿ ಹಾಕಲು ಶುರುಮಾಡಿದ ಆದರೆ ಸ್ವತಃ ಹೆಲ್ಮೆಟ್ ಹಾಕುವುದನ್ನು ಮರೆತಿದ್ದ.

೧೪) ಅಮ್ಮ ಸೆಕೆ ಅಂದರೂ ಏ.ಸಿ ಹಾಕದ ಮಗ ತನ್ನ ಗೆಳತಿ ಸೆಕೆ ಅಂದ ಕೂಡಲೇ ಏ.ಸಿಯ ಸ್ವಿಚ್ಚನ್ನು ೫ಕ್ಕೆ ತಿರುಗಿಸಿದ್ದ.

೧೫) ಸರ್ಕಾರಿ ಶಾಲೆಯಲ್ಲಿ ಓದಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಅವನು ಕೇವಲ ಸಾವಿರಗಳಲ್ಲಿ ತನ್ನ ವಿಧ್ಯಾಭ್ಯಾಸ ಮುಗಿದಾಗ ಉಬ್ಬಿಹೊಗಿದ್ದ, ತನ್ನ ಮಗನನ್ನು ಯು.ಕೆ.ಜಿಗೆ ಸೇರಿಸುವಾಗ

ಗೌಡ್ರು ರಂಗಣ್ಣ ಮತ್ತೆ ರಾಜಕೀಯ - ೩

ಪ್ಯಾಟೆಗೆ ಹೋಗಿದ್ದ ಗೌಡ್ರು ಬಸ್ಸಿಂದಿಳಿದು ಮನೆ ಕಡೆಗೆ ಹೆಜ್ಜೆ ಹಾಕ್ತಿದ್ರು. ಹಿಂದ್ಗಡೆಯಿಂದ ಸ್ಪೀಡಾಗಿ ಬಂದ ಸ್ಕಾರ್ಪಿಯೋ ಸಡನ್ ಆಗಿ ನಿಲ್ತು.

ಸ್ಕಾರ್ಪಿಯೋದಿಂದ ಇಳಿದ ರಂಗಣ್ಣನ ನೋಡಿ ಗೌಡ್ರು 'ಏನ್ಲಾ ರಂಗಣ್ಣ ಯಾರ್ದಲ ಗಾಡಿ?'

ನಂದೇ ಗೌಡ್ರೆ, ಇವತ್ತು ಹೊಸದು ತಂದೆ, ಹೆಂಗಿದೆ ಗೌಡ್ರೆ?

ಸಕತ್ತಾಗಿದೆ ಕಣ್ಲ. ಅದೆಲ್ಲಿಂದ ಇಷ್ಟು ಕಾಸು ಬಂತ್ಲಾ?

ಅದೇ ಗೌಡ್ರೆ, ರೆಸಾರ್ಟ್ನಿಂದ ದುಡಿದಿದ್ದು.

ಆಗ್ಬಹುದು ಬುಡ್ಲ, ಬಲ್ಬೇಗ ಅವ್ರಿವ್ರನ್ನ ಏಮಾರ್ಸಿ ಎಲ್ಲ ಮಾಡ್ಕಂಬಿಟ್ಟೆ.

ದೊಡ್ಡ ಮೀನು ಬದ್ಕ್ಬೇಕಂದ್ರೆ ಸಣ್ಣ ಮೀನು ಸಾಯ್ಲೆಬೇಕಲ್ವ ಗೌಡ್ರೆ? ಅದಿರ್ಲಿ, ಸೋಮನಹಳ್ಳಿ ಹತ್ರ ಒಂದು ೨೦೦ ಎಕ್ರೆ ಜಾಗ ಕೊಂಡ್ಕಂಡೆ ಗೌಡ್ರೆ.

ಎಂಥಕ್ಲ ಅಷ್ಟೊಂದು?? ಇಲ್ಲಿಂದ ಅಲ್ಲಿ ಹೋಗಿ ಜಮೀನು ಹೆಂಗೆ ನೋಡ್ಕೋತೀಯಾ? ತೋಟದಲ್ಲಿ ಕೆಲಸ ಮಾಡಿಸ್ಲಿಕ್ಕೆ ಜನ ಹೆಂಗೆ ಹೊಂದುಸ್ತೀಯ?

ತೋಟ ಗೀಟ ಏನು ಇಲ್ಲ ಗೌಡ್ರೆ, ಸರ್ಕಾರದವ್ರು ಗಣಿಗೆ ಅನುಮತಿ ಕೊಟ್ಟಿಲ್ವ, ನಾನೂ ಗಣಿ ವ್ಯವಹಾರ ಮಾಡುವ ಅಂತ.

ಸರಿಹೋಯ್ತು ಬುಡ್ಲ, ಅಲ್ಲ ಕಣ್ಲ ಅನ್ನ ಹಾಕೋ ಜಮೀನನ್ನೇ ಕನ್ನ ಮಾಡೋಕೆ ಹೊಂಟೀಯಲ್ಲೋ, ನಾಳೆ ನಿನ್ನ ಮಕ್ಳಿಗೆ ಅನ್ನಕ್ಕೆ ಬರ ಬಂದ್ರೆ ಅದಿರು ತಿನ್ಸ್ತೀಯೇನ್ಲಾ, ಮನ್ಸಂಗೆ ಆಸೆ ಇರ್ಬೇಕು ಕಣ್ಲಾ, ದುರಾಸೆ ಇರ್ಬಾರ್ದು.

ಅಯ್ಯೋ ಬಿಡಿ ಗೌಡ್ರೆ, ನಂದಕ್ಕೆ ಹಿಂಗಂತೀರಾ ಬಳ್ಳಾರಿ ಕಡೆ ಹೋಗಿ ನೋಡಿ ಒಂದ್ಸಲ.

ನಿಂದ್ಯಾಕ್ಲ ಬಿಡ್ಬೇಕು, ಇವಾಗ ೨೦೦ ಎಕ್ರೆ ತಗೊಂಡೋನು ನಾಳೆ ೨೦೦೦ ಎಕ್ರೆ ತಗೋತೀಯಾ. ಆಮೇಲೆ ನಾವೆಲ್ಲಾ ಎಲ್ಲಿ ಹೋಗ್ಬೇಕು.

ಏನಂದೆ ಬಳ್ಳಾರಿ ಅಂದ್ಯಲ್ಲ ಅಲ್ಲಿ ವಿಸ್ಯ ಏನು ಅಂತ ಹೇಳದು. ಅಲ್ಲಿ ಗಣಿ ನಡೆಸೋವ್ರೆಲ್ಲ 'ಭೂಮಿತಾಯಿಗೆ ಭೂಮಿ ಅಂದ್ರೆ ಏನು' ಅನ್ನೋ ಪರಿಸ್ಥಿತಿನ ಸೃಷ್ಟಿ ಮಾಡಿದ್ದಾರೆ.

ನೋಡಿದ್ರಾ ಗೌಡ್ರೆ, ನಾವು ಸ್ವಲ್ಪ ಮಾಡ್ತೀವಿ ಅಂದಿದ್ದಕ್ಕೆ ನೀವು ಹಂಗೆ ಎಗ್ರಾಡ್ತಿದ್ರಿ.

ಅದೇ ಕಣ್ಲಾ ನಾನು ಹೇಳ್ತಿರೋದು, ನದಿ ಹೋಗಿ ಹೆಂಗೆ ಸಮುದ್ರ ಸೇರುತ್ತೋ ಹಾಗೆ ನೀನು ದೊಡ್ಡದಾಗಿ ನಡೆಸೋರನ್ನ ಸೇರ್ಕೊಂಡು ದಂಧೆ ನಡುಸ್ತೀಯ ಅಂತ. ನಿಮ್ಗೆಲ್ಲ ಯಾವನು ಬುದ್ಧಿ ಹೇಳೋಕಾಗತ್ತೆ, ಕೆಟ್ಮೇಲೆ ಬುದ್ಧಿ ಬರೋದು, ನಾನಿನ್ನು ಬರ್ತೀನಿ ಕಣ್ಲ. ಅದೇನೇನು ಮಾಡ್ತೀರಾ ನೋಡ್ತೀನಿ ಅಂತ ಗೌಡ್ರು ಮನೆ ಕಡೆ ಹೆಜ್ಜೆ ಹಾಕಿದ್ರು.

Monday, February 14, 2011

ಸಾಕಪ್ಪಾ ಸಾಕು

ಇಲ್ಲ ಅಮ್ಮ ನಾನು ಬರಲ್ಲ, ಬೆಂಗಳೂರಿಂದ ಬಂದು ಒಂದೆರಡು ದಿನ ಆರಾಮಾಗಿ ಇರಣ ಅಂದ್ರೆ ನೀನೊಳ್ಳೆ ಯಾವಾಗ್ಲೂ ಮದ್ವೆ, ಸಾವು, ತಿಥಿ ಅಂತ ಕರೀತಿಯಲ್ಲ.

ಹೂಂ ಕಣಪ್ಪ ಬರ್ಲೇಬೇಕು ಅವ್ರು ನಿಂದಕ್ಕೆ ಬರೋದು ಬೇಡ್ವ?

'ಏನಕ್ಕೆ, ತಿಥಿಗಾ?'

ನಿಂದೆಲ್ಲಿ ತಿಥಿ ಆಗತ್ತೆ ಯಾರದಾದ್ರೂ ತಿಥಿ ಮಾಡ್ತೀಯ, ಕಥೆ ಎಲ್ಲ ಬೇಡ ಈಗ ಸುಮ್ನೆ ಹೊರಡು.

ನಂಗಾಗಲ್ಲ.

ಹಾಗಿದ್ರೆ ಅಡಿಗೆ ನೀನೆ ಮಾಡಿ ಊಟ ಮಾಡಿ ಅಜ್ಜಿಗೆ ಬಡಿಸಿ ಇಲ್ಲೇ ಇರು.

ಯಾಕೋ ಎಡವಟ್ಟಾಗ್ತಿದೆ ಅನ್ನಿಸ್ತು. ಬರ್ತೀನಿ ಅಂತ ಹೊರಟೆ.

ಕಲ್ಯಾಣ ಮಂಟಪದ ಹತ್ತಿರ ಹೋದ್ರೆ, ಇಂಥ ಕುಟುಂಬದವರಿಂದ ಸ್ವಾಗತ ಅನ್ನೋ ಬೋರ್ಡ್ ಇಲ್ಲ :(

ಏನಮ್ಮ ಇದು ಅಂದೆ.

ನಿಂಗೇನಕ್ಕೆ ಅದು, ಮದ್ವೆಗೆ ಬರ್ತಿದೀಯ. ತೆಪ್ಪಗೆ ಕೂತು ವಿಶ್ ಮಾಡಿ ಊಟ ಮಾಡಿ ಹೊರಡು.

ಯಾಕೋ ಏನೋ ಸರಿ ಇಲ್ಲ ಅಂದ್ಕಂಡು ಕಲ್ಯಾಣ ಮಂಟಪದ ಒಳಗೆ ಹೆಜ್ಜೆ ಹಾಕಿದೆ.

ನೋಡಿದ ತಕ್ಷಣ ಶಾಕ್ ಹೊಡೆದ ಹಾಗಾಯ್ತು. ಎಲ್ಲೆಲ್ಲೂ ಜನ, ೧ ಮದ್ವೆ ಅಂದ್ಕೊಂಡು ಹೋದ್ರೆ ೧೦ ಮದ್ವೆ. ಸಾಮೂಹಿಕ ಮದುವೆ :(. ಊಟ ಸಿಗತ್ತೋ ಇಲ್ವೋ ಅನ್ನೋ ಚಿಂತೆ ಬೇರೆ.

ಭಯಂಕರ ಸಿಟ್ಟು ಬಂತು. ನಮ್ಮಮ್ಮಂಗೆ ಕ್ಲಾಸ್ ತಗೋಬೇಕು ಅಂತ ಪಕ್ಕದಲ್ಲಿ ತಿರುಗಿದ್ರೆ ಅಮ್ಮ ಇಲ್ಲ.

ಇನ್ನು ಮುಗಿತು, ನನ್ನ ಜೊತೆ ಯಾರೂ ಇಲ್ಲ, ನಮ್ಮಮ್ಮ ಇನ್ನು ನನ್ನ ಕೈಗೆ ಸಿಗೋದು ಸಂಜೆನೇ. ನಾನು ಬಂದಿರೋ ಮದ್ವೆ ಯಾವ ಮಂಟಪದಲ್ಲಿದೆ ಅಂತ ಗೊತ್ತಿಲ್ಲ. ವಿಧಿಯಿಲ್ಲದೇ ಖಾಲಿ ಇರುವ ಛೇರ್ ಹುಡುಕಲು ಹೊರಟೆ.

೧೦ ನಿಮಿಷದ ಒದ್ದಾಟದ ಬಳಿಕ ಒಂದು ಛೇರ್ ಸಿಕ್ತು. ೫ ಮಂಟಪ ಒಂದು ದಿಕ್ಕು, ಉಳಿದ ಐದು ಮತ್ತೊಂದು ದಿಕ್ಕು. ನಾನು ಯಾವ ಮದ್ವೆಗೆ ಮುಖ ಮಾಡಿ ಕೂತಿದ್ನೋ??
ಯಾರಾದ್ರೂ ಪರಿಚಯದವರು ಇದ್ದಾರ ಅಂತ ಸುತ್ತಲೂ ಕಣ್ಣಾಡಿಸಿದೆ, ಉಹೂಂ ಯಾರೂ ಕಾಣ್ಲಿಲ್ಲ. ಏನಪ್ಪಾ ಮಾಡೋದು ಅಂತ ಅಂದ್ಕೊಂಡು ಎದ್ರುಗಡೆ ನಡೀತಿದ್ದ ಮದ್ವೆ ನೋಡ್ತಾ ಕೂತೆ.

ಒಂದು ಮಂಟಪ ಕಾಲಿ, ಇನ್ನೊಂದ್ರಲ್ಲಿ ಆಗ್ಲೇ ಮಹೂರ್ತ ಮುಗಿದಿದೆ, ಹೆಣ್ಣು ಗಂಡು ಎದ್ದೇಳ್ತಿದ್ದಾರೆ. ಮತ್ತೊಂದ್ರಲ್ಲಿ ಸೂರ್ಯನಮಸ್ಕಾರ ಮಾಡಿಸಲಿಕ್ಕೆ ನವಜೋಡಿನ ಕರ್ಕೊಂಡು ಹೋಗ್ತಿದ್ದಾರೆ. ಮಗದೊಂದ್ರಲ್ಲಿ ಗಂಡು, ಹೆಣ್ಣಿಗೆ ಕಾಯ್ತಾ ಕೂತಿದ್ದಾನೆ, ಆ ಕಡೆಯಿಂದ ಹುಡುಗಿಯ ಸೋದರಮಾವ ಹೆಣ್ಣನ್ನ ಕರ್ಕೊಂಡು ಬರ್ತಿದ್ದಾನೆ.

ಅಷ್ಟೊತ್ತಿಗೆ ನನ್ನ ಭುಜನ ಹಿಂದ್ಗಡೆಯಿಂದ ಯಾರೋ ಅಲ್ಲಾಡಿಸಿದ ಹಾಗಾಯಿತು. ತಿರುಗಿ ನೋಡಿದ್ರೆ ನಮ್ಮ ಸಂಬಂಧಿಕರೊಬ್ರು 'ಏನು ಚೇತನ್, ಆರಾಮ?' ಅಂದ್ರು.

ಎಲ್ಲ ಕುಶಲೋಪರಿ ಆದ್ಮೇಲೆ ಅವ್ರು 'ಯಾವ ಮದ್ವೆಗೆ ಬಂದಿರೋದು?'.

ಬೆಳ್ಗೆ ಬರೋವಾಗ ಮದ್ವೆ ಕಾಗದ ನೋಡ್ಕೊಂಡು ಬಂದಿದ್ರಿಂದ ಇಂಥೋರ ಮದ್ವೆ ಅಂದೆ.

ಓ ನಾನೂ ಅದ್ಕೆ ಬಂದಿರೋದು, ಯಾವ ಮಂಟಪದಲ್ಲಿ ಇದೆ?

ಯಾವ ಪ್ರಶ್ನೆ ನನ್ನನ್ನ ಅವ್ರು ಕೇಳ್ಬಾರದಿತ್ತೋ ಅದನ್ನೇ ನನಗೆ ಕೇಳಿದ್ರು. ಈಗ ನನಗೆ ಧರ್ಮಸಂಕಟ. ಗೊತ್ತಿಲ್ಲ ಅಂದ್ರೆ ಮರ್ಯಾದೆ ಪ್ರಶ್ನೆ.
ಹಾಗೆ ಎಲ್ಲ ಮಂಟಪದ ಕಡೆ ಕಣ್ಣು ಹಾಯಿಸಿದೆ. ಒಂದು ಮಂಟಪದ ಹತ್ರ ನಮ್ಮ ಇನ್ನೊಬ್ರು ಸಂಬಂಧಿಕರೊಬ್ರು ಕಾಣ್ಸಿದ್ರು, ಅಬ್ಬ ಅಂತೂ ಬಚಾವ್ ಅಂತ್ಹೇಳಿ, ಅವರನ್ನ ತೋರಿಸಿ ಅದೇ ನೋಡಿ ಅಂದೆ.

ಇಷ್ಟೊಂದು ಮದ್ವೇನಲ್ಲಿ ಯಾವ್ದು ಅಂತ ಹುಡ್ಕದು ಬಾರೀ ಕಷ್ಟ, ನೀವು ಸಿಕ್ಕಿದ್ದು ಒಳ್ಳೆದಾಯ್ತು, ಮುಯ್ಯಿ ಕೊಟ್ಟು ಬರ್ತೀನಿ ತುಂಬಾ ಥ್ಯಾಕ್ಸ್ ಅಂದು ಹೊರಟ್ರು.
ಅಬ್ಬ ಅಂತೂ ಒಂದು ಸಮಸ್ಯೆ ಮುಗಿತು ಅಂತ ಕೂತ್ಕೊಂಡೆ.

ಸ್ವಲ್ಪ ಹೊತ್ತಾದ್ಮೇಲೆ ಒಂದು ಮಂಟಪದ ಹತ್ರ ಅದೇನೋ ಗಲಾಟೆ ನಡೀತಿತ್ತು. ಅದೇನು ನೋಡಣ ಅಂತ ಕಷ್ಟಪಟ್ಟು ಮಂಟಪದ ಕಡೆ ಹೋದೆ. ಮದ್ವೆ ಗಂಡು ಕ್ಯಾಮೆರಾದವ್ನನ್ನ ಹಿಡ್ಕಂಡು ತದುಕ್ತಿದ್ದ.

ವಿಷಯ ಏನಂದ್ರೆ ಕ್ಯಾಮೆರಾದವ್ನು ಇವರ ಮದ್ವೆ ಫೋಟೋ ತೆಗೆಯೋದ್ರ ಬದ್ಲು ಪಕ್ಕದಲ್ಲಿ ನಡೀತಿದ್ದ ಮದ್ವೆ ಫೋಟೋ ತೆಗೀತಿದ್ನಂತೆ. 'ಮಗನೆ ಕಾಸು ಕೊಟ್ಟಿರೋನು ನಾನು, ಅವ್ನ್ದ್ಯಾವಂದೋ ಫೋಟೋ ತೆಗಿತಿದೀಯಲ್ಲೋ' ಅಂತ ಗಂಡು ಅಂದಿದಕ್ಕೆ 'ಸಾರ್ ಅವ್ನು ನನ್ನ ದೋಸ್ತ್, ಪಾಪ ಅವ್ನು ಕ್ಯಾಮೆರಾದರ್ನ ಕರ್ಸಿಲ್ಲ ಅದ್ಕೆ ನಂಗೆ ಹೇಳ್ದಾ' ಅಂತ ಕ್ಯಾಮೆರಾದವ್ನು ಹೇಳ್ತಿದ್ದ.

ಪಕ್ಕದಲ್ಲಿರೋರು ಜಗ್ಳ ಬಿಡ್ಸೋಕೆ ಭಾರೀ ಪ್ರಯತ್ನ ಮಾಡ್ತಿದ್ರು, ಮದ್ವೆ ಗಂಡು ತುಂಬಾ ಬಲಶಾಲಿ ಇದ್ದಿದ್ರಿಂದ ಇವರ ಕೈಲಿ ಆಗ್ತಿರ್ಲಿಲ್ಲ, ಅಂತೂ ಹೆಂಗೋ ತುಂಬಾ ಜನ ಸೇರಿ ಜಗ್ಳ ನಿಲ್ಸಿದ್ರು. ಮತ್ತೆ ಮಾಮೂಲಿನಂತೆ ಮದ್ವೆ ಕಾರ್ಯಕ್ರಮ ನಡೀತು.

ಈ ಕಥೆ ಮುಗಿಯೋದ್ರೊಳಗೆ ಇನ್ನೊಂದು ಮಂಟಪದಲ್ಲಿ ಏನೋ ಗಲಾಟೆ ಶುರುವಾಯ್ತು. ನಂಗೆ ಮಾಡೋಕೆ ಬೇರೆ ಕೆಲಸ ಇರ್ಲಿಲ್ವಲ್ಲ ಅದೇನು ನೋಡಣ ಅಂತ ಅಲ್ಲಿಗೆ ಹೋದೆ. ಹುಡುಗಿ ಅಪ್ಪ ಪೂಜಾರಿ ಎಲ್ಲಿ ಅಂತ ಕೂಗ್ತಿದ್ರು. ಸ್ವಲ್ಪ ಹೊತ್ತಾದ್ಮೇಲೆ ಪೂಜಾರಿ ಬಂದ್ರು.

ಪಾಪ ಆ ವಯ್ಯಂಗೆ ಅರ್ಜೆಂಟಾಗಿತ್ತು, ಹೋಗಿ ವಾಪಸ್ ಬರೋದ್ರೊಳಗೆ ಮಿಕ್ಕಿದ ಜೋಡಿಗಳು ಅವ್ರ್ಗಳ ಮಂಟಪದಲ್ಲಿ ಕೂತಿದ್ರು, ಇವ್ರಿಗೆ ಕನ್ಫ್ಯೂಶನ್ ಆಗಿ ಯಾವ್ದಕ್ಕೋ ಅದೇ ಮದ್ವೆ ಅಂತ ಹೋಗಿ ಕೂತಿದ್ದಾರೆ, ಅದನ್ನ ನೋಡಿದ ಒಬ್ರು ಈ ಮದ್ವೆ ಹುಡುಗಿ ಅಪ್ಪಂಗೆ ಹೇಳಿದ್ದಾರೆ, ಪೂಜಾರಿ ಬಂದಾದ್ಮೇಲೆ ಮುಹೂರ್ತದ ಟೈಮ್ ಮುಗೀತಿದೆ ನೀವು ನೋಡಿದ್ರೆ ಅಂತ ಏನೇನೋ ಕ್ಯಾಕರಿಸಿ ಉಗೀತಿದ್ರು ಆಮೇಲೆ ಎಲ್ಲ ಸಮಾಧಾನ ಮಾಡಿ ಕೂರ್ಸಿದ್ರು, ಮದ್ವೆ ಮುಂದುವರೆಯಿತು.

ಸ್ವಲ್ಪ ಹೊತ್ತಾದ್ಮೇಲೆ ಯಾರೋ ಊಟ ಅಂದ್ರು ನೋಡಿ, ಬೆಂಗಳೂರಿನಲ್ಲಿರೋ ಬೀದಿ ನಾಯಿಗಳೆಲ್ಲ ಸಣ್ಣ ಪಾಪುನ ಅಟ್ಟಿಸಿಕೊಂಡು ಹೋಗಿ ಕಿತ್ತು ತಿನ್ನೋ ಹಾಗೆ, ಸಿಗ್ನಲ್ ಸಿಕ್ಕ ಕೂಡಲೇ ಎಲ್ಲ ಗಾಡಿಗಳು ಕಿತ್ಕೊಂಡು ನುಗ್ಗೋ ಹಾಗೆ, ಖಾಲಿ ಬಿ,ಎಂ,ಟಿ, ಸಿ ಬಸ್ಸಿಗೆ ಜನ ತೂರಿ ಕೊಳ್ಳೋ ಹಾಗೆ, ಜನಗಳೆಲ್ಲ ಊಟದ ಹಾಲಿಗೆ ನುಗ್ತಿದ್ರು ಊಟ ಸೆಳೆಯೋಕೆ. ನಾನು ಇನ್ನು ಕೂತರೆ ಸಂಕಷ್ಟಿನೇ ಅಂದ್ಕೊಂಡು ನುಗ್ಗಿದೆ, ಹಾಸ್ಟೆಲ್ನಲ್ಲಿದ್ದ ಅನುಭವ ಆಗ ನೆರವಿಗೆ ಬಂತು ಅಂತೂ ಒಂದು ಸೀಟ್ ಸಿಕ್ತು.

ನನ್ನ ಸೀಟ್ ಹಿಂದೆ ತಿರುಗಿ ನೋಡಿದ್ರೆ ಮುಂದಿನ ಹಂತಿನ ಊಟಕ್ಕೆ ಆಗ್ಲೇ ಬಂದು ನಿಂತಿದ್ರು. ಯಾಕಪ್ಪ ಬೇಕು ಈ ಕರ್ಮ, ಸುಮ್ನೆ ಊರಲ್ಲಿದ್ದಿದ್ದರೆ ನೆಮ್ಮದಿಯಿಂದ ಊಟ ಮಾಡ್ಬಹುದಿತ್ತು ಅಂತ ವಿಧಿ ಇಲ್ಲದೆ ಬಾಳೆ ಎಲೆಗೆ ಕೈ ಹಾಕಿದೆ, ಹಾಗೆ ತಿನ್ನೋವಾಗ ಪಕ್ಕದವನನ್ನ ನೋಡಿದೆ, ಆಸಾಮಿ ಗಬ ಗಬ ಅಂತ ತಿನ್ತವ್ನೆ.

ಇದ್ಯಾಕ್ರೀ ಹಿಂಗೆ ತಿನ್ತಿದೀರಾ? ಊರಿಗೆ ಹೋಗೋಕೆ ಬಸ್ ಸಿಗಲ್ವ?.

ಇಲ್ರೀ, ಇನ್ನ ೨ ಮದ್ವೆ ಊಟ ಮಾಡ್ಬೇಕು.

ಆಂ!!!!!!!!!

ಈಗಾಗ್ಲೇ ತುಂಬಾ ಐಟಂ ಬಂದು ಹೋಗಿದೆ, ಆಸಾಮಿ ಕಿತ್ಕಂಡು (ಸಕತ್ತಾಗಿ) ತಿಂತಿದ್ದ, ಇನ್ನ ೨ ಮದ್ವೆ ಅನ್ತಾನಲಪ್ಪ, ಅದೇನು ಸರ್ಯಾಗಿ ವಿಚಾರ್ಸಣ ಅಂದ್ಕಂಡು....

ಇನ್ಯಾವ ಕಡೆ ಹೋಗ್ಬೇಕ್ರೀ?

ಎಲ್ಲೂ ಇಲ್ರೀ, ಇದೇ ಕಲ್ಯಾಣ ಮಂಟಪದಲ್ಲೇ, ನಮ್ಗೆ ಪರಿಚಯ ಇರೋರ ೩ ಮದ್ವೆ ಇದೆ ಅದ್ಕೆ.

ಅಲ್ರೀ ೧ ಮಂಟಪಕ್ಕೆ ಬಂದಿದೀರಾ ಅಂದ್ರೆ ೧ ಸಲ ಊಟ ಮಾಡಿದ್ರೆ ಆಯ್ತಪ್ಪ.

ಹಂಗೆ ಹೆಂಗಾಗತ್ತೆ, ಅವರೆಲ್ಲರೂ ನಮ್ಮನೆ ಮದ್ವೆಗೆ ಬಂದಿಲ್ವಾ, ಜೊತೆಗೆ ಎಲ್ರೂ ಸಿಕ್ಕಿ ಊಟ ಮಾಡ್ಕೊಂಡು ಹೋಗಿ ಅಂದಿದ್ದಾರೆ, ಮಾಡ್ಲಿಲ್ಲ ಅಂದ್ರೆ ಅವ್ರಿಗೆ ಬೇಜಾರಾಗತ್ತಲ್ವ?

ನನಗಿನ್ನೇನೂ ಹೇಳಲು ತೋಚದೆ ಹೌದು ಹೌದು ಅಂತ ತಲೆ ಅಲ್ಲಾಡಿಸಿ ಊಟ ಮುಗಿಸಿ ಎದ್ದೆ.

ಮಂಟಪದ ಹತ್ತಿರ ಹೋಗಿ ಕೂತೆ, ಅರ್ಧ ಗಂಟೆ ಆದ್ಮೇಲೆ ನಮ್ಮಮ್ಮ ಮೊದ್ಲು ಸಿಕ್ಕಿದ ಸಂಬಂಧಿಕರ ಜೊತೆ ಬಂದ್ರು. ಅವ್ರ್ಯಾಕೋ ನನ್ನನ್ನ ಗುರಾಯ್ಸಿದ ಹಾಗೆ ಕಾಣ್ಸ್ತಿತ್ತು.

ಹೊರಡಣ್ವ ಅಮ್ಮ?

ಹೂಂ ಹೊರಡಣ, ಅದಿರ್ಲಿ, ಅಲ್ಲ ಕಣೋ ಇವ್ರೇನೋ ಯಾವ ಮದ್ವೆ ತೋರ್ಸು ಅಂತ ಕೇಳಿದ್ರೆ ಬೇರೆ ಯಾವ್ದೋ ತೋರ್ಸಿದ್ಯಂತಲ್ಲೋ, ಪಾಪ ಅಲ್ಲೂ ಮುಯ್ಯಿ ಕೊಟ್ಟು ಬಂದ್ರು ಆಮೇಲೆ ನಾನು ಹೇಳಿದ್ಮೇಲೆ ಮತ್ತೆ ಕೊಟ್ಟು ಬಂದಿದ್ದಾರೆ.

ನೋಡಮ್ಮ, ಮದ್ವೆಗೆ ಬರಲ್ಲ ಅಂದೆ ಆದ್ರೂ ನೀನೇ ಬಲವಂತ ಮಾಡಿ ಕರ್ಕೊಂಡು ಬಂದೆ, ಈಗ ನೋಡು ಹಿಂಗೆ.

ಹೋಗ್ಲಿ ಬಿಡು ಈಗೆಲ್ಲ ಸರಿ ಆಯ್ತಲ್ಲ, ಮುಂದೆ ಯಾವ್ದೇ ಸಾಮೂಹಿಕ ಮದ್ವೆ ಇದ್ರೂ ನಿನ್ನನ್ನ ಕರೆಯಲ್ಲ.

ಹಂಗೆ ಬಾ ದಾರಿಗೆ ಮತ್ತೆ ಅಂದು ಊರಿನ ಕಡೆ ಹೋಗುವ ಬಸ್ಸಿನ ಹಾದಿ ಹಿಡಿದೆವು

ಚುರ್ಮುರಿ ೪

೧೦) 'ಗ್ಲೋಬಲ್ ವಾರ್ಮಿಂಗ್ ಅಂದ್ರೇನು ಗೊತ್ತಮ್ಮ??' ಎಂದು ಕೇಳಿದ ಮಗನಿಗೆ 'ನನಗೆ ಅದೆಲ್ಲ ಗೊತ್ತಿಲ್ಲ, ನಿಮ್ಮ ಇಂಗ್ಲಿಷ್ ಅರ್ಥ ಆಗಲ್ಲ, ಅದೆಲ್ಲ ಇರ್ಲಿ ಅದೇನು ಅಷ್ಟೊಂದು ಬೆಳಕು ಇದ್ರೂ ಲೈಟ್ ಹಾಕ್ಕೊಂಡು ಪೇಪರ್ ಓದ್ತಿದೀಯ, ಮೊದ್ಲು ಆರಿಸು' ಎಂದಳು ಅವಳಮ್ಮ.

೧೧) ಅವಳು ಅರ್ಧ ಗಂಟೆ ಮೇಕಪ್ ಮಾಡಿಕೊಂಡಾದ ಮೇಲೆ ಬುರ್ಖಾ ಹಾಕಿಕೊಂಡು ಕೆಲಸಕ್ಕೆ ಹೊರಟಳು.

೧೨) ತನ್ನ ಜೀವನವೇ ಛಿದ್ರ ಛಿದ್ರವಾಗಿರುವಾಗ ತನ್ನ ಮನೆಯಲ್ಲಿರುವ ಒಡೆದ ಕನ್ನಡಿಯಿಂದ ಮುಖವನ್ನು ನೋಡದೆ ಇರುವುದರಿಂದ ಆಗುವ ಲಾಭವಾದರೂ ಏನೆಂದು ಅವನು ಹೊಸ ಕನ್ನಡಿಯನ್ನು ತೆಗೆದುಕೊಳ್ಳಲಿಲ್ಲ.

Saturday, December 4, 2010

ಸಮ್ಮಿಲನದ ಸವಿನೆನಪು

೩ ವಾರ ಬೆಂಗಳೂರಿನಲ್ಲಿಲ್ಲದ ಕಾರಣ, ಮೊನ್ನೆ ಶನಿವಾರ ಬಟ್ಟೆಗಳ ರಾಶಿಯೇ ನನ್ನ ಮುಂದಿತ್ತು, ರಾತ್ರಿಗೆ ಎಲ್ಲ ಬಟ್ಟೆ ಮುಗಿದು ಸುಸ್ತಾಗಿ ಹಾಸಿಗೆ ಮೇಲೆ ಬಿದ್ದೆ, ಅಲಾರಂ ಹೊಡೆದುಕೊಂಡಾಗ ಭಾನುವಾರ ಬೆಳಗ್ಗೆ ೭.೩೦, ಕಣ್ತುಂಬಾ ನಿದ್ರೆ, ಹಾಸಿಗೆಯಲ್ಲೇ ಹೊರಳಾಡಿದೆ ಹೋಗಲೋ ಬೇಡವೋ ಅಂತ, ಈ ಚಳಿಯಲ್ಲಿ ಇಂಥ ನಿದ್ರೆ ಹೇಗಪ್ಪ ಬಿಟ್ಟು ಹೋಗೋದು ಅಂದ್ಕೊಂಡು ಸ್ವಲ್ಪ ಹೊತ್ತು ಹೊರಳಾಡಿದೆ.

ಛೆ ಇಲ್ಲೇ ಇದ್ದರೂ ಹೋಗಲಿಲ್ಲ ಅಂದ್ರೆ, ಅಲ್ಲದೆ ಸಂಪದದಲ್ಲಿ ಬರುತ್ತೇನೆಂದು ಬೇರೆ ಹೇಳಿದ್ದೇನೆ, ಜೊತೆಗೆ ಇನ್ನೂ ಹುಡುಗ, ಅಲ್ಲದೆ ಅಷ್ಟೊಂದು ಆಸಕ್ತಿಯಿಂದ ಜಾಗ ಹುಡುಕಿ ಕಾರ್ಯಕ್ರಮದ ದಿನ, ಸಮಯ ತಿಳಿಸಿದ್ದಾರೆ, ಕೆಲವರು ಬರುತ್ತೇವೆ ಅಂದಿದ್ದಾರೆ, ಹೋಗದಿದ್ದರೆ ಕೊಟ್ಟ ಮಾತಿಗೆ ದ್ರೋಹ, ಏನನ್ನೋ ಕಳೆದುಕೊಂಡ ಭಾವ.

ಅಂತೂ ಎದ್ದೆ, ಅವಲಕ್ಕಿ ಮಾಡಿ ತಿಂಡಿ ತಿಂದು ನವರಂಗ್ ಕಡೆ ಹೆಜ್ಜೆ ಹಾಕಿದೆ, ಬಸ್ ಹತ್ತಿ ಕುಳಿತೆ. ಟ್ರಾಫಿಕ್ಕಿಲ್ಲ ಜೊತೆಗೆ ಸುಂದರ ವಾತಾವರಣ. ಮೆಜೆಸ್ಟಿಕ್ನಲ್ಲಿ ಕೇವಲ 15 ನಿಮಿಷದಲ್ಲಿದ್ದೆ, ಅಲ್ಲಿಂದ ೩೩೫ ಬಸ್ ಹತ್ತಿದೆ, ೨೦ ನಿಮಿಷದಲ್ಲಿ ದೊಮ್ಮಲೂರಿನ ವಾಟರ್ ಟ್ಯಾಂಕ್ಗೆ ಬಂದು ಬಿದ್ದಿದ್ದೆ.


ಅಲ್ಲಿಂದ ಶುರುವಾಯಿತು ಜಾಗ ಹುಡುಕುವ ಕಥೆ, ೨೦ ನಿಮಿಷ ಇಡೀ ದೊಮ್ಮಲೂರಿನ ೨ನೇ ಹಂತವನ್ನು ಸುತ್ತು ಹಾಕಿದ್ದೆ, ಆಟೋದವನನ್ನ, ಅಂಗಡಿಯವನನ್ನ, ರಸ್ತೆಯಲ್ಲಿ ಹೋಗುವವನನ್ನ, ರಸ್ತೆ ಗುಡಿಸುವವರನ್ನ, ಉಹೂಂ ಯಾರಿಗೂ ಗೊತ್ತಿಲ್ಲ. ಆ ಚಳಿಯಲ್ಲೂ ಬೆವರಿ ಹೋಗಿದ್ದೆ, ವಿಳಾಸ ಹುಡುಕಿ ಹುಡುಕಿ ಸುಸ್ತಾಗಿ ಹೋದ ನಾನು ಒಂದು ಹಂತಕ್ಕೆ ವಾಪಸ್ ಹೋಗುವ ಅಂತ ಅಂದ್ಕೊಂಡೆ, ಇಲ್ಲಿವರೆಗೂ ಬಂದು ಯಾಕೆ ಸೋಲಬೇಕು ಅಂತ ಮತ್ತೆ ಹುಡುಕಲು ಪ್ರಯತ್ನಿಸಿದೆ.


ಕಡೆಗೂ ಯಾರೋ ಒಬ್ಬರು ದೊಮ್ಮಲೂರಿನ ಕ್ಲಬ್ ಹತ್ತಿರ ಇದೆ ಹೋಗಿ ಅಂದರು, ಅಲ್ಲಿ ಹೋದಾಗ ಕಡೆಗೂ ಸಿಕ್ತು. ಹರೀಶ್ ಮೊದಲಿರುತ್ತಾರೆ ಅಂದುಕೊಂಡಿದ್ರೆ ಮಿಕ್ಕಿದವರನ್ನು ಸ್ವಾಗತಿಸುತ್ತಾರೆ ಅಂದ್ರೆ ಗೋಪಿಯವ್ರೆ ಹರೀಶ್ರನ್ನು ಸ್ವಾಗತಿಸಿದ್ದರು.


ನಾನು ಒಳಗೆ ಹೋದಾಗ ಪರಿಚಯವಾಗಿದ್ದು ಮಂಜು, ನನ್ನನ್ನು ಹೆಗಡೆಯವರಿಗೆ ತೋರಿಸಿ ಚಿಕ್ಕು ನೋಡಿ ಅಂದ್ರು, ಯಾವ ಚಿಕ್ಕು ಅಂತ ನೋಡಿದ ಹೆಗಡೆಯವರು ಹೈಸ್ಕೂಲ್ ಮಾಸ್ಟರ್ ತರ ಕಂಡ್ರು. ಹಾಗೆ ಗೋಪಿನಾಥ್ ಮತ್ತವರ ಕುಟುಂಬ, ಮಂಜು ಕುಟುಂಬ, ಹರೀಶ್, ತೇಜಸ್ವಿ, ನಾಗರಾಜ್, ಕವಿ ನಾಗರಾಜರು, ಶ್ಯಾಮಲಾ ಜನಾರ್ಧನನ್, ಅ೦ಜನ್ ಕುಮಾರ್,ರೂಪ ರಾವ್ ಎಲ್ಲರ ಪರಿಚಯವಾದ ಮೇಲೆ ಕಾರ್ಯಕ್ರಮ ಶುರುವಾಯ್ತು.


ಹೊರಗೆ ಹಕ್ಕಿಗಳ ಕಲರವ, ಒಳಗೆ ಸಂಪದಿಗರ ಕಲರವ. ಶ್ರೀಮತಿ ಗೋಪಿನಾಥ್ರವರ ಪ್ರಾರ್ಥನೆಯಿಂದ ಶುರುವಾದ ಕಾರ್ಯಕ್ರಮ ಹರೀಶ್ರವರ ನಿರೂಪಣೆಯೊಂದಿಗೆ ಮುಂದುವರೆಯಿತು, ಕಾರ್ಯಕ್ರಮಕ್ಕೆ ಚೆನ್ನಾಗಿಯೇ ತಯಾರಾಗಿ ಬಂದಿದ್ದ ಹರೀಶ್ರವರು ಪ್ರತಿಯೊಬ್ಬರನ್ನೂ ಚೆನ್ನಾಗಿ ಪರಿಚಯಿಸಿದರು. ೩ ಗಂಟೆಗಳ ಕಾಲ ಯಾವುದೇ ಅಡೆ ತಡೆಯಿಲ್ಲದೆ ಕಾವ್ಯ, ಕಥೆ, ಸಣ್ಣ ಕಥೆ, ವಿಮರ್ಶೆಗಳಲ್ಲಿ ಮುಂದುವರೆಯಿತು. ತೇಜಸ್ವಿಯವರ ಕವನಗಳು, ಮಂಜುರವರ ಅಪಘಾತದ ಕಥೆ ಮತ್ತೆ ಅವರು ಹೇಳುವ ಪರಿ ಮತ್ತು ಪದಗಳ ಸಂಯೋಜನೆ, ಗೋಪಿಯವರ ಅನುಭವ, ಆಸುಮನದ ಸಾಲುಗಳು, ಶ್ಯಾಮಲಾ ಜನಾರ್ಧನನ್ರವವರ ವಿಮರ್ಶೆ, ರೂಪಾರಾವ್ರವರ ಸಣ್ಣ ಕಥೆ, ಕವಿ ನಾಗರಾಜರ ಹಿತನುಡಿಗಳು, ಶ್ರೀಮತಿ ಶಾಂತೀ ಗೋಪಿನಾಥವರ ಪ್ರಾರ್ಥನೆ, ಅಂಜನ್ ಕುಮಾರರ ಅನುಭವ, ಆತ್ಮೀಯರವರ ಸುಂದರ ಸಾಲುಗಳು. ೩ ಗಂಟೆ ಕೇವಲ ೩ ನಿಮಿಷಗಳಲ್ಲಿ ಮುಗಿದುಹೋದ ಅನುಭವ. ಆಮೇಲೆ ಸಣ್ಣ ವಿರಾಮ.


ಗೋಪಿನಾಥ್ ಮತ್ತವರ ಕುಟುಂಬ, ಮಂಜು ಕುಟುಂಬ ಜೊತೆಗೆ ಶ್ಯಾಮಲಾ ಜನಾರ್ಧನನ್ರವರು ಸೇರಿ ಮಾಡಿದ ಕೋಲ್ಡ್ ಕಾಫಿ ಚೆನ್ನಾಗಿತ್ತು.
ಆಮೇಲೆ ಕೊನೆಯ ಹಂತ ವಂದನಾರ್ಪಣೆ. ಎಲ್ಲ ಮುಗಿದಾಗ ೨ ಗಂಟೆ.


ಅಂತೂ ಭಾನುವಾರವನ್ನು ಸಾರ್ಥಕಪಡಿಸಿಕೊಂಡ ಭಾವ ಬಸ್ಸಿನಲ್ಲಿ ಹತ್ತಿ ಕುಳಿತಾಗ ನನ್ನಲ್ಲಿ.

ಎಲ್ಲ ಮಂಜುನಾಥನ ಮಹಿಮೆ

ಹೊಸ ಪ್ರೊಜೆಕ್ಟ್ , ಮುಗಿಸುವ ಅವಧಿ ಬೇರೆ ಕಡಿಮೆ ಇದ್ದುದರಿಂದ ಹಗಲು-ರಾತ್ರಿಯೆನ್ನದೆ ಆ ವಾರ ಕೆಲಸ ಮಾಡಿದ್ದೆ. ಶುಕ್ರವಾರದ ದಿನ ಸ್ವಲ್ಪ ದಣಿವನ್ನು ನಿವಾರಿಸಿಕೊಳ್ಳಲು ಬೇಗ ಬಂದು ಹಾಸಿಗೆ ಮೇಲೆ ಬಿದ್ದೆ.

ನಮ್ಮ ಗುಂಪಿನಲ್ಲಿರೋ ಹುಡುಗರಲ್ಲಿ ಒಂದಷ್ಟು ಜನದ್ದು ಆಗ್ಲೇ ಮದುವೆ ಆಗಿದೆ. ಇನ್ನೊಂದು ಸ್ವಲ್ಪ ಹುಡುಗರ ಲಗ್ನ ಆಗಿದೆ, ಮತ್ತೆ ಕೆಲವರು ಇನ್ನೂ ಹುಡುಗಿಯರನ್ನ ಹುಡುಕ್ತಿದ್ದಾರೆ.

ಕೊನೆ ಕೆಟಗರಿಯಲ್ಲಿ ನಾನೂ ಒಬ್ಬ.

ನನ್ನ ಆಫೀಸಲ್ಲೂ ಸಹ ನನ್ನ ಜೊತೆಗೆ ಕೆಲಸಕ್ಕೆ ಸೇರಿದ ಬಹುತೇಕ ಮಂದಿ ಮದುವೆ ಆಗಿ ಇನ್ನು ಸ್ವಲ್ಪ ದಿನಗಳಲ್ಲಿ ಮತ್ತೊಂದು ಗುಡ್ ನ್ಯೂಸ್ ಕೊಡೊ ಹಂತದಲ್ಲಿದ್ದಾರೆ.

ನಾನೂ ಸಹ ಊರಿಗೆ ಹೋದಾಗಲೆಲ್ಲ 'ಮದುವೆ ಗಿದುವೆ ಮಾಡೋ ಏನಾದರೂ ಯೋಚನೆ ಇದೆಯಾ ??' ಅಂತ ಕೇಳಿದ್ರೆ....

'ಕಾಫೀ ತಗಬರ್ರೋ ಅಂತ ನಮ್ಮಪ್ಪ ಪೇಪರ್ ಒಳಗೆ ಮುಳುಗಿಬಿಡ್ತಾರೆ'

'ಪಕ್ಕದ್ಮನೆ ರಾಜುಗೆ ೩೪ ವರ್ಷ, ಅದ್ಯಾವಾಗ ಮದುವೆ ಮಾಡ್ತಾರೋ ಏನೋ' ಅಂದು ಮಿಕ್ಸಿ ಆನ್ ಮಾಡ್ತಾರೆ.


ಈ ಸಲ ಏನಾದರಾಗಲಿ ನಾನು ಹೇಳಿದ್ದು ಕೇಳದೆ ಹೋದರೂ ನನ್ನ ಬಾಡಿ ಕಂಡಿಶನ್ ನೋಡಿ ತಿಳಿದುಕೊಳ್ಳಲಿ ಅಂತ ಕಟಿಂಗ್ ಮಾಡಿಸದೆ ಕೂದಲು ಹಾಗೇ ಬಿಟ್ಟೆ, ಶೇವಿಂಗ್ ಸಹ ಮಾಡಿಕೊಳ್ಳಲಿಲ್ಲ. ಈ ಪರಿಸ್ಥಿತಿಯಲ್ಲಿ ಊರಿಗೆ ಹೊರಟೆ.

ನಮ್ಮ ಪಕ್ಕದ ಊರಲ್ಲಿ ಹಿಪ್ಪಿ ಮಂಜ ಅಂತಿದ್ದ, ಅವ್ನು ಕೂದಲು ತುಂಬಾ ಬಿಟ್ಟಿದ್ದರಿಂದ ಜನ ಹಾಗೇ ಕರೆತಿದ್ರು, ನನ್ನನ್ನ ನೋಡಿದ್ರೆ ನಮ್ಮೂರಿನವರು ಹಿಪ್ಪಿ ಚಿಕ್ಕ ಅಂತಿದ್ರೇನೋ.

ಬಸ್ಸಿಂದಿಳಿದು ಮನೆಗೆ ಹೋದ ತಕ್ಷಣ ನನ್ನನ್ನು ನೋಡಿ 'ಯಾಕೆ ಮಗಾ ಹಿಂಗಾಗಿದೀಯಾ, ಮದುವೆ ಮಾಡಿಲ್ಲ ಅಂತ ಕೊರಗಿ ಹಿಂಗಾಗಿದೀಯಾ?, ಆಯ್ತು ಹುಡುಗಿ ಹುಡುಕಿ ಮದುವೆ ಮಾಡೋಣ ತಗೋ' ಹೇಳ್ತಾರೇನೋ

ಅಂತ ಅಂದ್ಕೊಂಡು ಖುಷಿಯಾಗಿ ಮನೆ ಕಡೆ ಹೆಜ್ಜೆ ಹಾಕಿದೆ.

ಹಾಗೇ ನಡೆದುಕೊಂಡು ಹೋಗುವಾಗ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಂಜ
'ಗೌಡ್ರೆ, ಚೆನ್ನಾಗಿದೀರ? ಈಗ ಬಂದ್ರಾ? ಯಾಕೆ ಹಿಂಗೆ ಸೊರಗಿ ಹೋಗಿದ್ದೀರಾ? ಸರ್ಯಾಗಿ ಊಟ ಹಾಕಲ್ವ ಅಲ್ಲಿ?' ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ.

'ಹಂಗೇನಿಲ್ಲ, ಈಗ ಬಂದೆ, ಅದೆಲ್ಲ ಇರ್ಲಿ ಏನು ಕೆಲಸ' ಅಂದೆ.

'ಗೊಬ್ರ ಹಾಕ್ತಿದೀವಿ'

'ಸರಿ, ಕೆಲಸ ಮಾಡಿ' ಅಂತ ಮನೆ ಕಡೆ ನಡೆದೆ.


ಮನೆ ಹತ್ತಿರ ಹೋಗುತ್ತಿದ್ದಂತೆ ಸಾಮಾನ್ಯವಾಗಿ ಬಾಲ ಅಲ್ಲಾಡಿಸಿಕೊಂಡು ಸೊಂಟ ಕುಣಿಸಿಕೊಂಡು ಸ್ವಾಗತಿಸುತ್ತಿದ್ದ ಮೋತಿ ನನ್ನನ್ನು ನೋಡಿ ಒಂದೇ ಸಮನೆ ಬೊಗಳುವುದಕ್ಕೆ ಶುರು ಮಾಡ್ತು (ನನ್ನ ಗುರುತು ಗೊತ್ತಾಗ್ಲಿಲ್ಲ ಅಂತ ಕಾಣ್ಸತ್ತೆ).

ಛೆ ಎಂಥಾ ಸುಸ್ವಾಗತ ಮನೆ ಮಗನಿಗೆ :(

ನಾಯಿ ಬೊಗಳುವ ಶಬ್ಧಕ್ಕೆ ಹೊರಬಂದ ಅಮ್ಮ

'ಯಾಕೆ ಲೇಟ್, ಟ್ರೈನ್ ಲೇಟ್ ಬಂತಾ?'

'ಹೂನಮ್ಮ'

'ಕೈ ಕಾಲು ಮುಖ ತೊಳ್ಕೋ, ಕಾಫೀ ತರ್ತೀನಿ'

ಕಾಫೀ ತಂದಾದ್ಮೇಲೆ 'ಯಾಕೋ, ಕಟಿಂಗ್ ಶೇವಿಂಗ್ ಏನೂ ಮಾಡ್ಕೊಂಡಿಲ್ಲ. ತುಂಬಾ ಕೆಲಸ ಅಂತ ಕಾಣತ್ತೆ, ಪಾಪ. ಅದೇನು ಸಾಪ್ಟೆರೋ ಏನೋ, ಅದ್ಯಾಕಂಗೆ ಕೆಲಸ ಕೊಡ್ತಾರೋ, ಶನಿವಾರ ಭಾನುವಾರನೂ ಕೆಲಸ ಮಾಡ್ಸಿದ್ರೆ ಹೆಂಗೆ. ಒಂದಿನ ರಜೆ ಹಾಕಾದ್ರೂ ಹೋಗಿ ಕಟಿಂಗ್ ಮಾಡ್ಸ್ಕಂಡು ಬರ್ಬಾರ್ದೆ?'

ನನಗೆ ರಜೆಗೆನು ಕೊರತೆ, ಈಗಾಗ್ಲೇ ೨೮ ರಜೆ ಇನ್ನೂ ಬಾಕಿ ಇದೆ, ಜೊತೆಗೆ ಕಾಂಫ್-ಆಫ್ಗಳು. ಅಲ್ದಲೇ ಪ್ರತಿ ತಿಂಗಳೂ ೧.೭೫ ರಜೆ.


ಸಂಜೆಗೆ ನಮ್ಮಪ್ಪ ಕೆಲಸ ಮುಗಿಸಿಕೊಂಡು ಮನೆಗೆ ಬಂದ್ರು.

'ರೀ ಅವನನ್ನು ನೋಡಿದ್ರಾ?' ಅಮ್ಮ ಅಪ್ಪನನ್ನು ಕೇಳಿದ್ರು.

ಅಬ್ಬ, ಈಗಲಾದರೂ ವಿಷಯಕ್ಕೆ ಬರಬಹುದು ಅಂದ್ಕೊಂಡು ಹಾಲ್ನಲ್ಲಿ ಪೇಪರ್ ಓದ್ತಿದ್ದವನು ಇವರ ಮಾತು ಕೇಳೋದಕ್ಕೆ ಕಿವಿ ಅಗಲಿಸಿಕೊಂಡೆ.

'ಯಾಕೆ, ಏನಾಯ್ತು?'

'ಕಂಪನಿಯಲ್ಲಿ ತುಂಬಾ ಕೆಲಸ ಅಂತೆ, ಕಟಿಂಗ್ ಶೇವಿಂಗ್ ಏನೂ ಮಾಡಿಲ್ಲ. ಮೊದಲು ಹೋಗಿ ಅಲ್ದೂರಲ್ಲಿ ಕಟಿಂಗ್ ಮಾಡಿಸಿಕೊಂಡು ಬನ್ನಿ'

'ನಮ್ಮವೇ ಆಫೀಸ್, ತೋಟ-ಗದ್ದೆ, ಆಳು-ಕಾಲು ಅಂತ ಸಾವಿರಾರು ಹಲ್ಲoಡೆ ಇರ್ತವೆ, ಇವಕ್ಕೆ ಅವ್ರ ಕೆಲಸ ಮಾಡ್ಕೊಳ್ಳೋದಕ್ಕೆ ಕಷ್ಟ'

'ಕಾಫೀ ತರದಿಲ್ಲಿ' ಅಂತ ಕಾಫೀ ತರಿಸಿ ಕುಡಿದು 'ನಡಿಯೋ' ಅಂದು ಕಾರನ್ನು ಅಲ್ದೂರಿಗೆ ತಿರುಗಿಸಿದರು.


ನಮ್ಮಜ್ಜನಿಗೆ ಕಟಿಂಗ್ ಮಾಡ್ತಿದ್ದವರ ಹತ್ತಿರ (ಸಣ್ಣವನಿದ್ದಾಗ ಅಜ್ಜ ಆದ್ಮೇಲೆ ನನ್ನ ಕಟಿಂಗ್ ಸರದಿ ಇರ್ತಿತ್ತು) ಕರೆದುಕೊಂಡು ಹೋದರು ನಮ್ಮಪ್ಪ.

ಆ ವಯ್ಯಂಗೆ ಆಗ್ಲೇ ೫೦ ವರ್ಷ ಇತ್ತು, ಈಗ ಏನಿಲ್ಲ ಅಂದ್ರೂ ೬೫.

ಹೈಟೆಕ್ ಸಿಟಿಯ ಹೈಟೆಕ್ ಕಟಿಂಗ್ ಸಲೂನಿನಲ್ಲಿ ಕಟಿಂಗ್ ಮಾಡಿಸಿಕೊಳ್ಳುವ ಅವಕಾಶವಿದ್ದರೂ ವಿಧಿ ನನ್ನನ್ನ ಈ ಸಣ್ಣ ಊರಲ್ಲಿ ಈ ಅಜ್ಜನ ಬಳಿಗೆ ಕರೆದುಕೊಂಡು ಬಂದಿತ್ತು (ವಿಧಿ ಅನ್ನೋದಕ್ಕಿಂತ ನಾ ಆಡಿದ ಆಟವೇ ನನಗೆ ತಿರುಗುಬಾಣವಾದಂತಹ ಪರಿಸ್ಥಿತಿ)

ಕಟಿಂಗ್ ಮಾಡೋ ಛೇರ್ ಮೇಲೆ ಹತ್ತಿದ ತಕ್ಷಣ ಲರಕ್ ಅಂತ ಶಬ್ದ ಬಂತು, ಸ್ವಲ್ಪ ಹೊತ್ತಿಗೆ ಶವದ ಮೇಲೆ ಹಾಕೋ ಬಿಳಿ ಬಟ್ಟೆಯಂತಹ ವಸ್ತ್ರ ನನ್ನ ಮೈಯನ್ನಾವರಿಸಿತು .

ದೊಡ್ಡ ಕನ್ನಡಕ ಹಾಕಿಕೊಂಡ ಅಜ್ಜನ ಕೈಲಿದ್ದ ಕತ್ತರಿ ನಡುಗುತ್ತಿತ್ತು (ವಯಸ್ಸಿನ ಪರಿಣಾಮ). ಅಜ್ಜ ಒಂದೊಂದೇ ಕೂದಲನ್ನು ನಡುಗುತ್ತಿದ್ದ ತನ್ನ ಕೈಯಿಂದ ಕತ್ತರಿಸುತ್ತಿದ್ದ.
ಸುಮಾರು ೩೦ ನಿಮಿಷ ಆದ್ಮೇಲೆ ಅಜ್ಜ 'ಕಟಿಂಗ್ ಆಯ್ತು ಶೇವಿಂಗ್ ಮಾಡ್ಲಾ' ಅಂದ್ರು.

ನಾನು ನನ್ನ ತಲೆಯನ್ನು ಕನ್ನಡಿಯಲ್ಲಿ ನೋಡಿದೆ, ಕೈಯಿಂದ ಕೂದಲುಗಳನ್ನು ಮುಟ್ಟಿದೆ, ಬಹುಷ ಇಲಿಗೆ ಬಿಟ್ಟಿದ್ರೂ ನನ್ನ ತಲೆಯನ್ನು ನೀಟಾಗಿ ಹೆರೆಯುತ್ತಿತ್ತೇನೋ :(

ನನ್ನ ತಲೆಯನ್ನು ನೋಡಿದ್ರೆ ಹಳ್ಳಿಯ ಟಾರ್ ರೋಡ್ ನೆನಪಾಗುವ ಹಾಗಿತ್ತು.

ನಮ್ಮಪ್ಪನಿಗೆ ತೋರಿಸಿ 'ನಿಮಗೆ ಕಟಿಂಗ್ ಮಾಡ್ಸೋಕೆ ಇನ್ಯಾವ ಪುಣ್ಯಾತ್ಮನೂ ಸಿಕ್ಲಿಲ್ಲ್ವ, ಈ ಲುಕ್ಕಲ್ಲಿ ನಾನೇನಾದ್ರೂ ಆಫೀಸಿಗೆ ಹೋದ್ರೆ ವಾಚ್ಮನ್ ಆಗೊಕೂ ಲಾಯಕ್ಕಿಲ್ಲ ಅಂತಾರೆ, ಮೊದ್ಲು ಚಿಕ್ಮಗಳೂರಲ್ಲಿರೋ ಯಾವ್ದಾದ್ರೂ ಒಳ್ಳೆ ಕಟಿಂಗ್ ಸಲೂನಿಗೆ ಕರೆದುಕೊಂಡು ಹೋಗಿ'

ನನ್ನ ಅವಸ್ಥೆ ನೋಡಲಾರದ ನಮ್ಮಪ್ಪ ಚಿಕ್ಕಮಗಳೂರಿನ ಹಾದಿಯಲ್ಲಿ ಸಾಗಿದರು.

ಮಾರ್ಗ ಮಧ್ಯದಲ್ಲಿ ನಮ್ಮ ಸಂಬಂದಿಕರೊಬ್ಬರು ಸಿಕ್ಕಿದ್ರು 'ಏನು ಗುಂಡಣ್ಣ, ಆರಾಮ? ಮಳೆಯೆಲ್ಲಾ ಚೆನ್ನಾಗಾಯ್ತ?, ಕಾಫೀ ಹೇಗಿದೆ? ಎಲ್ಲಿಗೆ ಹೊರಟ್ರಿ?'

ಎಲ್ಲವಕ್ಕೂ ಉತ್ತರಿಸಿದರು ನಮ್ಮಪ್ಪ (ನನ್ನ ಕಟಿಂಗ್ ವಿಷಯನೂ ಬಂತು). ಸ್ವಲ್ಪ ಹೊತ್ತು ಕಷ್ಟ ಸುಖ ಮಾತಾಡಿದ ಅವರು ನನ್ನ ಕಡೆಗೆ ತಿರುಗಿದರು. ಈ ಪುಣ್ಯಾತ್ಮನಾದ್ರೂ ಮದ್ವೆ ವಿಷ್ಯ ಎತ್ತುತ್ತಾರ ಅಂತ ಅವರ ಮುಖ ನೋಡಿದೆ.

'ಏನು ಚೇತನ್, ಯಾವಾಗ ಬಂದೆ ಬೆಂಗಳೂರಿಂದ? ಅಲ್ಲಪ್ಪ, ಅಲ್ಯಾವುದೂ ಕಟಿಂಗ್ ಶಾಪ್ ಸಿಗಲೇ ಇಲ್ವಾ, ಇಲ್ಲಿಗೆ ಬರಬೇಕಿತ್ತಾ. ಏನು ಹುಡುಗ್ರಪ್ಪ ನೀವು. ಸಾಫ್ಟ್ವೇರ್ ಇಂಜಿನಿಯರ್ಸ್ ಅಂತೀರಾ, ಇಷ್ಟೊಂದು ಕಂಜೂಸ್ ಇರಬಾರದು. ೫-೬ ಅಂಕಿ ಸಂಬಳ ತಗೋತೀರಾ, ೧೦-೨೦ ರೂ ಮುಖ ನೋಡ್ತೀರಾ?'

'ಅಂಕಲ್, ನೆನ್ನೆ ಬೆಂಗಳೂರಿಂದ ಬಂದು ನಮ್ಮೂರ ಬಸ್ಸಿಗೆ ಕಾಯ್ತಿದ್ದೆ. ನಿಮ್ಮ ಮಗಳು ಕಾಲೇಜ್ ಟೈಮಲ್ಲಿ ಯಾವ್ದೋ ಹುಡುಗನ ಜೊತೆ ಬೈಕಲ್ಲಿ ಹೋಗ್ತಿದ್ಲು, ಓದೋ ವಯಸ್ನಲ್ಲಿ ಹಿಂಗೆಲ್ಲ ಸುತ್ತಾಡ್ಬಾರ್ದು ಅಂಕಲ್, ಮೊದ್ಲೇ ೧ ವರ್ಷ ಫೈಲ್ ಬೇರೆ ಆಗಿದ್ದಾಳೆ. ಇದೆ ಊರಲ್ಲಿ ಬಾಳಿ ಬೆಳಗಬೇಕಾದವಳು ಯಾರ್ಯಾರ ಜೊತೆ ತಿರುಗಾಡ್ತಿದ್ರೆ ನಿಮಗೆ ಕೆಟ್ಟ ಹೆಸರು ಅಂಕಲ್ ' ನನ್ನ ಸಿಟ್ಟನ್ನು ಒಂದೇ ಸಮನೆ ಅವರ ಮೇಲೆ ಕಾರಿದೆ.

ನನ್ನ ಮುಖ ಸಹ ನೋಡದೆ 'ಗುಂಡಣ್ಣ ಬರ್ತೀನಿ' ಅಂದು ಅಲ್ಲಿಂದ ಕಾಲ್ಕಿತ್ತರು.

ನಮ್ಮಪ್ಪ ನನ್ನನ್ನ ಗುರಾಯ್ಸ್ತಿದ್ರು. 'ಅಪ್ಪ ಕಟಿಂಗ್ ಸಲೂನ್ ೮-೮.೩೦ಕ್ಕೆ ಮುಚ್ತಾರೆ, ಬೇಗ ನಡೀರಿ'.

ಪೇಟೆಗೆ ಹೋಗಿ ನೋಡಿದ್ರೆ ಎಲ್ಲಾ ಕಟಿಂಗ್ ಸಲೂನ್ ಕ್ಲೋಸ್', ವಿಧಿಯಿಲ್ಲದೆ ವಾಪಸ್ ಮನೆಗೆ ಬಂದ್ವಿ.


ಮಾರನೆ ದಿನ ಮಧ್ಯಾಹ್ನ ಬೆಂಗ್ಳೂರಿಗೆ ಹೊರಟೆ. 'ಹೋದ ತಕ್ಷಣ ಕಟಿಂಗ್ ಮಾಡಿಸಿಕೊಳ್ಳೋ' ಅಂತ ಅಮ್ಮ ನಾನು ಹೊರಡೋವಾಗ ಮತ್ತೆ ಹೇಳಿದ್ರು.

ಟ್ರೈನಲ್ಲಿ ಪ್ರಯಾಣ ಮಾಡೋವಾಗ ಸೆಖೆ ಅಂತ ಬಾಗಿಲ ಹತ್ತಿರ ಹೋಗಿ ನಿಂತಿದ್ದೆ, ಒಬ್ಬ ಭಿಕ್ಷುಕ ಬಂದ, ಪರ್ಸಿಂದ ೨ ರೂ ತೆಗೆದು ಕೊಡೋದಕ್ಕೆ ಹೋದೆ.

ಅವನು ನನ್ನನ್ನೇ ಮೇಲಿಂದ ಕೆಳಗೆ ನೋಡಿದ. ವಿಚಿತ್ರವಾದ ತಲೆಗೂದಲು, ಗಡ್ಡ, ಹರಿದ ಜೀನ್ಸ್ ಪ್ಯಾಂಟ್ ನೋಡಿ ಇವನ್ಯಾರೋ ನನ್ನ ಕೆಟಗರಿಯವನೇ ಅಂದ್ಕೊಂಡು ನನ್ನಿಂದ ದುಡ್ಡು ತೆಗೆದುಕೊಳ್ಳದೆ ಮುಂದೆ ಹೋದ (ಅಬ್ಬಬ್ಬ ಒಂದು ಮದುವೆ ಆಗ್ಬೇಕಂದ್ರೆ ಏನೆಲ್ಲಾ ಅವಮಾನ ಸಹಿಸಬೇಕಾಗತ್ತೆ ಅಂತ ಗೊತ್ತಾಗಿದ್ದು ಆಗ).

ಬೆಂಗ್ಳೂರು ತಲ್ಪೋಹೊತ್ತಿಗೆ ಲೇಟ್ ಆದದ್ದರಿಂದ ಬೆಳಗ್ಗೆ ಏಳುವುದು ತಡವಾಯಿತು, ಆಫೀಸಿಗೆ ಹೋಗಿ ಸಂಜೆ ವಾಪಸ್ ಬಂದಾದ್ಮೇಲೆ ಕಟಿಂಗ್ ಮಾಡಿಸಿಕಂಡ್ರಾಯ್ತು ಅಂತ ಆಫೀಸಿಗೆ ಹೊರಟೆ.

ಕೋರಮಂಗಲಕ್ಕೆ ಹೋಗೋ ೧೭೧ ಬಸ್ ತುಂಬಿ ತುಳುಕಾಡ್ತಿದ್ರೂ ನನ್ನ ಪಕ್ಕದಲ್ಲಿ ಯಾರೂ ಬಂದು ಕುಳಿತುಕೊಳ್ಳಲಿಲ್ಲ. ಬಹುಷ ಇಷ್ಟೆಲ್ಲಾ ಆಗಿದ್ರಲ್ಲಿ ಇದೊಂದೆ ನನಗೆ ಅನುಕೂಲಕರವಾದ ಪ್ರಸಂಗ :).


ಆಫೀಸಿನಲ್ಲಿ ನನ್ನ ಪಕ್ಕ ಕೂರೋ ಆಂಟಿ 'ಇವತ್ತೊಂದಿನ ಬೇರೆ ಡೆಸ್ಕಲ್ಲಿ ವರ್ಕ್ ಮಾಡ್ತೀನಿ' ಅಂತ ಶಿಫ್ಟ್ ಆಯ್ತು.

ಸ್ವಲ್ಪ ಹೊತ್ತಾದ ಮೇಲೆ ಮ್ಯಾನೇಜರ್ ಮೀಟಿಂಗ್ ಕರೆದ. ಬಹುಷ ಅಪ್ರೈಸಲ್ ಮೀಟಿಂಗ್ ಇರ್ಬೇಕು ಅಂದ್ಕೊಂಡು ಮನಸ್ನಲ್ಲೇ ಮಂಡಿಗೆತಿಂತಾ ಮೀಟಿಂಗ್ ರೂಮಿನತ್ತ ಹೆಜ್ಜೆ ಹಾಕಿದೆ.

ಅಲ್ಲಿ ಮ್ಯಾನೇಜರ್ 'ಚೇತನ್, ಆ ಮಾಡ್ಯೂಲ್ ನಿಮ್ಮ ಕೈಲಿ ಮಾಡೋಕಾಗ್ಲಿಲ್ಲ ಅಂದಿದ್ರೆ ಇನ್ನೊಬ್ರಿಗೆ ಅಸೈನ್ ಮಾಡ್ತಿದ್ದೆ, ನೀವು ಈ ರೀತಿ ತಲೆ ಕೆಡಿಸಿಕೊಳ್ತೀರಾ ಅಂತ ಗೊತ್ತಿರಲಿಲ್ಲ. ಸುಮ್ನೆ ಟೈಮ್ ಸಹ ವೇಸ್ಟ್ ನೋಡಿ. ಯು ನೋ? ಆಲ್ ದೀಸ್ ತಿಂಗ್ಸ್ ವಿಲ್ ಆಫೆಕ್ಟ್ ಯುವರ್ ಅಪ್ರೈಸಲ್, ಸ್ವಲ್ಪ ಕೆಲಸದ ಕಡೆ ಗಮನ ಕೊಡಿ'.

ಪಕ್ಕದಲ್ಲಿರೋ ಪ್ರೊಜೆಕ್ಟರ್ ತಗೊಂಡು ಅವನ ತಲೆಗೆ ಕುಕ್ಕೊವಷ್ಟು ಕೋಪ ಬಂತು. ಕೆಲಸ ಅಸೈನ್ ಮಾಡಿ ಇನ್ನು ಒಂದು ವಾರ ಆಗಿಲ್ಲ, ನನ್ನ ಗೆಟಪ್ ನೋಡಿ ಹಿಂಗೆ ಹೇಳಿದ್ನಲ್ಲ ಅಂತ ಸಿಟ್ಟು ಬಂತು.

'ಓಕೆ' ಅಂದು ಮೀಟಿಂಗ್ ಮುಗಿಸಿಕೊಂಡು ನನ್ನ ಡೆಸ್ಕ್ ಹತ್ತಿರ ಹೋದೆ.


ಸಂಜೆ ಡ್ಯೂಟಿ ಮುಗಿಸಿ ಕಟಿಂಗ್ ಸಲೂನಿಗೆ ಹೋದೆ. ಕಟಿಂಗ್ ಮಾಡೋನು ನನ್ನ ಕೂದಲನ್ನು ಒಂದ್ನಿಮಿಷ ನೋಡಿ 'ಸಾರ್, ನಿಮ್ಮ ಕೂದಲು ಕಟಿಂಗ್ ಮಾಡೋಕಾಗಲ್ಲ, ಇದಕ್ಕೊಂದೇ ಪರಿಹಾರ'

'ಏನದು'

'ಬೋಳ ಮಾಡಿಸ್ಬಿಡಿ'

ಬೋಳ ??:(

ಶಾಕ್ ಹೊಡೆದಿದ್ರೂ ಆ ರೀತಿ ಶಾಕ್ ಆಗ್ತಿರ್ಲಿಲ್ವೇನೋ. ನಾನು ಬೋಳ ಆಗೋದನ್ನ ಕನಸಿನಲ್ಲಿಯೂ ಊಹಿಸಿಕೊಂಡಿರಲಿಲ್ಲ.
ಅಕಸ್ಮಾತ್ ಆಗಿದ್ರೆ ಸಣ್ಣವನಿದ್ದಾಗ ಧರ್ಮಸ್ಥಳದಲ್ಲಿ ಹರಕೆ ತೀರಿಸೋದಕ್ಕೆ.
ಅದು ಬಿಟ್ರೆ ನನ್ನ ಹಣೆಬರಹ ಸರಿಯಿಲ್ಲ ಅಂದ್ರೆ ವಯಸ್ಸಾದ ಮೇಲೆ.

ಒಂದು ಸ್ವಲ್ಪ ಹೊತ್ತು ಯೋಚನೆ ಮಾಡಿ 'ಬೇಡ ಬಿಡಿ' ಅಂತ ಅಲ್ಲಿಂದ ಎದ್ದು ವಾಪಸ್ ಮನೆಗೆ ಹೋದೆ.

ರಾತ್ರಿ ಹೊರಟು ಧರ್ಮಸ್ಥಳಕ್ಕೆ ಬೆಳಗ್ಗೆ ತಲುಪಿದೆ.

ಬೋಳ ಮಾಡಿಸಿಕೊಳ್ಳಲು ಹೋಗಿ ಕುಳಿತೆ. ಕೂದಲುಗಳ ಮಾರಣಹೋಮ ನೋಡಲಾರದೆ ಕಣ್ಮುಚ್ಚಿಕೊಂಡು ಕುಳಿತೆ. ಕೇವಲ ೨ ನಿಮಿಷದಲ್ಲಿ ಕೂದಲುಗಳು ನನ್ನ ಪಾದ ಸೇರಿದ್ದವು.
ತಲೆಗೆ ಒಂದೆರಡು ಏಟು ಪಟ್ ಅಂತ ಬಿತ್ತು 'ಮಸಾಜ್ ಮಾಡ್ತಿರಬೇಕು' ಅಂದ್ಕೊಂಡು ಹಾಗೆ ಕುಳಿತೆ.

'ಚಿಕ್ಕು ಚಿಕ್ಕು' ಅಂತ ಮತ್ತೆ ಪಟ್ ಅಂತ ಏಟು ಬಿದ್ದಾಗ ಕಣ್ಣುಜ್ಜಿಕೊಂಡು ಎದ್ದೆ.
ಎದುರಿಗೆ ಉಲ್ಲ!!!!!!!!!! ನೀನೇನೋ ಇಲ್ಲಿ ಅಂದೆ ಯಾವಾಗ ಬಂದೆ ಧರ್ಮಸ್ಥಳಕ್ಕೆ? ಮೊದ್ಲೇ ಹೇಳಿದ್ರೆ ಒಟ್ಟಿಗೆ ಬರಬಹುದಿತ್ತಲ್ಲ??

ಧರ್ಮಸ್ಥಳ??? ಯಾಕೋ ಚಿಕ್ಕು ಮೈ ಹುಷಾರಿಲ್ವ?? ಎಲ್ಲಿ ಕಳೆದು ಹೋಗಿದೀಯ? ಧರ್ಮಸ್ಥಳ ತುಂಬಾ ದೂರ ಇದೆ, ' ಅಂದ.

ಓ, ಹಾಗಾದರೆ ಇಷ್ಟೊತ್ತು ಕಂಡಿದ್ದು ಕನಸು, ತಲೆ ಮುಟ್ಟಿ ನೋಡಿದೆ, ಕೂದಲುಗಳು ಹಾಗೆ ಇತ್ತು, ಗಡ್ಡಕ್ಕೆ ಕೈ ಹಾಕಿದೆ, ಗಡ್ಡ ಇಲ್ಲ :)

'ಬರ್ತೀಯಾ, ನಳಪಾಕಕ್ಕೆ ತಿಂಡಿಗೆ ಹೋಗಣ? ಮೀಟರ್, ವೆಂಕ, ಸೌಜ, ಬಾಬು, ಧೋಪ ಆಗ್ಲೇ ಅಲ್ಲಿಗೆ ಹೋಗಿದ್ದಾರೆ'

'ತಡಿ ಸ್ವಲ್ಪ ಹೊತ್ತು, ರೆಡಿ ಆಗ್ತೀನಿ' ಅಂದು ದೇವರ ಕೋಣೆಗೆ ಕೈ ಮುಗಿಯಲಿಕ್ಕೆ ಹೋದೆ.

ದೇವರ ರೂಮಿನಲ್ಲಿದ್ದ ಮಂಜುನಾಥ ನನ್ನನ್ನು ನೋಡಿ ನಗುತ್ತಿದ್ದ